Advertisement

ಹಣ್ಣು ಮಕ್ಕಳೇ ಸ್ಟ್ರಾಂಗು ಗುರು!

06:00 AM Oct 12, 2018 | |

ಇತ್ತೀಚೆಗೆ ಕನ್ನಡದಲ್ಲಿ ಬರುತ್ತಿರುವ ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ನಾಯಕಿ ಪ್ರಧಾನ ಚಿತ್ರಗಳ ಸಂಖ್ಯೆ ಹೆಚ್ಚುತ್ತಿವೆ. ಹಾಗಂತ, ಹಿಂದೆ ಇರಲಿಲ್ಲವೇ ಎಂಬ ಪ್ರಶ್ನೆ ಸಹಜವಾಗಿ ಎದುರಾಗುತ್ತದೆ. ಮಾಲಾಶ್ರೀ, ಶ್ರುತಿ, ಪ್ರೇಮ ಹೀಗೆ ಆ ಜಮಾನದ ನಾಯಕಿಯರು ಸಹ ನಾಯಕಿ ಪ್ರಧಾನ ಚಿತ್ರಗಳಲ್ಲಿ ಕಾಣಿಸಿಕೊಂಡಾಗಿದೆ. ಆ ಮೂಲಕ ಅಭಿಮಾನಿ ವರ್ಗವನ್ನೂ ಹೆಚ್ಚಿಸಿಕೊಂಡಿದ್ದು ನಿಜ. ಈಗ ಈ ಜಮಾನದ ನಾಯಕಿಯರ ಸರದಿ. ಹಾಗೆ ನೋಡಿದರೆ, ಹೀರೋಗಳ ಜೊತೆ ಹಾಡುವ ಮೂಲಕ ಮರಸುತ್ತುತ್ತಲೇ, ಮೆಲ್ಲನೆ ನಾಯಕಿ ಪ್ರಧಾನ ಚಿತ್ರಗಳಲ್ಲೂ ಸೈ ಎನಿಸಿಕೊಳ್ಳುತ್ತಿದ್ದಾರೆ.  ಆ ಕುರಿತು ಒಂದು ರೌಂಡಪ್‌.

Advertisement

ಕನ್ನಡ ಚಿತ್ರರಂಗ ಗರಿಗೆದರಿ ನಿಂತಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಇಲ್ಲಿ ಸ್ಟಾರ್‌ ಚಿತ್ರಗಳ ಜೊತೆಗೆ ನಾಯಕಿ ಪ್ರಧಾನ ಚಿತ್ರಗಳೂ ಪೈಪೋಟಿಗೆ ನಿಲ್ಲುತ್ತಿರುವುದು ಹೊಸ ಬೆಳವಣಿಗೆ ಅಂದರೆ ನಂಬಲೇಬೇಕು. ಕಿರುತೆರೆಯಲ್ಲಿ ನಾಯಕಿ ಪ್ರಧಾನ ಕಥೆಗಳೇ ಅಚ್ಚುಮೆಚ್ಚು. ಅಲ್ಲಿ ನಾಯಕಿ ಇದ್ದರೆ, ವಿಲನ್‌ ಆಗಿದ್ದರೆ ಮಾತ್ರ ಆ ಧಾರಾವಾಹಿಗೊಂದು ಕಳೆ ಮತ್ತು ಬೆಲೆ. ಅದೇ ಸಿನಿಮಾದಲ್ಲಿ ನಾಯಕನೇ ಹೈಲೆಟ್‌. ಅಲ್ಲಿ ನಾಯಕಿ ಇದ್ದರೂ ಅದು ಮರಸುತ್ತುವುದಕ್ಕಷ್ಟೇ ಸೀಮಿತ ಎಂಬ ಮಾತಿತ್ತು. ಈಗಲೂ ಇದೆ. ಎಪ್ಪತ್ತರ ದಶಕದಲ್ಲೇ ಪುಟ್ಟಣ್ಣ ಕಣಗಾಲ್‌ರಂತಹ ದಿಗ್ಗಜ ನಿರ್ದೇಶಕರು ನಾಯಕಿ ಪ್ರದಾನ ಚಿತ್ರಗಳನ್ನು ಕಟ್ಟಿಕೊಡುವ ಮೂಲಕ ಕನ್ನಡದ ಮಟ್ಟಿಗೆ ನಾಯಕಿಯರಲ್ಲೂ ಸ್ಟಾರ್‌ವ್ಯಾಲ್ಯೂ ಹೆಚ್ಚಿಸಿದ್ದು ಗೊತ್ತೇ ಇದೆ. ಹಾಗೇ ಗಮನಿಸುತ್ತ ಬಂದರೆ, ನಾಯಕ ನಟಿಯರಾಗಿದ್ದ ಮಾಲಾಶ್ರೀ, ಶ್ರುತಿ, ಪ್ರೇಮ ಸೇರಿದಂತೆ ಹಲವು ನಟಿಯರು ಕೂಡ ನಾಯಕಿ ಪ್ರಧಾನ ಚಿತ್ರಗಳಲ್ಲಿ ಮಿಂಚಿದರು. ಹೆಸರಾದರು. ಕಮರ್ಷಿಯಲ್‌ ಮಾತ್ರವಲ್ಲ, ಕಲಾತ್ಮಕ ಚಿತ್ರಗಳಲ್ಲೂ ನಾಯಕಿಯರು ಗಮನಸೆಳೆದಿರುವುದು ಇತಿಹಾಸ. ಈಗ ಹೊಸ ನಟಿಯರ ಜನರೇಷನ್‌ ಶುರುವಾಗಿದೆ. ಅದೆಷ್ಟೋ ಸ್ಟಾರ್‌ನಟರ ಜೊತೆ ಕುಣಿದಾಡಿದ ನಾಯಕಿಯರು ಪೂರ್ಣ ಪ್ರಮಾಣದ ನಾಯಕಿ ಪ್ರಧಾನ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪುನಃ ಅದು ರಿಪೀಟ್‌ ಆಗಿದೆ ಅನ್ನುವುದೇ ವಾಸ್ತವ ಸತ್ಯ. ಕನ್ನಡದಲ್ಲಂತೂ ಈಗ ನಾಯಕಿ ಪ್ರಧಾನ ಚಿತ್ರಗಳ ಸಂಖ್ಯೆ ಹೆಚ್ಚುತ್ತಿದೆ. ರಚಿತಾರಾಮ್‌, ಹರಿಪ್ರಿಯಾ, ಶ್ರುತಿಹರಿಹರನ್‌, ಪ್ರಿಯಾಂಕ ಉಪೇಂದ್ರ, ಪಾರುಲ್‌ ಯಾದವ್‌, ಸೋನುಗೌಡ, ರಾಗಿಣಿ, “ದುನಿಯಾ’ ರಶ್ಮಿ, ಲಕ್ಷ್ಮೀ ರೈ, ಪೂಜಾಗಾಂಧಿ ಸೇರಿದಂತೆ ಹಲವು ನಟಿಯರು ಈಗ ನಾಯಕಿ ಪ್ರಧಾನ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಕೆಲ ನಟಿಯರ ಚಿತ್ರಗಳು ಬಿಡುಗಡೆಯಾಗಿ, ಸುದ್ದಿಯಾಗಿವೆ. ಇನ್ನೂ ಕೆಲವು ನಟಿಯರ ಚಿತ್ರಗಳು ಬಿಡುಗಡೆಗೆ ರೆಡಿಯಾಗಿವೆ. ಎಲ್ಲಾ ಸರಿ, ನಾಯಕಿ ಪ್ರಧಾನ ಚಿತ್ರಗಳು ಕನ್ನಡದಲ್ಲಿ ವಕೌìಟ್‌ ಆಗುತ್ತವಾ? ಅಂತಹ ಚಿತ್ರಗಳಿಗೂ ಮಾರ್ಕೆಟ್‌ ಇದೆಯಾ? ಇಂತಹ ಚಿತ್ರಗಳನ್ನು ಮಾಡಲು ನಿರ್ಮಾಪಕರು ತೋರುವ ಧೈರ್ಯ ಹೇಗೆ? ಇತ್ಯಾದಿ ಪ್ರಶ್ನೆಗಳು ಸಹಜ. ಆದರೆ, ಅವೆಲ್ಲವನ್ನೂ ಮೀರಿ ನಾಯಕಿಯರನ್ನೇ ಪ್ರಧಾನವಾಗಿರಿಸಿಕೊಂಡು ಚಿತ್ರ ಮಾಡಲು ಹೊರಡುತ್ತಾರೆಂದರೆ, ಅದು ಚಿತ್ರದೊಳಗಿರುವ ಗಟ್ಟಿ ಕಥೆ ಮತ್ತು ಸತ್ವ. ಇದನ್ನಷ್ಟೇ ನಂಬಿಕೊಂಡು ಸಿನಿಮಾ ಮಾಡುವುದು ಸುಲಭದ ಮಾತಲ್ಲ. ಅದನ್ನು ಹೊಸರೀತಿಯಲ್ಲಿ ಕಟ್ಟಿಕೊಡಬೇಕಾದ ಸವಾಲು ಕೂಡ ಆಯಾ ನಿರ್ದೇಶಕರಿಗೆ ಇದ್ದೇ ಇರುತ್ತದೆ. ಅದನ್ನು ಪರಿಪೂರ್ಣಗೊಳಿಸುವುದು ಸುಲಭವಂತೂ ಅಲ್ಲ. ಇಲ್ಲಿ ನಿರ್ದೇಶಕ ಮತ್ತು ನಿರ್ಮಾಪಕರ ಧೈರ್ಯ ಮೆಚ್ಚಲೇಬೇಕು. ಕಥೆಯನ್ನಷ್ಟೇ ನಂಬಿ ನಾಯಕಿಯರಿಗೆ ಮೊರೆ ಹೋಗುವ ಧೈರ್ಯ ಮಾಡುತ್ತಿರುವುದು ಈಗಿನ ಮಟ್ಟಿಗೆ ಹೊಸ ಬೆಳವಣಿಗೆಯಂತೂ ಹೌದು.

“ನೀರ್‌ದೋಸೆ’ ಬಳಿಕ ಹರಿಪ್ರಿಯಾ ಅವರ ಬೇಡಿಕೆ ಹೆಚ್ಚಾಗಿದ್ದು ಸುಳ್ಳಲ್ಲ. ಹೀರೋಗಳ ಜೊತೆ ಕಾಣಿಸಿಕೊಳ್ಳುತ್ತಲೇ ಅವರೀಗ ನಾಯಕಿ ಪ್ರಧಾನ ಚಿತ್ರಗಳಲ್ಲಿ ಮೆಲ್ಲಗೆ ಬಿಜಿಯಾಗುತ್ತಿರುವುದು ವಿಶೇಷ.ಅವರು ಅಭಿನಯಿಸಿರುವ  “ಡಾಟರ್‌ ಆಫ್ ಪಾರ್ವತಮ್ಮ’, “ಸೂಜಿದಾರ’ ಬಿಡುಗಡೆಗೆ ರೆಡಿಯಾಗಿವೆ. “ಕನ್ನಡ್‌ ಗೊತ್ತಿಲ್ಲ’ ಚಿತ್ರ ಶುರುವಾಗಿದೆ. ರಚಿತಾರಾಮ್‌ ಕೂಡ ಸ್ಟಾರ್‌ ನಟರ ಜೊತೆ ಬಿಜಿಯಾದವರು. ಈ ನಡುವೆ ಅವರು “ಏಪ್ರಿಲ್‌’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ನಾಯಕಿ ಪ್ರಧಾನ ಚಿತ್ರ ಎಂಬುದು ವಿಶೇಷ. ರಾಗಿಣಿ ಅವರಿಗೆ ನಾಯಕಿ ಪ್ರಧಾನ ಚಿತ್ರ ಹೊಸದೇನಲ್ಲ. ಆದರೂ ಅವರೀಗ “ದಿ ಟೆರರಿಸ್ಟ್‌’ ಮೂಲಕ ಸುದ್ದಿಯಾಗಿದ್ದಾರೆ. ನಟಿ ಲಕ್ಷ್ಮೀ ರೈ “ಝಾನ್ಸಿ’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಿಯಾಂಕ ಉಪೇಂದ್ರ ಕೂಡ “ಮಮ್ಮಿ’ ಮೂಲಕ ಸದ್ದು ಮಾಡಿದ ಬಳಿಕ “ಸೆಕೆಂಡ್‌ ಹಾಫ್’ ಚಿತ್ರದಲ್ಲಿ ನಟಿಸಿದರು. “ಹೌರಾ ಬ್ರಿಡ್ಜ್’ ಚಿತ್ರದಲ್ಲೂ ವಿಶೇಷ ಆಕರ್ಷಣೆಯಾಗಿದ್ದಾರೆ. 

ಇನ್ನು, “ಬಟರ್‌ ಫ್ಲೈ’ ಚಿತ್ರದಲ್ಲಿ ಪಾರುಲ್‌ ಯಾದವ್‌, “ನಾತಿಚರಾಮಿ’ ಮೂಲಕ ಶ್ರುತಿಹರಿಹರನ್‌ ಕೂಡ ನಾಯಕಿ ಪ್ರಧಾನ ಕಥೆಗೆ ಮನಸೋತಿದ್ದಾರೆ. ಸೋನುಗೌಡ “ಶಾಲಿನಿ ಐಪಿಎಸ್‌’ ಚಿತ್ರದಲ್ಲಿ ಕಾಣಿಸಿಕೊಂಡರೆ, ರಶ್ಮಿ “ಕಾರ್ನಿ’, ಶೀತಲ್‌ ಶೆಟ್ಟಿ “ಪತಿ ಬೇಕು ಡಾಟ್‌ ಕಾಮ್‌’, ಪೂಜಾಗಾಂಧಿ “ತಿಪ್ಪಜ್ಜಿಯ ಸರ್ಕಲ್‌’,”ಉರ್ವಿ’ ಮೂಲಕ ಭಾವನಾರಾವ್‌, ಹರ್ಷಿಕಾ ಪೂಣಚ್ಚ ಸೇರಿದಂತೆ “ಕಿರಗೂರಿನ ಗಯ್ನಾಳಿಗಳು’ ಚಿತ್ರದಲ್ಲೂ ಕೂಡ ನಾಯಕಿಯರದ್ದೇ ಕಾರುಬಾರು ಎಂಬುದನ್ನು ಗಮನಿಸಲೇಬೇಕು.

ಕಥೆ ಮುಖ್ಯ: ಸಾಮಾನ್ಯವಾಗಿ ನಾಯಕಿ ಪ್ರಧಾನ ಚಿತ್ರವೆಂದರೆ, ಅಲ್ಲಿ ಸವಾಲು ಹೆಚ್ಚು. ಅಂತಹ ಸವಾಲಿನ ಬಗ್ಗೆ “ಡಾಟರ್‌ ಆಫ್ ಪಾರ್ವತಮ್ಮ’ ಚಿತ್ರದ ನಿರ್ದೇಶಕ ಶಂಕರ್‌ ಹೇಳುವುದು ಹೀಗೆ. “ಇದು ನಾಯಕಿ ಪ್ರಧಾನ ಚಿತ್ರ ನಿಜ. ಇಲ್ಲಿ ಮುಖ್ಯವಾಗಿ ನಮಗೆ ಭರವಸೆ ಇರುವುದು ಕಥೆಯಲ್ಲಿ. ಸಾಮಾನ್ಯವಾಗಿ ಭಯ ಇದ್ದೇ ಇದೆ. ಕಾರಣ, ಮಾರ್ಕೆಟಿಂಗ್‌. ಇದೇ ಕಥೆಯನ್ನು ಸ್ಟಾರ್‌ಗೆ ಮಾಡಿದ್ದರೆ, ಮಾರ್ಕೆಟಿಂಗ್‌ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯ ಇರಲಿಲ್ಲ. ಆದರೂ, ಕನ್ನಡಕ್ಕೊಂದು ಬದಲಾವಣೆ ಬೇಕೆಂಬ ಕಾರಣಕ್ಕೆ, ಹರಿಪ್ರಿಯಾ ಅವರನ್ನಿಟ್ಟುಕೊಂಡು ಈ ಚಿತ್ರ ಮಾಡಿದ್ದೇವೆ. ಖಂಡಿತವಾಗಿಯೂ ಇಲ್ಲಿ ಬದಲಾವಣೆ ಕಾಣಬಹುದು. ಹೊಸ ಪ್ರಯತ್ನ, ಪ್ರಯೋಗ ಎರಡೂ ಇದೆ. ಇಂತಹ ಚಿತ್ರ ಮಾಡೋಕೆ ಮೊದಲು ನಿರ್ಮಾಪಕರು ಧೈರ್ಯ ಮಾಡಬೇಕು. ನಾಯಕಿ ಪ್ರಧಾನ ಚಿತ್ರದಲ್ಲಿ ಕಥೆ ಮುಖ್ಯ, ತಾಂತ್ರಿಕವಾಗಿಯೂ ಶ್ರೀಮಂತವಾಗಿರಬೇಕು. ಅದೆಲ್ಲವೂ ಇಲ್ಲಿರುವುದರಿಂದಲೇ ಈಗ ಚಿತ್ರದ ಬಗ್ಗೆ ಎಲ್ಲರೂ ಮಾತಾಡುವಂತಾಗಿದೆ. ಇದು ಕನ್ನಡಕ್ಕೆ ಹೊಸತರಹದ ಚಿತ್ರವಾಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಎಲ್ಲರಿಗೂ ಇಷ್ಟವಾಗುತ್ತೆ ಎಂಬ ಭರವಸೆ ಇದೆ’ ಎಂಬುದು ಶಂಕರ್‌ ಮಾತು. 

Advertisement

ರಾಗಿಣಿ ಈ ಹಿಂದೆ ಹಲವು ನಾಯಕಿ ಪ್ರಧಾನ ಚಿತ್ರಗಳಲ್ಲಿ ನಟಿಸಿದ್ದಾರೆ. “ದಿ ಟೆರರಿಸ್ಟ್‌’ ಅವರಿಗೆ ಹೊಸ ಪ್ರಯೋಗ. ಈ ಕುರಿತು ಹೇಳಿಕೊಳ್ಳುವ ನಿರ್ದೇಶಕ ಪಿ.ಸಿ.ಶೇಖರ್‌, “ಒಂದು ಎಮೋಷನಲ್‌ ಡ್ರಾಮಾ ಅಂದರೆ ಅದು ಕಿರುತೆರೆಯಲ್ಲೇ ಕಾಣಬೇಕು. ಹಣ ಇರದಿದ್ದರೂ ಕಿರುತೆರೆಯಲ್ಲಿ ಮನರಂಜನೆ ಸಿಗುತ್ತೆ. ಆದರೆ, ಹಣ ಕೊಟ್ಟು ಸಿನಿಮಾ ನೋಡುವ ಮಂದಿಗೆ ಮನರಂಜನೆ ಜೊತೆಗೆ ಕುತೂಹಲ ಇರದಿದ್ದರೆ ಹೇಗೆ? ಅದರಲ್ಲೂ ನಾಯಕಿ ಪ್ರಧಾನ ಚಿತ್ರ ಅಂದಮೇಲೆ, ತುಂಬಾ ಜಾಣತನದಿಂದ ಎಲ್ಲವನ್ನೂ ಸೂಕ್ಷ್ಮವಾಗಿ ಕಟ್ಟಿಕೊಡಬೇಕು. ಮುಖ್ಯವಾಗಿ ನಾಯಕಿ ಪ್ರಧಾನ ಚಿತ್ರಕ್ಕೆ ಬೇಕಿರೋದು ಕಥೆ. ಸಿನಿಮಾದಲ್ಲಿ ಫ್ಯಾಮಿಲಿ ಡ್ರಾಮಾ ವಕೌìಟ್‌ ಆಗುವುದಿಲ್ಲ. ಇಲ್ಲಿ ನಾಯಕಿ ಇದ್ದಾಳೆ ಅಂದರೆ, ಅದಕ್ಕೆ ಫೈಟ್‌ ಇಟ್ಟುಬಿಟ್ಟರೆ ಸಿನಿಮಾ ಓಡುತ್ತೆ ಅಂತಲ್ಲ. ನನ್ನ ಪ್ರಕಾರ ಕಮರ್ಷಿಯಲ್‌ ಅಂದರೆ, ಆ್ಯಕ್ಷನ್‌ ಅಲ್ಲ. ಚಿತ್ರದಲ್ಲಿ ವೇಗ ಇರಬೇಕು. ರನ್ನಿಂಗ್‌ ಫೇಸ್‌ ಕೂಡ ಇರಬೇಕು. ಎಮೋಷನಲ್‌ ಡ್ರಾಮಾ ಬದಿಗೊತ್ತಿ ಬೇರೆ ಕಥೆ ಇರಬೇಕು. ಹೊಸತನಕ್ಕೆ ಸ್ಪರ್ಶ ಕೊಟ್ಟರೆ, ತಾನಾಗಿಯೇ ವ್ಯಾಲ್ಯು ಹೆಚ್ಚಿಸಿಕೊಳ್ಳುತ್ತೆ. ನಾಯಕಿ ಪ್ರಧಾನ ಚಿತ್ರವಾದರೂ, ಏನೋ ಇದೆ ಅಂತ ಅನಿಸಬೇಕು. ಅದು ನಿರ್ದೇಶಕರ ಕೆಲಸ. ನನಗೆ ಕಮರ್ಷಿಯಲ್‌ ಸಿನಿಮಾ ಮಾಡಿರುವುದರಿಂದ ಹಿಡಿತವಿದೆ. “ದಿ ಟೆರರಿಸ್ಟ್‌’ ಹೊಸ ಜಾನರ್‌ ಹೊಂದಿದೆ. ಇಲ್ಲಿ ಮೇಲ್‌ ಬದಲಾಗಿ, ಫೀಮೇಲ್‌ ಮೂಲಕ ಚಿತ್ರ ಸಾಗುತ್ತೆ ಅದೇ ವಿಶೇಷ. ಹೊಸ ಶೈಲಿ ಜೊತೆಗೆ ಸಿನಿಮಾ ಹೊಸ ಆ್ಯಂಗಲ್‌ನಲ್ಲಿ ಕಾಣಿಸುತ್ತೆ.  ನಾಯಕಿಪ್ರಧಾನ ಚಿತ್ರಗಳಲ್ಲಿ ಗಟ್ಟಿ ಸಂದೇಶವಿರುವಿರುವ ಕಥೆ ಬೇಕು. ಆಗ ಎಲ್ಲವೂ ಪ್ಲಸ್‌ ಆಗುತ್ತೆ’ ಎಂಬುದು ಪಿ.ಸಿ.ಶೇಖರ್‌ ಹೇಳಿಕೆ.

ಹರಿಪ್ರಿಯಾ ಅವರು “ಸೂಜಿದಾರ’ ಚಿತ್ರದಲ್ಲೂ ನಟಿಸಿದ್ದಾರೆ. ಮೌನೇಶ್‌ ಬಡಿಗೇರ್‌ ನಿರ್ದೇಶನದ ಈ ಚಿತ್ರದಲ್ಲಿ ಕಥೆಯೇ ಮುಖ್ಯ. ಹಾಗಾಗಿ ನಾಯಕಿ ಮೂಲಕವೇ ಇಲ್ಲಿ ಒಂದಷ್ಟು ವಿಷಯ ಹೇಳುವ ಪ್ರಯತ್ನ ಮಾಡಲಾಗಿದೆ. ನಾಯಕಿ ಪ್ರಧಾನ ಅನ್ನುವುದಕ್ಕಿಂತ ಇಲ್ಲಿ ಶೋಷಣೆಗೆ ಒಳಗಾದ ಯಾರೇ ಇರಲಿ, ಅಂಥವರ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗಿದೆ. ನಾಯಕಿ ಜೊತೆಗೆ ಉಳಿದ ಪಾತ್ರಗಳಿಗೂ ವ್ಯಾಲ್ಯೂ ಇದೆ. ಸ್ಟಾರ್‌ ಇಲ್ಲದಿದ್ದರೂ, ಸ್ಟಾರ್‌ ವ್ಯಾಲ್ಯೂ ಇರುವ ಕಥೆ ಇದೆ. ಅದೇ “ಸೂಜಿದಾರ’ನ ಸೂತ್ರ ಎಂಬುದು ನಿರ್ದೇಶಕರ ಮಾತು. ಹಾಗಂತ ಇದು ಕಲಾತ್ಮಕವಲ್ಲ. ಪಕ್ಕಾ ದೇಸಿತನವಿರುವ ಕಮರ್ಷಿಯಲ್‌ ಚಿತ್ರ ಎನ್ನುತ್ತಾರೆ ನಿರ್ದೇಶಕರು.

ಅದೇನೆ ಇರಲಿ, ನಾಯಕಿ ಪ್ರಧಾನ ಚಿತ್ರಗಳೀಗ ಸುದ್ದಿಯಾಗುತ್ತಿವೆ. ನಾಯಕಿಯರಿಗಿಂತ ಕಥೆಯೇ ಧೈರ್ಯ ತುಂಬುತ್ತಿವೆ ಎಂಬುದೇ ಈ ಹೊತ್ತಿನ ವಿಶೇಷ. ಇಂತಹ ಚಿತ್ರಗಳಿಗೆ ಪ್ರೇಕ್ಷಕರ ಹಾಗೂ ಚಿತ್ರರಂಗದ ಮಂದಿಯ ಪ್ರೋತ್ಸಾಹ ಕೂಡಾ ಅಗತ್ಯ. 

 ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next