Advertisement

ಭಾರತಕ್ಕೆ ಒಲಿದೀತೇ ಮೊದಲ ಕಿರೀಟ?

12:23 PM Nov 09, 2018 | Team Udayavani |

ಪ್ರೊವಿಡೆನ್ಸ್‌ (ಗಯಾನಾ): ವನಿತೆಯರ ಆರನೇ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ ಶುಕ್ರವಾರದಿಂದ ನ. 24ರ ತನಕ ವೆಸ್ಟ್‌ ಇಂಡೀಸ್‌ನಲ್ಲಿ ನಡೆಯಲಿದೆ. ಭಾರತ ಸಹಿತ 10 ತಂಡಗಳು ಪ್ರಶಸ್ತಿಗಾಗಿ ಸೆಣಸಲಿದ್ದು, ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಟೀಮ್‌ ಇಂಡಿಯಾವನ್ನು ಹರ್ಮನ್‌ಪ್ರೀತ್‌ ಕೌರ್‌ ಮುನ್ನಡೆಸಲಿದ್ದಾರೆ. “ಬಿ’ ಗುಂಪಿನಲ್ಲಿರುವ ಭಾರತ, ಶುಕ್ರವಾರದ ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲ್ಯಾಂಡನ್ನು ಎದುರಿಸಲಿದೆ.

Advertisement

ಈ ವರೆಗೆ ಭಾರತ ಟಿ20 ವಿಶ್ವಕಪ್‌ ಗೆಲ್ಲುವುದಿರಲಿ, ಫೈನಲ್‌ ತಲುಪಲಿಕ್ಕೂ ವಿಫ‌ಲವಾಗಿದೆ. 2009 ಮತ್ತು 2010ರಲ್ಲಿ ಸೆಮಿಫೈನಲ್‌ ತಲುಪಿದ್ದೇ ಭಾರತದ ಈವರೆಗಿನ ಅತ್ಯುತ್ತಮ ಸಾಧನೆ. ಆದರೆ ಕಳೆದ ವರ್ಷ ಏಕದಿನ ವಿಶ್ವಕಪ್‌ ಫೈನಲ್‌ ತಲುಪಿದ ಬಳಿಕ ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಭಾರತದ ಸಾಧನೆ ಗಮನಾರ್ಹ ಮಟ್ಟದಲ್ಲಿ ಸುಧಾರಣೆ ಕಾಣುತ್ತ ಬಂದಿದೆ. ಅಂದು ಇಂಗ್ಲೆಂಡ್‌ ವಿರುದ್ಧ ಫೈನಲ್‌ನಲ್ಲಿ ಸೋತ ಬಳಿಕ ಭಾರತ ತನ್ನ ತಪ್ಪುಗಳನ್ನೆಲ್ಲ ತಿದ್ದಿಕೊಳ್ಳುತ್ತಲೇ ಬಂದಿದ್ದು, ಈ ಬಾರಿ ಹೆಚ್ಚಿನ ನಿರೀಕ್ಷೆ ಇರಿಸಬಹುದು ಎಂಬುದು ಇತ್ತೀಚೆಗಷ್ಟೇ ತಂಡದ ನೂತನ ಕೋಚ್‌ ಆಗಿ ಆಯ್ಕೆಯಾಗಿರುವ ರಮೇಶ್‌ ಪೊವಾರ್‌ ವಿಶ್ವಾಸ.

ಕಳೆದ ಏಶ್ಯ ಕಪ್‌ ಟಿ20 ಫೈನಲ್‌ನಲ್ಲಿ ಬಾಂಗ್ಲಾದೇಶ ಎದುರಾದ ಸೋಲು ನಮ್ಮ ಪಾಲಿಗೊಂದು ಎಚ್ಚರಿಕೆಯ ಗಂಟೆ ಎಂಬುದು ಎಡಗೈ ಆರಂಭಕಾರ್ತಿ ಸ್ಮತಿ ಮಂಧನಾ ಅಭಿಪ್ರಾಯ. “ಈ ಸೋಲಿನ ಬಳಿಕ ಎಲ್ಲರೂ ಕಠಿನ ಅಭಾಸ್ಯ ನಡೆಸಿದ್ದು, ಅಂತಾರಾಷ್ಟ್ರೀಯ ಮಟ್ಟದ ಕೂಟಕ್ಕೆ ಎಲ್ಲ ರೀತಿಯಲ್ಲೂ ಸಿದ್ಧರಾಗಿದ್ದೇವೆ’ ಎಂದು ತಂಡದ ಉಪನಾಯಕಿಯೂ ಆಗಿರುವ ಸ್ಮತಿ ಮಂಧನಾ ಹೇಳಿದ್ದಾರೆ.

“ಶ್ರೀಲಂಕಾ ವಿರುದ್ಧದ ಸರಣಿ ನಮ್ಮ ಪಾಲಿಗೆ ಮಹತ್ವದ್ದಾಗಿತ್ತು. ವೈಯಕ್ತಿಕವಾಗಿ ನಾನು ಈ ಸರಣಿಯಲ್ಲಿ ಅಷ್ಟೇನೂ ಉತ್ತಮ ಪ್ರದರ್ಶನ ನೀಡಲಿಲ್ಲ. ಒಂದು ಪಂದ್ಯದಲ್ಲಿ ನಾನು ಮತ್ತು ಹರ್ಮನ್‌ಪ್ರೀತ್‌ ಒಂದೂ ರನ್‌ ಗಳಿಸಿರಲಿಲ್ಲ. ಆದರೂ ತಂಡದ ಮೊತ್ತ 170ರ ಗಡಿ ಮುಟ್ಟಿತ್ತು’ ಎಂಬುದಾಗಿ ಮಂಧನಾ ಹೇಳಿದರು.

“ಭಾರತದ ಬೌಲಿಂಗ್‌ ಕಳೆದ 3 ತಿಂಗಳಲ್ಲಿ ಭಾರೀ ಸುಧಾರಣೆ ಕಂಡಿದೆ. ಎಲ್ಲರೂ ತಮ್ಮ ಯೋಜನೆಗೆ ತಕ್ಕಂತೆ ಬೌಲಿಂಗ್‌ ಸಂಘಟಿಸುತ್ತಿದ್ದಾರೆ. ಆದರೆ ಫೀಲ್ಡಿಂಗ್‌ ಗುಣಮಟ್ಟ ಸಾಲದು. ಕಳೆದ ವಿಶ್ವಕಪ್‌ಗಿಂತ ಶೇ. 10ರಷ್ಟು ಮಾತ್ರ ಸುಧಾರಣೆ ಕಂಡಿದೆ’ ಎಂಬುದು ಮಂಧನಾ ಅಭಿಪ್ರಾಯ. ಈ ಕೂಟದಲ್ಲಿ ಅವರು ಮಿಥಾಲಿ ರಾಜ್‌ ಜತೆಗೂಡಿ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ.

Advertisement

ಶ್ರೀಲಂಕಾವನ್ನು ಅವರದೇ ನೆಲದಲ್ಲಿ ಮಣಿಸಿದ ಭಾರತ, ಬಳಿಕ ತವರಲ್ಲಿ ಆಸ್ಟ್ರೇಲಿಯ “ಎ’ ತಂಡಕ್ಕೆ ವೈಟ್‌ವಾಶ್‌ ಮಾಡುವ ಮೂಲಕ ಉತ್ತಮ ಫಾರ್ಮ್ ಪ್ರದರ್ಶಿಸಿದೆ. ಕೆರಿಬಿಯನ್‌ ನಾಡಿಗೆ ತೆರಳಿದ ಬಳಿಕ ಅಭ್ಯಾಸ ಪಂದ್ಯಗಳಲ್ಲಿ ಚಾಂಪಿಯನ್‌ ವೆಸ್ಟ್‌ ಇಂಡೀಸ್‌ ಮತ್ತು ಇಂಗ್ಲೆಂಡಿಗೆ ಸೋಲುಣಿಸಿದೆ. 


ಪ್ರಬಲ ಬ್ಯಾಟಿಂಗ್‌ ಲೈನ್‌ಅಪ್‌
ಭಾರತದ ಅಗ್ರ ಕ್ರಮಾಂಕದಲ್ಲಿ ಸ್ಮತಿ ಮಂಧನಾ- ಮಿಥಾಲಿ ಪಾತ್ರ ನಿರ್ಣಾಯಕವಾಗಲಿದೆ. ಮಧ್ಯಮ ಕ್ರಮಾಂಕದಲ್ಲಿ ಯುವ ಆಟಗಾರ್ತಿ ಜೆಮಿಮಾ ರೋಡ್ರಿಗಸ್‌, ತನ್ಯಾ ಭಾಟಿಯ, ಹರ್ಮನ್‌ಪ್ರೀತ್‌ ಕೌರ್‌ ಆಧಾರವಾಗಬೇಕಿದೆ. 

ಬೌಲಿಂಗ್‌ ವಿಭಾಗದಲ್ಲಿ ಲೆಗ್‌ಸ್ಪಿನ್ನರ್‌ ಪೂನಂ ಯಾದವ್‌ ಹೆಚ್ಚು ಅಪಾಯಕಾರಿಯಾಗಿ ಗೋಚರಿಸಬಹುದು. ಆದರೆ ಜೂಲನ್‌ ಗೋಸ್ವಾಮಿ ನಿವೃತ್ತಿಯ ಬಳಿಕ ತಂಡದ ವೇಗದ ಬೌಲಿಂಗ್‌ ವಿಭಾಗ ಅನುಭವದ ಕೊರತೆ ಎದುರಿಸುತ್ತಿದೆ. 
ಕಳೆದ 3 ವಿಶ್ವಕಪ್‌ಗ್ಳಲ್ಲಿ ಗ್ರೂಪ್‌ ಹಂತ ದಾಟುವಲ್ಲಿ ವಿಫ‌ಲವಾಗಿದ್ದ ಭಾರತ, ಈ ಬಾರಿ ದೊಡ್ಡ ಯೋಜನೆಯೊಂದಿಗೆ ಕಣಕ್ಕಿಳಿಯಲಿದೆ. ಲೀಗ್‌ ಹಂತದಲ್ಲಿ ಪ್ರಬಲ ನ್ಯೂಜಿಲ್ಯಾಂಡ್‌, ಸಾಂಪ್ರದಾಯಿ ಕ ಎದುರಾಳಿ ಪಾಕಿಸ್ಥಾನ ಮತ್ತು 3 ಬಾರಿಯ ಚಾಂಪಿಯನ್‌ ಆಸ್ಟ್ರೇಲಿಯವನ್ನು ಭಾರತ ಎದುರಿಸಬೇಕಿದೆ. 

“ನೀವು ವೈಯಕ್ತಿಕವಾಗಿ ಶ್ರೇಷ್ಠ ಪ್ರದರ್ಶನ ನೀಡಿದರೂ ತಂಡ ಬೆಳೆಯುತ್ತದೆ. ಭಾರತೀಯ ವನಿತಾ ಕ್ರಿಕೆಟ್‌ ಬೆಳೆಯುತ್ತದೆ. ಜನರೆಲ್ಲ ವನಿತಾ ಕ್ರಿಕೆಟ್‌ ಪಂದ್ಯಾವಳಿಯನ್ನು ಹೆಚ್ಚು ಆಸಕ್ತಿಯಿಂದ ನೋಡಲಾರಂಭಿಸುತ್ತಾರೆ. ಇಂಥ ದೊಡ್ಡ ಕೂಟಗಳಲ್ಲಿ ದಾಖಲೆಗಳನ್ನು ಮುರಿಯಲು ಪ್ರಯತ್ನಿಸಬೇಕು’  ಎಂದಿದ್ದಾರೆ ಕೋಚ್‌ ರಮೇಶ್‌ ಪೊವಾರ್‌.

ಭಾರತ ತಂಡ
ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ತಾನಿಯಾ ಭಾಟಿಯಾ (ವಿ.ಕೀ.), ಏಕ್ತಾ ಬಿಷ್ಟ್, ದಯಾಳನ್‌ ಹೇಮಲತಾ, ಮಾನ್ಸಿ ಜೋಶಿ, ವೇದಾ ಕೃಷ್ಣಮೂರ್ತಿ, ಸ್ಮತಿ ಮಂಧನಾ, ಅನುಜಾ ಪಾಟೀಲ್‌, ಮಿಥಾಲಿ ರಾಜ್‌, ಅರುಂಧತಿ ರೆಡ್ಡಿ, ಜೆಮಿಮಾ ರೋಡ್ರಿಗಸ್‌, ದೀಪ್ತಿ ಶರ್ಮ, ಪೂಜಾ ವಸ್ತ್ರಾಕರ್‌, ರಾಧಾ ಯಾದವ್‌, ಪೂನಂ ಯಾದವ್‌.

Advertisement

Udayavani is now on Telegram. Click here to join our channel and stay updated with the latest news.

Next