Advertisement

ಇತಿಹಾಸದ ಹೊಸ್ತಿಲಲ್ಲಿ ಭಾರತ ಮತ್ತು ನಾಯಕಿ ಕೌರ್‌

10:59 AM Mar 08, 2020 | Sriram |

ಮೆಲ್ಬರ್ನ್: ಮಾರ್ಚ್‌ ಎಂಟರ ರವಿವಾರ ಅನೇಕ ರೀತಿಯಲ್ಲಿ ಐತಿಹಾಸಿಕ ದಿನವಾಗಿದೆ. ಅಂದು “ವಿಶ್ವ ಮಹಿಳಾ ದಿನ‘. ಭಾರತ ತಂಡ ವನಿತಾ ಟಿ20 ವಿಶ್ವಕಪ್‌ ಇತಿಹಾಸದಲ್ಲೇ ಮೊದಲ ಸಲ ಫೈನಲ್‌ಗೆ ಲಗ್ಗೆ ಇರಿಸಿದ್ದು, ಅಂದೇ ಆತಿಥೇಯ ಆಸ್ಟ್ರೇಲಿಯವನ್ನು ಎದುರಿಸಲಿದೆ. ಗೆದ್ದರೆ ಭಾರತೀಯ ಕ್ರಿಕೆಟ್‌ನಲ್ಲಿ ನೂತನ ಇತಿಹಾಸವೊಂದು ಸೃಷ್ಟಿಯಾಗಲಿದೆ.

Advertisement

ಇಲ್ಲಿ ಇದಕ್ಕಿಂತ ಮಿಗಿಲಾದ ಸ್ವಾರಸ್ಯವೊಂದಿದೆ. ರವಿವಾರ ಭಾರತೀಯ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅವರ 31ನೇ ಜನ್ಮದಿನ. ಐಸಿಸಿ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಫೈನಲ್‌ನಲ್ಲಿ ಜನ್ಮದಿನದಂದೇ ನಾಯಕ/ನಾಯಕಿಯೊಬ್ಬರು ತಂಡವನ್ನು ಮುನ್ನಡೆಸುತ್ತಿ ರುವ ಮೊದಲ ನಿದರ್ಶನ ಇದಾಗಿದೆ. ಗೆದ್ದರೆ ಭಾರತಕ್ಕೆ ಹಾಗೂ ಕೌರ್‌ಗೆ ಇದಕ್ಕಿಂತ ಮಿಗಿಲಾದ ಉಡುಗೊರೆ ಬೇರೊಂದು ಸಿಗದು. ಭಾರತೀಯರ ವಿಶ್ವ ಮಹಿಳಾ ದಿನಾಚರಣೆಯ ಸಂಭ್ರಮಕ್ಕೆ ಪಾರವೇ ಇರದು!

ಬೇಕಿದೆ ಬಿಗ್‌ ಇನ್ನಿಂಗ್ಸ್‌
ಹರ್ಮನ್‌ಪ್ರೀತ್‌ ಕೌರ್‌ 2009ರ ಚೊಚ್ಚಲ ಟಿ20 ವಿಶ್ವಕಪ್‌ನಿಂದಲೂ ಭಾರತವನ್ನು ಪ್ರತಿನಿಧಿಸುತ್ತ ಬಂದಿದ್ದಾರೆ. ಪ್ರಸಕ್ತ ವಿಶ್ವಕಪ್‌ನಲ್ಲಿ ಅವರ ನಾಯಕತ್ವ ಪರಿಣಾಮಕಾರಿ ಆಗಿದೆಯಾದರೂ ಬ್ಯಾಟಿಂಗ್‌ ಇನ್ನೂ ನಿರೀಕ್ಷಿತ ಎತ್ತರ ತಲುಪಿಲ್ಲ. ಕೌರ್‌ ಅವರಿಂದ ಒಂದು ದೊಡ್ಡ ಇನ್ನಿಂಗ್ಸ್‌ ಬರಬೇಕಿದೆ. ಅದು 2017ರ ಏಕದಿನ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ದಾಖಲಾದಂಥ ಅದ್ಭುತ ಹಾಗೂ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ಆಗಬೇಕಿದೆ. ಅಂದು ಕೌರ್‌ 171 ರನ್‌ ಬಾರಿಸಿ ಕಾಂಗರೂಗಳನ್ನು ನೆಲಕ್ಕೆ ಕೆಡವಿದ್ದರು. ಈ ಕೂಟದಲ್ಲಿ ಬಾಕಿ ಉಳಿದಿರುವ ಅವರ ಅಷ್ಟೂ ಬ್ಯಾಟಿಂಗ್‌ ಪರಾಕ್ರಮ ಫೈನಲ್‌ನಲ್ಲಿ ಹೊರಹೊಮ್ಮಬೇಕಿದೆ. ಕೌರ್‌ ಸಿಡಿದು ನಿಂತರೆ ಆಸ್ಟ್ರೇಲಿಯವನ್ನು ಅವರದೇ ಅಂಗಳದಲ್ಲಿ ಮಗುಚುವುದು ಅಸಾಧ್ಯವೇನಲ್ಲ.

ಆಸ್ಟ್ರೇಲಿಯಕ್ಕೆ 6ನೇ ಫೈನಲ್‌
ಇದು ಆಸ್ಟ್ರೇಲಿಯ ಕಾಣುತ್ತಿರುವ 6ನೇ ಫೈನಲ್‌ ಎಂಬುದನ್ನು ಮರೆಯುವಂತಿಲ್ಲ. ಅದು 2009ರ ಚೊಚ್ಚಲ ವಿಶ್ವಕಪ್‌ನಲ್ಲಷ್ಟೇ ಪ್ರಶಸ್ತಿ ಸುತ್ತು ತಲುಪಿಲ್ಲ. ಉಳಿದ 5 ಕೂಟಗಳ ಫೈನಲ್‌ನಲ್ಲಿ ಒಂದರಲ್ಲಷ್ಟೇ ಎಡವಿದೆ. 4 ಸಲ ಕಿರೀಟ ಏರಿಸಿಕೊಂಡು ಮೆರೆದಾಡಿದೆ. ಬೇರೆ ಯಾವುದೇ ತಂಡ ಒಂದಕ್ಕಿಂತ ಹೆಚ್ಚು ಸಲ ವನಿತಾ ಟಿ20 ವಿಶ್ವಕಪ್‌ ಚಾಂಪಿಯನ್‌ ಆಗಿಲ್ಲ.

ಆಸ್ಟ್ರೇಲಿಯವನ್ನು ಫೈನಲ್‌ನಲ್ಲಿ ಉರುಳಿಸಲು ಸಾಧ್ಯ ಎಂದು ತೋರಿಸಿಕೊಟ್ಟ ತಂಡ ವೆಸ್ಟ್‌ ಇಂಡೀಸ್‌. 2016ರಲ್ಲಿ ಸತತ 4ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟ ಕಾಂಗರೂಗಳನ್ನು ಕೆರಿಬಿಯನ್ನರು 8 ವಿಕೆಟ್‌ಗಳಿಂದ ಉರುಳಿಸಿದ್ದರು. ಅಂದಿನ ಫೈನಲ್‌ ಕೋಲ್ಕಾತಾದಲ್ಲಿ ನಡೆದಿತ್ತು.

Advertisement

ವನಿತಾ ಟಿ20 ವಿಶ್ವಕಪ್‌ ಇದೇ ಮೊದಲ ಸಲ ಆಸ್ಟ್ರೇಲಿಯದ ಆತಿಥ್ಯದಲ್ಲಿ ನಡೆದಿದ್ದು, ತವರಿನಲ್ಲೇ ಫೈನಲ್‌ ಆಡುವ ಅವಕಾಶ ಆಸೀಸ್‌ಗೆ ಎದುರಾಗಿದೆ. ಗೆದ್ದರೆ ತವರಲ್ಲಿ ಚಾಂಪಿಯನ್‌ ಆದ ದ್ವಿತೀಯ ತಂಡವಾಗಲಿದೆ. 2009ರ ಮೊದಲ ವಿಶ್ವಕಪ್‌ ಪಂದ್ಯಾವಳಿಯಲ್ಲೇ ಆತಿಥೆಯ ಇಂಗ್ಲೆಂಡ್‌ ಕಪ್‌ ಎತ್ತಿತ್ತು.

ಶಫಾಲಿ, ಮಂಧನಾಗೆ ಬೌಲಿಂಗ್‌ ಮಾಡುವ ಸಹವಾಸವೇ ಬೇಡ!
ಫೈನಲ್‌ ಪಂದ್ಯಕ್ಕೂ ಮೊದಲೇ ಆಸ್ಟ್ರೇಲಿಯದ ಪೇಸ್‌ ಬೌಲರ್‌ ಮೆಗಾನ್‌ ಶಟ್‌ ಅವರಿಗೆ ಅಂಜಿಕೆ ಶುರುವಾಗಿದೆಯೇ? ಅವರ ಹೇಳಿಕೆ ಇದನ್ನು ದೃಢಪಡಿಸುತ್ತದೆ.

“ಭಾರತ ವಿರುದ್ಧ ಆಡುವುದನ್ನು ನಾನು ದ್ವೇಷಿಸುತ್ತೇನೆ. ಪವರ್‌ ಪ್ಲೇ ಅವಧಿಯಲ್ಲಿ ಶಫಾಲಿ ವರ್ಮ, ಸ್ಮತಿ ಮಂಧನಾ ಅವರಿಗೆ ಬೌಲಿಂಗ್‌ ಮಾಡುವುದನ್ನಂತೂ ಬಯಸುವುದಿಲ್ಲ…’ ಎಂದು ಶಟ್‌ ನೇರವಾಗಿ ಹೇಳಿದ್ದಾರೆ.

ಇದಕ್ಕೆ ಕಾರಣ, ಈ ಕೂಟದ ಆರಂಭಿಕ ಪಂದ್ಯ. ಇದರಲ್ಲಿ ಮೆಗಾನ್‌ ಶಟ್‌ ಅವರ ಮೊದಲ ಓವರಿನಲ್ಲೇ ಶಫಾಲಿ ವರ್ಮ 4 ಬೌಂಡರಿ ಸಿಡಿಸಿದ್ದರು.

“ಶಫಾಲಿ ಮತ್ತು ಮಂಧನಾ ನನ್ನ ವಿರುದ್ಧ ಸಂಪೂರ್ಣ ಮೇಲುಗೈ ಹೊಂದಿದ್ದಾರೆ. ತ್ರಿಕೋನ ಸರಣಿಯಲ್ಲಿ ಶಫಾಲಿ ಬಾರಿಸಿದ ಆ ಪ್ರಚಂಡ ಸಿಕ್ಸರ್‌ ಅನ್ನು ನಾನೆಂದೂ ಕಂಡಿರಲಿಲ್ಲ. ಇವರಿಬ್ಬರನ್ನು ನಿಯಂತ್ರಿಸಲು ನಾವು ಯೋಜನೆ ರೂಪಿಸುತ್ತಿದ್ದೇವೆ. ಆದರೂ ಇವರ ಎದುರು ಪವರ್‌ ಪ್ಲೇ ವೇಳೆ ಬೌಲಿಂಗ್‌ ನಡೆಸಲು ನಾನು ಸಮರ್ಥಳಲ್ಲ. ಇದರಿಂದ ಎದುರಾಳಿಯ ಆಟ ಸುಲಭವಾಗುವುದನ್ನು ಬಯಸುವುದಿಲ್ಲ’ ಎಂದಿದ್ದಾರೆ ಮೆಗಾನ್‌ ಶಟ್‌.

“ಭಾರತ ವಿರುದ್ಧ ಇತ್ತೀಚೆಗೆ ಸಾಕಷ್ಟು ಸಲ ಆಡಿದ್ದೇವೆ. ಹೀಗಾಗಿ ಫೈನಲ್‌ ಪಂದ್ಯ ಭಾರೀ ಸವಾಲಿನದ್ದಾಗಿರಲಿದೆ ಎಂಬುದನ್ನು ನಾನು ಒಪ್ಪುವುದಿಲ್ಲ’ ಎಂದೂ ಶಟ್‌ ಅಭಿಪ್ರಾಯಪಟ್ಟರು.

ಕಿಮ್‌ ಕಾಟನ್‌, ಅಹ್ಸಾನ್‌ ರಝ
ಫೈನಲ್‌ ಅಂಪಾಯರ್ನ್ಯೂಜಿಲ್ಯಾಂಡಿನ ಕಿಮ್‌ ಕಾಟನ್‌ ಮತ್ತು ಪಾಕಿಸ್ಥಾನದ ಅಹ್ಸಾನ್‌ ರಝ ಅವರನ್ನು ಐಸಿಸಿ ವನಿತಾ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದ ಫೀಲ್ಡ್‌ ಅಂಪಾಯರ್‌ಗಳಾಗಿ ನೇಮಿಸಲಾಗಿದೆ. ಇವರಿಬ್ಬರೂ ಐಸಿಸಿ ಕೂಟವೊಂದರ ಫೈನಲ್‌ನಲ್ಲಿ ತೀರ್ಪುಗಾರರಾಗಿ ಕರ್ತವ್ಯ ನಿಭಾಯಿಸುವುದು ಇದೇ ಮೊದಲು.

42ರ ಹರೆಯದ ವನಿತಾ ಅಂಪಾಯರ್‌ ಕಿಮ್‌ ಕಾಟನ್‌ ಆಸ್ಟ್ರೇಲಿಯ-ದಕ್ಷಿಣ ಆಫ್ರಿಕಾ ನಡುವಿನ ಸೆಮಿಫೈನಲ್‌ ಪಂದ್ಯದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು. ಫೈನಲ್‌ನಲ್ಲಿ ಕಣಕ್ಕಿಳಿಯುವ ಮೂಲಕ ಪ್ರಸಕ್ತ ಪಂದ್ಯಾವಳಿಯಲ್ಲಿ ಅವರು 5ನೇ ಸಲ ಅಂಪಾಯರಿಂಗ್‌ ನಡೆಸಿದಂತಾಗುತ್ತದೆ.

ಅಹ್ಸಾನ್‌ ರಝ ಮಳೆಯಿಂದ ಕೊಚ್ಚಿಹೋದ ಭಾರತ-ಇಂಗ್ಲೆಂಡ್‌ ನಡುವಿನ ಮೊದಲ ಸೆಮಿಫೈನಲ್‌ ಪಂದ್ಯಕ್ಕೆ ಅಂಪಾಯರ್‌ ಆಗಿ ನೇಮಕಗೊಂಡಿದ್ದರು.

ವೆಸ್ಟ್‌ ಇಂಡೀಸಿನ ಗ್ರೆಗರಿ ಬ್ರಾತ್‌ವೇಟ್‌ ಟಿವಿ ಅಂಪಾಯರ್‌, ಜಿಂಬಾಬ್ವೆಯ ಲ್ಯಾಂಗ್ಟನ್‌ ರುಸೇರ 4ನೇ ಅಂಪಾಯರ್‌ ಆಗಿರುತ್ತಾರೆ. ಇಂಗ್ಲೆಂಡಿನ ಕ್ರಿಸ್‌ ಬ್ರಾಡ್‌ ಅವರನ್ನು ಫೈನಲ್‌ ಪಂದ್ಯದ ರೆಫ್ರಿ ಆಗಿ ನೇಮಿಸಲಾಗಿದೆ.

ಪತ್ನಿಯ ಆಟ ಕಾಣಲು ಆಫ್ರಿಕಾ ಪ್ರವಾಸ
ಮೊಟಕುಗೊಳಿಸಿದ ಮಿಚೆಲ್‌ ಸ್ಟಾರ್ಕ್‌!
ಆಸ್ಟ್ರೇಲಿಯದ ಪ್ರಧಾನ ವೇಗಿ ಮಿಚೆಲ್‌ ಸ್ಟಾರ್ಕ್‌ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಮೊಟಕುಗೊಳಿಸಿ ತವರಿಗೆ ಹಾರಲಿದ್ದಾರೆ. ಕಾರಣ ಏನು ಗೊತ್ತೇ? ಐಸಿಸಿ ವನಿತಾ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಪತ್ನಿ ಅಲಿಸ್ಸಾ ಹೀಲಿ ಅವರ ಆಟವನ್ನು ಸ್ಟೇಡಿಯಂನಲ್ಲಿದ್ದು ವೀಕ್ಷಿಸುವುದು!

ಇದರಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಶನಿವಾರ ಪೊಚೆಫ್ಸೂóಮ್‌ನಲ್ಲಿ ನಡೆಯಲಿರುವ ಅಂತಿಮ ಏಕದಿನ ಪಂದ್ಯವನ್ನು ಮಿಚೆಲ್‌ ಸ್ಟಾರ್ಕ್‌ ತಪ್ಪಿಸಿಕೊಳ್ಳಲಿದ್ದಾರೆ.
ಅಲಿಸ್ಸಾ ಹೀಲಿ ಆಸ್ಟ್ರೇಲಿಯ ತಂಡದ ವಿಕೆಟ್‌ ಕೀಪರ್‌ ಹಾಗೂ ಓಪನರ್‌ ಆಗಿದ್ದಾರೆ. ಭಾರತ ವಿರುದ್ಧದ ಆರಂಭಿಕ ಪಂದ್ಯದಲ್ಲಿ 51 ರನ್‌ ಬಾರಿಸಿ ಮಿಂಚಿದ್ದರು. ಅವರಿಂದ ಇಂಥದೇ ಸಾಧನೆ ಪುನರಾವರ್ತನೆಯಾದೀತೆಂಬ ನಂಬಿಕೆ ಮಿಚೆಲ್‌ ಸ್ಟಾರ್ಕ್‌ ಅವರದು.

“ತವರಿನ ವಿಶ್ವಕಪ್‌ ಫೈನಲ್‌ನಲ್ಲಿ ಪತ್ನಿಯ ಆಟವನ್ನು ವೀಕ್ಷಿಸುವುದು ಜೀವಮಾನದಲ್ಲಿ ಒಮ್ಮೆಯಷ್ಟೇ ಬರುವ ಅವಕಾಶ. ಹೀಗಾಗಿ ನಾವು ಮಿಚೆಲ್‌ ಸ್ಟಾರ್ಕ್‌ ಅವರನ್ನು ಖುಷಿಯಲ್ಲೇ ಕಳುಹಿಸಿಕೊಟ್ಟಿದ್ದೇವೆ. ಅವರ ಪಾಲಿಗೆ ಇದೊಂದು ಅಮೋಘ ಅವಕಾಶ. ಪತ್ನಿ ಹಾಗೂ ತವರಿನ ತಂಡವನ್ನು ಮಿಚ್‌ ಬೆಂಬಲಿಸಲಿ…’ ಎಂಬುದಾಗಿ ಆಸ್ಟ್ರೇಲಿಯ ತಂಡದ ಕೋಚ್‌ ಜಸ್ಟಿನ್‌ ಲ್ಯಾಂಗರ್‌ ಹೇಳಿದ್ದಾರೆ.

“ದಕ್ಷಿಣ ಆಫ್ರಿಕಾ ವಿರುದ್ಧ ನಾವು ಈಗಾಗಲೇ ಸರಣಿ ಕಳೆದುಕೊಂಡಿದ್ದೇವೆ. ಆದರೆ ಸ್ಟಾರ್ಕ್‌ ಸ್ಥಾನ ತುಂಬಬಲ್ಲ ವೇಗಿಗಳು ತಂಡದಲ್ಲಿದ್ದಾರೆ. ಅವರು ಎರಡು ದಿನ ಮೊದಲೇ ತವರಿಗೆ ವಾಪಸಾಗಿ ನ್ಯೂಜಿಲ್ಯಾಂಡ್‌ ಎದುರಿನ ಸರಣಿಗೆ ಹೊಸ ಸ್ಫೂರ್ತಿಯೊಂದಿಗೆ ಮರಳಲಿ…’ ಎಂದೂ ಲ್ಯಾಂಗರ್‌ ಹೇಳಿದರು.

3ನೇ ಪಂದ್ಯದಲ್ಲಿ ಸ್ಟಾರ್ಕ್‌ ಸ್ಥಾನ ತುಂಬಲು ಜೋಶ್‌ ಹೇಝಲ್‌ವುಡ್‌, ಜೇ ರಿಚರ್ಡ್‌ಸನ್‌, ಕೇನ್‌ ರಿಚರ್ಡ್‌ಸನ್‌ ನಡುವೆ ಸ್ಪರ್ಧೆ ಏರ್ಪಡಲಿದೆ.

ಅದೃಷ್ಟ ಭಾರತದ ಪರವಾಗಿದೆ: ವೇದಾ ಕೃಷ್ಣಮೂರ್ತಿ
4 ಬಾರಿಯ ಚಾಂಪಿಯನ್‌ ಆಸ್ಟ್ರೇಲಿಯ ವಿರುದ್ಧ ಅವರದೇ ಅಂಗಳದಲ್ಲಿ ಫೈನಲ್‌ ಆಡುವ ಭಾರತಕ್ಕೆ ಅದೃಷ್ಟ ಕೈಹಿಡಿಯಲಿದೆ ಎಂಬ ನಂಬಿಕೆ ತನ್ನದು ಎಂದಿದ್ದಾರೆ ಮಧ್ಯಮ ಕ್ರಮಾಂಕದ ಆಟಗಾರ್ತಿ ವೇದಾ ಕೃಷ್ಣಮೂರ್ತಿ.

“ಇದೆಲ್ಲವೂ ಅದೃಷ್ಟ ಹಾಗೂ ವಿಧಿಯ ವಿಚಾರ. ನನಗೆ ಇದರ ಮೇಲೆ ಬಹಳ ನಂಬಿಕೆ ಇದೆ. ಇದು ಭಾರತಕ್ಕಾಗಿಯೇ ಆಯೋಜಿಸಲಾದ ವಿಶ್ವಕಪ್‌ ಎಂಬ ಜೋಕ್‌ ಎಲ್ಲ ಕಡೆ ಹರಿದಾಡುತ್ತಿದೆ. ಅದು ಬೌಲಿಂಗ್‌ ಆಗಿರಬಹುದು, ಅಥವಾ ಬ್ಯಾಟಿಂಗ್‌ ಆಗಿರಬಹುದು… ಎಲ್ಲವೂ ಭಾರತಕ್ಕೆ ಪ್ರಶಸ್ತವಾದ ರೀತಿಯಲ್ಲೇ ಇದೆ. ಫೈನಲ್‌ನಲ್ಲೂ ನಮ್ಮ ತಂಡಕ್ಕೆ ಅದೃಷ್ಟ ಕೈಹಿಡಿಯಲಿದೆ’ ಎಂದು ಕನ್ನಡತಿ ವೇದಾ ಹೇಳಿದರು.

“ಕೂಟದ ಆರಂಭಿಕ ಪಂದ್ಯದಲ್ಲೇ ಆಸ್ಟ್ರೇಲಿಯವನ್ನು 17 ರನ್ನುಗಳಿಂದ ಸೋಲಿಸಿದ ಸಾಹಸ ನಮ್ಮದು. ಇದರಿಂದ ತಂಡದ ಮಾನಸಿಕ ಸ್ಥೈರ್ಯ ಸಹಜವಾಗಿಯೇ ಹೆಚ್ಚಿದೆ. ಉಳಿದ ತಂಡಗಳನ್ನು ಸೋಲಿಸಲು ಇದೇ ಸ್ಫೂರ್ತಿಯಾಗಿತ್ತು. ಫೈನಲ್‌ನಲ್ಲೂ ನಮಗಿದು ನೆರವಿಗೆ ಬರಲಿದೆ’ ಎಂದು 27ರ ಹರೆಯದ ವೇದಾ ಹೇಳಿದರು.

2017ರ ಏಕದಿನ ವಿಶ್ವಕಪ್‌ ಪಂದ್ಯಾವಳಿಯ ಫೈನಲ್‌ನಲ್ಲೂ ವೇದಾ ಆಡಿದ್ದರು. ಅಲ್ಲಿ ಇಂಗ್ಲೆಂಡಿಗೆ ಸೋತಾಗ ಎದುರಾದ ನೋವು ಇನ್ನೂ ಕಾಡುತ್ತಿದೆ. ಇದಕ್ಕೆ ಈ ಸಲ ಅವಕಾಶ ನೀಡಬಾರದು ಎಂಬುದು ಅವರ ನಿಲುವು.

“ಫೈನಲ್‌ ತಲಪುವುದು ನಮ್ಮ ಮೊದಲ ಗುರಿ ಆಗಿತ್ತು. ಇದು ಈಡೇರಿದೆ. ಇನ್ನು ಫೈನಲ್‌ ಹೋರಾಟ. ಇದಕ್ಕೆ ಯೋಜನೆ ರೂಪುಗೊಳ್ಳುತ್ತಿದೆ. ಎಲ್ಲ ಒತ್ತಡಗಳನ್ನು ತಡೆದು ನಿಂತು ಹೋರಾಡುವ ವಿಶ್ವಾಸವಿದೆ’ ಎಂದಿದ್ದಾರೆ ವೇದಾ.ಆದರೆ ಉತ್ತಮ ಫಿನಿಶರ್‌ ಎಂಬ ಛಾತಿಯುಳ್ಳ ವೇದಾ ವಿಶ್ವಕಪ್‌ ಲೀಗ್‌ ಹಂತದ 4 ಪಂದ್ಯಗಳಿಂದ ಕೇವಲ 35 ರನ್‌ ಮಾಡಿ ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿದ್ದಾರೆ. ಫೈನಲ್‌ನಲ್ಲಿ ಅವರ ನೈಜ ಆಟ ಹೊರಹೊಮ್ಮಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next