Advertisement

ನಾಲ್ಕು ದಿನಗಳಲ್ಲಿ 10 ಸಾವಿರ ಮಂದಿಗೆ ಸೋಂಕು!: 3 ದಿನಗಳಲ್ಲಿ 214 ಸೋಂಕಿತರ ಸಾವು

01:51 AM Jul 14, 2020 | Hari Prasad |

ಬೆಂಗಳೂರು: ರಾಜ್ಯದಲ್ಲಿ ಕಳೆದ ನಾಲ್ಕು ದಿನಗಳಲ್ಲಿಯೇ 10 ಸಾವಿರಕ್ಕೂ ಹೆಚ್ಚು ಮಂದಿಗೆ ಕೋವಿಡ್ 19 ವೈರಸ್‌ ಸೋಂಕು ದೃಢಪಟ್ಟಿದೆ.

Advertisement

ಅಲ್ಲದೆ ಕಳೆದ ಮೂರು ದಿನಗಳಲ್ಲಿ 214 ಸೋಂಕಿತರು ಬಲಿಯಾಗಿದ್ದಾರೆ. ಈ ಮೂಲಕ ಸೋಂಕು ಪ್ರಕರಣಗಳಲ್ಲಿ ರಾಜ್ಯ 40 ಸಾವಿರದ ಗಡಿ ದಾಟಿದ್ದು, ರಾಜಧಾನಿ ಬೆಂಗಳೂರು 20 ಸಾವಿರ ಹೊಸ್ತಿಲಲ್ಲಿ ಬಂದು ನಿಂತಿದೆ.

ಸೋಮವಾರ ಒಂದೇ ದಿನ ಹೊಸದಾಗಿ 2,738 ಮಂದಿಗೆ ಸೋಂಕು ತಗುಲಿರುವುದು, 73 ಸೋಂಕಿತರು ಮೃತಪಟ್ಟಿರುವುದು, 839 ಮಂದಿ ಗುಣಮುಖರಾಗಿರುವುದು ವರದಿಯಾಗಿದೆ.

ಈ ಮೂಲಕ ರಾಜ್ಯದ ಒಟ್ಟಾರೆ ಸೋಂಕಿತರ ಸಂಖ್ಯೆ 41,581ಕ್ಕೆ, ಸಾವಿಗೀಡಾದವರ ಸಂಖ್ಯೆ 757ಕ್ಕೆ, ಗುಣಮುಖರಾದವರ ಸಂಖ್ಯೆ 16,248ಕ್ಕೆ ಏರಿಕೆಯಾಗಿದೆ. ಸದ್ಯ 24,572 ಸೋಂಕಿತರು ಆಸ್ಪತ್ರೆ ಮತ್ತು ಕೋವಿಡ್ 19 ಕೇರ್‌ ಸೆಂಟರ್‌ಗಳಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಈ ಪೈಕಿ 545 ಸೋಂಕಿತರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ತುರ್ತು ನಿಗಾ ಘಟಕದಲ್ಲಿದ್ದಾರೆ.

ಕಳೆದ ಗುರುವಾರ (ಜೂ.)ರಾಜ್ಯದ ಒಟ್ಟಾರೆ ಸೋಂಕು ಪ್ರಕರಣಗಳ ಸಂಖ್ಯೆ 31,105 ಇತ್ತು. ಆ ನಂತರ ಶುಕ್ರವಾರ – 1,313, ಶನಿವಾರ – 2,797, ರವಿವಾರ 2,627, ಸೋಮವಾರ 2,738 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ನಾಲ್ಕು ದಿನಗಳಲ್ಲಿಯೇ 10,476 ಮಂದಿ ಸೋಂಕಿತರಾಗಿ 40 ಸಾವಿರ ಗಡಿ ದಾಟಿದೆ. ಅಲ್ಲದೆ ಸೋಂಕಿತರ ಸಾವು ಕೂಡ ಏರಿಕೆ ಹಾದಿಯಲ್ಲಿಯೇ ಸಾಗಿದ್ದು, ಶನಿವಾರ 70, ರವಿವಾರ 71, ಸೋಮವಾರ 73 ಸೋಂಕಿತರ ಸಾವು ವರದಿಯಾಗಿವೆ.

Advertisement

14 ಮಂದಿಗೆ ಸೋಂಕಿನ ಲಕ್ಷಣ ಇಲ್ಲ!
ರಾಜ್ಯದಲ್ಲಿ ಸೋಮವಾರ ವರದಿಯಾಗಿರುವ 73 ಮೃತಪಟ್ಟವರಲ್ಲಿ 14 ಮಂದಿಗೆ ಸೋಂಕಿನ ಲಕ್ಷಣವೇ ಇಲ್ಲ. ಇನ್ನು 2,738 ಸೋಂಕಿತರಲ್ಲಿ 1,315 ಮಂದಿ ಬೆಂಗಳೂರಿನವರು. ಈ ಮೂಲಕ ನಗರದ ಪ್ರಕರಣಗಳ ಸಂಖ್ಯೆ 19,702ಕ್ಕೆ ತಲುಪಿದ್ದು, ಈ ಪೈಕಿ 4,325 ಮಂದಿ ಗುಣ ಮುಖರಾಗಿದ್ದು, 321 ಮಂದಿ ಸಾವಿಗೀಡಾಗಿದ್ದಾರೆ.

ಕಡಿಮೆ ಪರೀಕ್ಷೆ – ಹೆಚ್ಚು ಸೋಂಕು!
ಸೋಮವಾರ ರಾಜ್ಯದಲ್ಲಿ ಸೋಂಕು ಪರೀಕ್ಷೆಗಳು 17 ಸಾವಿರಕ್ಕೆ ಇಳಿಕೆಯಾಗಿವೆ. ರವಿವಾರದವರೆಗೂ ಸರಾಸರಿ 20 ಸಾವಿರ ಪರೀಕ್ಷೆಗಳಾಗುತ್ತಿದ್ದವು. ಇನ್ನು ಪರೀಕ್ಷೆ ಪ್ರಮಾಣ ಇಳಿಕೆಯಾದರೂ ಸೋಂಕು ಮಾತ್ರ ಇಳಿಕೆಯಾಗಿಲ್ಲ. ಇದರಿಂದ ಪಾಸಿಟಿವ್‌ ದರ ಶೇ.13 ರಿಂದ 16ಕ್ಕೆ ಹೆಚ್ಚಳವಾಗಿದೆ.

ಅಂದರೆ, 100 ಮಂದಿ ಪರೀಕ್ಷೆ ಮಾಡಿದರೆ 16 ಮಂದಿಗೆ ಸೋಂಕು ದೃಢಪಡುತ್ತಿದೆ. ಇನ್ನು ಮಂಗಳವಾರದಿಂದ ರ್ಯಾಪಿಡ್‌ ಆ್ಯಂಟಿಜನ್‌ ಪರೀಕ್ಷೆಗಳ ವರದಿ ಬರಲಿದ್ದು, ಸೋಂಕು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next