Advertisement

winter Assembly session ಮತ್ತೆ ಪೋಡಿಮುಕ್ತ ಗ್ರಾಮ ಅಭಿಯಾನ

12:20 AM Dec 05, 2023 | Team Udayavani |

ಬೆಳಗಾವಿ: ರಾಜ್ಯಾದ್ಯಂತ ಮತ್ತೆ ಪೋಡಿಮುಕ್ತ ಗ್ರಾಮ ಅಭಿಯಾನ ಕೈಗೊಂಡು ಮುಂದಿನ ಮೂರ್‍ನಾಲ್ಕು ವರ್ಷಗಳಲ್ಲಿ ಶೇ.70ರಷ್ಟು ಪ್ರಕರಣಗಳನ್ನು ಇತ್ಯರ್ಥಪಡಿಸುವುದಾಗಿ ಭರವಸೆ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಸರ್ವೇಯರ್‌ಗಳ ನೇಮಕವನ್ನೂ ಮಾಡಿಕೊಳ್ಳಲಾಗುವುದು ಎಂದರು.

Advertisement

ವಿಧಾನಸಭೆಯಲ್ಲಿ ಬಿಜೆಪಿಯ ಡಾ| ಸಿ.ಎನ್‌.ಅಶ್ವತ್ಥನಾರಾಯಣ ಪ್ರಶ್ನೆಗೆ ಉತ್ತರಿಸಿ, 2015ರಲ್ಲಿ ನಮ್ಮ ಸರಕಾರ ಇದ್ದಾಗಲೇ ಪೋಡಿ ಮುಕ್ತ ಗ್ರಾಮ ಯೋಜನೆ ಆರಂಭಿಸಿದ್ದೆವು. ಅಂದಿನಿಂದ ಇದುವರೆಗೆ 21.32 ಲಕ್ಷ ಪಹಣಿಗಳನ್ನು ಪೋಡಿ ಮುಕ್ತಗೊಳಿಸಲಾಗಿದೆ. 2019ರಿಂದೀಚೆಗೆ ಸರಕಾರಗಳು ಹೆಚ್ಚಿನ ಗಮನ ಕೊಡದೆ ಇರುವುದರಿಂದ ಕನಿಷ್ಠ ಪ್ರಮಾಣಕ್ಕಿಳಿದಿದೆ. ಹೀಗಾಗಿ ಪೋಡಿಮುಕ್ತ ಗ್ರಾಮ ಅಭಿಯಾನಕ್ಕೆ ಮರುಚಾಲನೆ ನೀಡುತ್ತೇವೆ ಎಂದರು.

2022ರ ಸೆಪ್ಟಂಬರ್‌ ಅಂತ್ಯಕ್ಕೆ 16,630 ಗ್ರಾಮಗಳಲ್ಲಿ 20.90 ಲಕ್ಷ ಪಹಣಿಗಳನ್ನು ಪೋಡಿಮುಕ್ತ ಗ್ರಾಮ ಅಭಿಯಾನದಡಿ ಸೃಷ್ಟಿಸಲಾಗಿದೆ. ಆದರೆ, ಈ ಪೈಕಿ ಸರ್ವೇ ನಂಬರಿನ ಮ್ಯುಟೇಶನ್‌ ಬಾಕಿ, ನ್ಯಾಯಾಲಯದ ವ್ಯಾಜ್ಯ ಇತ್ಯಾದಿ ತಾಂತ್ರಿಕ ಕಾರಣಗಳಿಂದಾಗಿ ಅಳತೆಯಾದ ಗ್ರಾಮಗಳಲ್ಲಿ 364 ಗ್ರಾಮಗಳ ಕೆಲವು ಪ್ರಕರಣಗಳಲ್ಲಿ ದುರಸ್ತಿ ಕಾರ್ಯ ಬಾಕಿ ಆಗಿದೆ. 2022ರ ಅಕ್ಟೋಬರ್‌ ಬಳಿಕ ಮೋಜಣಿ ತಂತ್ರಾಂಶದಡಿ 1.19 ಲಕ್ಷ ಬಹು ಮಾಲಕತ್ವವುಳ್ಳ ಪಹಣಿಗಳನ್ನು ಪೋಡಿಮುಕ್ತಗೊಳಿಸಲು ಕೈಗೆತ್ತಿಕೊಂಡಿದ್ದು, 68,351 ಪ್ರಕರಣ ವಿಲೇವಾರಿಯಾಗಿದ್ದು, 41,422 ಪಹಣಿಗಳನ್ನು ಸೃಷ್ಟಿಸಲಾಗಿದೆ. ಒಟ್ಟು ಭೌತಿಕವಾಗಿ 20.90 ಲಕ್ಷ ಪಹಣಿ ಮತ್ತು ತಂತ್ರಾಂಶದ ಮೂಲಕ 41,422 ಸಹಿತ ಒಟ್ಟು 21.32 ಲಕ್ಷ ಏಕಮಾಲಕತ್ವದ ಪಹಣಿಗಳನ್ನು ಸೃಷ್ಟಿಸಿ, ಪೋಡಿಮುಕ್ತ ಗೊಳಿಸಲಾಗಿದೆ.

ಇಷ್ಟಾದರೂ ಲಕ್ಷಾಂತರ ಪ್ರಕರಣಗಳು ಬಾಕಿ ಇದ್ದು, ಆರ್‌ಟಿಸಿ ಇದ್ದರೂ ಸರ್ವೇ ಆಗದೆ, ಸ್ಕೆಚ್‌ ಇಲ್ಲದೆ ಸಮಸ್ಯೆಗಳಿವೆ. ಭೌತಿಕವಾಗಿ ಒಂದು ಅಳತೆಯಿದ್ದರೆ, ಪಹಣಿಯಲ್ಲಿ ಮತ್ತೂಂದು ಅಳತೆ ಇರುತ್ತದೆ. ಶೇ.70ರಷ್ಟು ಪ್ರಕರಣಗಳನ್ನು ಬಗೆಹರಿಸಬಹುದಾಗಿದ್ದು, ಇದಕ್ಕಾಗಿ ಏನೇ ವಿವಾದಗಳಿದ್ದರೂ ಕಾನೂನು ಪ್ರಕಾರ ಬಗೆಹರಿಸಲು ಪೋಡಿಮುಕ್ತ ಗ್ರಾಮ ಅಭಿಯಾನವನ್ನು ಮತ್ತೆ ಆರಂಭಿಸುತ್ತೇವೆ ಎಂದರು.

ಇದಕ್ಕಾಗಿ ಪರವಾನಿಗೆಯುಳ್ಳ 1,800 ಸರ್ವೇಯರ್‌ಗಳಿಗೆ 2 ತಿಂಗಳ ಹಿಂದೆ ಪರೀಕ್ಷೆ ನಡೆಸಿದ್ದು, ತರಬೇತಿ ನೀಡಲಾಗುತ್ತಿದೆ. ಜನವರಿ ವೇಳೆಗೆ ಯಾವ್ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಪ್ರಕರಣಗಳು ಬಾಕಿ ಇವೆ ಎನ್ನುವುದರ ಆಧಾರದ ಮೇಲೆ ಆಯಾ ಜಿಲ್ಲೆಗೆ ಪರವಾನಗಿಯುಳ್ಳ ಸರ್ವೇಯರ್‌ಗಳನ್ನು ನೇಮಿಸಲಾಗುತ್ತದೆ. 364 ಸರಕಾರಿ ಸರ್ವೇಯರ್‌ಗಳು ಹಾಗೂ 27 ಎಡಿಎಲ್‌ಆರ್‌ಗಳನ್ನು ನೇಮಕ ಮಾಡಿಕೊಳ್ಳಲೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Advertisement

ಸರ್ವೇಯರ್‌ಗಳು ದಾಖಲೆಗಳಲ್ಲಿ ತಪ್ಪು ಮಾಡಿ ಎಡಿಎಲ್‌ಆರ್‌ ಕಚೇರಿಗೆ ಸಾರ್ವಜನಿಕರನ್ನು ಅಲೆಸುತ್ತಾರೆ. ಇದನ್ನು ತಪ್ಪಿಸಬೇಕು. ಸರ್ವೇಯರ್‌ ಮಾಡಿದ ತಪ್ಪನ್ನು ಅವರೇ ಎಡಿಎಲ್‌ಆರ್‌ ಮೂಲಕ ಸರಿಪಡಿಸಿ, ಸಾರ್ವಜನಿಕರಿಗೆ ಕೊಡಬೇಕು.
– ಯು.ಟಿ. ಖಾದರ್‌, ವಿಧಾನಸಭಾಧ್ಯಕ್ಷ

ನನ್ನ ತಾಲೂಕಿನಲ್ಲಿ 5,500 ಎಕ್ರೆ ಪೋಡಿಮುಕ್ತಗೊಳ್ಳದೆ ಸಮಸ್ಯೆ ಎದುರಿಸುತ್ತಿದೆ. ಪರವಾನಿಗೆಯುಳ್ಳ ಸರ್ವೇಯರ್‌ಗಳಿಂದ ಎಲ್ಲ ಜಮೀನಿನ ಪೋಡಿ ಮಾಡಿಸಲು ಸಾಧ್ಯವಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಸರ್ವೇಯರ್‌ ನೇಮಕ ಅಗತ್ಯ.
– ಆರಗ ಜ್ಞಾನೇಂದ್ರ, ಬಿಜೆಪಿ ಸದಸ್ಯ

ಭೂ ಸರ್ವೇಕ್ಷಣೆಯನ್ನು ಕೇವಲ ಸರ್ವೇಯರ್‌ಗಳ ಮೂಲಕ ಮಾಡದೆ, ವೈಮಾನಿಕ ಸಮೀಕ್ಷೆ ಹಾಗೂ ಭೌತಿಕ ಸಮೀಕ್ಷೆಗಳನ್ನು ಒಟ್ಟಿಗೆ ನಡೆಸಬೇಕು. ಗ್ರಾಮೀಣ ಭಾಗದಂತೆ ನಗರ ಪ್ರದೇಶಗಳಲ್ಲೂ ಪೋಡಿ ಸಮಸ್ಯೆ ಇತ್ಯರ್ಥಪಡಿಸಲು ಕ್ರಮ ವಹಿಸಬೇಕು.
– ಡಾ| ಸಿ.ಎನ್‌.ಅಶ್ವತ್ಥನಾರಾಯಣ,
ಬಿಜೆಪಿ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next