Advertisement

ಈ ಬಾರಿಯಾದರೂ ಕೆರೆಗಳತ್ತ ನೋಡುವಿರಾ?

02:26 PM Mar 30, 2019 | Team Udayavani |

ಬೆಂಗಳೂರು: ಚುನಾವಣೆಗಳು ಸಮೀಪಿಸುತ್ತಿದ್ದಂತೆ ಭರವಸೆಗಳ ಮಹಾಪೂರವೇ ಮತದಾರರ ಮನೆಬಾಗಿಲಿಗೆ ಬರುತ್ತದೆ. ಆದರೆ, ರಾಷ್ಟ್ರಮಟ್ಟದಲ್ಲಿ ಗಮನಸೆಳೆದ ಅದೊಂದು ವಿಷಯ ಮಾತ್ರ ಚರ್ಚೆಗೆ ಬರುವುದೇ ಇಲ್ಲ. ಜನರೂ ಆ ಬಗ್ಗೆ ಚಕಾರ ಎತ್ತುವುದಿಲ್ಲ.

Advertisement

ವಿಚಿತ್ರವೆಂದರೆ ಕೆಲವು ರಾಜ್ಯಸಭೆ ಸದಸ್ಯರು ಅವುಗಳ ಸಂರಕ್ಷಣೆಗಾಗಿ ಕೆಲ ಸಂಘಟನೆಗಳ ಸಹಯೋಗದಲ್ಲಿ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹಾಕಿ, ಹೋರಾಟ ನಡೆಸುತ್ತಾರೆ. ಆದರೆ, ಈ ವಿಷಯವನ್ನು ತಮ್ಮದೇ ಪಕ್ಷದ ಮೇಲೆ ಒತ್ತಡ ಹಾಕಿ, ಪ್ರಣಾಳಿಕೆಯಲ್ಲಿ ಸೇರಿಸುವ ಬದ್ಧತೆ ಮೆರೆಯುವುದಿಲ್ಲ.

ಇನ್ನು ಕೆಲವು ಸಿವಿಕ್‌ ಸಂಸ್ಥೆಗಳು ಹಸಿರು ಪೀಠದಲ್ಲಿ ಕಾನೂನು ಸಮರ ನಡೆಸುತ್ತವೆ. ಚುನಾವಣೆ ಸಂದರ್ಭದಲ್ಲಿ ಸ್ವತಃ ಜನ ಪ್ರತಿನಿಧಿಗಳೇ ತಮ್ಮ ಮನೆ ಬಾಗಿಲಿಗೆ ಬಂದಾಗ ಮೌನಕ್ಕೆ ಶರಣಾಗುತ್ತವೆ. ಹೀಗೆ ಪ್ರತಿ ಚುನಾವಣೆ ಸಂದರ್ಭದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗುವಂತಹವು ನಗರದ ಕೆರೆಗಳು!

ನಗರದ ನೂರಾರು ಕೆರೆಗಳು ಪ್ರಭಾವಿಗಳ ಪಾಲಾಗಿವೆ. ಈ ಬಗ್ಗೆ ತನಿಖೆ ನಡೆಸಲು ಸ್ವತಃ ಸರ್ಕಾರದಿಂದಲೇ ಸಮಿತಿಗಳು ರಚನೆಯಾಗಿ, ಅವುಗಳು ವರದಿಯನ್ನೂ ಸಲ್ಲಿಸಿವೆ. ಒತ್ತುವರಿ ಆಗಿರುವುದನ್ನು ಕೂಡ ಆ ವರದಿಗಳಲ್ಲಿ ಉಲ್ಲೇಖೀಸಲಾಗಿದೆ.

ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ನೊರೆ ಬಗ್ಗೆಯಂತೂ ದೆಹಲಿ ಪರಿಸರ ಸಚಿವಾಲಯವೇ ಬೇಸರ ವ್ಯಕ್ತಪಡಿಸಿ, ಖಡಕ್‌ ಸೂಚನೆ ನೀಡಿತ್ತು. ಆದರೆ, ನಂತರ ಬಂದ ಚುನಾವಣೆಗಳಲ್ಲಿ ಈ ವಿಷಯವೇ ಅಪ್ರಸ್ತುತವಾಯಿತು.

Advertisement

ಈ ಹಿಂದೆ ಕೆರೆಗಳ ಒತ್ತುವರಿ ಬಗ್ಗೆಯೇ ಕೆ.ಬಿ. ಕೋಳಿವಾಡ, ಬಾಲಸುಬ್ರಮಣ್ಯನ್‌, ಎ.ಟಿ. ರಾಮಸ್ವಾಮಿ ಅವರ ನೇತೃತ್ವದಲ್ಲಿ ಮೂರು ಸಮಿತಿಗಳು ವರದಿ ಅಧ್ಯಯನ ನೆಡಸಿ ವರದಿ ಸಲ್ಲಿಸಿವೆ. ಆದರೆ, ಆ ವರದಿಗಳು ಮೂಲೆ ಸೇರಿವೆ.

ಪ್ರಸ್ತುತ ಚುನಾವಣೆಯಲ್ಲಾದರೂ ಈ ಬಗ್ಗೆ ಅಭ್ಯರ್ಥಿಗಳ ಗಮನಸೆಳೆಯುವ ಕೆಲಸ ಆಗಬೇಕಿದೆ ಎಂದು ತಜ್ಞರ ಒತ್ತಾಯ. ಕೇವಲ ಕೆರೆಗಳ ಬಗ್ಗೆ ಅಲ್ಲ; ನಮಗೆ ಮತ್ತು ನಮ್ಮನ್ನು ಆಳುವವರಿಗೆ ಇಬ್ಬರಿಗೂ ಪರಿಸರ ಸಾಕ್ಷರತೆ ಇಲ್ಲದಿರುವುದು ಈ ದುಃಸ್ಥಿತಿಗೆ ಕಾರಣ.

ಬ್ರ್ಯಾಂಡ್‌ ಬೆಂಗಳೂರು ಅಥವಾ ಜಾಗತಿಕ ಮಟ್ಟದಲ್ಲಿ ಬೆಂಗಳೂರು ಅಭಿವೃದ್ಧಿಪಡಿಸುವ ಭರವಸೆ ನೀಡುವವರು ಇದರ ಮೂಲಪರಿಕಲ್ಪನೆ ಅರಿಯುವ ಅವಶ್ಯಕತೆ ಇದೆ. ಇಲ್ಲಿನ ಜನರಿಗೆ ಶುದ್ಧ ಗಾಳಿ ಮತ್ತು ನೀರು ನೀಡುವುದು ಬ್ರ್ಯಾಂಡ್‌ ಬೆಂಗಳೂರಿನಲ್ಲೊಂದು ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ವಿಜ್ಞಾನಿ ಡಾ.ಟಿ.ವಿ. ರಾಮಚಂದ್ರ ತಿಳಿಸುತ್ತಾರೆ.

ಸಾರ್ವಜನಿಕ ಸಮಸ್ಯೆಗಳು ನಗಣ್ಯ: ಕೆರೆಗಳು ಒತ್ತಟ್ಟಿಗಿರಲಿ; ನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಕೇಳಿಬರುತ್ತಿದೆ. ಆ ಬಗ್ಗೆಯೇ ಜನಪ್ರತಿನಿಧಿಗಳು ಮಾತನಾಡುತ್ತಿಲ್ಲ. ಸಾರ್ವಜನಿಕ ಸಮಸ್ಯೆಗಳು ಅವರಿಗೆ ಸಮಸ್ಯೆಗಳಾಗಿ ಕಾಣುತ್ತಿಲ್ಲ. ಸಾವಿರಾರು ಎಕರೆಯಷ್ಟು ಕೆರೆಗಳ ಜಾಗ ಒತ್ತುವರಿ ಆಗಿದೆ. ಅದರ ಸಂರಕ್ಷಣೆ ಬಗ್ಗೆ ಕಾಳಜಿ ವ್ಯಕ್ತವಾಗುತ್ತಿಲ್ಲ.

ಈ ನಿಟ್ಟಿನಲ್ಲಿ ಚುನಾವಣೆಗಳು ಇದಕ್ಕೆ ಸಕಾಲ ಎಂದು ನಿವೃತ್ತ ಐಎಎಸ್‌ ಅಧಿಕಾರಿ ಬಾಲಸುಬ್ರಮಣ್ಯನ್‌ ಹೇಳುತ್ತಾರೆ. ನಗರದ ಶೇ. 30ರಷ್ಟು ಕೆರೆಗಳು ಕಣ್ಮರೆ ಆಗಿವೆ. ಶೇ. 25ರಿಂದ 30ರಷ್ಟು ಕೆರೆಗಳು ಕಣ್ಮರೆ ಭೀತಿ ಎದುರಿಸುತ್ತಿವೆ.

ಉಳಿದ ಶೇ. 20ರಿಂದ 30ರಷ್ಟು ಕೆರೆಗಳನ್ನಾದರೂ ಸಂರಕ್ಷಿಸುವ ಪ್ರಯತ್ನ ನಡೆಯಬೇಕು. ಇದು ಕೇವಲ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದ್ದಲ್ಲ. ಸಂವಿಧಾನದಲ್ಲೇ ತಿಳಿಸಿರುವಂತೆ ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಎಂದು ಕೆರೆ ಒತ್ತುವರಿ ಅಧ್ಯಯನಕ್ಕೆ ರಚಿಸಲಾಗಿದ್ದ ಸದನ ಸಮಿತಿಯಲ್ಲಿದ್ದ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

ಏನು ಮಾಡಬೇಕು?
-ಚುನಾವಣಾ ಪ್ರಣಾಳಿಕೆಗಳಲ್ಲಿ ಕೆರೆಗಳ ಸಂರಕ್ಷಣೆ ವಿಷಯ ಆದ್ಯತೆ ಮತ್ತು ಅನುಷ್ಠಾನ
-10 ಎಕರೆಗಿಂತ ಹೆಚ್ಚು ವಿಸ್ತಾರವಾಗಿರುವ ಕೆರೆಗಳನ್ನು ರಾಷ್ಟ್ರೀಕರಣ
-ಸಂಸದರ ಅನುದಾನ ಸಮುದಾಯ ಭವನಗಳಿಗೆ ಸೀಮಿತವಾಗದೆ, ಕೆರೆ ಅಭಿವೃದ್ಧಿಗೆ ಹೆಚ್ಚು ಬಳಕೆ
-ಗಂಗಾ ಶುದ್ಧೀಕರಣ, ಅಮೃತ್‌ ಸಿಟಿಯಂತಹ ಯೋಜನೆಗಳಡಿ ಕೆರೆಗಳ ಸಂರಕ್ಷಣೆ ಕೈಗೊಳ್ಳಲು ಅವಕಾಶ ಇದೆ. ಈ ನಿಟ್ಟಿನಲ್ಲಿ ಆಸಕ್ತಿ

ಪರಿಸರ ಸಾಕ್ಷರತೆ ಬರೀ ಶೇ.3.5!: ನಗರದಲ್ಲಿ ಪರಿಸರ ಸಾಕ್ಷರತೆ ಪ್ರಮಾಣ ಕೇವಲ ಶೇ. 3.5! ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಈ ಹಿಂದೆ ನಗರದಲ್ಲಿರುವ ಪರಿಸರ ಸಾಕ್ಷರತೆ ಕುರಿತು ಅಧ್ಯಯನ ನಡೆಸಿತ್ತು.

ಅದರಲ್ಲಿ ಶೇ.3.5ರಷ್ಟು ಜನರಲ್ಲಿ ಮಾತ್ರ ಪರಿಸರ ಸಾಕ್ಷರತೆ ಇರುವುದು ಕಂಡುಬಂದಿದೆ. ನೀರು ಎಲ್ಲಿಂದ ಬರುತ್ತದೆ? ಘನತ್ಯಾಜ್ಯ ನಿರ್ವಹಣೆ ವಿಲೇವಾರಿ ಹೇಗೆ? ಗಿಡಗಳು ಎಷ್ಟು ಅನುಕೂಲ ಮತ್ತು ಅನನುಕೂಲ? ಇಂತಹ ಹಲವು ಪ್ರಶ್ನೆಗಳನ್ನು ಅಧ್ಯಯನದ ವೇಳೆ ಜನರ ಮುಂದಿಡಲಾಗಿತ್ತು ಎಂದು ಡಾ.ಟಿ.ವಿ. ರಾಮಚಂದ್ರ ತಿಳಿಸಿದರು.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next