ಹುಣಸೂರು: ಆಸಾನಿ ಚಂಡಮಾರುತದ ಪರಿಣಾಮ ಭಾರಿ ಮಳೆಯಾಗುತ್ತಿದ್ದು, ನಾಗರಹೊಳೆ ಉದ್ಯಾನವನದೊಳಗೆ ಸಸ್ಯರಾಶಿಗೆ ಜೀವಕಳೆ ಬಂದಿದೆ. ವನ್ಯಜೀವಿಗಳ ಸ್ವಚ್ಚಂದ ವಿಹಾರಕ್ಕೆ ಪಾರವೇ ಇಲ್ಲದಂತಾಗಿದ್ದು, ಇದೀಗ ಉದ್ಯಾನವನದಲ್ಲಿ ಎಲ್ಲೆಂದರಲ್ಲಿ ವನ್ಯಜೀವಿಗಳು ಕಾಣಸಿಗುತ್ತಿವೆ.
ಸಾಮಾನ್ಯವಾಗಿ ಎಪ್ರಿಲ್, ಮೇ ತಿಂಗಳಿನಲ್ಲಿ ವನ್ಯ ಜೀವಿಗಳಿಗೆ ಮೇವಿನ ಅಭಾವವುಂಟಾಗಿ ಕಾಡಿನಿಂದ ಹೊರಬರುತ್ತಿತ್ತು, ಆದರೆ ಈ ಭಾರಿ ಮಳೆಯಿಂದ ಮೇವು, ನೀರು ಯತೇಚ್ಛವಾಗಿ ದೊರೆಯುತ್ತಿದ್ದು, ಉದ್ಯಾನವನದೊಳಗೆ ಮೇಯುತ್ತಾ ವಿಹರಿಸುತ್ತಿವೆ.
ಶುಕ್ರವಾರ ಬೆಳ್ಳಂಬೆಳಗ್ಗೆ ಕಬಿನಿ ಹಿನ್ನೀರಿನ ಬಳಿ ರಾಜ ಗಾಂಭೀರ್ಯದೊಂದಿಗೆ ತಾಯಿ ಹುಲಿಯೊಂದು ಮುಂದೆ ಸಾಗುತ್ತಿದ್ದರೆ. ಇದರೊಂದಿಗೆ ನಾಲ್ಕು ಮರಿಗಳು ಸಫಾರಿ ಲೈನ್ ದಾಟುತ್ತಿದ್ದ ದೃಶ್ಯವನ್ನು ಪ್ರವಾಸಿಗರು ಸೆರೆ ಹಿಡೆದಿದ್ದಾರೆ.
ಇನ್ನೊಂದೆಡೆ ಉದ್ಯಾನವನದ ರಸ್ತೆ ಬದಿಯಲ್ಲೇ ಜಿಂಕೆಗಳ ಹಿಂಡು ಸ್ವಚ್ಛಂದ ಪರಿಸರದಲ್ಲಿ ವಿಹರಿಸುತ್ತಿದ್ದರೆ, ಕಾಡುಕೋಣವೊಂದು ತನ್ನ ಮರಿಗೆ ಹಾಲುಣಿಸುತ್ತಿರುವ ದೃಶ್ಯವಂತೂ ವನ್ಯಪ್ರೀಯರಲ್ಲಿ ಸಂತಸ ಇಮ್ಮಡಿಸಿತ್ತು.
ಇದನ್ನೂ ಓದಿ:ಶ್ರೀಮಂತ ಟಿ20 ಲೀಗ್ ನಲ್ಲಿ ವಿದ್ಯುತ್ ಸಮಸ್ಯೆಯಿಂದ ವಿವಾದಾತ್ಮಕ ತೀರ್ಪು; ಫ್ಯಾನ್ಸ್ ಗರಂ
ಪ್ರತಿ ವರ್ಷ ಬೇಸಿಗೆ ಕಾಲದಲ್ಲಿ ಬೆಂಕಿ ಭಯದಿಂದ ಹಗಲು ರಾತ್ರಿ ಜತನದಿಂದ ಅರಣ್ಯ ಸಿಬ್ಬಂದಿಗಳು ಕಾವಲು ಕಾಯುತ್ತಿದ್ದರು. ಕೆಲವೊಮ್ಮೆ ಸಫಾರಿಯೂ ಸ್ಥಗಿತಗೊಳಿಸಲಾಗುತ್ತಿತ್ತು. ಈ ಬಾರಿ ಎಪ್ರಿಲ್ ಕೊನೆಯ ವಾರದಲ್ಲೇ ಮಳೆ ಆರಂಭವಾಗಿದ್ದರಿಂದ ಅರಣ್ಯಾಧಿಕಾರಿಗಳು ನಿಟ್ಟುಸಿರು ಬಿಡುವಂತಾಗಿದೆ.