Advertisement

Belthangady ಕಡಿರುದ್ಯಾವರ: ಕೃಷಿಗೆ ಮತ್ತೆ ಕಾಡಾನೆ ದಾಳಿ

11:25 PM Sep 15, 2023 | Team Udayavani |

ಬೆಳ್ತಂಗಡಿ: ಧರ್ಮಸ್ಥಳದ ನೇರ್ತನೆಯಲ್ಲಿ ಗುರುವಾರ ಹಾಡುಹಗಲೆ ಕಾಡಾನೆಗಳು ಕಂಡಿರುವ ನಡುವೆಯೇ ಅದೇ ದಿನ ತಡರಾತ್ರಿ ಕಡಿರುದ್ಯಾವರ ಗ್ರಾಮದ ಪಣಿಕಲ್ಲು ಎಂಬಲ್ಲಿ ಕಾಡಾನೆಗಳ ಹಿಂಡು ಕೃಷಿಯನ್ನು ಹಾಳು ಮಾಡಿವೆ.

Advertisement

ಪಣಿಕಲ್ಲು ರಾಘವೇಂದ್ರ ಭಟ್‌ ಅವರ ತೋಟಕ್ಕೆ ದಾಳಿ ಇಟ್ಟಿದ್ದು 55 ಅಡಿಕೆ ಮರ ಹಾಗೂ ಮೂರು ತೆಂಗಿನ ಮರಗಳನ್ನು ಧ್ವಂಸಗೈದಿವೆ. ಸಮೀಪದ ರಾಮಂದೊಟ್ಟು ಕೆಂಪಯ್ಯ ಗೌಡ ಎಂಬವರ ಭತ್ತದ ಗದ್ದೆಗೂ ನುಗ್ಗಿದ ಕಾಡಾನೆಗಳ ಹಿಂಡು ಸುಮಾರು ಮುಕ್ಕಾಲು ಎಕರೆ ಪ್ರದೇಶದಲ್ಲಿನ ಭತ್ತದ ಬೆಳೆಯನ್ನು ಹಾನಿ ಮಾಡಿದೆ.

ರಾತ್ರಿ 11.30 ಸುಮಾರಿಗೆ ಕಾಡಾನೆಗಳು ತೋಟಕ್ಕೆ ನುಗ್ಗಿರುವ ವಿಚಾರ ತಿಳಿದುಬಂದಿದ್ದು ಪರಿಸರದವರು ಸೇರಿ ಪಟಾಕಿ ಸಿಡಿಸಿ ಕಾಡಾನೆಗಳನ್ನು ಕಾಡಿಗೆ ಅಟ್ಟಲು ಪ್ರಯತ್ನಿಸಿದರು. ಪಟಾಕಿ ಸದ್ದಿಗೆ ಜಗ್ಗದ ಕಾಡಾನೆಗಳು ಕೃಷಿ ಹಾನಿಯನ್ನು ಮುಂದುವರಿಸಿದವು. ಹಿಂಡಿನಲ್ಲಿ ಒಂದು ಮರಿಯಾನೆ ಸಹಿತ 5 ಕಾಡಾನೆಗಳು ಇದ್ದ ಬಗ್ಗೆ ಸ್ಥಳೀಯರು ತಿಳಿಸಿದ್ದಾರೆ. ಕೃಷಿಹಾನಿ ಪ್ರದೇಶಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಳೆದ ವಾರ ಚಾರ್ಮಾಡಿ ಪರಿಸರದಲ್ಲಿ ಎರಡು ಮರಿಯಾನೆ ಸಹಿತ 8ರಿಂದ 10 ಕಾಡಾನೆಗಳು ಸಂಚಾರ ನಡೆಸಿರುವ ಬಗ್ಗೆ ಅಲ್ಲಿನ ನಾಗರಿಕರು ತಿಳಿಸಿದ್ದರು. ಒಂದು ಮರಿಯಾನೆ ಸಹಿತ ಮೂರು ಆನೆಗಳು ಧರ್ಮಸ್ಥಳದ ನೇರ್ತನೆ ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ಕೃಷಿಹಾನಿ ಉಂಟು ಮಾಡುತ್ತ ಅಲ್ಲಿನ ಜನವಸತಿ ಪ್ರದೇಶದಲ್ಲೂ ಕಂಡು ಬರುತ್ತಿವೆ. ಇದೀಗ ಕಡಿರುದ್ಯಾವರ ಭಾಗದಲ್ಲಿ ಒಂದು ಮರಿಯಾನೆ ಸಹಿತ 5 ಕಾಡಾನೆಗಳು ಕಂಡುಬಂದಿವೆ. ಇದರಿಂದ ಕಾಡಾನೆಗಳ ಎರಡೆರಡು ಹಿಂಡುಗಳು ಇರುವುದರ ಬಗ್ಗೆ ಅನುಮಾನ ವ್ಯಕ್ತವಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next