Advertisement

Bengaluru; ಕುತ್ತಿಗೆ ಬಿಗಿದು ಕೈಕಾಲು ಕಟ್ಟಿ, ಸೊಂಟ ತುಳಿದು ಪತಿಯ ಹತ್ಯೆ

09:42 AM Oct 20, 2023 | Team Udayavani |

ಬೆಂಗಳೂರು: ಯುವತಿಯೊಬ್ಬಳ ಜತೆ ಅನೈತಿಕ ಸಂಬಂಧ ಹೊಂದಿದಲ್ಲದೆ, ತನ್ನ ಮತ್ತು ಮಗುವಿನ ಜೀವನ ನಿರ್ವಹಣೆ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದ ಪತಿಯನ್ನು ಸಹೋದರಿ ಜತೆ ಸೇರಿ ಪತ್ನಿಯೇ ಕೊಲೆಗೈದಿರುವ ಘಟನೆ ಸಂಪಿಗೆಹಳ್ಳಿಯಲ್ಲಿ ನಡೆದಿದೆ.

Advertisement

ಈ ಸಂಬಂಧ ಬಿಹಾರ ಮೂಲದ ನಜೀರಾ ಖಾತೂನ್‌ (25) ಮತ್ತು ಈಕೆ ಸಹೋದರಿ ಕಾಶ್ಮೀರಿ (28) ಎಂಬುವರನ್ನು ಬಂಧಿಸಿದ್ದಾರೆ. ಆರೋಪಿಗಳು ಅ.10ರಂದು ಶಕೀಲ್‌ ಅಕ್ತರ್‌ ಸೈಫ್ (28) ಎಂಬಾತನ ಕುತ್ತಿಗೆಗೆ ವೇಲ್‌ ಬಿಗಿದು ಕೊಲೆಗೈದು, ಪಿಟ್‌ ಗುಂಡಿಯಲ್ಲಿ ಮೃತದೇಹ ಎಸೆದಿದ್ದರು ಎಂದು ಪೊಲೀಸರು ಹೇಳಿದರು.

ಬಿಹಾರ ಮೂಲದ ಶಕೀಲ್‌ ಅಕ್ತರ್‌ ಸೈಪಿ 6 ವರ್ಷ ಗಳ ಹಿಂದೆ ಪತ್ನಿ ಮತ್ತು ಮಕ್ಕಳ ಜತೆ ಬೆಂಗಳೂರಿಗೆ ಬಂದಿದ್ದು, ಸಂಪಿಗೆಹಳ್ಳಿಯಲ್ಲಿ ವಾಸವಾಗಿದ್ದ. ಇವೆಂಟ್‌ಗಳಿಗೆ ಎಲ್‌ಇಡಿ ಸ್ಕ್ರೀನ್‌, ಲೈಟಿಂಗ್ಸ್‌ ಅಳವಡಿಸುವ ಸಣ್ಣ ಸಂಸ್ಥೆ ನಡೆಸುತ್ತಿದ್ದ. ದಂಪತಿ ಸಂಪಿಗೆಹಳ್ಳಿಯ ಕೋಗೀಲು ಲೇಔಟ್‌ನಲ್ಲಿ ವಾಸವಾಗಿದ್ದರು. ಈ ಮಧ್ಯೆ ಶಕೀಲ್‌, 2018ರಲ್ಲಿ ನಜೀರಾ ಖಾತೂನ್‌ ಎಂಬಾಕೆಯನ್ನು ಎರಡನೇ ವಿವಾಹವಾಗಿದ್ದು, ಈಕೆಗೆ ಒಂದು ಮಗು ಇದೆ. ಈಕೆ ಹೌಸ್‌ಕೀಂಪಿಂಗ್‌ ಕೆಲಸಕ್ಕೆ ಹೋಗುತ್ತಿದ್ದಳು. ಇಬ್ಬರು ಪತ್ನಿಯರ ಜತೆ ಒಂದೇ ಮನೆಯಲ್ಲಿ ಶಕೀಲ್‌ ವಾಸವಾಗಿದ್ದ. ಆದರೆ, ಪತ್ನಿಯರು ನಿತ್ಯ ಜಗಳವಾಡುತ್ತಿದ್ದರು. ಅದರಿಂದ ಬೇಸತ್ತ ಶಕೀಲ್‌, ನಜೀರಾಳನ್ನು ಮತ್ತೂಂದು ಮನೆಯಲ್ಲಿ ಪ್ರತ್ಯೇಕವಾಗಿ ಇರಿಸಿದ್ದ. ಅದರಿಂದ ಮೊದಲ ಪತ್ನಿ ಮಕ್ಕಳ ಜತೆ ನಾಲ್ಕೈದು ತಿಂಗಳ ಹಿಂದೆ ಬಿಹಾರಕ್ಕೆ ವಾಪಸ್‌ ಹೋಗಿ ದ್ದಳು. ಹೀಗಾಗಿ ಶಕೀಲ್‌, 2ನೇ ಪತ್ನಿ ನಜೀರಾ ಜತೆ ವಾಸವಾಗಿದ್ದ ಎಂದು ಪೊಲೀಸರು ಹೇಳಿದರು.

ಯುವತಿ ಜತೆ ಅಕ್ರಮ ಸಂಬಂಧ: ಮತ್ತೂಂದೆಡೆ ಶಕೀಲ್‌ ಮನೆ ಪಕ್ಕದ 19 ವರ್ಷದ ಯುವತಿ ಜತೆ ಅಕ್ರಮ ಸಂಬಂಧ ಹೊಂದಿದ್ದು, ಆಕೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದ. ಈ ವಿಚಾರವಾಗಿ ನಜೀರಾ ಮತ್ತು ಶಕೀಲ್‌ ನಡುವೆ ಗಲಾಟೆ ನಡೆಯುತ್ತಿತ್ತು. ಪತ್ನಿ ಮತ್ತು ಮಗುವಿನ ನಿರ್ವಹಣೆಗೂ ಹಣ ಕೊಡುತ್ತಿರಲಿಲ್ಲ, ಅಲ್ಲದೆ, ಮನೆಯಲ್ಲಿ ಪತ್ನಿ ಜತೆ ನಿತ್ಯ ಜಗಳ ಮಾಡುತ್ತಿದ್ದು, ತಲಾಕ್‌ ಕೊಡುವುದಾಗಿ ಬೆದರಿಕೆ ಹಾಕುತ್ತಿದ್ದ. ಹೀಗಾಗಿ ಪತಿ ಕೊಲ್ಲಲು ನಿರ್ಧರಿಸಿ, ಸೋದರಿಯನ್ನು ಮನೆಗೆ ಕರೆಸಿಕೊಂಡಿದ್ದಳು ಎಂದು ಪೊಲೀಸರು ಹೇಳಿದರು.

ವೇಲ್ನಿಂದ ಕುತ್ತಿಗೆ ಬಿಗಿದು ಕೊಲೆ: ಆರೋಪಿಗಳ ಪೈಕಿ ಕಾಶ್ಮೀರಿ, ಮಾಲ್‌ವೊಂದರಲ್ಲಿ ಹೌಸ್‌ ಕೀಪಿಂಗ್‌ ಕೆಲಸ ಮಾಡಿಕೊಂಡಿದ್ದಳು. ಸಹೋದರಿ ನಜೀರಾಳ ಕೌಟುಂಬಿಕ ವಿಚಾರಕ್ಕೆ ಬೇಸತ್ತು ಆಕೆಯ ಪತಿ ಹತ್ಯೆಗೆ ಸಹಕಾರ ನೀಡಿದ್ದಾಳೆ. ಅ.10 ರಂದು ತಡರಾತ್ರಿ ಪಕ್ಕದಲ್ಲಿ ಮಲಗಿದ್ದ ಪತಿ ಶಕೀಲ್‌ನ ಕುತ್ತಿಗೆ ಮೇಲೆ ಕೈ ಇಟ್ಟ ನಜೀರಾ ಜೋರಾಗಿ ಒತ್ತಿದ್ದಾಳೆ. ಉಸಿರಾಟದ ಸಮಸ್ಯೆಯಾದ ಕೂಡಲೇ ಪತಿ, ಪತ್ನಿಯನ್ನು ಪಕ್ಕಕ್ಕೆ ತಳ್ಳಿ, ಆಕೆಯ ಎದೆಗೆ ಗುದ್ದಿದ್ದಾನೆ. ಉಸಿರಾಟದ ಸಮಸ್ಯೆ ಹೆಚ್ಚಾಗಿದ್ದರಿಂದ ಆತ ಕೂಡ ಮಂಚದಿಂದ ಕೆಳಗೆ ಬಿದ್ದು ಮಕಾಡೆ ಮಲಗಿ ಒದ್ದಾಡುತ್ತಿದ್ದ. ಆಗ ನಜೀರಾ ಪತಿಯ ಕುತ್ತಿಗೆಗೆ ವೇಲ್‌ನಿಂದ ಬಿಗಿದು, ಆತನ ಬೆನ್ನ ಮೇಲೆ ಕುಳಿತಿದ್ದಾಳೆ. ಸಹೋದರಿ ಕಾಶ್ಮೀರಿ, ಶಕೀಲ್‌ನ ಕಾಲುಗಳನ್ನು ಕಟ್ಟಿ ಸೊಂಟದ ಮೇಲೆ ಕುಳಿತಿದ್ದಾಳೆ. ಅದರಿಂದ ಉಸಿರುಗಟ್ಟಿ ಶಕೀಲ್‌ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದರು.

Advertisement

ಚರಂಡಿಗೆ ಶವ ಎಸೆದು ನಾಪತ್ತೆ ದೂರು ನೀಡಿದ ಪತ್ನಿ

ಕೊಲೆಗೈದ ಬಳಿಕ ಬೆಡ್‌ಶೀಟ್‌ನಿಂದ ಶವವನ್ನು ಸುತ್ತಿ ಕೋಗೀಲು ಲೇಔಟ್‌ನ ಒಂದು ಚರಂಡಿ ನೀರು ಹೋಗುವ ಪಿಟ್‌ ಗುಂಡಿಗೆ ಎಸೆದಿದ್ದಾರೆ. ಮರು ದಿನ ಪತಿಯ ಸಹೋದರರಿಗೆ ಶಕೀಲ್‌ ನಾಪತ್ತೆಯಾಗಿದ್ದಾನೆ ಎಂದು ಸುಳ್ಳು ಹೇಳಿದ್ದಳು. ಹೀಗಾಗಿ ಆತನ ಸಹೋದರ ಸಂಪಿಗೆಹಳ್ಳಿ ಠಾಣೆಗೆ ದೂರು ನೀಡಿದ್ದ. ಈ ಮಧ್ಯೆ ಅ.14ರಂದು ಕೋಗಿಲು ಲೇಔಟ್‌ನ ಪಿಟ್‌ ಗುಂಡಿ ಬಳಿ ಕೊಳೆತ ವಾಸನೆ ಬರುತ್ತಿದ್ದನ್ನು ಗಮನಿಸಿದ ಮುದಾಸಿರ್‌ ಎಂಬುವರು ಪೊಲೀಸರಿಗೆ ಮಾಹಿತಿ ನೀಡಿದ್ದರು

ದಾರ, ಡಾಲರ್ನಿಂದ ಮೃತದೇಹ ಪತ್ತೆ

ಸ್ಥಳಕ್ಕೆ ಬಂದ ಪೊಲೀಸರು ಮೃತದೇಹ ಹೊರತೆಗೆದಾಗ ಗುರುತು ಸಿಗದ ರೂಪದಲ್ಲಿ ಮೃತದೇಹ ಇತ್ತು. ಆದರೆ, ಶಕೀಲ್‌ನ ಬಟ್ಟೆ, ಕೈ ಮತ್ತು ಕುತ್ತಿಗೆ ಹಾಕಿದ್ದ ದಾರ ಹಾಗೂ ಡಾಲರ್‌ನಿಂದ ಶಕೀಲ್‌ ಎಂಬುದು ಪತ್ತೆಯಾಗಿತ್ತು. ನಂತರ ಈತನ ಹಿನ್ನೆಲೆಯ ಪರಿಶೀಲಿಸಿದಾಗ ಪತ್ನಿಯೇ ಕೊಲೆಗೈದಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು

Advertisement

Udayavani is now on Telegram. Click here to join our channel and stay updated with the latest news.

Next