Advertisement

Crime: ಅಕ್ರಮ ಸಂಬಂಧ ಪ್ರಶ್ನಿಸಿದ ಪತಿಯ ಕೊಲೆಗೈದ ಪತ್ನಿ ಸೆರೆ

12:22 PM Aug 11, 2024 | Team Udayavani |

ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪತ್ನಿಯೇ ಪ್ರಿಯಕರನ ಜತೆ ಸೇರಿ ಕೊಲೆಗೈದಿರುವ ಘಟನೆ ವೈಟ್‌ಫೀಲ್ಡ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ವೈಟ್‌ಫೀಲ್ಡ್‌ನ ಹಗದೂರು ನಿವಾಸಿ ಮಹೇಶ್‌(36) ಕೊಲೆಯಾದವ. ಈ ಸಂಬಂಧ ಆತನ ಪತ್ನಿ ತೇಜಸ್ವಿನಿ ಮತ್ತು ಈಕೆಯ ಪ್ರಿಯಕರ ಗಜೇಂದ್ರ(35) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಗಳು ಆ.9ರಂದು ಸಂಜೆ ಮಹೇಶ್‌ನನ್ನು ಕತ್ತು ಹಿಸುಕಿ ಕೊಲೆಗೈದಿದ್ದರು ಎಂದು ಪೊಲೀಸರು ಹೇಳಿದರು.

ಹಾಸನದ ಅರಕಲಗೂಡಿನ ದೊಂಬರಪಾಳ್ಯ ನಿವಾಸಿ ಮಹೇಶ್‌ ಮತ್ತು ತೇಜಸ್ವಿನಿ ಕೆಲ ವರ್ಷಗಳ ಹಿಂದೆಯೇ ಮದುವೆಯಾಗಿದ್ದು, ವೈಟ್‌ಫೀಲ್ಡ್‌ನ ಹಗದೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮಹೇಶ್‌, ಆಟೋ ಚಾಲನೆ ಜತೆಗೆ ರಂಗೋಲಿ ಮಾರಾಟ ಮಾಡುತ್ತಿದ್ದರು. ತೇಜಸ್ವಿನಿ, ಖಾಸಗಿ ಫೈನಾನ್ಸ್‌ನಲ್ಲಿ ಸಾಲ ವಸೂಲಾತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಳು. ಕಳೆದೊಂದು ವರ್ಷದಿಂದ ದಂಪತಿ ನಡುವೆ ಕೌಟುಂಬಿಕ ವಿಚಾರವಾಗಿ ಗಲಾಟೆ ನಡೆಯುತ್ತಿತ್ತು. ಇದರೊಂದಿಗೆ ತೇಜಸ್ವಿನಿ, ತನ್ನೊಂದಿಗೆ ಕೆಲಸ ಮಾಡುತ್ತಿದ್ದ ಗಜೇಂದ್ರನ ಜತೆ ಅಕ್ರಮ ಸಂಬಂಧ ಹೊಂದಿದ್ದಳು. ಈ ನಡುವೆ, ಶುಕ್ರವಾರ ಮಧ್ಯಾಹ್ನ ತೇಜಸ್ವಿನಿ ಮತ್ತು ಗಜೇಂದ್ರ ಮನೆಯಲ್ಲಿ ಒಟ್ಟಿಗೆ ಇದ್ದರು. ಇದೇ ವೇಳೆ ಮಹೇಶ್‌ ಕೂಡ ಮನೆಗೆ ಬಂದಿದ್ದು, ಪತ್ನಿ ಜತೆ ಗಜೇಂದ್ರನ ಕಂಡ ಮಹೇಶ್‌, ಪತ್ನಿ ಮೇಲೆ ಹಲ್ಲೆ ನಡೆಸಿದ್ದ. ಆಗ ಪತ್ನಿ ತೇಜಸ್ವಿನಿ ಮತ್ತು ಆಕೆಯ ಪ್ರಿಯಕರ ಗಜೇಂದ್ರ ಸೇರಿ ಮಹೇಶ್‌ ಮೇಲೆ ಹಲ್ಲೆ ನಡೆಸಿ, ಕುತ್ತಿಗೆ ಹಿಸುಕಿ ಕೊಲೆಗೈದಿದ್ದರು.

ಕುಸಿದು ಬಿದ್ದು ಸಾವು ಎಂದು ಕಥೆ ಕಟ್ಟಿದ ಪತ್ನಿ!

ಪತಿಯನ್ನು ಕೊಂದ ಬಳಿಕ ಪತ್ನಿ ಕಥೆ ಕಟ್ಟಿ ಪೊಲೀಸರಿಗೆ ದಿಕ್ಕು ತಪ್ಪಿಸಲು ಪ್ರಯತ್ನಿಸಿದ್ದಾಳೆ. “ಮನೆಯಲ್ಲಿ ತನ್ನ ಗಂಡ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ’ ಎಂದು ಪತ್ನಿ ತೇಜಸ್ವಿನಿ ನಾಟಕವಾಡಿದ್ದಳು. ಆದರೆ, ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ. ಜತೆಗೆ ಪ್ರಿಯಕರನ ಸಹಕಾರದ ಬಗ್ಗೆಯೂ ಹೇಳಿಕೆ ನೀಡಿದ್ದಳು. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ವೈಟ್‌ಫೀಲ್ಡ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next