Advertisement

ಮಡದಿ, ಮಗಳ ಕಣ್ಣೆದುರೇ ಪುತ್ರನ ಕೊಲೆ!

12:54 AM Jun 03, 2019 | Lakshmi GovindaRaj |

ಬೆಂಗಳೂರು: ಚೀಟಿ ವ್ಯವಹಾರದಲ್ಲಿ ಲಕ್ಷಾಂತರ ರೂ. ನಷ್ಟ ಅನುಭವಿಸಿದ್ದವ್ಯಕ್ತಿಯೊಬ್ಬ ತನ್ನ 12 ವರ್ಷದ ಮಗನನ್ನೇ ಫ್ಯಾನ್‌ಗೆ ನೇಣುಬಿಗಿದು ಹತ್ಯೆಗೈದಿದ್ದಾನೆ. ಅದನ್ನು ಕಂಡ ಮಗುವಿನ ತಾಯಿ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ನಗರದ ಎಚ್‌ಎಎಲ್‌ ಠಾಣೆ ವ್ಯಾಪ್ತಿಯ ವಿಭೂತಿಪುರದಲ್ಲಿ ಭಾನುವಾರ ಮುಂಜಾನೆ ನಡೆದಿದೆ.

Advertisement

ವರುಣ್‌ (12) ತಂದೆಯಿಂದಲೇ ಹತ್ಯೆಗೀಡಾದ ಬಾಲಕ. ಆತನ ತಾಯಿ ಗೀತಾಬಾಯಿ (44) ಆತ್ಮಹತ್ಯೆ ಮಾಡಿಕೊಂಡವರು. ಈ ಕೃತ್ಯ ಎಸಗಿದ ಆರೋಪಿ ಸುರೇಶ್‌ಬಾಬುನನ್ನು ಎಚ್‌ಎಎಲ್‌ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಸುರೇಶ್‌ ಬಾಬು ಖಾಸಗಿ ಕಂಪನಿಯಲ್ಲಿ ಮಾರಾಟ ಪ್ರತಿನಿಧಿಯಾಗಿದ್ದು, ಪತ್ನಿ ಗೀತಾಬಾಯಿ ಹಲವು ಮನೆಗಳಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದು, 17 ವರ್ಷದ ಪುತ್ರಿ ಕಾಲೇಜು ವ್ಯಾಸಂಗ ಮಾಡುತ್ತಿದ್ದು, ಪುತ್ರ ವರುಣ್‌ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ.

ಈ ಮಧ್ಯೆ ಗೀತಾಬಾಯಿ ಹಾಗೂ ಸುರೇಶ್‌ ಬಾಬು ಸ್ಥಳೀಯ ನಿವಾಸಿಗಳ ಜತೆ ಸೇರಿ ಚೀಟಿ ವ್ಯವಹಾರ ನಡೆಸುತ್ತಿದ್ದರು. ಅದರಂತೆ ಪ್ರತಿ ತಿಂಗಳು ಎಲ್ಲರೂ ಹಣ ಹೂಡಿಕೆ ಮಾಡುತ್ತಿದ್ದರು. ಈ ಹಣದ ನಿರ್ವಹಣೆಯನ್ನು ಗೀತಾಬಾಯಿ ನೋಡಿಕೊಳ್ಳುತ್ತಿದ್ದರು. ಇತ್ತೀಚೆಗೆ ಚೀಟಿ ವ್ಯವಹಾರದಲ್ಲಿ ಭಾರೀ ನಷ್ಟ ಉಂಟಾಗಿ, ದಂಪತಿ ಸುಮಾರು ಐದಾರು ಲಕ್ಷ ರೂ. ಸಾಲ ಮಾಡಿಕೊಂಡಿದ್ದರು ಎಂದು ಪೊಲೀಸರು ಹೇಳಿದರು.

ಚೀಟಿ ಕಟ್ಟಿದ್ದ ಸ್ಥಳೀಯರು ಪ್ರತಿನಿತ್ಯ ಮನೆ ಬಾಗಿಲಿಗೆ ಬಂದು ತಮ್ಮ ಹಣ ವಾಪಸ್‌ ಕೊಡುವಂತೆ ಒತ್ತಾಯಿಸುತ್ತದ್ದರು. ಶನಿವಾರ ಸಂಜೆ ಕೂಡ ಕೂಲಿ ಕೆಲಸ ಮಾಡುವ ಸುಧಾ ಎಂಬ ಮಹಿಳೆ ಮನೆ ಬಳಿ ಬಂದು ತಾವು ಕಟ್ಟಿರುವ 40 ಸಾವಿರ ರೂ. ಹಿಂದಿರುಗಿಸುವಂತೆ ಕೇಳಿಕೊಂಡಿದ್ದು, ಗೀತಾಬಾಯಿ ಹಾಗೂ ಸುಧಾ ಅವರ ನಡುವೆ ಮಾತಿನ ಚಕಮಕಿ ಕೂಡ ನಡೆದಿತ್ತು. ಕೊನೆಗೆ ಸ್ಥಳೀಯರು ಇಬ್ಬರನ್ನೂ ಸಮಾಧಾನಪಡಿಸಿದ್ದರು ಎಂದು ಪೊಲೀಸರು ಹೇಳಿದರು.

Advertisement

ಪತ್ನಿ, ಮಗಳ ಕಣ್ಣೆದುರೆ ಪುತ್ರನ ಕೊಲೆ: ಕಳೆದ ಕೆಲ ತಿಂಗಳಿಂದ ಚೀಟಿ ಕಟ್ಟಿದವರು ಒತ್ತಡಕ್ಕೆ ಬೇಸತ್ತಿದ್ದ ಸುರೇಶ್‌ಬಾಬು ದಂಪತಿ, ಮಕ್ಕಳ ಸಮೇತ ಆತ್ಮಹತ್ಯೆಗೆ ಚಿಂತಿಸಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಆರೋಪಿ ಸುರೇಶ್‌ಬಾಬು, ಮೊದಲಿಗೆ ಪತ್ನಿ ಮತ್ತು ಮಗಳ ಕಣ್ಣೆದುರೇ 12 ವರ್ಷದ ವರುಣ್‌ನನ್ನು ಫ್ಯಾನ್‌ಗೆ ಸೀರೆಯಿಂದ ನೇಣು ಬಿಗಿದು ಹತ್ಯೆ ಮಾಡಿದ್ದಾನೆ.

ಅದನ್ನು ಕಂಡ ತಾಯಿ ಗೀತಾಬಾಯಿ ಕೂಡ ಕೆಲ ಹೊತ್ತಿನಲ್ಲೇ ಮತ್ತೂಂದು ಕೊಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಂತರ ಸುರೇಶ್‌ ಕೂಡ ನೇಣು ಬಿಗಿದುಕೊಳ್ಳಲು ಮುಂದಾದಾಗ ಆತನ ಮಗಳು ಆತ್ಮಹತ್ಯೆ ಮಾಡಿಕೊಳ್ಳದಂತೆ ಮನವಿ ಮಾಡಿಕೊಂಡಿದ್ದಳು. ಈ ಹಿನ್ನೆಲೆಯಲ್ಲಿ ಆತ ಆತ್ಮಹತ್ಯೆ ನಿರ್ಧಾರದಿಂಧ ಹಿಂದೆ ಸರಿದಿದ್ದ ಎಂದು ಪೊಲೀಸರು ಹೇಳಿದರು.

ಹತ್ಯೆ ಘಟನೆಯ ಚಿತ್ರೀಕರಿಸಿದ ಪುತ್ರಿ: ಆರೋಪಿ ತನ್ನ ಮಗನಿಗೆ ನೇಣು ಬಿಗಿಯುತ್ತಿರುವ ದೃಶ್ಯವನ್ನು ಮಗಳು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿಕೊಂಡಿದ್ದು, ನಂತರ ಈ ವಿಡಿಯೋವನ್ನು ನೆರೆ ಮನೆಯ ಆಪ್ತರಿಗೆ ಕಳಿಸಿದ್ದಳು. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ. ಈ ವಿಚಾರ ತಿಳಿದು ಪೊಲೀಸರು ಕೂಡಲೇ ಸುರೇಶ್‌ಬಾಬು ಮನೆ ಬಳಿ ಹೋದಾಗ ಘಟನೆ ಬೆಳಕಿಗೆ ಬಂದಿದೆ.

ನಂತರ ಪೊಲೀಸರು ಸುರೇಶ್‌ನ್ನು ವಿಚಾರಣೆಗೆ ಒಳಪಡಿಸಿದಾಗ ಆತ, ಏನೆಲ್ಲಾ ನಡೆಯಿತು ಎಂದು ವಿವರಿಸಿದ್ದಾನೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಹೇಳಿದರು. ಇದೀಗ ಆ ಮೂರುವರೆ ನಿಮಿಷ ವಿಡಿಯೋ ವೈರಲ್‌ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕೃತ್ಯ ಎಸಗಿದ ಪಾಪಿ ತಂದೆ ಸಾರ್ವಜನಿಕರು ಛೀಮಾರಿ ಹಾಕುತ್ತಿದ್ದಾರೆ.

ನಾಟಕ ಆಡುತ್ತಿದ್ದ ಆರೋಪಿ: “ಸಂಜೆ ಮನೆಯಲ್ಲೇಯಿದ್ದು, ರಾತ್ರಿ 9 ಗಂಟೆಗೆ ಕೆಲಸಕ್ಕೆ ತೆರಳಿದ್ದೆ. ನಾನು ಬರುವಷ್ಟರಲ್ಲಿ ಪತ್ನಿ ಹಾಗೂ ಪುತ್ರ ಆತ್ಮಹತ್ಯೆ ಮಾಡಿಕೊಂಡಿದ್ದರು. ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಸಮಸ್ಯೆಯಾಗಿದ್ದು, ಅದೇ ವಿಚಾರವಾಗಿ ಮನೆಯಲ್ಲೂ ಜಗಳ ನಡೆಯುತ್ತಿತ್ತು. ಸಾಲ ಕೂಡ ಮಾಡಿಕೊಂಡಿದ್ದೆವು.

ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ನನಗೆ ಏನೂ ಗೊತ್ತಿಲ್ಲ’ ಎಂದು ಆರೋಪಿ ಸುರೇಶ್‌ ಬಾಬು ಪೊಲೀಸರ ಪ್ರಾಥಮಿಕ ವಿಚಾರಣೆ ವೇಳೆ ಹೇಳಿಕೆ ನೀಡಿದ್ದ. ಆದರೆ, ಪೊಲೀಸರು ಪುತ್ರಿಯ ವಿಚಾರಣೆ ನಡೆಸಿದಾಗ ಆಕೆಯ ಹೇಳಿಕೆಗೂ ಆರೋಪಿಯ ಹೇಳಿಕೆಗೂ ತಾಳೆ ಆಗುತ್ತಿರಲಿಲ್ಲ. ಅಲ್ಲದೆ, ವಿಡಿಯೋ ಸಹ ಪೊಲೀಸರ ಕೈಗೆ ಸಿಕ್ಕಿತ್ತು. ಅದರಿಂದ ಅನುಮಾನಗೊಂಡು ಸುರೇಶ್‌ನ್ನು ತೀವ್ರ ರೀತಿಯಲ್ಲಿ ವಿಚಾರಣೆ ನಡೆಸಿದಾಗ ಸತ್ಯಾಂಶ ಬಾಯಿಬಿಟ್ಟಿದ್ದಾನೆ ಎಂದು ಪೊಲೀಸರು ಹೇಳಿದರು.

ಅಪ್ಪ…ಬೇಡ ಅಪ್ಪಾ…!: ಆರೋಪಿ ತನ್ನ ಪುತ್ರನನ್ನು ನೇಣಿಗೆ ಹಾಕುತ್ತಿದ್ದರೆ, ಕುಣಿಕೆಗೆ ಕೊರಳೊಡ್ಡಿರುವ ಬಾಲಕ “ಅಪ್ಪ… ಅಪ್ಪ…ಬೇಡಪ್ಪಾ.. ಸಾಯಿಸ ಬೇಡಪ್ಪ’ ಎಂದು ಅಂಗಲಾಚುತ್ತಿದ್ದಾರೆ. ಆದರೂ ಆರೋಪಿ ನೇಣು ಹಾಕಿ ಮಗನನ್ನು ಕೊಂದಿದ್ದಾನೆ. ನಂತರ ಗಂಡ, ಹೆಂಡತಿ ಇಬ್ಬರೂ ಪುತ್ರನನ್ನು ನೇಣಿನ ಕುಣಿಕೆಯಿಂದ ಇಳಿಸಿ, ಮೃತ ದೇಹವನ್ನು ತಬ್ಬಿಕೊಂಡು ರೋಧಿಸುತ್ತಾರೆ. ಮತ್ತೂಂದೆಡೆ ಭೀಕರ ದೃಶ್ಯವನ್ನು ಚಿತ್ರಿಕರಿಸದಂತೆ ತಾಯಿ ಮಗಳಿಗೆ ಕೇಳಿಕೊಳ್ಳುವ ದೃಶ್ಯ ವೈರಲ್‌ ಆಗಿರುವ ವಿಡಿಯೋದಲ್ಲಿದೆ.

ಸುರೇಶ್‌ಬಾಬುನೇ ಪುತ್ರನನ್ನು ಕೊಂದಿರುವ ವಿಚಾರ ತನಿಖೆ ವೇಳೆ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದ್ದು, ಆತನನ್ನು ಬಂಧಿಸಲಾಗಿದೆ.
-ಅಬ್ದುಲ್‌ ಅಹದ್‌, ವೈಟ್‌ಫೀಲ್ಡ್‌ ಡಿಸಿಪಿ

Advertisement

Udayavani is now on Telegram. Click here to join our channel and stay updated with the latest news.

Next