Advertisement

ವೈದ್ಯರು ಸಕಾಲಕ್ಕೆ ಬರದಿದ್ದರೂ 24*7 ಬೋರ್ಡ್‌ ಏಕೆ?

09:58 PM Dec 20, 2019 | Lakshmi GovindaRaj |

ಚಿಕ್ಕಬಳ್ಳಾಪುರ: ವೈದ್ಯರಿಗೆ ಮಾನವೀಯತೆ ಇರಲಿ. ರೋಗಿಗಳು ಬರುವುದು ಪ್ರಾಣ ಉಳಿಸಿಕೊಳ್ಳಕ್ಕೆ. ಪ್ರಾಣ ಕಳೆದುಕೊಳ್ಳಕ್ಕೆ ಅಲ್ಲ. ರೋಗಿ ಸತ್ತರೂ ವೈದ್ಯರು ಪೋಷಕರಿಗೆ ರೌಡಿಯಂತೆ ಮಾತನಾಡಿದರೆ ಹೇಗೆ? ಸರಿಯಾದ ಸಮಯಕ್ಕೆ ಆಸ್ಪತ್ರೆ ಬೀಗ ತೆಗೆಯದೇ ಹೋದರೆ 24 ಗಂಟೆ ಬೋರ್ಡ್‌ ಏಕೆ ಹಾಕ್ತೀರಾ? ಆಸ್ಪತ್ರೆಗಳಲ್ಲಿ ಸಾವು, ನೋವು ಆದರೆ ಸುಮ್ಮನಿರಲ್ಲ. ಕೆಡಿಪಿ ಸಭೆಗೆ ಇಲ್ಲಸಲ್ಲದ ಸಬೂಬು ಹೇಳಿ ತಪ್ಪಿಸಿಕೊಂಡರೆ ತಕ್ಕಶಾಸ್ತಿ ಮಾಡುತ್ತೇನೆ.

Advertisement

ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳ ವೈದ್ಯರ ಕಾರ್ಯವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿದ ಜಿಪಂ ಅಧ್ಯಕ್ಷರು, ಸಭೆಯಲ್ಲಿದ್ದ ಜಿಲ್ಲಾ ಆರೋಗ್ಯಾಧಿಕಾರಿಗಳನ್ನ ಹಾಗೂ ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕರನ್ನು ತರಾಟೆಗೆ ತೆಗೆದುಕೊಂಡ ಪರಿ ಇದು.

ಇತ್ತೀಚೆಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮಹಿಳೆ ಮೃತಪಟ್ಟ ಘಟನೆಯನ್ನು ಸಭೆಯಲ್ಲಿ ಪ್ರಸ್ತಾಪಿಸಿದ ಜಿಪಂ ಅಧ್ಯಕ್ಷರು, ವೈದ್ಯರಿಗೆ ಮಾನವೀಯತೆ ಇರಬೇಕು. ಯಾವ ವೈದ್ಯ ಕೂಡ ರೋಗಿಗಳನ್ನು ಸಾಯಿಸಲಿಕ್ಕೆ ಬರಲ್ಲ. ಆದರೆ ಜಿಲ್ಲಾಸ್ಪತ್ರೆ ವೈದ್ಯರೊಬ್ಬರು ರೌಡಿಯಂತೆ ಪೋಷಕರೊಂದಿಗೆ ಮಾತನಾಡಿದ್ದಾರೆ. ವೈದ್ಯರಿಗೆ ಮನುಷ್ಯತ್ವ ಬೇಡವೇ ಎಂದು ಕಿರಿಕಾರಿದರು.

ನೀವೇನು ಮಾಡುತ್ತಿದ್ದೀರಿ?: ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ಕೇಳಿದಾಗ ಜಿಲ್ಲಾ ಆರೋಗ್ಯಾಧಿಕಾರಿಗಳು, ಡೆಂ à, ಚಿಕೂನ್‌ಗುನ್ಯಾ ಪ್ರಕರಣಗಳು ನೂರಾರು ಇವೆ ಎನ್ನುತ್ತಿದ್ದಂತೆ ನೀವೇನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಇದರಿಂದ ರೋಗಿಗಳಿಗೆ ಸಮಸ್ಯೆ ಆಗುತ್ತಿದೆ ಎಂದರು.

ವೈದ್ಯರನ್ನು ನೇಮಿಸಿ: ಆಂಬ್ಯುಲೆನ್ಸ್‌ಗಳನ್ನು ಸುಸ್ಥಿತಿಯಲ್ಲಿ ಇಡಬೇಕು. ಚಾಲಕರ ಕೊರತೆ ಇದ್ದರೆ ತುಂಬುವಂತೆ ಸೂಚಿಸಿದರು. ಈ ವೇಳೆ ಜಿಲ್ಲಾ ಆರೋಗ್ಯಾಧಿಕಾರಿ ಜಿಲ್ಲೆಯಲ್ಲಿ ತಜ್ಞ ವೈದ್ಯರ ಕೊರತೆ ಇದೆ. ಆಹ್ವಾನಿಸಿದರೂ ಯಾರು ಬರುತ್ತಿಲ್ಲ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು. ಕನಿಷ್ಠ ಖಾಲಿ ಇರುವ ಆಸ್ಪತ್ರೆಗಳಿಗೆ ಆಯುಷ್‌ ಇಲಾಖೆ ವೈದ್ಯರನ್ನು ನೇಮಿಸುವಂತೆ ಸೂಚಿಸಿದರು.

Advertisement

66 ಗ್ರಾಮಗಳಲ್ಲಿ ನೀರಿನ ಸಮಸ್ಯೆ: ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಶಿವಕುಮಾರ್‌ ಮಾತನಾಡಿ, ಜಿಲ್ಲೆಯಲ್ಲಿ 66 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಚಿಂತಾಮಣಿಯಲ್ಲಿ 37 ಗ್ರಾಮಗಳಲ್ಲಿ ಸಮಸ್ಯೆ ಇದೆ. ಕುಡಿಯುವ ನೀರಿಗೆ ಅಧಿಕಾರಿಗಳು ಆದ್ಯತೆ ನೀಡಬೇಕೆಂದರು. ಜಿಲ್ಲೆಯಲ್ಲಿ ಸಾವಯವ ಸಿರಿಧಾನ್ಯ ಮೇಳ ಆಯೋಜನೆಗೆ ಸೂಚಿಸಿದ ಅವರು, ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳಲ್ಲಿ ರೈತರಿಗೆ ಸಿಗುವ ಸೌಲಭ್ಯಗಳನ್ನು ಸಮರ್ಪಕವಾಗಿ ವಿತರಿಸಬೇಕೆಂದರು. ಬೆಳೆ ಸಮೀಕ್ಷೆ ಶೀಘ್ರ ಮುಗಿಸಿ ಕಳೆದ ವರ್ಷ ಬಾಕಿ ಇರುವ ಬೆಳೆ ವಿಮೆ ಹಣವನ್ನು ಶೀಘ್ರ ಪಾವತಿ ಮಾಡುವಂತೆ ಅಧ್ಯಕ್ಷರು ಸೂಚಿಸಿದರು.

ಫ‌ಲಾನುಭವಿಗಳನ್ನು ಆಯ್ಕೆ ಮಾಡಿ: ಪಶುಭಾಗ್ಯ ಯೋಜನೆಯಡಿ ಎಲ್ಲಾ ತಾಲೂಕುಗಳಲ್ಲಿ ಫ‌ಲಾನುಭವಿಗಳನ್ನು ಶೀಘ್ರ ಆಯ್ಕೆ ಮಾಡಿ ಸಾಲ ಸೌಲಭ್ಯ ವಿತರಿಸುವಂತೆ ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕರಿಗೆ ಜಿಪಂ ಅಧ್ಯಕ್ಷರು ಸೂಚಿಸಿದರು. ಕೆಡಿಪಿ ಸಭೆಯಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ನೋಡಲ್‌ ಅಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಸಭೆಗಳಲ್ಲಿ ಬರೀ ಪ್ರಗತಿ ಪರಿಶೀಲನೆ ವರದಿ ಓದಬಾರದು. ಅನುಷ್ಠಾನಗೊಂಡ ಬಗ್ಗೆ ಸಮರ್ಪಕ ಮಾಹಿತಿ ಕೊಡಬೇಕೆಂದರು. ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ನಿರ್ಮಲಾ, ಸಿಇಒ ಬಿ.ಫೌಝೀಯಾ ತರುನ್ನುಮ್‌, ಯೋಜನಾಧಿಕಾರಿ ಮಧುರಾಮ್‌ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಕೆಡಿಪಿ ಸಭೆಯಲ್ಲಿ ಭಾಗವಹಿಸಿದ್ದರು.

ಕೆಡಿಪಿ ಸಭೆಯಲ್ಲಿ ಫಿಶ್‌.. ಚಿಕನ್‌ ಕಬಾಬ್‌ ಪ್ರಸ್ತಾಪ..: ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರು ಜಿಲ್ಲೆಯಲ್ಲಿ ಶೀಘ್ರದಲ್ಲಿಯೇ ಮೀನು ಮೇಳ‌ ಆಯೋಜಿಸಲಾಗುವುದು ಎಂದರು. ಆಗ ಜಿಪಂ ಅಧ್ಯಕ್ಷ ಚಿಕ್ಕನರಸಿಂಹಯ್ಯ, ಜಿಪಂ ಸಾಮಾನ್ಯ ಸಭೆ ಇದ್ದಾಗ ಮೀನು ಮೇಳ ಮಾಡಿ ನಮ್ಮ ಸದಸ್ಯರೆಲ್ಲಾ ಬಂದು ಫಿಶ್‌ ಕಬಾಬ್‌, ಚಿಕನ್‌ ಕಬಾಬ್‌ ಎಲ್ಲಾ ತಿನ್ನುತ್ತಾರೆ ಎಂದರು. ನಮ್ಮ ಸಿಇಒ ಮೇಡಮ್‌ಗೂ ಫಿಶ್‌ ಕಬಾಬ್‌ ಅಂದ್ರೆ ತುಂಬ ಇಷ್ಟ ಎಂದು ಜಿಪಂ ಅಧ್ಯಕ್ಷರು ನುಡಿದರು. ಇದರಿಂದ ಸಭೆಯಲ್ಲಿ ಫಿಶ್‌ ಹಾಗೂ ಚಿಕನ್‌ ಕಬಾಬ್‌ ವಿಷಯ ಪ್ರಸ್ತಾಪ ಆಗುತ್ತಿದ್ದಂತೆ ಸಭೆಯಲ್ಲಿದ್ದವರು ಒಮ್ಮೆ ಜೋರಾಗಿ ನಕ್ಕರು. ಅಲ್ಲದೇ ಜಿಲ್ಲೆಯಲ್ಲಿ ಮೀನು ಮಾರಾಟ ಹೆಚ್ಚಳ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮಕ್ಕಳ ಪ್ರವಾಸಿ ವರ್ಷಾಂತ್ಯಕ್ಕೆ ಪೂರ್ಣಗೊಳಿಸಿ: ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫ‌ಲಿತಾಂಶ ನೂರಕ್ಕೆ ನೂರಷ್ಟು ಹೆಚ್ಚಳ ಆಗಬೇಕು. ಯಾವುದೇ ಕಾರಣಕ್ಕೂ ಡಿಸೆಂಬರ್‌ ನಂತರ ಜಿಲ್ಲೆಯ ಶಾಲಾ ಮಕ್ಕಳನ್ನು ಸರ್ಕಾರಿ ಆಗಲಿ ಅಥವಾ ಖಾಸಗಿ ಶಾಲಾ ಮಕ್ಕಳನ್ನು ಎಲ್ಲಿಗೂ ಪ್ರವಾಸ ಕಳುಹಿಸಬಾರದು.

ಯಾವುದೇ ಸಭೆ, ಸಮಾರಂಭಗಳಿಗೂ ಮಕ್ಕಳನ್ನು ಹಾಗೂ ಶಿಕ್ಷಕರನ್ನು ನಿಯೋಜನೆ ಮಾಡದೇ ಸಂಪೂರ್ಣವಾಗಿ ವಿಶೇಷ ತರಗತಿಗಳ ಆಯೋಜನೆ ಮೂಲಕ ಓದಿನ ಕಡೆಗೆ ಗಮನ ಕೊಡಬೇಕೆಂದು ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್‌.ಜಿ.ನಾಗೇಶ್‌ಗೆ ಸೂಚನೆ ನೀಡಿದರು. ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಆಹಾರ ಹಾಗೂ ಮೂಲ ಸೌಕರ್ಯ ಕಲ್ಪಿಸುವಂತೆ ಸಮಾಜ ಕಲ್ಯಾಣ ಹಾಗೂ ಬಿಸಿಎಂ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next