Advertisement

ವಿಭಜನೆಯ ಕಥೆಗಳೇಕೆ ಕೇಳದಾದವು?

12:30 AM Aug 15, 2018 | |

“ದಿ ಗಾರ್ಡಿಯನ್‌’ ಹಾಗೂ “ಬಿಬಿಸಿ’ಯಂತಹ ಸುದ್ದಿ ಮಾಧ್ಯಮಗಳಲ್ಲಿ ಭಾರತದ ವಿಭಜನೆಯ ಬಗ್ಗೆ ಲೇಖನಗಳು ಪ್ರಕಟವಾಗುತ್ತವೆ. ಬಾಲ್ಯದಲ್ಲಿ ವಲಸೆಯ ಕರಾಳ ಘಟನಾವಳಿಗಳಿಗೆ ಸಾಕ್ಷಿಯಾಗಿ ಬ್ರಿಟನ್ನಿಗೆ ವಲಸೆ ಬಂದ‌ವರಿಂದ ಲೇಖನ ಬರೆಸುತ್ತವೆ.

Advertisement

ಬ್ರಿಟನ್ನಿನ ದೂರದರ್ಶನ ನಿರ್ವಾಹಕಿಯಾಗಿ ಕೆಲಸ ಮಾಡುತ್ತಿರುವ ಭಾರತೀಯ ಮೂಲದ ಅನಿತಾ ರಾಣಿ, 1947ರ ಅಖಂಡ ಭಾರತ ವಿಭಜನೆಯನ್ನು ಬ್ರಿಟನ್ನಿನಲ್ಲಿ ರಾಷ್ಟ್ರಮಟ್ಟದ ಸ್ಮರಣಾರ್ಥ ದಿನವಾಗಿ ಆಚರಿಸಬೇಕೆನ್ನುವ ಕೋರಿಕೆಯೊಂದಿಗೆ ನಿಯೋಗ ವನ್ನು ಕೂಡಿಕೊಂಡು ಆಗಸ್ಟ್ ಮೊದಲ ವಾರದಲ್ಲಿ ಸಂಸತ್ತಿಗೆ ಹೋಗಿದ್ದರು. ಅವರ ಅಪೇಕ್ಷೆಗೆ ಇಲ್ಲಿನ ಕೆಲವು ಸಂಸತ್‌ ಸದಸ್ಯರೂ ದನಿಗೂಡಿಸಿ ಬೆಂಬಲ ವ್ಯಕ್ತಪಡಿಸಿದ್ದರು. ಬ್ರಿಟನ್‌ನ ಸಂಸತ್ತಿನಲ್ಲಿ ಇಂತಹ ಒಂದು ಬೇಡಿಕೆಗೆ ಅಪೇಕ್ಷಿತ ಪ್ರತಿಕ್ರಿಯೆ ಸಿಗದಿದ್ದರೂ ವಿಭಜನೆಯ ಬಗ್ಗಿನ ಚರ್ಚೆಯಂತೂ ಇಲ್ಲಿ ಮತ್ತೆ ಜೀವ ಪಡೆಯುವಂತಾಯಿತು. 

ಅನಿತಾ ರಾಣಿಯ ಪರಿಚಯ ಇಲ್ಲದವರೂ ಕಳೆದ ವರ್ಷ, ಅಂದರೆ ವಿಭಜನೆಯ 70 ವರ್ಷಗಳ ಮೈಲಿ ಗಲ್ಲಿನ ಹೊತ್ತಿಗೆ ಆಕೆಯಿಂದ ನಿರ್ಮಿತವಾದ  “ನನ್ನ ಕುಟುಂಬ, ವಿಭಜನೆ ಮತ್ತು ನಾನು’ ಎನ್ನುವ ಸಾಕ್ಷ್ಯ ಚಿತ್ರವನ್ನು ನೋಡಿರಬಹುದು ಕೇಳಿರಬಹುದು. ಎರಡು ಭಾಗಗಳಲ್ಲಿ ಬಿಬಿಸಿಯಲ್ಲಿ ಪ್ರಸಾರಗೊಂಡಿದ್ದ ಈ ಸಾಕ್ಷ್ಯಚಿತ್ರ ಇಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿತ್ತು. ಅನಿತಾ ರಾಣಿಯ ಅಜ್ಜ ಪಂಜಾಬಿನವರು. ಅವರನ್ನು ಅನಿತಾ ಎಂದೂ ನೋಡಿಲ್ಲ, ತನ್ನ ಅಮ್ಮನ ಬಾಯಲ್ಲಿ ಕೇಳಿದ್ದು ಅಷ್ಟೇ. ಅಜ್ಜ ಬ್ರಿಟಿಷ್‌ ಆಳ್ವಿಕೆಯ ಭಾರತದ ಸೇನೆಯ ಸಿಪಾಯಿ ಆಗಿದ್ದವರು ವಿಭಜ ನೆಯ ಹೊತ್ತಿಗೆ ಪೂನಾದಲ್ಲಿ ಕೆಲಸ ಮಾಡುತ್ತಿದ್ದರು. ಅವರ ಮೊದಲ ಪತ್ನಿ ಮತ್ತು ಕೆಲವು ಕೌಟುಂಬಿಕರು ವಿಭಜನೆ ಆಗುವಾಗ ಪಂಜಾಬಿನಲ್ಲಿಯೇ ಇದ್ದರಂತೆ ಹಾಗೂ ಅವರೆಲ್ಲ ಅಲ್ಲಿಯೇ ಜೀವತೆತ್ತರಂತೆ. ಕತ್ತಿಯ ಇರಿತಕ್ಕೊ ಬೆಂಕಿಯ ದಹನಕ್ಕೊ ಅಥವಾ ಆತ್ಮಹತ್ಯೆ ಮಾಡಿಕೊಂಡೋ ಎನ್ನುವುದು ಕರಾರುವಕ್ಕಾಗಿ ಯಾರಿಗೂ ತಿಳಿದಿಲ್ಲ. ಪೂರ್ವಜರ ನೆನಪು ಬಹಳ ಕಾಡಿ ತೆಂದು 2017ರ ಆರಂಭದಲ್ಲಿ ತಾಯಿಯನ್ನು ಕರೆದುಕೊಂಡು ಈಗ ಪಾಕಿಸ್ತಾನದ ಪಂಜಾಬಿನ ಭಾಗ ದಲ್ಲಿರುವ ಅಜ್ಜನ ಮನೆ ಊರು ನೆರೆಹೊರೆಯವರ ಅಜ್ಜ ಅಜ್ಜಿಯರ ಸಹಪಾಠಿಗಳ ನಡುವೆ ಅನಿತಾ ರಾಣಿ ಸುತ್ತಾಡಿ ಬಂದರು, ಸಾಕ್ಷ್ಯ ಚಿತ್ರ ನಿರ್ಮಿಸಿದರು.

ಸಾಕ್ಷ್ಯಚಿತ್ರದಲ್ಲಿ ಅನಿತಾ ರಾಣಿ ಕುಟುಂಬದವರ ಕಥೆ ಮಾತ್ರವಲ್ಲದೆ ವಿಭಜನೆಯನ್ನು ಹತ್ತಿರದಿಂದ ಬಲ್ಲ ಡಾ. ಬಿನೀತಾ ಕಾಣೆ ಎನ್ನುವವರ ತಂದೆ ಬಿಮ್‌ ಅವರ ಕಥೆಯೂ ಪ್ರಮುಖ ಎಳೆಯಾಗಿದೆ. ಬಿಮ್‌ ಅವರು ಹೇಳುವ ವಿಭಜನೆಯ ಮೆಲುಕು ಕೇಳುವಾಗ ಸಣ್ಣ ಸಣ್ಣ ತಪ್ಪು ಅಭಿಪ್ರಾಯಗಳು ಸಂಶಯಗಳು ಗಾಳಿಸುದ್ದಿಗಳು ದೊಡ್ಡ ದೊಡ್ಡ ಹಲ್ಲೆ-ದಾಳಿಗೆ ಕಾರಣ ಆಗಿದ್ದವು ಎನ್ನುವುದೂ ತಿಳಿಯುತ್ತದೆ. ಇಂತಹ ಅರಿ ವಿಗೋಸ್ಕರವೇ ಚಾರಿತ್ರಿಕ ಮಹತ್ವದ ಘಟನೆಗಳನ್ನು ನಾವು ನೆನಪು ಮಾಡುತ್ತಿರಬೇಕು ಎನ್ನುತ್ತಾರೆ ಬಿಮ…. ದೇಶ ವಿಭಜನೆಯ ಕಾಲಕ್ಕೆ ಎಳೆಯ ಹುಡುಗನಾಗಿದ್ದ ಬಿಮ್‌ಗೆ ದಾಳಿಯಿಂದ ತಪ್ಪಿಸಿಕೊಂಡು ಓಡಿಹೋಗಲು ಸಹಾಯ ಮಾಡಿದವನು ಒಬ್ಬ ಮುಸ್ಲಿಂ ಹುಡುಗ. 

ದೋಣಿಯಲ್ಲಿ ಬಿಮ್‌ರ ಕುಟುಂಬವನ್ನು ಕೂರಿಸಿ ಕೊಂಡು ನದಿಯ ಅಂಚಿನಲ್ಲಿ ಸದ್ದಾಗದಂತೆ, ಯಾರಿಗೂ ಕಾಣದಂತೆ ಮೆಲ್ಲಗೆ ದೋಣಿ ಚಲಾಯಿ ಸುತ್ತಾ ಆ ಬಾಲಕ ಬಿಮ್‌ನನ್ನು ಪಾರು ಮಾಡಿಸಿದ್ದ. ಇದೀಗ ಬಾಂಗ್ಲಾದೇಶದಲ್ಲಿರುವ ತಮ್ಮ ಊರು ಮೂಲ ಮನೆಯ ಪರಿಸರವನ್ನು ಭೇಟಿ ಮಾಡಲು ಡಾ. ಕಾಣೆ ಕೂಡ ಹೋಗಿದ್ದರು . ಅಂದು ಸಹಾಯ ಮಾಡಿದ್ದ ಹುಡುಗ ಈಗ ವೃದ್ಧನಾಗಿದ್ದಾನೆ. ಆತನನ್ನು ಭೇಟಿ ಮಾಡಿ ತನ್ನ ತಂದೆಯನ್ನು ಉಳಿಸಿದ್ದಕ್ಕೆ ತಬ್ಬಿಕೊಂಡು ಕೃತಜ್ಞತೆ ಹೇಳಿ ಡಾ. ಕಾಣೆ ಮರಳಿದರು. ಅನಿತಾ ರಾಣಿಯವರ ಸಾಕ್ಷ್ಯಚಿತ್ರದಲ್ಲಿ ವಿಭಜನೆಯನ್ನು ಕಂಡು ಅನುಭವಿಸಿದ ನಾಲ್ಕು ಕಥೆಗಳು ಚಿತ್ರಣ ಗೊಂಡಿವೆ. ಇವುಗಳಲ್ಲಿ ರಾಷ್ಟ್ರೀಯತೆಯ ಪರಾಕಾಷ್ಠೆ ಯಲ್ಲಿ, ಕೋಮುದ್ವೇಷದ ಬೆಂಕಿಯಲ್ಲಿ ಮನೆ ಆಸ್ತಿ ಜೀವಗಳು ಭಸ್ಮವಾದ ಕತೆಗಳೂ ಇವೆ. ಧರ್ಮ ಜಾತಿಗಳನ್ನು ಮೀರಿ ಮನುಷ್ಯತ್ವದ ಪ್ರೇಮದಲ್ಲಿ ಪುನರ್ಜೀವನ ಪಡೆದ ಘಟನೆಗಳೂ ಇವೆ. 

Advertisement

ವಿಭಜನೆಯನ್ನು ಸ್ಮರಿಸುವುದು ಎಂದರೆ ಖುಷಿ ಯಲ್ಲಿ ಸಂಭ್ರಮಿಸುವುದು ಎನ್ನುವ ಅರ್ಥವಲ್ಲ, ಜಗತ್ತಿನ ಇತಿಹಾಸದಲ್ಲಿಯೇ ಅತಿ ದೊಡ್ಡ ವಿಭಜನೆ ಹಾಗೂ ವಲಸೆ ಎನ್ನುವ ಕುಖ್ಯಾತಿಗೆ ಪಾತ್ರವಾದ ಘಟನೆಯನ್ನು ಬ್ರಿಟನ್‌ ರಾಷ್ಟ್ರ ಮಟ್ಟದಲ್ಲಿ ನೆನಪು ಮಾಡಿಕೊಳ್ಳಬೇಕು ಎನ್ನುವುದು ಅನಿತಾ ರಾಣಿಯವರ ಆಶಯ. ಜೊತೆಗೆ ದಶಕಗಳಿಂದ ಬ್ರಿಟಿಷ್‌ ಸಮಾಜಕ್ಕೆ ಇಲ್ಲಿನ ದಕ್ಷಿಣ ಏಷಿಯಾದ ನಿವಾಸಿಗಳು ನೀಡುತ್ತಿರುವ ಕೊಡುಗೆಯನ್ನು ನೆನೆಯಲು ಕೂಡ ವಿಭಜನೆಯ ಸಂಸ್ಮರಣಾ ದಿನ  ಕಾರಣ ಆಗಬೇಕು ಎಂದು ಅನಿತಾ ರಾಣಿ ವಾದಿಸುತ್ತಾರೆ. 

ಯುರೋಪ್‌ ಮತ್ತು ಆಂಗ್ಲ ಸಂಸ್ಕೃತಿಯನ್ನು ಬಲ್ಲವರಿಗೆ ಇಂತಹ ಯೋಚನೆಗಳು ಆಶ್ಚರ್ಯ ಹುಟ್ಟಿ ಸು ವುದಿಲ್ಲ. ಇತಿಹಾಸವನ್ನು ಹೆಜ್ಜೆ ಹೆಜ್ಜೆಗೂ ಊರೂರಿ ನಲ್ಲೂ ಸ್ಮರಿಸುವ ಆಂಗ್ಲರಿಗೂ ಈ ತರಹದ ಒಂದು ಕೋರಿಕೆಯ ಬಗ್ಗೆ ಸೋಜಿಗ ಅನಿಸಿರಲಿಕ್ಕಿಲ್ಲ . ಪ್ರತಿವರ್ಷದ ಆಗಸ್ಟ್ 15ರ ಆಸುಪಾಸಿಗೆ “ದಿ ಗಾರ್ಡಿ ಯನ್‌’  ಹಾಗೂ “ಬಿಬಿಸಿ’ಯಂತಹ ಸುದ್ದಿ ಮಾಧ್ಯಮ ಗಳಲ್ಲಿ ಭಾರತದ ವಿಭಜನೆಯ ಬಗ್ಗೆ ಲೇಖನಗಳು ಪ್ರಕಟವಾಗುತ್ತವೆ. ವಿಭಜನೆಯ ವಿಷಯದಲ್ಲಿ ವಿಶೇಷ ಆಸಕ್ತಿ ಇರುವ ಆಂಗ್ಲ ಪತ್ರಕರ್ತರಷ್ಟೇ ಅಲ್ಲದೇ, ಬಾಲ್ಯದಲ್ಲಿ ವಲಸೆಯ ಕರಾಳ ಘಟನಾವಳಿಗಳಿಗೆ ಸಾಕ್ಷಿಯಾಗಿ ಬ್ರಿಟನ್ನಿಗೆ ವಲಸೆ ಬಂದು ವೃದ್ಧರಾಗಿರುವ ಭಾರತ ಪಾಕಿಸ್ತಾನ ಬಾಂಗ್ಲಾದೇಶದ ಮೂಲದವ ರಿಂದಲೂ ಲೇಖನ ಬರೆಸುತ್ತವೆ. ಅಂಥವರ ಮಕ್ಕಳು ಮರಿಮಕ್ಕಳು ಕೂಡ ತಾವು ಕೇಳಿ ಬೆಳೆದ ವಿಭಜನೆಯ ಕಥೆಗಳನ್ನು ಈ ಮಾಧ್ಯಮಗಳಲ್ಲಿ ಹಂಚಿ ಕೊಳ್ಳುತ್ತಾರೆ. ಬ್ರಿಟನ್ನಿನಲ್ಲಿ ವರ್ಷಕ್ಕೊಮ್ಮೆಯಾದರೂ ಪತ್ರಿಕೆಗಳಲ್ಲಿ ಸಾಕ್ಷ್ಯಚಿತ್ರಗಳಲ್ಲಿ ಬಂದು ಹೋಗುವ, ದಿನಪತ್ರಿಕೆಗಳಲ್ಲಿ ಚರ್ಚಿಸಲ್ಪಡುವ ವಿಭಜನೆಯ ನೆನಪುಗಳ ಕುರಿತು ದಕ್ಷಿಣ ಏಷ್ಯಾದ ದೇಶಗಳಲ್ಲಿ ಅದೇ ಮಟ್ಟದಲ್ಲಿ ಚರ್ಚೆ ಆಗದಿರುವುದೇಕೆ? ವಿಭಜನೆಯ ಬಗ್ಗೆ ನೀರವತೆ ಯಾಕೆ ಎನ್ನುವುದು ಕೂಡ ಬ್ರಿಟನ್ನಿನ ಸದ್ಯದ ಚರ್ಚೆಗಳಲ್ಲೊಂದು.

ಯೋಗೀಂದ್ರ ಮರವಂತೆ

Advertisement

Udayavani is now on Telegram. Click here to join our channel and stay updated with the latest news.

Next