Advertisement

ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇಟ್ಟಿದ್ದ ಆದಿತ್ಯ ರಾವ್‌ ಯಾರು ?

10:10 AM Jan 24, 2020 | mahesh |

ಮಂಗಳೂರು: ಆದಿತ್ಯ ರಾವ್‌ (34) ಈ ಹಿಂದೆ ಕೆಲಸ ಕೇಳಿಕೊಂಡು ಹೋದಾಗ, ತನಗೆ ಕೆಲಸ ನೀಡಿರಲಿಲ್ಲ ಎಂಬ ಸಿಟ್ಟಿಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎರಡು ಬಾರಿ ಹುಸಿ ಬಾಂಬ್‌ ಕರೆ ಮಾಡಿ ಜೈಲು ಸೇರಿದ್ದ.

Advertisement

2018ರಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಎರಡು ಬಾರಿ ಹುಸಿ ಬಾಂಬ್‌ ಕರೆ, ಬೆಂಗಳೂರು ರೈಲು ನಿಲ್ದಾಣಕ್ಕೆ ಹುಸಿ ಬಾಂಬ್‌ ಕರೆ ಹಾಗೂ ಎರಡು ಕಳ್ಳತನ ಪ್ರಕರಣಗಳು ಆತನ ಮೇಲಿವೆ. ಮೊಬೈಲ್‌ ಫೋನ್‌ನಿಂದಲೇ ಕರೆ ಮಾಡುತ್ತಿದ್ದ ಆತ ಬಳಿಕ ಸ್ವಿಚ್‌ ಆಫ್‌, ಸ್ವಿಚ್‌ ಆನ್‌ ಮಾಡಿಕೊಂಡು ಓಡಾಡು ತ್ತಿದ್ದನು. ಹೀಗಾಗಿ ಕರೆಗಳ ಲೊಕೇಶನ್‌ ಆಧರಿಸಿ ಬೆಂಗಳೂರಿನಲ್ಲಿ ಪೊಲೀಸರಿಂದ ಬಂಧಿತನಾಗಿ ಸುಮಾರು 8 ತಿಂಗಳು ಜೈಲಿನಲ್ಲಿದ್ದ.

ಮಣಿಪಾಲದ ಕೆಎಚ್‌ಬಿ ಕಾಲನಿಯಲ್ಲಿ ಕೆಲವು ವರ್ಷಗಳ ಕಾಲ ವಾಸವಿದ್ದ ಆತ ಎಂಬಿಎ ಮುಗಿಸಿ ಬೆಂಗಳೂರಿಗೆ ತೆರಳಿ ಎಂ.ಜಿ. ರಸ್ತೆಯಲ್ಲಿರುವ ಪ್ರತಿಷ್ಠಿತ ಬಹುರಾಷ್ಟ್ರೀಯ ಬ್ಯಾಂಕ್‌ನಲ್ಲಿ ಮಾರುಕಟ್ಟೆ ವಿಭಾಗದಲ್ಲಿ ವ್ಯವ ಸ್ಥಾಪಕ ಹುದ್ದೆಗೆ ಸೇರಿದ್ದ. ಒಂದು ವರ್ಷದ ಬಳಿಕ ಅಲ್ಲಿ ಕೆಲಸ ಬಿಟ್ಟು ಮತ್ತೂಂದು ಬ್ಯಾಂಕಿ ನಲ್ಲಿ ವ್ಯವಸ್ಥಾಪಕ ಹುದ್ದೆಗೆ ಸೇರಿದ್ದ. ಅಲ್ಲಿ ಕೇವಲ 6 ತಿಂಗಳು ಕೆಲಸ ಮಾಡಿ ಮತ್ತೆ ಈ ಹಿಂದೆ
ಕೆಲಸ ಮಾಡುತ್ತಿದ್ದ ಬ್ಯಾಂಕಿಗೆ ಸೇರಿದ್ದ. ಉತ್ತಮ ವೇತನ ಲಭಿಸುತ್ತಿದ್ದರೂ ಅದನ್ನು ಬಿಟ್ಟು ಮೂಡು ಬಿದಿರೆಯ ಕಾಲೇಜೊಂದರಲ್ಲಿ ಸೆಕ್ಯೂರಿಟಿ ಕೆಲಸಕ್ಕೆ ಸೇರಿದ್ದ. ಅಲ್ಲಿ ಕೂಡ ಕೆಲವು ದಿನ ಕೆಲಸ ಮಾಡಿ ಬಳಿಕ ಮಂಗಳೂರಿನ ಖಾಸಗಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸೆಕ್ಯೂರಿಟಿ ಕೆಲಸಕ್ಕೆ ಸೇರಿದ್ದ.

ಮಠದಲ್ಲಿಯೂ ಕೆಲಸ ಮಾಡಿದ್ದ
2012ರಲ್ಲಿ ಉಡುಪಿಯ ಮಠವೊಂದಕ್ಕೆ ತೆರಳಿ ಅಡುಗೆ ಸಹಾಯಕನಾಗಿ ಕೆಲವು ಸಮಯ ಕೆಲಸ ಮಾಡಿದ್ದ. ಬಳಿಕ ಪುನಃ ಬೆಂಗಳೂರಿಗೆ ತೆರಳಿ ಜಯನಗರದ ವಿಮಾ ಕಂಪೆನಿಯಲ್ಲಿ ನೌಕರಿ ಪಡೆದಿದ್ದ. ಆದರೆ ವಿಮಾ ಸಂಸ್ಥೆಯ ಲ್ಯಾಪ್‌ಟಾಪ್‌ ಕಳವು ಮಾಡಿ ಕೆಲಸ ತೊರೆದಿದ್ದ. ಈ ಬಗ್ಗೆ ಜಯನಗರ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಬೆಂಗಳೂರಿನ ಸುದ್ದ ಗುಂಟೆ ಪಾಳ್ಯದಲ್ಲಿರುವ ಪೇಯಿಂಗ್‌ ಗೆಸ್ಟ್‌ ನಲ್ಲಿ ವಾಸವಿದ್ದ ವೇಳೆಯೂ ರೂಮ್‌ಮೇಟ್‌ನ ಲ್ಯಾಪ್‌ಟಾಪ್‌ ಕಳವು ಮಾಡಿ ಪರಾರಿಯಾಗಿದ್ದ. ಈ ಬಗ್ಗೆ ಸುದ್ದಗುಂಟೆ ಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆದಿತ್ಯ ರಾವ್‌, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸೆಕ್ಯುರಿಟಿ ಗಾರ್ಡ್‌ ಕೆಲಸ ಕೇಳಿಕೊಂಡು ಹೋಗಿದ್ದ. ಆದರೆ ಅಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕೆಲಸ ಇಲ್ಲ ಎಂದು ಹೇಳಿದ್ದರು. ಇದರಿಂದ ಕೋಪಗೊಂಡಿದ್ದ ಆತ ಇಂಟರ್‌ನೆಟ್‌ನಲ್ಲಿ ವಿಮಾನ ನಿಲ್ದಾಣದ ಮಾಹಿತಿ, ವಿಚಾರಣೆ ಸಂಖ್ಯೆ ಹುಡುಕಿ 2018ರ ಆ. 20ರಂದು ಹುಸಿ ಬಾಂಬ್‌ ಕರೆ ಮಾಡಿದ್ದ. ಅದಾದ ಬಳಿಕ ಆ. 22ರಂದು ವಿಮಾನ ನಿಲ್ದಾಣದ ಏಶಿಯಾ ಏರ್‌ಲೈನ್ಸ್‌ ಕೌಂಟರ್‌ಗೆ ಕರೆ ಮಾಡಿ ಕೊಚ್ಚಿ ಮತ್ತು ಹೈದರಾಬಾದ್‌ಗೆ ಹೋಗುವ ವಿಮಾನ ಮತ್ತು ಮುಂಬಯಿ, ಕೊಯಮತ್ತೂರು, ದಿಲ್ಲಿಗೆ ಪ್ರಯಾಣಿಸುವ ವಿಮಾನಗಳಲ್ಲಿ ಬಾಂಬ್‌ ಇರುವುದಾಗಿ ನಿಲ್ದಾಣದ ಅಧಿಕಾರಿಗೆ ಕರೆ ಮಾಡಿ ಬೆದರಿಸಿದ್ದ.

Advertisement

ಹತ್ತಾರು ಕಡೆ ಕೆಲಸ ಮಾಡಿದ್ದ ಆದಿತ್ಯ!
ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಮಾತ ನಾಡುತ್ತಿದ್ದ ಆರೋಪಿ 4 ಸಿಮ್‌ ಕಾರ್ಡ್‌ ಬಳಸುತ್ತಿದ್ದನು. ಉತ್ತಮ ವೇತನದ ಬ್ಯಾಂಕ್‌ ಕೆಲಸ ಬಿಟ್ಟದ್ದೇಕೆ ಎಂದು ಪೊಲೀಸರು ವಿಚಾರಿಸಿದಾಗ “ನನಗೆ ಎಸಿಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ನನಗೆ ನೈಸ ರ್ಗಿಕ ಗಾಳಿ ಮತ್ತು ಬೆಳಕು ಇರುವ ಕಡೆ ಕೆಲಸ ಬೇಕು. ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು. ಅದಕ್ಕಾಗಿ ಸೆಕ್ಯೂರಿಟಿ ಗಾರ್ಡ್‌ ಕೆಲಸ ಮಾಡಲು ಬಯಸಿದ್ದೆ’ ಎಂದಿದ್ದ. ಮದುವೆ ಆಗಿಲ್ಲವೇ ಎಂದು ಪ್ರಶ್ನಿಸಿದಾಗ “ನಾನೇ ಬದುಕುವುದು ಕಷ್ಟ. ಇನ್ನು ಪತ್ನಿ- ಮಕ್ಕಳನ್ನು ಸಾಕುವುದು ಹೇಗೆ’ ಎಂದು ಪೊಲೀಸರನ್ನೇ ಪ್ರಶ್ನಿಸಿದ್ದ ಎನ್ನಲಾಗಿದೆ.

ಈ ಮಧ್ಯೆ ಮಂಗಳೂರಿಗೆ ಕೆಲಸಕ್ಕೆಂದು ಬಂದ ವೇಳೆಯೂ 8861.. ಸಂಖ್ಯೆ ಯಿಂದ ಆರಂಭವಾಗುವ ನಂಬರ್‌ ಕೊಟ್ಟಿದ್ದು, ಈಗ ಅದು ಸ್ವಿಚ್‌ ಆಫ್‌ ಆಗಿದೆ. ಬಾಂಬ್‌ ತಯಾರಿಸಲು ಹೆಚ್ಚು ಆನ್‌ಲೈನ್‌ನಲ್ಲಿ ಮಾಹಿತಿ ಜಾಲಾಡುತ್ತಿದ್ದ ಈತನಿಗೆ ಫೇಸ್‌ಬುಕ್‌, ಟ್ವಿಟರ್‌ನಂಥ ಸಾಮಾಜಿಕ ಜಾಲ ತಾಣಗಳಲ್ಲಿ ಅಕೌಂಟ್‌ ಇರುವುದು ಮೇಲ್ನೋಟಕ್ಕೆ ಕಾಣಿಸುತ್ತಿಲ್ಲ. ಆದರೆ ಆದಿತ್ಯ ರಾವ್‌ ಹೆಸರಿನಲ್ಲೇ ಈತ ಇ-ಮೇಲ್‌ ಖಾತೆ ಹೊಂದಿದ್ದಾನೆ. ಮಂಗಳೂರು, ಉಡುಪಿ, ಬೆಂಗಳೂರು ಹೀಗೆ ಹಲವು ಕಡೆ ಕೆಲಸ ಮಾಡಿದ್ದು, ವಿಚಿತ್ರ ಅಂದರೆ ಎಲ್ಲಿಯೂ ಸುದೀರ್ಘ‌ ಅವಧಿಗೆ ನಿಲ್ಲುತ್ತಿರಲಿಲ್ಲ. ಹದಿನೈದು ವರ್ಷಗಳಲ್ಲಿ ಆತ 18 ಕಡೆ ಕೆಲಸ ಮಾಡಿದ್ದ ಎನ್ನಲಾಗುತ್ತಿದೆ.

ಶುಲ್ಕ ಕೇಳಿದ್ದಕ್ಕೆ ಬಾಂಬ್‌ ಬೆದರಿಕೆ
ರೈಲು ನಿಲ್ದಾಣದ ಲಗೇಜ್‌ ಕೊಠಡಿ ಯಲ್ಲಿ ತನ್ನ ಬ್ಯಾಗ್‌ ಇರಿಸಿದ್ದ ಆದಿತ್ಯ, ಲಗೇಜ್‌ ಮರಳಿ ಪಡೆಯುವಾಗ ಅಲ್ಲಿನ ಸಿಬಂದಿ ಶುಲ್ಕ ಪಾವತಿಸಲು ಸೂಚಿಸಿ ದ್ದರು. ಆಗ ತನ್ನ ಬಳಿಯೇ ಹಣ ಕೇಳು ತ್ತೀರಾ ಎಂದು ಜಗಳ ಮಾಡಿದ್ದ. ಅದೇ ದಿನ (ಆ. 27) ಸಂಜೆ 4 ಗಂಟೆಗೆ ರೈಲ್ವೇ ಪೊಲೀಸ್‌ ಕಂಟ್ರೋಲ್‌ ರೂಮ್‌ಗೆ ಕರೆ ಮಾಡಿ “ಕ್ಲಾಕ್‌ ರೂಂ’ ನಲ್ಲಿ ಬಾಂಬ್‌ ಇದೆ ಎಂದಿದ್ದ. ಪೊಲೀಸರು ಶೋಧ ನಡೆಸಿದಾಗ ಹುಸಿ ಕರೆ ಎಂದು ದೃಢಪಟ್ಟಿತ್ತು. ಪೇಯಿಂಗ್‌ ಗೆಸ್ಟ್‌ ನಲ್ಲಿ ಲ್ಯಾಪ್‌ಟಾಪ್‌ ಕದ್ದ ಪ್ರಕರಣದ ವಿಚಾರಣೆ ವೇಳೆ “ನನ್ನ ಕ್ರೆಡಿಟ್‌ ಕಾರ್ಡ್‌ ಬಿಲ್‌ ಮೊತ್ತ ಅಧಿಕವಾಗಿತ್ತು. ಅದು ಪಾವತಿಸಲು ಸಾಧ್ಯವಾಗದ ಕಾರಣ ಲ್ಯಾಪ್‌ಟಾಪ್‌ ಕದ್ದು ಮಾರಾಟಕ್ಕೆ ಇರಿಸಿದ್ದೆ’ ಎಂದಿದ್ದ.

ಜ. 17,18, 19ರಂದು ಸ್ಫೋಟಕ ತಯಾರಿ
ಬಲ್ಮಠ ರಸ್ತೆಯ ಜ್ಯೋತಿ ಜಂಕ್ಷನ್‌ ಬಳಿಯ ಹೊಟೇಲ್‌ವೊಂದರಲ್ಲಿ ಇತ್ತಿಚೆಗಷ್ಟೇ ಕೆಲಸಕ್ಕೆ ಸೇರಿದ್ದ ಆದಿತ್ಯ ರಾವ್‌ ಅಲ್ಲಿ ಕೇವಲ 10 ದಿನ ಕೆಲಸ ಮಾಡಿ ಜ.13ರಂದು ಕೆಲಸ ತೊರೆದಿದ್ದ. ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿರುವಾಗಲೇ ಬಾಂಬ್‌ ತಯಾರಿಸಲು ಬೇಕಾದ ಕಚ್ಚಾ ವಸ್ತುಗಳನ್ನು ಆನ್‌ಲೈನ್‌ ಮೂಲಕ ತರಿಸಿಕೊಂಡಿದ್ದ. ಕೆಲಸ ಬಿಟ್ಟ ಬಳಿಕ ಊರಿಗೆಂದು ಹೋಗಿದ್ದು, ಜ.17, 18, 19ರಂದು ಬಾಂಬ್‌ ತಯಾರಿಸುವ ಪರಿಕರಗಳನ್ನು ಜೋಡಿಸುವ ಕಾರ್ಯದಲ್ಲಿ ನಿರತನಾಗಿದ್ದ ಎನ್ನಲಾಗುತ್ತಿದೆ. ಜ.20ರಂದು ಈತ ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇರಿಸಿದ್ದ.

ಓದಿದ್ದು ಎಂಜಿನಿಯರಿಂಗ್‌, ಎಂಬಿಎ; ಹೇಳುತ್ತಿದ್ದುದು ಪಿಯುಸಿ !
ಮಂಗಳೂರು: ಆದಿತ್ಯ ರಾವ್‌ ವಾಸ್ತವದಲ್ಲಿ ಎಂಜಿನಿಯರ್‌, ಎಂಬಿಎ ಉನ್ನತ ಪದವಿ ಓದಿದ್ದರೂ ಸೆಕ್ಯೂರಿಟಿ ಗಾರ್ಡ್‌, ವೈಟರ್‌ನಂಥ ಕೆಲಸಕ್ಕೆ ಸೇರಬೇಕಾದರೆ ತನ್ನ ಪೂರ್ಣ ವಿದ್ಯಾರ್ಹತೆಯನ್ನು ಬಹಿರಂಗ ಪಡಿಸುತ್ತಿರಲಿಲ್ಲ.

ಕೆಲಸಕ್ಕೆ ಸೇರುವಾಗ ಬಯೋಡೇಟಾ ನೀಡಿ ನೌಕರಿ ಪಡೆಯುತ್ತಿದ್ದ. ಉನ್ನತ ವಿದ್ಯಾಭ್ಯಾಸದ ಬಳಿಕ ಹತ್ತಾರು ಕಡೆ ಕೆಲಸ ಮಾಡಿ ಹಲವು ಅಪರಾಧ ಕೃತ್ಯಗಳನ್ನು ಎಸಗಿರುವ ಆರೋಪ ಹೊತ್ತಿರುವ ಆದಿತ್ಯ ಒಂದು ಕಡೆ ಕೆಲಸಕ್ಕಾಗಿ ನೀಡಿದ್ದ ಬಯೋಡೇಟಾ “ಉದಯವಾಣಿ’ಗೆ ಲಭಿಸಿದ್ದು, ಅದರಲ್ಲಿ ಆತನ ವಿದ್ಯಾರ್ಹತೆ “ಪಿಯುಸಿ’ ಎಂದಷ್ಟೇ ನಮೂದಿಸಿದ್ದಾನೆ.

ಅದಕ್ಕೂ ಮುನ್ನ ಒಂದು ಕಡೆ ಕೆಲಸಕ್ಕೆ ಸೇರುವಾಗ ಬಿ.ಇ. ಪದವಿಯ ಪ್ರಮಾಣಪತ್ರ ನೀಡಿದ್ದ. ಆದರೆ, ಆ ಕಂಪೆನಿಯವರು ಆತನ ಎಸ್‌ಎಸ್‌ಎಲ್‌ಸಿ ಪ್ರಮಾಣಪತ್ರ ಕೇಳಿದ್ದರು. ಹಾಗಾಗಿ ಸಿಟ್ಟಿನಲ್ಲೇ ಅಲ್ಲಿಂದ ಹೊರನಡೆದಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಕೆಲವೆಡೆ ಕೆಲಸಕ್ಕೆ ಸೇರಿಕೊಳ್ಳಬೇಕಾದರೆ ಗುರುತಿನ ಪತ್ರವಾಗಿ ಮಣಿಪಾಲದ ವಿಳಾಸ ವಿರುವ ತನ್ನ ಆಧಾರ್‌ ಕಾರ್ಡಿನ ಪ್ರತಿಯನ್ನು ನೀಡಿರುವುದೂ ಬೆಳಕಿಗೆ ಬಂದಿದೆ.

ಕರಾಟೆ ಪಟು, ಎನ್‌ಸಿಸಿ ಕೆಡೆಟ್‌ !
ಇನ್ನೊಂದೆಡೆ ಆದಿತ್ಯ ತಾನು ಕರಾಟೆಯಲ್ಲಿ “ಯೆಲ್ಲೋ ಬೆಲ್ಟ್ ಆಗಿದ್ದೇನೆ’ ಎಂದು ಹೇಳಿಕೊಂಡಿದ್ದ. ಸಂಗೀತ ಸ್ಪರ್ಧೆಗಳಲ್ಲಿ ಬಹು ಮಾನ ಗೆದ್ದಿರುವುದಾಗಿಯೂ ಮತ್ತು ಎನ್‌ಸಿಸಿಯ ಕೆಡೆಟ್‌ ಆಗಿಯೂ ಶಿಸ್ತಿನ ವ್ಯಕ್ತಿ ಎಂಬುದಾಗಿ ಬರೆದುಕೊಂಡಿದ್ದಾನೆ.

ಇಂಗ್ಲಿಷ್‌, ಹಿಂದಿ, ಕನ್ನಡ ಮತ್ತು ತುಳು ಭಾಷೆ ಬಲ್ಲವನಾಗಿದ್ದೇನೆ. ಟ್ರಾವೆಲಿಂಗ್‌, ಕ್ರಿಕೆಟ್‌, ಮ್ಯೂಸಿಕ್‌ ಮತ್ತು ಚರ್ಚೆಯು ಆಸಕ್ತಿ ವಿಷಯಗಳು. ಔದ್ಯೋಗಿಕವಾಗಿ ತನ್ನ ಮುಖ್ಯ ಸಾಮರ್ಥ್ಯವನ್ನು “ಹೊಸ ವಾತಾವರಣಕ್ಕೆ ಶೀಘ್ರ ಹೊಂದಾಣಿಕೆ’, “ಹೊಸ ಆವಿಷ್ಕಾರಗಳ ಆಲೋಚನೆ’ ಹಾಗೂ “ತಂಡದೊಂದಿಗೆ ಉತ್ತಮ ಕಾರ್ಯನಿರ್ವಹಣೆ’ ಎಂದು ತಿಳಿಸಿದ್ದ.

ಗಮನ ಸೆಳೆಯುವ ಕೊನೆಯ ಸಾಲು !
ವಿಶೇಷ ಅಂದರೆ, ಆದಿತ್ಯ ತನ್ನ ಬಯೋಡೇಟಾದ ಕೊನೆಯ ಸಾಲಿನಲ್ಲಿ ಉಲ್ಲೇಖೀಸಿರುವ ಒಂದು ವಾಕ್ಯ ಸಾಕಷ್ಟು ಕುತೂಹಲ ಹಾಗೂ ಸಂಶಯಕ್ಕೆ ಎಡೆ ಮಾಡುವಂತೆ ಇದೆ. ಆ ಸಾಲಿನ ಬಿಲೀಫ್ಸ್ ಎಂದು ಉಲ್ಲೇಖೀಸುತ್ತ “ಪಾಸಿಟಿವ್‌ ಫ್ರೇಮ್‌ ಆಫ್‌ ಮೈಂಡ್‌ ಆ್ಯಂಡ್‌ ಸೆನ್ಸ್‌ ಆಫ್‌ ಅಚೀವ್‌ಮೆಂಟ್‌ ಲೀಡ್ಸ್‌ ಟು ದಿ ಬೆಸ್ಟ್‌ ಔಟ್‌ಪುಟ್ಸ್‌ (ಧನಾತ್ಮಕವಾದ ಮನಸ್ಸು ಮತ್ತು ಸಾಧನೆಯ ಪ್ರಜ್ಞೆ ಉತ್ತಮ ಫ‌ಲಿತಾಂಶದತ್ತ ಕೊಂಡೊಯ್ಯುತ್ತ¤ದೆ) ಎಂದು ಹೇಳಿಕೊಂಡಿದ್ದಾನೆ.

ಏನನ್ನೂ ಬಾಯ್ಬಿಡುತ್ತಿರಲಿಲ್ಲ !
ನಗರದ ಹೊಟೇಲೊಂದರ ಬಿಲ್ಲಿಂಗ್‌ ವಿಭಾಗದಲ್ಲಿ 10 ದಿನ ಕೆಲಸ ಮಾಡಿಕೊಂಡಿದ್ದ ಆದಿತ್ಯನನ್ನು ಹತ್ತಿರದಿಂದ ನೋಡುತ್ತಿದ್ದವರಿಗೆ ಇದೀಗ ಆಘಾತವಾಗಿದೆ. ಆದಿತ್ಯ ಕೆಲಸದಲ್ಲಿ ಶಿಸ್ತಿನ ವ್ಯಕ್ತಿ. ಹೆಚ್ಚಾಗಿ ಮೌನದಿಂದ ಇರು ತ್ತಿದ್ದ. ಆದರೆ ಆತನ ಒಟ್ಟಾರೆ ವರ್ತನೆ ಅಸಹಜ ವಾಗಿತ್ತು ಎಂದು ನೌಕರರು ಪ್ರತಿಕ್ರಿಯಿಸಿದ್ದಾರೆ.

ಯಾರಾದರೂ ಮಾತನಾಡಿಸಿದರೂ “ಅದು ಸರಿ ಇಲ್ಲ. ಇದು ಸರಿ ಇಲ್ಲ.. ಸರಿ ಮಾಡಲಾಗದು…’ ಎನ್ನುತ್ತಾ ಹತಾಶೆಯ ಮಾತುಗಳನ್ನಾಡುತ್ತಿದ್ದ. ಮತ್ತೆ ಮೌನಿಯಾಗು ತ್ತಿದ್ದ. ಬಿಲ್ಲಿಂಗ್‌, ಕ್ಯಾಶ್‌ ವಿಭಾಗದಲ್ಲಿ ಕೆಲಸ ಮಾಡಿಕೊಂಡಿದ್ದ. ಆದರೆ ಒಮ್ಮೆಯೂ ಹಣದ ಲೆಕ್ಕಾಚಾರದಲ್ಲಿ ವ್ಯತ್ಯಾಸ ಅಥವಾ ದುಡ್ಡು ಕದ್ದದ್ದು ಕಾಣಿಸಿರಲಿಲ್ಲ. ಈ ನಡುವೆ ಆತ ಆನ್‌ಲೈನ್‌ನಲ್ಲಿ ವೈಟ್‌ ಸಿಮೆಂಟ್‌ ತರಿಸಿದ್ದನ್ನು ಕಂಡು ಹೊಟೇಲ್‌ನ ಕೆಲವು ಹುಡುಗರು ತಮಾಷೆ ಮಾಡಿದ್ದೂ ಇದೆ. ಜತೆಗೆ ಆತನ ಬಗ್ಗೆ ಹೊಟೇಲ್‌ನ ಕಾರ್ಮಿಕರಿಗೆ ಒಂದು ರೀತಿಯ ಕುತೂಹಲವಿತ್ತು.

ಬ್ಯಾಗ್‌ ಬಿಡುತ್ತನೇ ಇರಲಿಲ್ಲ
ಹೆಚ್ಚಾಗಿ ಇನ್‌ಶರ್ಟ್‌ ಡ್ರೆಸ್ಸಿಂಗ್‌ ಮಾಡಿರುತ್ತಿದ್ದ. ಟೊಪ್ಪಿ ಹಾಕಿಕೊಂಡೇ ಓಡಾಡು ತ್ತಿದ್ದ. ಜತೆಗೊಂದು ದೊಡ್ಡ ಬ್ಯಾಗ್‌ ಯಾವತ್ತೂ ಇರುತ್ತಿತ್ತು. ಅದನ್ನು ಬಳಿಯಲ್ಲೇ ಇಟ್ಟುಕೊಳ್ಳುತ್ತಿದ್ದ. ಹೊರಗೆ ಸಂಚರಿಸಬೇಕಾ ದರೂ ಆಟೋದಲ್ಲೇ ಪ್ರಯಾಣಿಸುತ್ತಿದ್ದ. ತಮಾಷೆ ಅಂದರೆ ಆದಿತ್ಯ ಮೊದಲ ಬಾರಿಗೆ ಕೆಲಸ ಕೇಳಿಕೊಂಡು ಬಂದಾಗಲೂ ತನ್ನ ಜತೆ ದೊಡ್ಡ ಬ್ಯಾಗ್‌ ಹೊತ್ತುಕೊಂಡು ಆಟೋದಲ್ಲೇ ಹೊಟೇಲ್‌ ಮುಂದೆ ಬಂದಿಳಿದಿದ್ದ. ಇದನ್ನು ಗಮನಿಸಿದ್ದ ಹೊಟೇಲ್‌ನ ವಾಚ್‌ಮ್ಯಾನ್‌, “ಯಾರೋ ಗಿರಾಕಿ ಬಂದಿರಬೇಕು’ ಅಂದುಕೊಂಡು ಆತನ ಬ್ಯಾಗ್‌ ಎತ್ತಿಕೊಂಡು ಒಳಗಿಟ್ಟು ಬಂದಿದ್ದ. ಅನಂತರ ಗೊತ್ತಾಗಿತ್ತು ಆತ ಕೆಲಸ ಕೇಳಿಕೊಂಡು ಬಂದವ ಎಂದು!

ಉಳಿದುಕೊಳ್ಳುತ್ತಿದ್ದುದೆಲ್ಲಿ?
ಕಾರ್ಮಿಕರ ಕೊಠಡಿಯಲ್ಲಿಯೂ ಹೆಚ್ಚಾಗಿ ಇರುತ್ತಿರಲಿಲ್ಲ. ತನ್ನ ತಂದೆ, ತಮ್ಮನ ಹತ್ತಿರವೂ ಹೋಗುತ್ತಿರಲಿಲ್ಲ. ಮಂಗಳೂರಿನಲ್ಲಿಯೇ ಎಲ್ಲಿಯೋ ವಾಸ್ತವ್ಯ ಇದ್ದ ಎನ್ನಲಾಗುತ್ತಿದೆ. ಆದರೆ ತನ್ನ ಕಾರ್ಯ-ಚಟುವಟಿಕೆ ಹಾಗೂ ವೈಯಕ್ತಿಕ ವಿಚಾರಗಳ ಬಗ್ಗೆ ಎಲ್ಲಿಯೂ ಬಾಯಿಬಿಡದೆ ಎಲ್ಲದರ ಬಗ್ಗೆಯೂ ಗೌಪ್ಯತೆ ಕಾಪಾಡುತ್ತಿದ್ದ.

ವೈಟರ್‌ ಆಗಿಯೂ ದುಡಿದಿದ್ದ
2018 ರ ಎಪ್ರಿಲ್‌ನಿಂದ 2019ರ ಜೂನ್‌ವರೆಗೆ ಬೆಂಗಳೂರಿನ ಹೊಟೇಲೊಂದ ರಲ್ಲಿ ಕ್ಯಾಪ್ಟನ್‌ ಹಾಗೂ ವೈಟರ್‌ ಆಗಿ, 2014ರಿಂದ 2017ರ ವರೆಗೆ ಮಣಿಪಾಲದ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ನಲ್ಲಿ ವೈಟರ್‌ ಮತ್ತು ರಿಸೆಪ್ಶನಿಸ್ಟ್‌ ಆಗಿ ಕೆಲಸ ಮಾಡಿರುವ ಬಗ್ಗೆ, ಅಲ್ಲದೆ ಬೆಂಗಳೂರಿನ ಇನ್ನೊಂದು ಹೊಟೇಲ್‌ನಲ್ಲಿಯೂ ಕೆಲಸ ಮಾಡಿರುವ ಬಗ್ಗೆ ಆತನೇ ಕೆಲಸಕ್ಕೆ ಹೋದ ಕಡೆ ಹೇಳಿಕೊಂಡಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next