Advertisement

ಆನ್‌ಲೈನ್‌ ಬಿತ್ತನೆ ಬೀಜ ವಿಫಲವಾದರೆ ರೈತ ಯಾರನ್ನುಕೇಳಬೇಕು?

02:35 PM Apr 12, 2022 | Team Udayavani |

ಹುಬ್ಬಳ್ಳಿ: “ಆನ್‌ಲೈನ್‌ ಮೂಲಕ ರೈತರು ಬಿತ್ತನೆ ಬೀಜ ಖರೀದಿಸಿದರೆ, ಮಾರುಕಟ್ಟೆಗಿಂತ ಕೊಂಚ ಕಡಿಮೆ ದರಕ್ಕೆ ದೊರೆಯಬಹುದೇನೋ ಗೊತ್ತಿಲ್ಲ. ಆದರೆ ಆ ಬೀಜಗಳು ವಿಫಲವಾದರೆ ಆಗುವ ನಷ್ಟಕ್ಕೆ ರೈತರು ಯಾರನ್ನು ಕೇಳಬೇಕು?

Advertisement

ಅಗ್ರಿ ಇನ್‌ಪುಟ್‌ ಡೀಲರ್ ಅಸೋಸಿಯೇಶನ್‌ ರಾಷ್ಟ್ರೀಯ ಅಧ್ಯಕ್ಷ ಕಲಂತ್ರಿ ಪ್ರಶ್ನೆ -ಇದು, ಅಗ್ರಿ ಇನ್‌ಪುಟ್‌ ಡೀಲರ್ ಅಸೋಸಿಯೇಶನ್‌ ರಾಷ್ಟ್ರೀಯ ಅಧ್ಯಕ್ಷ ಮನಮೋಹನ ಕಲಂತ್ರಿ ಅವರ ಪ್ರಶ್ನೆ. ಇಂತಹ ಸ್ಥಿತಿ ಬಾರದಿರಲಿ ಎಂಬುದಕ್ಕಾಗಿಯೇ ಆನ್‌ಲೈನ್‌ ಮೂಲಕ ಬೀಜ ಮಾರಾಟ ವಿರುದ್ಧ ಧ್ವನಿ ಎತ್ತಿದ್ದೇವೆ. ಇದರ ವಿರುದ್ಧ ಸ್ಪಷ್ಟ ಕ್ರಮಕ್ಕೆ ಕೇಂದ್ರ ಸರಕಾರಕ್ಕೆ ಒತ್ತಾಯಿಸಿದ್ದೇವೆ. ಹೋರಾಟ ಮುಂದುವರಿಸುತ್ತೇವೆ ಎಂದು ಅವರು “ಉದಯವಾಣಿ’ಗೆ ತಿಳಿಸಿದರು.

ಅನ್‌ಲೈನ್‌ ಮೂಲಕ ಬೀಜಗಳ ಮಾರಾಟಕ್ಕೆ ಸರಕಾರಗಳು ಒಪ್ಪಿಗೆ ನೀಡಿವೆ. ಆದರೆ ಮೇಲ್ನೋಟಕ್ಕೆ ರೈತರಿಗೆ ಹೆಚ್ಚು ಪ್ರಯೋಜನಕಾರಿ ಹಾಗೂ ಲಾಭದಾಯಕ ಅನಿಸಿದರೂ ಇದರಿಂದ ಅಪಾಯವೇ ಅಧಿಕ ಎನ್ನುವ ಕಾರಣಕ್ಕೆ ಅಸೋಸಿಯೇಶನ್‌ ಇದನ್ನು ವಿರೋಧಿಸುತ್ತಿದೆ. ಅಷ್ಟೇ ಅಲ್ಲ ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಬೀಜ ನೀಡುವ ಕಂಪೆನಿಗಳ ಉತ್ಪನ್ನಗಳನ್ನು ನಮ್ಮ ಮಳಿಗೆಗಳಲ್ಲಿ ಮಾರಾಟಕ್ಕೆ ನಿಷೇಧ ವಿಧಿಸಬೇಕಾದೀತು ಎಂಬ ಎಚ್ಚರಿಕೆ ನೀಡಿದರು.

ಭಾರತ ವಿಶ್ವದಲ್ಲಿಯೇ ಬೀಜ ಉದ್ಯಮದಲ್ಲಿ ಐದನೇ ಸ್ಥಾನದಲ್ಲಿದೆ. ಜಗತ್ತಿನ ಬೀಜ ವಹಿವಾಟುನಲ್ಲಿ ಅಮೆರಿಕ ಶೇ.27ಪಾಲು ಪಡೆದರೆ, ಚೀನಾ ಶೇ.20, ಫ್ರಾನ್ಸ್‌ ಶೇ.8, ಬ್ರೆಜಿಲ್‌ ಶೇ.6 ಹಾಗೂ ಭಾರತ ಶೇ.4.4 ಪಾಲು ಪಡೆದಿದೆ. ದೇಶದಲ್ಲಿ 1963ರಲ್ಲಿ ರಾಷ್ಟ್ರೀಯ ಬೀಜ ನಿಗಮ ಸ್ಥಾಪನೆಯಾಯಿತು.

ವಿಶ್ವಬ್ಯಾಂಕ್‌ ನೆರವಿನೊಂದಿಗೆ ರಾಷ್ಟ್ರೀಯ ಬೀಜಗಳ ಯೋಜನೆಯಡಿ ಮೂರು ಹಂತದಲ್ಲಿ ವಿವಿಧ ಯೋಜನೆಗಳ ಜಾರಿ ಹಾಗೂ ರಾಜ್ಯ ಬೀಜಗಳ ನಿಗಮಗಳನ್ನು ಸರಿಸುಮಾರು ನಾಲ್ಕೂವರೆ ದಶಕಗಳ ಹಿಂದೆಯೇ ಸ್ಥಾಪಿಸಲಾಗಿದೆ. 1966ರ ಬೀಜ ಕಾಯ್ದೆಗೆ ಕಾಲಕಾಲಕ್ಕೆ ತಿದ್ದುಪಡಿ ಕೈಗೊಳ್ಳಲಾಗಿದ್ದು, ಇತ್ತೀಚೆಗಿನ ವರ್ಷಗಳಲ್ಲಿ ಬಿತ್ತನೆ ಬೀಜ ಅಭಿವೃದ್ಧಿ ಹಾಗೂ ಸ್ವಾವಲಂಬನೆಗೆ ಕೇಂದ್ರ ಸರಕಾರ ಹೆಚ್ಚು ಒತ್ತು ನೀಡುತ್ತಿದೆ. ಬಿತ್ತನೆ ಬೀಜಕ್ಕೆ ಆತ್ಮನಿರ್ಭರತೆ ಸ್ಪರ್ಶಕ್ಕೆ ಯತ್ನಗಳು ನಡೆಯುತ್ತಿವೆ. ಇದರ ನಡುವೆ ಆನ್‌ಲೈನ್‌ ಮೂಲಕ ಬಿತ್ತನೆ ಬೀಜಗಳನ್ನು ರೈತರ ಹೊಲ ಸೇರುವಂತೆ ಮಾಡುವ ಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದರು.

Advertisement

ಕೃಷಿಗೆ ಬೀಜವೇ ಜೀವಾಳ: ರೈತರ ಕೃಷಿ ಬದುಕಿಗೆ ಬಿತ್ತನೆ ಬೀಜವೇ ಜೀವಾಳ. ಬಿತ್ತನೆ ಬೀಜವೆಂದರೆ ರೈತರ ಒಂದು ಹಂಗಾಮಿನ ಬದುಕು. ಕೃಷಿ ಬದುಕಿನ ಜೀವಾಳವೇ ವಿಫಲವಾದರೆ ರೈತನಿಗಾಗುವ ಸಂಕಷ್ಟ ಅಷ್ಟಿಷ್ಟಲ್ಲ. ಬಿತ್ತನೆ ಮಾಡಿದ ಬೀಜ ಮೊಳಕೆ ಬಾರದಿದ್ದರೆ ಮತ್ತೂಮ್ಮೆ ಬಿತ್ತನೆ ಮಾಡಬಹುದಲ್ಲ ಎಂಬುದು ಕೆಲವರ ಪ್ರಶ್ನೆಯಾಗಬಹುದು. ಬಿತ್ತನೆಗೆ ಅದರದ್ದೇ ಅವಧಿ ಇರುತ್ತದೆ. ಅದು ದಾಟಿದರೆ ಬೆಳೆ ಬಂದರೂ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಜತೆಗೆ ಕೃಷಿ ವೆಚ್ಚ ಅಧಿಕವಾಗಲಿದೆ. ಬೀಜದ ಖರ್ಚು ದುಪ್ಪಟ್ಟು ಆಗಲಿದೆ ಎಂಬುದನ್ನು ಗಮನಿಸಬೇಕು ಎಂದರು.

ಬಿತ್ತನೆ ಬೀಜಗಳ ಗುಣಮಟ್ಟದ ಪರೀಕ್ಷೆ, ಪ್ರಮಾಣೀಕರಣ, ಮಾರಾಟಗಾರರಿಗೆ ಪರವಾನಗಿ ಇನ್ನಿತರೆ ಅವಶ್ಯಕತೆ ಇದ್ದು, ಇವೆಲ್ಲವುಗಳನ್ನು ಆನ್‌ಲೈನ್‌ ಮೂಲಕ ಬರುವ ಬಿತ್ತನೆ ಬೀಜಗಳಲ್ಲಿ ಕೈಗೊಳ್ಳಲಾಗಿದೆಯೇ ಎಂಬ ಖಾತರಿ ಇಲ್ಲವಾಗಿದೆ. ರೈತರು ಬೀಜ ಮಾರಾಟ ಮಳಿಗೆಗಳಿಂದ ಖರೀದಿಸಿದರೆ ಮಾರಾಟಗಾರರ ನೇರ ಸಂಪರ್ಕ ಇರುತ್ತದೆ. ಬೀಜದ ಗುಣಮಟ್ಟ, ಮೊಳಕೆ ಬರುವಿಕೆಯಲ್ಲಿ ವ್ಯತ್ಯಾಸವಾದರೆ ತಕ್ಷಣಕ್ಕೆ ನೇರವಾಗಿ ಮಾರಾಟಗಾರನನ್ನು ಕೇಳಬಹುದಾಗಿದೆ. ಆದರೆ ಆನ್‌ ಲೈನ್‌ನಲ್ಲಿ ಮಾರಾಟಗಾರನ ಮುಖ ಪರಿಚಯ, ಮಳಿಗೆ ಮಾಹಿತಿಯೇ ಇಲ್ಲದಿರುವಾಗ ರೈತರು ಕೇಳುವುದು ಯಾರನ್ನ?

ಬಿತ್ತನೆ ಬೀಜದಂತಹ ಅತಿ ಸೂಕ್ಷ್ಮ ಹಾಗೂ ಪ್ರಮುಖ ವಿಚಾರದಲ್ಲಿ ಸರಕಾರ ಸಮಗ್ರ ಅವಲೋಕನ ಮಾಡಬೇಕಿತ್ತು. ಆದರೆ ಇದಾವುದನ್ನು ಗಮನಕ್ಕೆ ತೆಗೆದುಕೊಳ್ಳದೆ ಆನ್‌ಲೈನ್‌ ಮೂಲಕ ಬಿತ್ತನೆ ಬೀಜ ಮಾರಾಟಕ್ಕೆ ಅನುಮತಿ ನೀಡುತ್ತಿರುವುದು ನೋವಿನ ಸಂಗತಿ. ಈ ನಿಟ್ಟಿನಲ್ಲಿ ಅಸೋಸಿಯೇಶನ್‌ ರಾಷ್ಟ್ರಮಟ್ಟದಲ್ಲಿ ರೈತರಿಗೆ ಜಾಗೃತಿ, ಹೋರಾಟ ಕೈಗೊಳ್ಳಲಿದೆ ಎಂದರು.

ಪ್ರತಿ ವರ್ಷದ ಮುಂಗಾರು-ಹಿಂಗಾರು ಹಂಗಾಮು ಸಂದರ್ಭ ದೇಶದ ಅನೇಕ ರಾಜ್ಯಗಳಲ್ಲಿ ನಕಲಿ ಬಿತ್ತನೆ ಬೀಜದಿಂದ ರೈತರ ಬೆಳೆ ವೈಫಲ್ಯವಾಗುವ ಪ್ರಕರಣಗಳು ನಡೆಯುತ್ತಲಿವೆ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಇನ್ನಿತರೆ ರಾಜ್ಯಗಳನ್ನೇ ತೆಗೆದುಕೊಳ್ಳಿ, ಹತ್ತಿ, ಸೂರ್ಯಕಾಂತಿ, ಸೋಯಾಬಿನ್‌, ಮೆಕ್ಕೆಜೋಳ ಹೀಗೆ ವಿವಿಧ ಬಿತ್ತನೆ ಬೀಜಗಳು ನಕಲಿ ರೂಪದಲ್ಲಿ ಆಗಾಗ ಸದ್ದು ಮಾಡುತ್ತಲಿರುತ್ತವೆ. ನಕಲಿ ಬೀಜ ಹರಡುವ ಜಾಲ ಪತ್ತೆಗೆ ಕೃಷಿ ಇಲಾಖೆ, ಪೊಲೀಸರ ಬೆವರಿಳಿಸಬೇಕಾಗುತ್ತದೆ. ಅಂತಹದ್ದರಲ್ಲಿ ಯಾವುದೊಂದು ನೇರ ಸಂಪರ್ಕ ಇಲ್ಲದೆ ಕೇವಲ ಸಾಮಾಜಿಕ ಜಾಲತಾಣವೊಂದನ್ನೇ ನಂಬಿಕೊಂಡು ಬಿತ್ತನೆ ಬೀಜ ಮಾರಾಟ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದರ ಆತ್ಮಾವಲೋಕನವನ್ನು ಸರಕಾರಗಳೂ ಮಾಡಿಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಆನ್‌ಲೈನ್‌ ಮೂಲಕ ಬಿತ್ತನೆ ಬೀಜ ಮಾರಾಟ ತಡೆ ವಿಚಾರದಲ್ಲಿ ಅಸೋಸಿಯೇಶನ್‌ನಿಂದ ಈಗಾಗಲೇ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಸಾಂಕೇತಿಕ ಪ್ರತಿರೋಧ ತೋರಿದ್ದೇವೆ. ಮನವಿಗೆ ಸ್ಪಂದನೆ ದೊರೆಯದೆ, ಆನ್‌ಲೈನ್‌ ಮೂಲಕ ಬಿತ್ತನೆ ಬೀಜ ಮಾರಾಟ ಮುಂದುವರಿದರೆ ಹೋರಾಟ ತೀವ್ರಗೊಳಿಸುವುದು ಖಚಿತ ಎಂದರು.

ಆನ್‌ಲೈನ್‌ ಮೂಲಕ ಬೀಜಗಳ ಪೂರೈಕೆ ಬೇಡ ಎಂದು ಪ್ರಮುಖ ಎಲ್ಲ ಕಂಪೆನಿಗಳಿಗೆ ಮನವಿ ಮಾಡುತ್ತೇವೆ. ಇದನ್ನು ಮೀರಿಯೂ ಆನ್‌ಲೈನ್‌ ಮೂಲಕ ಮಾರಾಟಕ್ಕೆ ಬೀಜ ನೀಡುವ ಕಂಪೆನಿಗಳ ಉತ್ಪನ್ನಗಳನ್ನು ನಮ್ಮ ಮಳಿಗೆಗಳಲ್ಲಿ ಮಾರಾಟ ಮಾಡುವುದನ್ನು ನಿಷೇಧಿಸಬೇಕಾಗುತ್ತದೆ. ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕ ಇನ್ನಿತರೆ ಕೃಷಿ ಪರಿಕರಗಳ ಮಾರಾಟಗಾರರು ಸುಮಾರು ಒಂಭತ್ತು ಲಕ್ಷ ಜನರಿದ್ದು, ಅಗ್ರಿ ಇನ್‌ಪುಟ್‌ ಡೀಲರ್ ಅಸೋಸಿಯೇಶನ್‌ದಡಿ ಸದಸ್ಯತ್ವ ಹೊಂದಿದ್ದಾರೆ ಎಂದರು.

ದೇಶದಲ್ಲಿಯೇ ಅತಿ ಹೆಚ್ಚು ಸದಸ್ಯತ್ವ ಹೊಂದಿದ ರಾಜ್ಯ ಉತ್ತರ ಪ್ರದೇಶವಾಗಿದೆ. ಅಲ್ಲಿ ಸುಮಾರು 1.50 ಲಕ್ಷ ಡೀಲರ್‌ಗಳು ಸದಸ್ಯತ್ವ ಪಡೆದಿದ್ದಾರೆ. ಕರ್ನಾಟಕದಲ್ಲಿ ಸುಮಾರು 40 ಸಾವಿರ ಜನರಿದ್ದು, ಇಲ್ಲಿ ಇನ್ನು ಸದಸ್ಯತ್ವದ ಸಂಖ್ಯೆ ಹೆಚ್ಚಬೇಕಾಗಿದೆ. ಅಸೋಸಿಯೇಶನ್‌ ಬಲವರ್ಧನೆಗೊಂಡರೆ ಧ್ವನಿ ಗಟ್ಟಿಗೊಳ್ಳಲಿದೆ ಎಂಬುದು ಮನಮೋಹನ ಕಲಂತ್ರಿ ಅವರ ಅನಿಸಿಕೆ.

ಉತ್ಪನ್ನಗಳ ನಿಷೇಧ: ಆನ್‌ಲೈನ್‌ ಮೂಲಕ ಬಿತ್ತನೆ ಬೀಜ ಮಾರಾಟ ಬೇಡ ಎಂಬುದು ಅಗ್ರಿ ಇನ್‌ಪುಟ್‌ ಡೀಲರ್ ಅಸೋಸಿಯೇಶನ್‌ನ ಒಕ್ಕೊರಲಿನ ಒತ್ತಾಯವಾಗಿದೆ. ಸರಕಾರಗಳು ಇದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ವಿಶೇಷವಾಗಿ ಆಯಾ ರಾಜ್ಯಗಳು ತಮ್ಮ ರೈತರ ಹಿತದೃಷ್ಟಿಯಿಂದ ಆನ್‌ಲೈನ್‌ ಮೂಲಕ ಬರುವ ಬಿತ್ತನೆ ಬೀಜ ಬಳಕೆ ಬೇಡ ಎಂಬ ಜಾಗೃತಿ ಮೂಡಿಸಬೇಕು. ಜತೆಗೆ ಆನ್‌ ಲೈನ್‌ನಲ್ಲಿ ಮಾರಾಟ ತಡೆಗೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next