Advertisement

IPL ಆಡುತ್ತಲೇ ನಾಯಕತ್ವ ಕಳೆದುಕೊಂಡವರು

09:07 AM Apr 28, 2019 | Team Udayavani |

ವಿಫ‌ಲವಾದರೆ ಎಂತಹ ದಿಗ್ಗಜರನ್ನೂ ಹೊರಹಾಕುವ ಐಪಿಎಲ್‌ ಫ್ರಾಂಚೈಸಿಗಳು
ಒಂದು ಕಾಲದಲ್ಲಿ ಹೆಚ್ಚು ಕಡಿಮೆ ಮನಃರಂಜನೆಗಷ್ಟೇ ಸೀಮಿತವಾಗಿದ್ದ ಕ್ರಿಕೆಟ್‌ ಈಗ ತನ್ನ ಸ್ವರೂಪವನ್ನು ಸಂಪೂರ್ಣ ಬದಲಾಯಿಸಿಕೊಂಡಿದೆ. ಕ್ರಿಕೆಟ್‌ ಈಗ ಆಟವಲ್ಲ, ಅದು ವೃತ್ತಿ. ಆ ಕೆಲಸವನ್ನು ಜಗತ್ತಿನ ಲಕ್ಷಾಂತರ ಮಂದಿ ನಂಬಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಹೇಗೆ ನೋಡಿದರೂ ಇಡೀ ಜಗತ್ತಿನಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಲಕ್ಷಾಂತರ ಮಂದಿಗೆ ಕ್ರಿಕೆಟ್‌ ಉದ್ಯೋಗ ನೀಡಿದೆ. ಕ್ರಿಕೆಟ್‌ ಈಗ ಒಂದು ಉದ್ಯಮ.

Advertisement

ಇಷ್ಟಾದರೂ ಅಂತಾರಾಷ್ಟ್ರೀಯ, ರಾಷ್ಟ್ರೀಯ, ದೇಶೀಯ ಕ್ರಿಕೆಟ್‌ನಲ್ಲಿ ಔದ್ಯಮಿಕ ಲೆಕ್ಕಾಚಾರಗಳು ಸಂಪೂರ್ಣ ಆವರಿಸಿಕೊಂಡಿಲ್ಲ. ಅಲ್ಲಿನ್ನೂ ಭಾವನಾತ್ಮಕ ಸಂಗತಿಗಳು ಇವೆ. ಇಂತಹ ಹೊತ್ತಿನಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ನ ಪ್ರವೇಶವಾಯಿತು. ಇಲ್ಲಿ ಭಾವನೆಗಳಿಗೆ ಯಾವ ಬೆಲೆಯೂ ಇಲ್ಲ, ಹಣ ಹೂಡುವ ನೀವು ಅದನ್ನು ವಾಪಸ್‌ ಪಡೆಯುವ ಸಲುವಾಗಿ ಎಲ್ಲ ಯತ್ನಗಳನ್ನೂ ಮಾಡುತ್ತೀರಿ. ವೈಫ‌ಲ್ಯಕ್ಕೆ ಇಲ್ಲಿ ಗೌರವವಿಲ್ಲ. ನಿನ್ನೆಯವರೆಗೆ ಸಾಧಿಸಿದ ಯಶಸ್ಸೂ ಮುಖ್ಯವಲ್ಲ. ನಿಮ್ಮ ವೈಫ‌ಲ್ಯ ತಂಡಕ್ಕೆ ಹೊರೆಯಾಗುತ್ತಿದ್ದರೆ, ಎಂತಹ ದಿಗ್ಗಜರಾಗಿದ್ದರೂ ಸ್ಥಾನ ಕಳೆದುಕೊಳ್ಳುತ್ತೀರಿ. ಪ್ರತೀ ವರ್ಷ ಐಪಿಎಲ್‌ ನಡೆಯುವಾಗ ಅಂತಹ ನಿದರ್ಶನಗಳು ಕಣ್ಣಿಗೆ ಕಟ್ಟುತ್ತವೆ.

ಭಾರತ ಕಂಡ ಕ್ರಿಕೆಟ್‌ ದಂತಕಥೆ ಸೌರವ್‌ ಗಂಗೂಲಿಯನ್ನು, ಅವರ ಮಾತೃನೆಲದ ತಂಡ ಕೋಲ್ಕತ ನೈಟ್‌ರೈಡರ್ಸ್‌ ಮೊದಲ ಮೂರು ಆವೃತ್ತಿಗಳಲ್ಲೇ ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿತು. ಅವರಿಗೆ ಬೇಕಾದ ಆಟಗಾರರು ಸಿಗಲಿಲ್ಲ. 2ನೇ ಆವೃತ್ತಿಯಲ್ಲಿ ನಾಯಕತ್ವವನ್ನೇ ಕಸಿದುಕೊಂಡಿತು. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದಿಂದ ರಾಹುಲ್‌ ದ್ರಾವಿಡ್‌ ಹೊರಬಿದ್ದರು. ಪಂಜಾಬ್‌ ತಂಡದಿಂದ ಯುವರಾಜ್‌ ಸಿಂಗ್‌ ಕಳಚಿಕೊಂಡರು. ಡೆಲ್ಲಿ ಡೆವಿಲ್ಸ್‌ ತಂಡದಿಂದ ವೀರೇಂದ್ರ ಸೆಹ್ವಾಗ್‌ ಕೂಡ ಹೊರಬಿದ್ದರು.

ಹೀಗೊಂದು ಸ್ವರೂಪ ಹೊಂದಿರುವ ಐಪಿಎಲ್‌ನಲ್ಲಿ ನಾಯಕರು ಕೂಟದ ಮಧ್ಯೆಯೇ ನಾಯಕತ್ವ ಕಳೆದುಕೊಳ್ಳುವುದು ಹೊಸತಲ್ಲ. ಅವರ ನಿರ್ವಹಣೆಯಲ್ಲಿ ವೈಫ‌ಲ್ಯ ಕಂಡುಬಂದರೆ, ಈ ಕ್ರಮವನ್ನು 2008ರ ಮೊದಲ ಆವೃತ್ತಿಯಿಂದಲೇ ಫ್ರಾಂಚೈಸಿಗಳು ತೆಗೆದುಕೊಳ್ಳುತ್ತಬಂದಿವೆ. ಆ ಬಗ್ಗೆ ಯಾವ ಹಿಂಜರಿಕೆ, ಮುಲಾಜನ್ನೂ ಫ್ರಾಂಚೈಸಿಗಳು ತೋರಿಲ್ಲ. ಇತ್ತೀಚೆಗಷ್ಟೇ ವೈಫ‌ಲ್ಯದ ಹಿನ್ನೆಲೆಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ನಾಯಕತ್ವವನ್ನು ಅಜಿಂಕ್ಯ ರಹಾನೆ ಕಳೆದುಕೊಂಡಿದ್ದಾರೆ. ಆ ಜಾಗವನ್ನು ಸ್ಟೀವ್‌ ಸ್ಮಿತ್‌ ಆಕ್ರಮಿಸಿಕೊಂಡಿದ್ದಾರೆ.

ಇದರ ನೆನಪಲ್ಲಿ ಹೀಗೆ ನಾಯಕತ್ವ ಕಳೆದುಕೊಂಡ ಹತ್ತು ನಾಯಕರ ಪಟ್ಟಿ ಇಲ್ಲಿದೆ…

2008: ಲಕ್ಷ್ಮಣ್‌ ಹೊರಕ್ಕೆ, ಗಿಲ್‌ಕ್ರಿಸ್ಟ್‌ಗೆ ಪಟ್ಟ
2008ರ ಉದ್ಘಾಟನಾ ಐಪಿಎಲ್‌ನಲ್ಲಿ ಹೈದರಾಬಾದ್‌ ಮೂಲದ ಡೆಕ್ಕನ್‌ ಚಾರ್ಜರ್ಸ್‌ ತಂಡಕ್ಕೆ ವಿವಿಎಸ್‌ ಲಕ್ಷ್ಮಣ್‌ ನಾಯಕರಾಗಿದ್ದರು. ಆದರೆ ನಾಯಕರಾಗಿ, ಆಟಗಾರರಾಗಿ ಅವರು ಸಂಪೂರ್ಣ ವಿಫ‌ಲವಾದರು. ಇದೇ ಹಂತದಲ್ಲಿ ಗಾಯಗೊಂಡ ಅವರು ತಂಡದಿಂದ ಹೊರಬಿದ್ದರು, ಆಸ್ಟ್ರೇಲಿಯದ ಆ್ಯಡಂ ಗಿಲ್‌ಕ್ರಿಸ್ಟ್‌ ನಾಯಕರಾಗಿ ಆಯ್ಕೆಯಾದರು.

Advertisement

2009: ಪೀಟರ್ಸನ್‌ ಜಾಗಕ್ಕೆ ಅನಿಲ್‌ ಕುಂಬ್ಳೆ
2009ರಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ನಾಯಕತ್ವವನ್ನು ಇಂಗ್ಲೆಂಡ್‌ನ‌ ಕೆವಿನ್‌ ಪೀಟರ್ಸನ್‌ ಹೊತ್ತುಕೊಂಡಿದ್ದರು. ಆದರೆ ಅವರು 6 ಪಂದ್ಯಗಳಲ್ಲಿ ಗಳಿಸಿದ್ದು ಬರೀ 93 ರನ್‌ಗಳನ್ನು ಮಾತ್ರ. ಇದೇ ವೇಳೆ ಅವರು ತಮ್ಮ ನಾಡಿನ ಕರ್ತವ್ಯಕ್ಕಾಗಿ ಇಂಗ್ಲೆಂಡ್‌ಗೆ ವಾಪಸಾದರು. ಆ ಜಾಗಕ್ಕೆ ಅನಿಲ್‌ ಕುಂಬ್ಳೆಯನ್ನು ನೇಮಿಸಲಾಯಿತು.

2012: ಆದರ್ಶ ಮೆರೆದ ಸಂಗಕ್ಕರ
2012ರ ಐಪಿಎಲ್‌ನಲ್ಲಿ ಶ್ರೀಲಂಕಾದ ಕುಮಾರ ಸಂಗಕ್ಕರ ಡೆಕ್ಕನ್‌ ಚಾರ್ಜರ್ಸ್‌ ತಂಡದ ನಾಯಕರಾಗಿದ್ದರು. ಆ ವೇಳೆ ಅವರು ಆಡಿದ 12 ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 200 ರನ್‌. ಇದರಿಂದ ಸ್ವತಃ ಸಂಗಕ್ಕರ ತಾವು ತಂಡದಿಂದ ಹೊರಗುಳಿಯುವ ನಿರ್ಧಾರ ಮಾಡಿ, ಆಸ್ಟ್ರೇಲಿಯದ ಕ್ಯಾಮರೂನ್‌ ವೈಟ್‌ಗೆ ನಾಯಕತ್ವ ಹಸ್ತಾಂತರಿಸಿದ್ದರು.

2012: ವೆಟ್ಟೊರಿ ಜಾಗಕ್ಕೆ ಕೊಹ್ಲಿ
ರಾಯಲ್‌ ಚಾಲೆಂಜರ್ಸ್‌ ಬೆಂಗಳೂರಿನ ನಾಯಕ ಪಟ್ಟವನ್ನು ವಿರಾಟ್‌ ಕೊಹ್ಲಿ ಪಡೆದುಕೊಂಡಿದ್ದು 2012ರಲ್ಲಿ. 2011ರಲ್ಲಿ ತಂಡವನ್ನು ಫೈನಲ್‌ಗೆ ತಲುಪಿಸಿದ್ದ ನ್ಯೂಜಿಲೆಂಡ್‌ನ‌ ಡೇನಿಯೆಲ್‌ ವೆಟ್ಟೊರಿ 2012ರಲ್ಲಿ ಗಳಿಸಿದ್ದು ಬರೀ 5 ಐದು ವಿಕೆಟ್‌! ಅದರ ಪರಿಣಾಮ ಅವರು ತಂಡದಿಂದ ಹೊರಗುಳಿದರು. ಇದು ಕೊಹ್ಲಿಯನ್ನು ಪಟ್ಟಕ್ಕೇರಿಸಿತು.

2013: ಪಾಂಟಿಂಗ್‌ ಮಾಡಿದ ಅದ್ಭುತ ನಿರ್ಧಾರ
2013ರಲ್ಲಿ ಆಸ್ಟ್ರೇಲಿಯ ದಂತಕಥೆ ರಿಕಿ ಪಾಂಟಿಂಗ್‌ ಮುಂಬೈ ತಂಡ ಕೂಡಿಕೊಳ್ಳುವುದರ ಜೊತೆಗೆ ನಾಯಕರಾಗಿ ಆಯ್ಕೆಯಾದರು. ಆದರೆ 6 ಪಂದ್ಯಗಳಲ್ಲಿ ಅವರು ಗಳಿಸಿದ್ದು ಕೇವಲ 52 ರನ್‌. ಇದರಿಂದ ಬೇಸತ್ತ ಅವರು ನಾಯಕತ್ವವನ್ನು ರೋಹಿತ್‌ ಶರ್ಮಗೆ ನೀಡಿ, ತಾವು ಹೊರಗುಳಿದರು. ಆ ಬಾರಿ ಮುಂಬೈ ಚಾಂಪಿಯನ್‌ ಆಯಿತು!

2014: ಧವನ್‌ರಿಂದ ನಾಯಕತ್ವ ಪಡೆದ ಸ್ಯಾಮಿ
ವೆಸ್ಟ್‌ ಇಂಡೀಸನ್ನು ಎರಡು ಬಾರಿ ಟಿ20 ಚಾಂಪಿಯನ್‌ ಮಾಡಿರುವ ಡ್ಯಾರೆನ್‌ ಸ್ಯಾಮಿ, 2014ರ ಕೊನೆಯ ಹಂತದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ನಾಯಕರಾದರು. ಅದಕ್ಕೂ ಮುನ್ನ ನಾಯಕರಾಗಿದ್ದ ಶಿಖರ್‌ ಧವನ್‌ 10 ಪಂದ್ಯಗಳಲ್ಲಿ ಬರೀ 215 ರನ್‌ ಗಳಿಸಿದ್ದು, ಅವರಿಗೆ ಮುಳುವಾಯಿತು. ನಾಯಕತ್ವ ಸ್ಯಾಮಿಗೆ ಸಿಕ್ಕಿತು.

2015: ಸ್ಮಿತ್‌ಗೆ ನಾಯಕತ್ವ ವಹಿಸಿದ ವಾಟ್ಸನ್‌
2015ರ ಐಪಿಎಲ್‌ ಆರಂಭದಲ್ಲಿ ಶೇನ್‌ ವಾಟ್ಸನ್‌ ಗಾಯಗೊಂಡರು. ಆಗ ಮೊದಲ ಪಂದ್ಯದಲ್ಲಿ ಸ್ಮಿತ್‌ ರಾಜಸ್ಥಾನ್‌ ರಾಯಲ್ಸ್‌ ನಾಯಕರಾಗಿದ್ದರು. ಮುಂದೆ ತಮ್ಮ ವೈಯಕ್ತಿಕ ಪ್ರದರ್ಶನದ ಮೇಲೆ ಗಮನ ಕೇಂದ್ರೀಕರಿಸುವ ಉದ್ದೇಶದಿಂದ ವಾಟ್ಸನ್‌, ನಾಯಕತ್ವವನ್ನು ಪೂರ್ಣವಾಗಿ ಸ್ಟೀವ್‌ ಸ್ಮಿತ್‌ಗೆ ವಹಿಸಿದರು. ರಾಜಸ್ಥಾನ್‌ ಪ್ಲೇಆಫ್ಗೇರಿತು.

2016: ಮಿಲ್ಲರ್‌ರಿಂದ ವಿಜಯ್‌ಗೆ ಜವಾಬ್ದಾರಿ
2016ರ ಐಪಿಎಲ್‌ ಆವೃತ್ತಿಯಲ್ಲಿ ಕಿಂಗ್ಸ್‌ ಪಂಜಾಬ್‌ ಸಂಪೂರ್ಣ ವಿಫ‌ಲವಾಗಿತ್ತು. ಅದಕ್ಕೆ ಪೂರಕವಾಗಿ ನಾಯಕ ಡೇವಿಡ್‌ ಮಿಲ್ಲರ್‌, 6 ಪಂದ್ಯಗಳಲ್ಲಿ ಬರೀ 76 ರನ್‌ ಗಳಿಸಿದ್ದರು. ಈ ವೈಫ‌ಲ್ಯದ ಪರಿಣಾಮ ನಾಯಕತ್ವವನ್ನು ಮುರಳಿ ವಿಜಯ್‌ಗೆ ಹಸ್ತಾಂತರಿಸಲಾಯಿತು. ಆದರೂ ಪಂಜಾಬ್‌ ಸ್ಥಿತಿ ಸುಧಾರಿಸಲಿಲ್ಲ.

2018: ಶ್ರೇಯಸ್‌ಗೆ ಹೊಣೆ ನೀಡಿದ ಗಂಭೀರ್‌
ಕೋಲ್ಕತ ತಂಡದ ಅತ್ಯಂತ ಯಶಸ್ವಿ ನಾಯಕ ಗೌತಮ್‌ ಗಂಭೀರ್‌ 2018ರಲ್ಲಿ ಡೆಲ್ಲಿ ಡೆವಿಲ್ಸ್‌ ತಂಡದ ನಾಯಕರಾಗಿ ಸೇರಿಕೊಂಡರು. ಆದರೆ ಸ್ವತಃ ಗಂಭೀರ್‌ ಆರಂಭದ 6 ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 85 ರನ್‌ ಮಾತ್ರ. ಇದರಿಂದ ನೊಂದ ಅವರು ನಾಯಕತ್ವವನ್ನು ಶ್ರೇಯಸ್‌ ಐಯ್ಯರ್‌ಗೆ ನೀಡಿ ತಾವು ತಂಡದಿಂದಲೇ ಹೊರಗುಳಿದರು.

2019: ಅಜಿಂಕ್ಯ ರಹಾನೆಯಿಂದ ಸ್ಟೀವ್‌ ಸ್ಮಿತ್‌ಗೆ
ಈ ಬಾರಿ ಐಪಿಎಲ್‌ನ ಅತ್ಯಂತ ವಿಫ‌ಲ ತಂಡಗಳಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ 2ನೇ ಸ್ಥಾನ. ಮೊದಲ ಸ್ಥಾನ ಬೆಂಗಳೂರಿಗೆ. ರಾಜಸ್ಥಾನದ ಈ ವೈಫ‌ಲ್ಯದ ಪರಿಣಾಮ ಅಜಿಂಕ್ಯ ರಹಾನೆ ನಾಯಕತ್ವವನ್ನು ಕಳೆದುಕೊಂಡಿದ್ದಾರೆ. ಆ ಹೊಣೆಗಾರಿಕೆ ಈಗ ಆಸ್ಟ್ರೇಲಿಯದ ಸ್ಟೀವ್‌ ಸ್ಮಿತ್‌ಗೆ ಸಿಕ್ಕಿದೆ. ಆದರೂ ಈಗಾಗಲೇ ತಡವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next