Advertisement

ಚಿಂಚೋಳಿಯಲಿ ಈ ಸಲ ಮಿಂಚುವವರು ಯಾರು?

10:38 AM Apr 07, 2018 | |

ಕಲಬುರಗಿ: ಈ ಭಾಗದಿಂದ ಪ್ರಥಮ ಮುಖ್ಯಮಂತ್ರಿ ಅಭ್ಯರ್ಥಿ ನೀಡಿರುವ ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಈ ಸಲ ಚುನಾವಣೆ ಕಾವು ತೀವ್ರಗೊಳ್ಳುವ ಲಕ್ಷಣ ಕಂಡು ಬರುತ್ತಿದೆ. ಚಿಂಚೋಳಿ ಮೀಸಲು ಕ್ಷೇತ್ರದಲ್ಲೀಗ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

Advertisement

ಹಾಲಿ ಶಾಸಕ ಡಾ| ಉಮೇಶ ಜಾಧವ್‌ ಕಾಂಗ್ರೆಸ್‌ ಪಕ್ಷದಿಂದ ಪುನರಾಯ್ಕೆ ಬಯಸಿ ಚುನಾವಣಾ ಅಖಾಡಕ್ಕೆ ಧುಮುಕಿದ್ದು, ಬಿಜೆಪಿಯಲ್ಲಿ ಮಾಜಿ ಸಚಿವ ಸುನೀಲ ವಲ್ಲ್ಕಾಪುರೆ ಸೇರಿದಂತೆ ಇತರರ ನಡುವೆ ಕಾದಾಟ ನಡೆದಿದೆ. ಇನ್ನು ಜೆಡಿಎಸ್‌ ತನ್ನ ಅಭ್ಯರ್ಥಿಯನ್ನು ಪ್ರಕಟಿಸಿದ್ದು, ಸುಶೀಲಾಬಾಯಿ ಬಸವರಾಜ ಕೊರವಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ಹಾಲಿ ಶಾಸಕ ಡಾ| ಉಮೇಶ ಜಾಧವ್‌ ಈಗಾಗಲೇ ಕ್ಷೇತ್ರದಲ್ಲಿ ಬಿರುಸಿನ ಸಂಚಾರ ನಡೆಸಿದ್ದು, ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಮುಂದೆಯೂ ಮಾಡುವುದಾಗಿ ಹೇಳುತ್ತಿದ್ದರೆ ಮಾಜಿ ಸಚಿವ ವಲ್ಲಾಪುರೆ ಅವರು ತಮ್ಮದೇಯಾದ ಪಡೆ ರೂಪಿಸಿಕೊಂಡು ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಟಿಕೆಟ್‌ ಆಕಾಂಕ್ಷಿಗಳಾದ ಸಂಜೀವನ್‌ ಯಾಕಾಪುರ, ಸುಭಾಷ ರಾಠೊಡ ಇನ್ನಿತರರು ಕ್ಷೇತ್ರದಲ್ಲಿ ಸಂಚಾರ ನಡೆಸುತ್ತಿದ್ದಾರೆ. ಟಿಕೆಟ್‌ ಘೋಷಣೆ ನಂತರ ಜಿದ್ದಾಜಿದ್ದಿಗೆ ವೇದಿಕೆ ಶುರುವಾಗಲಿದೆ.

ಸಾಮಾನ್ಯ ಕ್ಷೇತ್ರವಾಗಿದ್ದ ಸಂದರ್ಭದಲ್ಲಿ ವೀರೇಂದ್ರ ಪಾಟೀಲ್‌, ವೈಜನಾಥ ಪಾಟೀಲ್‌ರಂತಹ ಆಯ್ಕೆಯಾಗಿದ್ದ
ಈ ಕ್ಷೇತ್ರವು ಕಳೆದ 2008ರಲ್ಲಿ ಪುನರ್‌ ವಿಂಗಡಣೆಗೊಂಡು ಮೀಸಲು ಕ್ಷೇತ್ರವಾದ ಮೇಲೆ ಬಿಜೆಪಿಯ ಸುನೀಲ ವಲ್ಲ್ಕಾಪುರೆ ಶಾಸಕರಾಗಿ ಚುನಾಯಿತರಾದರೆ ಕಳೆದ 2013ರಲ್ಲಿ ಡಾ| ಉಮೇಶ ಜಾಧವ್‌ ಆಯ್ಕೆಯಾದರು. ಚಿಂಚೋಳಿ ಕ್ಷೇತ್ರದಲ್ಲಿ 190976 ಮತದಾರರಿದ್ದು, ಇದರಲ್ಲಿ 97243 ಪುರುಷರು ಹಾಗೂ 93718 ಮಹಿಳೆಯರು ಸೇರಿದ್ದಾರೆ. ಚಿಂಚೋಳಿ ವಿಧಾನಸಭೆ ಕ್ಷೇತ್ರದ ಗೆಲ್ಲುವ ಶಾಸಕರ ಪಕ್ಷವೇ ಆಡಳಿತಕ್ಕೆ ಬರುತ್ತದೆ ಎಂಬುದು ಪ್ರಚಲಿತವಿದೆ. ಈ ಹಿಂದೆ ವೀರೇಂದ್ರ ಪಾಟೀಲ, ವೈಜನಾಥ ಪಾಟೀಲ, ಸುನೀಲ ವಲ್ಲಾಪುರೆ, ಪ್ರಸ್ತುತ ಡಾ| ಉಮೇಶ ಜಾಧವ ಸಾಕ್ಷಿಯಾಗಿದ್ದಾರೆ. 

ಕ್ಷೇತ್ರದ ಬೆಸ್ಟ್‌ ಏನು?
ಚಿಂಚೋಳಿ ತಾಲೂಕಿನ 55 ತಾಂಡಾಗಳು ಕಂದಾಯ ಗ್ರಾಮಗಳಾಗಿರುವುದು, ತಾಲೂಕಿನ ಅರಣ್ಯ ಪ್ರದೇಶ ಹುಮನಾಬಾದ ವಿಭಾಗಕ್ಕೆ ಸೇರಿದ್ದನ್ನು ಬದಲಾವಣೆಗೊಳಿಸಿ ಕಲಬುರಗಿ ವಿಭಾಗಕ್ಕೆ ಸೇರಿಸಿರುವುದು, ಒತ್ತುವರಿಯಾಗಿದ್ದ ಗಡಿ ಭಾಗ ತೆರವು ಸಂಬಂಧ ಜಂಟಿ ಸಮೀಕ್ಷಾ ವರದಿಗೆ ಕಾರ್ಯೋನ್ಮುಖಗೊಳ್ಳುವುದು, ಮುಲ್ಲಾಮಾರಿ ಕೆಳದಂಡೆ ಯೋಜನೆ ಸಾಕಾರಕ್ಕೆ 126 ಕೋಟಿ ರೂ. ನೀಡಿರುವುದು, 10 ಕೋಟಿ ರೂ. ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಾಣಗೊಳ್ಳುತ್ತಿರುವುದು ಉತ್ತಮ ಕೆಲಸಗಳೆನ್ನಬಹುದಾಗಿದೆ.

Advertisement

ಕ್ಷೇತ್ರದ ದೊಡ್ಡ ಸಮಸ್ಯೆ?
ಚಿಂಚೋಳಿ ತಾಲೂಕಿನ ವನ್ಯಜೀವಿ ಧಾಮ ಅಭಿವೃದ್ಧಿ ಕಾರ್ಯ ನಿಂತಲ್ಲೇ ನಿಂತಿದ್ದಲ್ಲದೇ ಈ ಕಾರ್ಯವನ್ನು ಸಂಪೂರ್ಣ
ಮರೆತಿರುವುದು, ನನೆಗುದಿಗೆ ಬಿದ್ದಿರುವ ಏಕೈಕ ಸಕ್ಕರೆ ಕಾರ್ಖಾನೆ ಆರಂಭಗೊಳ್ಳದೇ ಇರುವುದು ಜತೆಗೆ ಬಹು ಮುಖ್ಯವಾಗಿ ಮಕ್ಕಳ ಮಾರಾಟ ಬುಡ ಸಮೇತ ಕಿತ್ತು ಹೋಗದಿರುವುದು ದೊಡ್ಡ ಸಮಸ್ಯೆಗಳೆಂದು ಹೇಳಬಹುದು.

ಶಾಸಕರು ಏನಂತಾರೆ?
ಒತ್ತುವರಿಯಾಗಿದ್ದ ಗಡಿ ಭಾಗವನ್ನು ಸಮೀಕ್ಷೆ ಮಾಡಿಸಿರುವುದು, ತಾಂಡಾ ಕಂದಾಯ ಗ್ರಾಮಗಳನ್ನಾಗಿ ಮಾಡಿರುವುದು. ಅಣವಾರ- ಪೋಲಕಪಳ್ಳಿ ನಡುವೆ ಸೇತುವೆ ನಿರ್ಮಾಣ, ಮುಲ್ಲಾಮಾರಿ ಕೆಳದಂಡೆ ಯೋಜನೆ ಸಾಕಾರಕ್ಕೆ ಅಗತ್ಯ ಹಣ. ಅತಿ ಹೆಚ್ಚಿನ ಮನೆಗಳ ಹಂಚಿಕೆಯಲ್ಲಿ ಮೂರನೇ ಸ್ಥಾನ ಪಡೆದಿರುವುದು ಹೆಮ್ಮೆ ತರುವ ವಿಷಯ.
ಡಾ| ಉಮೇಶ ಜಾಧವ್‌

ಕ್ಷೇತ್ರ ಮಹಿಮೆ
ಗೊಟ್ಟಂಗೊಟ್ಟ ಬಕ್ಕಪ್ರಭು ದೇವಸ್ಥಾನ, ಮೊಗರಾಮಲಿಂಗೇಶ್ವರ ಐತಿಹಾಸಿಕ ದೇವಸ್ಥಾನ, ಮಿರಿಯಾಣ ಗಣೇಶನ ವಿಗ್ರಹ, ಕುಂಚಾವರಂ ಗಡಿಭಾಗದ ಎತ್ತಪೋತ ಜಲಧಾರೆ, ಪಂಚಲಿಂಗೇಶ್ವರ ಬುಗ್ಗಿ ಹಾಗೂ ಶ್ರೀ ವೆಂಕಟೇಶ್ವರ ದೇವಸ್ಥಾನ, ಕೊರವಿ ಗ್ರಾಮದ ಕೊರವಂಜೇಶ್ವರಿ ಬಾವಿಯಲ್ಲಿ ತೇಲುವ ಕೊಡಗಳು, ದೇಗಲಮಡಿ ಗ್ರಾಮದಲ್ಲಿರುವ ಜೈನ ಧರ್ಮದ ಐತಿಹಾಸಿಕ ಸಂಗಮೇಶ್ವರ ದೇವಸ್ಥಾನ, ಕೊಳ್ಳೂರ ಗ್ರಾಮದ ಪಾರ್ವತಿ-ಪರಮೇಶ್ವರ ದೇವಸ್ಥಾನ, ಚಂದ್ರಂಪಳ್ಳಿ ಪ್ರವಾಸಿ ತಾಣಗಳು.

ತಾಂಡಾಗಳ ಅಭಿವೃದ್ಧಿಗೆ ಮಾತ್ರ ಶಾಸಕರು ಹೆಚ್ಚಿನ ಒಲವು ತೋರಿದ್ದಾರೆ. ಇತರ ಪ್ರದೇಶಗಳಿಗೆ ಆದ್ಯತೆ ಮೇರೆಗೆ ಗಮನ ಕೊಟ್ಟಿಲ್ಲ. ಮುಖ್ಯವಾಗಿ ಶಾಸಕರ ಕಾರ್ಯದಲ್ಲಿ ಸಹೋದರ ಹಾಗೂ ಅಳಿಯನ ಹಸ್ತಕ್ಷೇಪ ಇರುವುದು ಸ್ವಲ್ಪ ಅಸಮಾಧಾನ ತರುವಂತಿದೆ. ಇನ್ನು ಮುಂದೆಯಾದರೂ ಈ ನಿಟ್ಟಿನಲ್ಲಿ ಶಾಸಕರು ಬದಲಾಗುವುದು ಅಗತ್ಯವಾಗಿದೆ. .
ವೀರನಗೌಡ ಪಾಟೀಲ, ಚೇಂಗಟಾ ಗ್ರಾವ

ಉದ್ಯೋಗ ಖಾತ್ರಿ ಯೋಜನೆ ಪರಿಣಾಮಕಾರಿಯಾಗಿ ಜಾರಿಗೆ ತರುವಲ್ಲಿ ಹಾಗೂ ಕೃಷಿ ಹೊಂಡಗಳ ನಿರ್ಮಾಣದಲ್ಲಿ
ಶಾಸಕರು ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ. ರಸ್ತೆಗಳು ಅಭಿವೃದ್ಧಿಯಾಗಿವೆಯಾದರೂ ಮತ್ತಷ್ಟು ಸುಧಾರಣೆಗೊಳ್ಳುವುದು ಅಗತ್ಯವಿದೆ. ಚಂದ್ರಂಪಳ್ಳಿ ಜಲಾಶಯ, ವನ್ಯಜೀವಿಧಾಮ ಅಭಿವೃದ್ಧಿಯಾದರೆ ಮತ್ತಷ್ಟು ಮೆರಗು ಬರುತ್ತದೆ. 
ಸಂಗಮೇಶ ಭಂಡಾರಿ, ಚಿಂಚೋಳಿ

ಚಿಂಚೋಳಿಯಲ್ಲಿ ಈಗ ರಸ್ತೆಗಳು ಪರವಾಗಿಲ್ಲ ಎನ್ನುವಂತೆ ಅಭಿವೃದ್ಧಿಯಾಗಿವೆ. ತಾಲೂಕಿನ ತಾಂಡಾಗಳು ಕಂದಾಯ
ಗ್ರಾಮಗಳಾಗಿರುವುದು, ಕೃಷಿ ಹೊಂಡಗಳು ಗಣನೀಯ ಪ್ರಮಾಣದಲ್ಲಿ ಆಗಿರುವುದು, ಗಂಗಾ ಕಲ್ಯಾಣ ಯೋಜನೆ ಸಹ
ಪರಿಣಾಮಕಾರಿ ಜಾರಿಗೆ ತಂದಿರುವುದು, ಹಲವು ಗ್ರಾಮಗಳಲ್ಲಿ ಸಿಸಿ ರಸ್ತೆಗಳಾಗಿರುವುದು ಉತ್ತಮ ಎನ್ನಬಹುದಾಗಿದೆ.
ಅಶೋಕ ಪಾಟೀಲ, ಹೊಸಳ್ಳಿ ಎಚ್‌. ಗ್ರಾಮ

ಮೂಲ ಸೌಲಭ್ಯಗಳಿಗೆ ಶಾಸಕರು ಆಸಕ್ತಿಯಿಂದ ಕಾರ್ಯ ನಿರ್ವಹಿಸಿದ್ದಾರೆ. ಅದೇ ರೀತಿ ಬಗೆಹರಿಯದ ಸಮಸ್ಯೆಗಳಿಗೆ ಗಮನ ಹರಿಸಿದರೆ ತಾಲೂಕು ಮತ್ತಷ್ಟು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿತ್ತು. ಆಡಳಿತ ನಿಲುವಿನಲ್ಲಿ ತಮ್ಮದೇ ಆದ ನಿಲುವು ತಳೆದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳಾಗುತ್ತಿದ್ದವು. ಆದರೂ ಪರವಾಗಿಲ್ಲ ಎನ್ನುವಂತೆ ಹಲವು ಸೌಲಭ್ಯ ಕಲ್ಪಿಸಿರುವುದು ಮೆಚ್ಚುವಂತಿದೆ.
ಸೋಮಶೇಖರ ಪಿ., ತೆಗಲತಿಪ್ಪಿ 

ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next