Advertisement

ಹೊರರೋಗಿಗಳನ್ನು ಕೇಳುವವರ್ಯಾರು?

06:40 AM Jul 07, 2020 | Lakshmi GovindaRaj |

ಬೆಂಗಳೂರು: ಸಮೀಕ್ಷೆಯೊಂದರ ಪ್ರಕಾರ ಎಲ್ಲೆಡೆ ಈಗ ಕೋವಿಡ್‌ 19 ವೈರಸ್‌ ಸೋಂಕಿತರಿಗಿಂತ ಕೋವಿಡ್‌ 19ಯೇತರ ರೋಗಿಗಳ ಸಾವು-ನೋವು ಹೆಚ್ಚಳವಾಗುತ್ತಿವೆ. ರಾಜಧಾನಿ ಬೆಂಗಳೂರು ಕೂಡ ಇದೇ ಹಾದಿಯತ್ತ ಸಾಗುತ್ತಿದೆಯೇ? ಇತ್ತೀಚೆಗೆ ಇತರೆ ರೋಗಿಗಳು ಪಡುತ್ತಿರುವ ಪಡಿಪಾಟಿಲು, ಈ ಬೆಳವಣಿಗೆಗಳ ಬಗ್ಗೆ ಆರೋಗ್ಯ ತಜ್ಞರಿಂದ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳು ಈ ಪ್ರಶ್ನೆಯತ್ತ ಬೊಟ್ಟು ಮಾಡುತ್ತಿವೆ!

Advertisement

ಒಂದೆಡೆ ನಗರದಲ್ಲಿ ಕೋವಿಡ್‌ 19 ವೈರಸ್‌ ಸೋಂಕು  ಪ್ರಕರಣಗಳು ತೀವ್ರವಾಗಿ ಹರಡುತ್ತಿದ್ದು, ಸೋಂಕಿತರು ಚಿಕಿತ್ಸೆಗಾಗಿ ಪರದಾಟ ನಡೆಸುತ್ತಿದ್ದಾರೆ. ಆದರೆ, ಇವರಿಗಿಂತಲೂ ಕೋವಿಡ್‌ 19ಯೇತರ ರೋಗಿಗಳ ಸ್ಥಿತಿ ಈಚೆಗೆ ಶೋಚನೀಯವಾಗುತ್ತಿದೆ. ಬಹುತೇಕ ಸರ್ಕಾರಿ ಆಸ್ಪತ್ರೆಗಳು ಕೋವಿಡ್‌ 19 ಸೋಂಕಿತರಿಗೇ ಆದ್ಯತೆ ನೀಡಿವೆ. ಹೀಗಾಗಿ,  ಖಾಸಗಿ ಆಸ್ಪತ್ರೆಗಳಿಗೆ ಕೋವಿಡ್‌ 19ಯೇತರ ರೋಗಿಗಳು ಚಿಕಿತ್ಸೆ ಪಡೆಯಲು/ ದಾಖಲಾಗಲು ಮುಂದಾದರೆ, ಕಡ್ಡಾಯವಾಗಿ ಕೋವಿಡ್‌ 19 ಸೋಂಕು ಪರೀಕ್ಷಾ ವರದಿ  ಸಲ್ಲಿಸುವಂತೆ ಅಲಿಖೀತ ನಿಯಮ ವಿಧಿಸಲಾಗಿದೆ.

ಇದರಿಂದ ಕೋವಿಡ್‌ 19 ಪೂರ್ವದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ಪಡೆಯುತ್ತಿದ್ದವರು, ಈಗ ಸೋಂಕು ಪರೀಕ್ಷೆಗೇ 2,200 ರೂ. ಪಾವತಿಸಬೇಕು. ಜತೆಗೆ  ವರದಿಗಾಗಿ ವಾರಗಟ್ಟಲೆ ಕಾಯಬೇಕು. ನಂತರವಷ್ಟೇ ಚಿಕಿತ್ಸೆ ಬಗ್ಗೆ ವಿಚಾರ ಎಂಬ ಸ್ಥಿತಿ ಇದೆ. ನಗರದ ರಾಜೀವ್‌ಗಾಂಧಿ ಎದೆರೋಗಳ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ, ಬೌರಿಂಗ್‌ ಮತ್ತು ಲೇಡಿ ಕರ್ಜನ್‌ ಆಸ್ಪತ್ರೆ, ಕೆ.ಸಿ. ಜನರಲ್‌ ಆಸ್ಪತ್ರೆ,  ಜಯನಗರ ಜನರಲ್‌ ಆಸ್ಪತ್ರೆ ಹಾಗೂ ಸಿ.ವಿ. ರಾಮನ್‌ ಸಾರ್ವಜನಿಕ ಆಸ್ಪತ್ರೆಯು ನಗರದ ಪ್ರಮುಖ ಆಸ್ಪತ್ರೆಗಳಾಗಿದ್ದು,

ಇಲ್ಲಿ ತಲಾ ನಿತ್ಯ ಸಾವಿರಕ್ಕೂ ಹೆಚ್ಚು ಮಂದಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಪೈಕಿ ವಿಕ್ಟೋರಿಯಾ ಆಸ್ಪತ್ರೆ  ಹೊರತುಪಡಿಸಿ ಬಹುತೇಕ ಆಸ್ಪತ್ರೆಯಲ್ಲಿ ಇತರೆ ರೋಗಿಗಳಿಗೆ ಶೇ. 40ರಷ್ಟು ಹಾಸಿಗೆಗಳನ್ನು ಮೀಸಲಿಡಲಾಗಿದೆ. ಆದರೆ, ಕೋವಿಡ್‌ 19 ಸೋಂಕಿತರ ಭಯದಿಂದ ಹಾಗೂ ಪ್ರತ್ಯೇಕ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಿಲ್ಲ ಎಂಬ ಕಾರಣಕ್ಕೆ ಕೋವಿಡ್‌  19ಯೇತರ ರೋಗಿಗಳು ಅಲ್ಲಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಅನಿವಾರ್ಯವಾಗಿ ಮಧ್ಯಮ ವರ್ಗದ ಖಾಸಗಿ ಆಸ್ಪತ್ರೆಗಳತ್ತ ತೆರಳುತ್ತಿದ್ದಾರೆ.

ಗೋಲ್ಡನ್‌ ಟೈಮ್‌ ವ್ಯರ್ಥ: ರೋಗಿಗಳು ಖಾಸಗಿ ಆಸ್ಪತ್ರೆಗೆ ತೆರಳಿದ ಸಂದರ್ಭ ದಲ್ಲಿ ಸೋಂಕು ತಗುಲಿರುವ ಅನುಮಾನದಿಂದ ಬಾಗಿಲಲ್ಲೇ ತಡೆದು ಸೋಂಕು ಪರೀಕ್ಷಾ ವರದಿ ಕೇಳಲಾಗುತ್ತಿದೆ. ತುರ್ತು ಚಿಕಿತ್ಸೆ ಇದ್ದರೆ ಪ್ರತ್ಯೇಕ  ಕೊಠಡಿಯಲ್ಲಿ ತಾತ್ಕಾಲಿಕ ಚಿಕಿತ್ಸೆ ನೀಡಲಾಗುತ್ತದೆ. ವರದಿ ಬಂದ ಬಳಿಕ ಹೆಚ್ಚುವರಿ ಚಿಕಿತ್ಸೆ ಕಲ್ಪಿಸಲಾಗುತ್ತದೆ. ಇನ್ನು ಪರೀಕ್ಷೆಗೊಳಪಡದವರ ತಾತ್ಕಾಲಿಕ ಚಿಕಿತ್ಸೆಗೆ ಪಿಪಿಇ ಕಿಟ್‌ ಧರಿಸುವ ಆಸ್ಪತ್ರೆ ಸಿಬ್ಬಂದಿ, ಅದರ ಸಂಪೂರ್ಣ  ವೆಚ್ಚವನ್ನು ರೋಗಿಗಳ ಮೇಲೆಯೇ ಹೇರುತ್ತಾರೆ.

Advertisement

ಇದರಿಂದ ವಯೋಸಹಜ ಕಾಯಿಲೆಗಳಿದ್ದ ಬಳಲುತ್ತಿರುವವರು ಮತ್ತು ಫಾಲೋಅಪ್‌ ಚಿಕಿತ್ಸೆ ಪಡೆಯುವವರು ಭಯದಿಂದ ಸರ್ಕಾರಿ ಆಸ್ಪತ್ರೆಗೂ ತೆರಳದೆ, ಸೋಂಕು ಪರೀಕ್ಷೆಗೆ ಹಣ  ವ್ಯಯಿಸದೆ ಮನೆ ಕಡೆ ಮುಖಮಾಡುತ್ತಿದ್ದಾರೆ. ಸಕಾಲದಲ್ಲಿ ಚಿಕಿತ್ಸೆ ಸಿಗದೆ ರೋಗಿಗಳು ಬದುಕುಳಿಸುವ ಗೋಲ್ಡನ್‌ ಟೈಮ್‌ ವ್ಯರ್ಥವಾಗುತ್ತಿದೆ.

ಟೆಲಿ ಮೆಡಿಸಿನ್‌ ಮೊರೆ: ನಿಮ್ಹಾನ್ಸ್‌ ಮತ್ತು ಜಯದೇವ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಮತ್ತು ರೋಗಿಗಳಲ್ಲೂ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಟೆಲಿ ಮೆಡಿಸಿನ್‌ ಮೊರೆಹೋಗಿವೆ. ನಿತ್ಯ ಸೀಮಿತ ಪ್ರಮಾಣದಲ್ಲಿ ಅಂದರೆ ನಿಮ್ಹಾನ್ಸ್‌ 200,  ಜಯದೇವ ಆಸ್ಪತ್ರೆ 400 ರೋಗಿಗಳಿಗೆ ಮಾತ್ರ ಹೊರರೋಗಿಗಳ ವಿಭಾಗದಲ್ಲಿ (ಓಪಿಡಿ) ಚಿಕಿತ್ಸೆ ನೀಡಲು ನಿರ್ಧರಿಸಿವೆ. ಇನ್ನು ಕಿದ್ವಾಯಿಯಲ್ಲಿ ಓಪಿಡಿ ಸೇವೆ ಮೂರು ದಿನಗಳು (ಜು. 7-9) ಬಂದ್‌ ಮಾಡಲಾಗಿದೆ. ತುರ್ತು ಚಿಕಿತ್ಸೆಗೆ ಬಂದಿರುವ ರೋಗಿಗಳಿಗೂ ಆಸ್ಪತ್ರೆಯಲ್ಲಿಯೇ ಸೋಂಕು ಪರೀಕ್ಷೆ ಕೈಗೊಂಡು ಒಂದು ದಿನದ ಬಳಿಕ ವರದಿ ಪಡೆದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ರ್ಯಾಪಿಡ್‌ ಪರೀಕ್ಷಾ ಪದ್ಧತಿ ಅಗತ್ಯ: ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ಬರುವ ರೋಗಿಗಳಿಗೆ ಕಡ್ಡಾಯ ಸೋಂಕು ಪರೀಕ್ಷೆಗೆ ಸೂಚಿಸಲುವ ಬದಲು ಸ್ವತಃ ಆಸ್ಪತ್ರೆಗಳೇ ಕೋವಿಡ್‌ 19 ರ್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆಗೆ ವ್ಯವಸ್ಥೆ ಅಳವಡಿಸಿಕೊಳ್ಳಬೇಕು ಎಂಬ ಕೂಗು ತಜ್ಞರಿಂದ ಕೇಳಿಬರುತ್ತಿದೆ. ನಗರದಲ್ಲಿ ಇಷ್ಟೆಲ್ಲ ಸಮಸ್ಯೆ ಆಗುತ್ತಿದೆ. ರೋಗಿಗಳನ್ನು ಅಲೆದಾಡಿಸುವ ಬದಲು ಆಸ್ಪತ್ರೆಗಳು ರ್ಯಾಪಿಡ್‌ (ಕ್ಷಿಪ್ರ) ಸೋಂಕು ಪರೀಕ್ಷಾ ವ್ಯವಸ್ಥೆ  ಅವಳವಡಿಸಿಕೊಳ್ಳಬಹುದು.

ಇದರಿಂದ ಸಮಯದ ಉಳಿತಾಯ ಜತೆಗೆ ಬಡ ರೋಗಿಗಳಿಗೆ ಆರ್ಥಿಕ ಹೊರೆ ತಗ್ಗಲಿದೆ. ಇಷ್ಟೇ ಅಲ್ಲ ರೋಗಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆತು ಬದುಕಿ ಉಳಿಯುವ ಸಾಧ್ಯತೆ ಹೆಚ್ಚಿರು ತ್ತದೆ ಎಂಬ ವಾದ  ಕೇಳಿಬರುತ್ತಿದೆ. ಈ ಕುರಿತು “ಉದಯವಾಣಿ’ಯೊಂದಿಗೆ ಮಾತನಾಡಿದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್‌, “ಜಾಗತಿಕ ಮಹಾಮಾರಿಯಂತಹ ಸಂದರ್ಭದಲ್ಲಿ ಎಲ್ಲಾ  ರೋಗಿಗಳಿಗೂ ಸರ್ಕಾರಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಸಾಧ್ಯವಾಗುವುದಿಲ್ಲ.

ಕೋವಿಡ್‌ 19ಯೇತರ ತುರ್ತು ಚಿಕಿತ್ಸೆ ಅಗತ್ಯವಿರುವವರು ಖಾಸಗಿ ಆಸ್ಪತ್ರೆಗಳತ್ತ ತೆರಳುತ್ತಿದ್ದಾರೆ. ಇಂತಹ ರೋಗಿಗಳ ಚಿಕಿತ್ಸೆಗೆ ನಿರಾಕರಿಸುವ ಬದಲು ಸ್ಥಳದಲ್ಲೇ  ಸೋಂಕು ಪರೀಕ್ಷೆಗೆ ವ್ಯವಸ್ಥೆ ಮಾಡಿಕೊಳ್ಳಬೇಕು. ರ್ಯಾಪಿಡ್‌ ಆ್ಯಂಟಿಜೆನ್‌ ಕೋವಿಡ್‌ 19 ಸೋಂಕು ಪರೀಕ್ಷೆಗೆ 400 ರೂ. ವೆಚ್ಚವಾಗುತ್ತದೆ. ಜತೆಗೆ 10ರಿಂದ 15 ನಿಮಿಷದಲ್ಲಿ ಫ‌ಲಿತಾಂಶ ಬರುತ್ತದೆ. ನಿಖರತೆ ಪ್ರಮಾಣ ಕೂಡ  ತೃಪ್ತಿಕರವಾಗಿದೆ ಎಂದು ಹೇಳಿದರು.

ಯಾರಿಗೆ ಹೆಚ್ಚು ಸಮಸ್ಯೆ?: ಹೃದ್ರೋಗ, ಕ್ಯಾನ್ಸರ್‌ ರೋಗಿಗಳು, ಮೂತ್ರಪಿಂಡ , ಯಕೃತ್‌, ಕೀಲುಮೂಳೆ, ರಕ್ತದೊತ್ತಡ, ಮಧುಮೇಹ, ಕ್ಷಯ, ಉಸಿರಾಟ, ಉದರ ಸಮಸ್ಯೆ ಹೊಂದಿದವರು, ಡಯಾಲಿಸಿಸ್‌, ಕಿಮೊ ಥೆರಪಿಗೆ  ಒಳಗಾಗುವವರು,  ಪಾರ್ಶ್ವವಾಯು, ಅಪಘಾತಕ್ಕಿಡಾದವರು, ತೀವ್ರ ಗ್ಯಾಸ್ಟ್ರಿಕ್‌ನಿಂದ ಬಳಲುತ್ತಿರುವವರು.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next