Advertisement

‘ಆಪರೇಷನ್‌’ಆರಂಭವೂ ಇಲ್ಲೇ, ಅಂತ್ಯವೂ ಇಲ್ಲೇ!

12:30 AM Feb 12, 2019 | |

ರಾಯಚೂರು: ಆಪರೇಷನ್‌ ಕಮಲಕ್ಕೂ ರಾಯಚೂರಿಗೂ ಅವಿನಾಭಾವ ನಂಟಿರು ವಂತಿದೆ. ಆಪರೇಷನ್‌ ಆರಂಭವಾದಾಗಲೂ ಕೇಳಿ ಬಂದಿದ್ದ ಹೆಸರು, ಕೊನೆ ವೇಳೆವರೆಗೂ ಕೇಳಿ ಬಂದಿದೆ. ಜಿಲ್ಲೆಯ ಶಾಸಕರ ನಿಗೂಢ ನಡೆಯಿಂದ ಜಿಲ್ಲೆಗೆ ಖ್ಯಾತಿ, ಅಪಖ್ಯಾತಿ ಎರಡೂ ದಕ್ಕುತ್ತಿರುವುದು ವಿಪರ್ಯಾಸ.

Advertisement

ಸರ್ಕಾರ ಅಸ್ಥಿರಗೊಳಿಸುವ ಪ್ರಹಸನದಲ್ಲಿ ಜಿಲ್ಲೆಯ ಹೆಸರು ಪದೇಪದೆ ಕೇಳಿ ಬಂದಿದೆ. ಆರಂಭದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಬಹುಮತ ಸಾಬೀತಿಗೆ ಮುಂದಾದಾಗ ಜಿಲ್ಲೆಯ ಮಸ್ಕಿ ಕ್ಷೇತ್ರದ ಶಾಸಕ ಪ್ರತಾಪ್‌ಗೌಡ ಪಾಟೀಲ ಆಪರೇಷನ್‌ಗೆ ತುತ್ತಾಗಿದ್ದಾರೆ ಎಂಬುದು ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಬಿಜೆಪಿ ಜತೆ ಅಷ್ಟು ಜನ ಶಾಸಕರಿದ್ದಾರೆ, ಇಷ್ಟು ಜನರಿದ್ದಾರೆಂಬ ಸುದ್ದಿ ಹರಿದಾಡಿತ್ತಾದರೂ ಬಯಲಾಗಿದ್ದ ಹೆಸರು ಪ್ರತಾಪಗೌಡ ಪಾಟೀಲರದ್ದು ಮಾತ್ರ. ಆದರೆ, ಆಪರೇಷನ್‌ ಫೇಲ್‌ ಆದ ಕಾರಣ ಕೊನೇ ಘಳಿಗೆಯಲ್ಲಿ ಸದನಕ್ಕೆ ಹಾಜರಾಗಿ ಅಚ್ಚರಿ ಮೂಡಿಸಿದ್ದರು.

ಬಳಿಕ ಸಂಪುಟ ವಿಸ್ತರಣೆ ವೇಳೆಯೂ ಜಿಲ್ಲೆಯ ಶಾಸಕರ ಭಿನ್ನ ನಡೆಯ ಗುಸುಗುಸು ಕೇಳಿ ಬರುತ್ತಿತ್ತು. ಕನಿಷ್ಠ ಪಕ್ಷ ನಿಗಮ ಮಂಡಳಿಯಾದರೂ ಸಿಗಲಿದೆಯಾ ಎಂಬ ನಿರೀಕ್ಷೆಯೊಂದಿಗೆ ಶಾಸಕರು ಆಪರೇಷನ್‌ ಅಸ್ತ್ರ ಪ್ರಯೋಗಿಸಿದರು ಎನ್ನಲಾಗುತ್ತಿದೆ. ಬಜೆಟ್ ಪೂರ್ವದಲ್ಲಿ ಬಿಜೆಪಿ ನಡೆಸಿದ ಬೃಹತ್‌ ಆಪರೇಷನ್‌ನಲ್ಲಿ ಮತ್ತದೇ ಪ್ರತಾಪಗೌಡ ಪಾಟೀಲ, ಗ್ರಾಮೀಣ ಶಾಸಕ ದದ್ದಲ್‌ ಬಸನಗೌಡ ಹೆಸರು ಕೇಳಿ ಬಂತು. ಬಜೆಟ್ ಅಧಿವೇಶನಕ್ಕೂ ಮುನ್ನ ಸತತ ನಾಲ್ಕು ದಿನ ಗ್ರಾಮೀಣ ಶಾಸಕ ಬಸನಗೌಡ ದದ್ದಲ್‌ ಮೊಬೈಲ್‌ ಸ್ವಿಚ್ಆಫ್‌ ಆಗಿತ್ತು. ಅಲ್ಲಿವರೆಗೂ ನಾನೆಲ್ಲೂ ಹೋಗುವುದಿಲ್ಲ ಎಂದಿದ್ದ ಅವರು ದಿಢೀರ್‌ ನಾಪತ್ತೆಯಾಗಿದ್ದು, ಸಹಜ ವಾಗಿಯೇ ಕಾಂಗ್ರೆಸ್‌, ಜೆಡಿಎಸ್‌ಗೆ ಆತಂಕ ಮೂಡಿಸಿತ್ತು. ಇನ್ನು ಪ್ರತಾಪಗೌಡರಿಗೆ 3 ಬಾರಿ ಗೆದ್ದರೂ ಸಚಿವ ಸ್ಥಾನ ಇರಲಿ ನಿಗಮ ಮಂಡಳಿಯೂ ನೀಡಲಿಲ್ಲ ಎಂಬ ಮುನಿಸಿತ್ತು. ಹೀಗಾಗಿ ಅವರು ಮಾನಸಿಕವಾಗಿ ಒಂದು ಹೆಜ್ಜೆ ಹೊರಗೆ ಇಟ್ಟಿದ್ದರು ಎನ್ನುತ್ತವೆ ಮೂಲಗಳು.

ಏಕಾಏಕಿ ನೇಮಕ: ಯಡಿಯೂರಪ್ಪ, ದೇವ ದುರ್ಗ ಪ್ರವಾಸಿ ಮಂದಿರದಲ್ಲಿ ತಂಗುವ ಸುದ್ದಿ ತಿಳಿಯುತ್ತಿದ್ದಂತೆ, ಇಬ್ಬರು ಅತೃಪ್ತ ಶಾಸಕರಿಗೆ ನಿಗಮ ಮಂಡಳಿ ಒಲಿದೇ ಬಿಟ್ಟಿತ್ತು. ಸಿಎಂ ಕುಮಾರಸ್ವಾಮಿ, ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ ಹೊರಡಿಸಿಯೇ ಬಿಟ್ಟಿದ್ದರು. ಇದರಿಂದ ಜಿಲ್ಲೆಗೆ 1 ಸಚಿವ ಸ್ಥಾನದ ಜತೆಗೆ 2 ನಿಗಮ ಮಂಡಳಿ ಭಾಗ್ಯ ಲಭಿಸಿತು. ಲಿಂಗಸುಗೂರು ಶಾಸಕರಿಗೆ ಸಂಸದೀಯ ಕಾರ್ಯದರ್ಶಿ ಹುದ್ದೆ ನೀಡಲಾಗಿತ್ತು. ಈಗ ದೇವದುರ್ಗದಲ್ಲಿ ನಡೆದ ಆಪರೇಷನ್‌ ಆಡಿಯೋ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ. ಇದರಿಂದ ಆಪರೇಷನ್‌ ಎಲ್ಲಿ ಶುರುವಾಗಿತ್ತೋ ಅದಕ್ಕೆ ತಾರ್ಕಿಕ ಅಂತ್ಯ ಸಿಕ್ಕಿದ್ದು ಅದೇ ರಾಯಚೂರು ಜಿಲ್ಲೆಯಲ್ಲಿ ಎನ್ನುವುದು ಕಾಕತಾಳಿಯ.

ಅಸ್ಥಿರ ನಡೆಯಿಂದ ಆತಂಕ
2018ರ ವಿಧಾನಸಭೆ ಚುನಾವಣೆಗೆ 3 ತಿಂಗಳಿರುವಾಗಲೇ ಜಿಲ್ಲೆಯ ಇಬ್ಬರು ಶಾಸಕರು ರಾಜೀನಾಮೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಬಹುಶಃ ಅದು ಕೂಡ ರಾಜ್ಯ ದಲ್ಲಿಯೇ ಮೊದಲ ಚುನಾವಣೋತ್ತರ ರಾಜಕೀಯ ಬೆಳವಣಿಗೆ ಆಗಿತ್ತು. ಜೆಡಿಎಸ್‌ ಶಾಸಕ ರಾದ ಡಾ| ಶಿವರಾಜ ಪಾಟೀಲ, ಮಾನಪ್ಪ ವಜ್ಜಲ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಇಬ್ಬರಿಗೂ ಟಿಕೆಟ್ ನೀಡಿದ್ದ ಬಿಜೆಪಿ ಒಂದು ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಜಿಲ್ಲೆಯ ಶಾಸಕರ ಅಸ್ಥಿರ ನಡೆಯಿಂದ ಪಕ್ಷಗಳಿಗೇ ಆತಂಕವಿದೆ. ಈ ಮುಂಚೆ ಮೊದಲ ಬಾರಿ ಜೆಡಿಎಸ್‌ನಿಂದ ಗೆಲುವು ಸಾಧಿಸಿದ್ದ ದೇವದುರ್ಗದ ಕೆ.ಶಿವನಗೌಡ ನಾಯಕ ಗಣಿಧಣಿಗಳ ಆಪರೇಷನ್‌ಗೆ ತುತ್ತಾಗಿ ಕೆಲವೇ ತಿಂಗಳಲ್ಲಿ ರಾಜೀನಾಮೆ ನೀಡಿದ್ದರು. ಬಳಿಕ ಬಿಜೆಪಿಯಿಂದ ಗೆಲುವು ಸಾಧಿಸಿದ್ದರು. ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ ಮೊದಲ ಬಾರಿ ಬಿಜೆಪಿಯಿಂದ ಗೆಲುವು ಸಾಧಿಸಿದ್ದರು, ಎರಡು ಬಾರಿ ಕಾಂಗ್ರೆಸ್‌ನಿಂದ ಗೆದ್ದಿದ್ದರು. ಈಗ ಮತ್ತೆ ಬಿಜೆಪಿಯತ್ತ ಒಲವು ತೋರಿದ್ದರು. ಮಾನಪ್ಪ ವಜ್ಜಲ್‌ ಕೂಡ ಬಿಜೆಪಿಯಿಂದ ಜೆಡಿಎಸ್‌ಗೆ ಸೇರಿ ಪುನಃ ಬಿಜೆಪಿಗೆ ಬಂದಿದ್ದರು. ಶಿವರಾಜ ಪಾಟೀಲ ಕೂಡ ಒಮ್ಮೆ ಜೆಡಿಎಸ್‌ನಿಂದ ಗೆದ್ದು ಎರಡನೇ ಬಾರಿಗೆ ಬಿಜೆಪಿಯಿಂದ ಗೆಲುವು ದಾಖಲಿಸಿದ್ದಾರೆ. ಹೀಗೆ ಶಾಸಕರ ಅಸ್ಥಿರ ನಡೆ ಆಯಾ ಪಕ್ಷಗಳಿಗೆ ಅಚ್ಚರಿ ಮೂಡಿಸುವಂತಿದೆ.
– ಸಿದ್ಧಯ್ಯಸ್ವಾಮಿ ಕುಕನೂರ

Advertisement
Advertisement

Udayavani is now on Telegram. Click here to join our channel and stay updated with the latest news.

Next