Advertisement

ನೂತನ ಪಾಲಿಕೆ ಸದಸ್ಯರ ಸಭೆಗೆ ಜಾಗವೆಲ್ಲಿ?

02:24 PM Aug 18, 2021 | Team Udayavani |

ಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆ ಭರಾಟೆ ಹೆಚ್ಚುತ್ತಿದೆ. 67 ಇದ್ದ ಪಾಲಿಕೆ ಸದಸ್ಯರ ಸಂಖ್ಯೆ 82ಕ್ಕೆ ಹೆಚ್ಚಿದೆ. ನೂತನವಾಗಿ ಆಯ್ಕೆಯಾಗಿ ಬರುವ ಸದಸ್ಯರು ಪಾಲಿಕೆ ಸಾಮಾನ್ಯ ಸಭೆ ನಡೆಸಲು ಸ್ಥಳಾವಕಾಶ ಎಲ್ಲಿ ಎಂಬ ಪ್ರಶ್ನೆ ಇದೀಗ ಪಾಲಿಕೆ ಅಧಿಕಾರಿಗಳು ಸೇರಿದಂತೆ ಅನೇಕರನ್ನು ಕಾಡತೊಡಗಿದೆ. ಇದ್ದ ಕಟ್ಟಡ ಸಾಲುತ್ತಿಲ್ಲ, ಹೊಸ ಕಟ್ಟಡ ನಿರ್ಮಾಣ ಪ್ರಸ್ತಾವನೆ ಅನುಷ್ಠಾನಗೊಂಡಿಲ್ಲ. ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದರೆ ಸಾಮಾನ್ಯ ಸಭೆಗಾಗಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲು ಪಾಲಿಕೆ ಸಜ್ಜಾಗುವ ಸ್ಥಿತಿ ಎದುರಾಗಿದೆ.

Advertisement

ಮಹಾನಗರ ಪಾಲಿಕೆಯ ಈಗಿನ ಸಭಾಭವನದಲ್ಲಿ 67 ಸದಸ್ಯರು ಕೂಡುವುದಕ್ಕೂ ಸ್ಥಳಾವಕಾಶ ಕೊರತೆ ಇದೆ. ಹೆಚ್ಚುವರಿಯಾಗಿ ಬರುವ 15 ನೂತನ ಸದಸ್ಯರಿಗೆ ಸ್ಥಳಾವಕಾಶ ಒದಗಿಸಿ ಕೊಡುವುದು ಎಲ್ಲಿಂದ ಎಂಬ ಚಿಂತೆ ಪಾಲಿಕೆ ಅಧಿಕಾರಿಗಳದ್ದಾಗಿದೆ. ಪಾಲಿಕೆ ಚುನಾವಣೆ
ಪ್ರಕ್ರಿಯೆ ಆರಂಭಗೊಂಡಿದ್ದು, ಸೆ. 6ಕ್ಕೆ ಫಲಿತಾಂಶ ಹೊರಬೀಳಲಿದೆ. ನಂತರದಲ್ಲಿ ಸರಕಾರ ಮಹಾಪೌರ-ಉಪಮಹಾಪೌರರ ಸ್ಥಾನಕ್ಕೆ
ಮೀಸಲಾತಿ ಘೋಷಣೆ ಮಾಡಿದರೆ ಆಯ್ಕೆಗೆ ಎಲ್ಲ ಸದಸ್ಯರ ಸಭೆ ನಡೆಸಬೇಕಾಗುತ್ತದೆ. ಈ ಸಭೆಗೆ ನೂತನ 82 ಸದಸ್ಯರು ಅಲ್ಲದೆ ಪಾಲಿಕೆ ವ್ಯಾಪ್ತಿಯ ವಿಧಾನಸಭೆ -ವಿಧಾನಪರಿಷತ್ತು ಸದಸ್ಯರು, ಸಂಸದರು ಪಾಲ್ಗೊಳ್ಳುತ್ತಾರೆ. ಇವರೆಲ್ಲರೂ ಸೇರಿದಂತೆ ಸುಮಾರು 90 ಜನ ಆಗಲಿದ್ದಾರೆ.

ಇವರೆಲ್ಲರಿಗೂ ಅವಕಾಶ ಕಲ್ಪಿಸಬೇಕಾದರೆ ಇದ್ದ ಕಟ್ಟಡ ಸಾಲದಾಗಿದ್ದು, ನಗರದಲ್ಲಿನ ಎರಡು ಸಭಾಭವನಗಳಲ್ಲಿ ಒಂದನ್ನು ತಾತ್ಕಾಲಿಕವಾಗಿ
ಪಾಲಿಕೆ ಸಾಮಾನ್ಯ ಸಭೆ ಸಭಾಭವನವನ್ನಾಗಿ ಪರಿವರ್ತಿಸಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ಇದನ್ನೂ ಓದಿ:ಸಾಧ್ಯವಿದ್ದಲ್ಲಿ ಆಫ್ ಲೈನ್ ತರಗತಿ ಆರಂಭಿಸಲು ಗೋವಾ ಸರ್ಕಾರ ಅನುಮತಿ..!

2012ರಲ್ಲಿಯೇ ಪ್ರಸ್ತಾವನೆ: ಈಗಾಗಲೇ ಸುಮಾರು 54ಕ್ಕೂ ಅಧಿಕ ಗ್ರಾಮಗಳನ್ನು ಒಡಲೊಳಗೆ ಹಾಕಿಕೊಂಡಿರುವ ಹು-ಧಾ ಮಹಾನಗರ
ಇದೀಗ ಇನ್ನಷ್ಟು ವಿಸ್ತರಣೆ ಕಂಡಿದೆ. ಇತ್ತೀಚೆಗೆ ನಡೆದ ವಾರ್ಡ್‌ ಪುನರ್‌ ವಿಂಗಡಣೆಯಿಂದಾಗಿ ಇದ್ದ 67 ವಾರ್ಡ್‌ಗಳು ಇದೀಗ 82 ಆಗಿವೆ.
ನಗರದ ಬೆಳವಣಿಗೆ, ವಾರ್ಡ್‌ ಪುನರ್‌ವಿಂಗಡಣೆ, ಪಾಲಿಕೆ ಸದಸ್ಯರ ಸಂಖ್ಯೆ ಹೆಚ್ಚಳ, ಇರುವ ಪಾಲಿಕೆ ಸಭಾಭವನ ಸಾಲದು ಎಂಬ ಕಾರಣಕ್ಕೇ
ಸುಮಾರು 100 ಜನ ಸದಸ್ಯರಿಗೆ ಸ್ಥಳಾವಕಾಶ ಕಲ್ಪಿಸಬಹುದಾದ ರೀತಿಯಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಬೇಕೆಂಬ ಚಿಂತನೆ ಅನೇಕ
ವರ್ಷಗಳಿಂದ ಇದೆ.

Advertisement

ಪಾಲಿಕೆ ನೂತನ ಸಭಾಭವನ ನಿರ್ಮಾಣ ಕುರಿತಾಗಿ ಸಾಮಾನ್ಯ ಸಭೆಯಲ್ಲಿ ಅನೇಕ ಬಾರಿ ಚರ್ಚೆಯಾಗಿದೆ, ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ನೂತನ ಕಟ್ಟಡ ನಿರ್ಮಾಣ ನಿಟ್ಟಿನಲ್ಲಿ 2012ರಲ್ಲಿಯೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. 2015ರಲ್ಲಿ ನೂತನ ಸಭಾಭವನದ ವಿನ್ಯಾಸ ರೂಪಿಸಿ ಅಂದಾಜು 14 ಕೋಟಿ ರೂ. ಅಂದಾಜು ವೆಚ್ಚದ ಯೋಜನೆ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿತ್ತು. ಅನುದಾನದ ಲಭ್ಯತೆ ಇಲ್ಲ ಎಂಬ ಕಾರಣಕ್ಕೆ ಕಳೆದ 9 ವರ್ಷಗಳಿಂದ ಪ್ರಸ್ತಾವನೆ ರೂಪದಲ್ಲಿಯೇ ಉಳಿಯುವಂತಾಗಿದೆ.

ಸ್ಮಾರ್ಟ್‌ಸಿಟಿ ಯೋಜನೆ ಅಡಿಯಲ್ಲಾದರೂ ಪಾಲಿಕೆ ನೂತನ ಸಭಾಭವನ ಕಟ್ಟಡ ಕೈಗೆತ್ತಿಕೊಳ್ಳಬೇಕೆಂಬ ಚಿಂತನೆ, ಚರ್ಚೆ ನಡೆಯಿತಾದರೂ ಅದೂ ಸಾಧ್ಯವಾಗಿಲ್ಲ. ಈಗಿನಿಂದಲೇ ಕಟ್ಟಡ ನಿರ್ಮಾಣಕ್ಕೆ ಮುಂದಾದರೂ ಪೂರ್ಣಕ್ಕೆ ಕನಿಷ್ಟ ಒಂದೆರಡು ವರ್ಷ ಬೇಕು. 2015ರಲ್ಲಿ ರೂಪಿಸಿದ್ದ 14 ಕೋಟಿ ರೂ. ಅಂದಾಜು ವೆಚ್ಚ ಇದೀಗ ದುಪ್ಪಟ್ಟಾಗಿದೆ. ಕಬ್ಬಿಣ ಇನ್ನಿತರ ಕಟ್ಟಡ ಸಾಮಗ್ರಿಗಳ ದರ ಹೆಚ್ಚಳವಾಗಿದೆ. ಇದರಿಂದ ಹೊಸ ಪ್ರಸ್ತಾವನೆ ಸಲ್ಲಿಸಬೇಕಾಗುತ್ತದೆ. ಸದ್ಯದ ಆರ್ಥಿಕ ಸ್ಥಿತಿಯಲ್ಲಿ ಪಾಲಿಕೆಗೆ ತನ್ನ ಸ್ವಂತ ವೆಚ್ಚದಲ್ಲಿ ಸಭಾಭವನ ನಿರ್ಮಾಣ ಸಾಧ್ಯವಿಲ್ಲವಾಗಿದ್ದು, ಸರಕಾರದ ಕಡೆ ಎದುರು ನೋಡಬೇಕಾಗಿದೆ.

ಸಭಾಭವನಗಳಲ್ಲಿ ಸಾಮಾನ್ಯ ಸಭೆ ನಡೆಸಲು ಚಿಂತನೆ
ಪಾಲಿಕೆ ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದು ನೂತನ ಮಹಾಪೌರ-ಉಪ ಮಹಾಪೌರರ ಆಯ್ಕೆ, ಸಾಮಾನ್ಯ ಸಭೆಗಳನ್ನು ನಡೆಸಲು ತಾತ್ಕಾಲಿಕವಾಗಿ ಹುಬ್ಬಳ್ಳಿಯ ಆದರ್ಶನಗರದಲ್ಲಿರುವ ಡಾ| ಡಿ.ಎಸ್‌. ಕರ್ಕಿ ಕನ್ನಡ ಭವನ ಇಲ್ಲವೇ ನ್ಯೂ ಕಾಟನ್‌ ಮಾರ್ಕೆಟ್‌ನಲ್ಲಿರುವ ಸಾಂಸ್ಕೃತಿಕ ಭವನವನ್ನು ಪಾಲಿಕೆ ಗುರುತಿಸಿದೆ ಎಂದು ಹೇಳಲಾಗುತ್ತಿದೆ.

ಎರಡರಲ್ಲಿ ಯಾವುದೊಂದನ್ನು ಆಯ್ಕೆ ಮಾಡಿದರೂ ಸಾಮಾನ್ಯ ಸಭೆಗೆ ತಕ್ಕದಾದ ರೀತಿಯಲ್ಲಿ ಒಂದಿಷ್ಟು ತಯಾರಿ ಕೈಗೊಳ್ಳಬೇಕಾಗುತ್ತದೆ. ಆಡಳಿತ ಹಾಗೂ ವಿಪಕ್ಷಗಳ ಸದಸ್ಯರಿಗೆ ಪ್ರತ್ಯೇಕ ಆಸನ, ಅಧಿಕಾರಿಗಳು, ಮಾಧ್ಯಮ, ಸಾರ್ವಜನಿಕರಿಗೆ ಆಸನ ವಿಭಾಗಿಸಬೇಕಾಗುತ್ತದೆ. ಎಲ್ಲ ಸದಸ್ಯರು ಮಾತನಾಡಲು ಧ್ವನಿವರ್ಧಕ ವ್ಯವಸ್ಥೆ ಮಾಡಬೇಕಾಗುತ್ತದೆ. ಸ್ಮಾರ್ಟ್‌ ಸಿಟಿ ಯೋಜನೆಯ ಕಂಟ್ರೊಲ್‌ ಆ್ಯಂಡ್‌ ಕಮಾಂಡ್‌ ರೂಂಗೆ ಈಗಾಗಲೇ ಸಾಂಸ್ಕೃತಿಕ ಭವನದ ಒಂದಿಷ್ಟು ಭಾಗ ಬಳಸಿಕೊಳ್ಳಲಾಗಿದೆ. ಸಾಮಾನ್ಯ ಸಭೆ ವೇಳೆ ಸಂಘ-ಸಂಸ್ಥೆಗಳವರು, ಸಂಘಟನೆ,
ಸಾರ್ವಜನಿಕರು ಪ್ರತಿಭಟನೆ, ಮೆರವಣಿಗೆಯಿಂದಾಗಿ ಇಲ್ಲಿನ ರಸ್ತೆಗಳು ಸದಾ ವಾಹನ ದಟ್ಟಣೆಯಿಂದ ಕೂಡಿರಲಿದ್ದು, ಸಂಚಾರಕ್ಕೆ ತೊಂದರೆ
ಆಗುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಸರಿಸುಮಾರು 170 ವರ್ಷಗಳ ಮುನ್ಸಿಪಲ್‌ ಆಳ್ವಿಕೆ ಇತಿಹಾಸ ಇರುವ, ಪಾಲಿಕೆ ಅಸ್ತಿತ್ವಕ್ಕೆ ಬಂದು ಆರು ದಶಕಗಳಾಗುತ್ತಿರುವ ಹು-ಧಾ ಮಹಾನಗರ ಪಾಲಿಕೆಗೆ ಸಮರ್ಪಕ ಸೌಲಭ್ಯದ ಸಭಾಭವನ ಇಲ್ಲವೆಂಬುದು ನೋವಿನ ಸಂಗತಿಯಾಗಿದೆ.

170 ವರ್ಷಗಳ ಮುನ್ಸಿಪಲ್‌ ಇತಿಹಾಸ
ಹುಬ್ಬಳ್ಳಿ ನಗರಸಭೆ 1855ರಲ್ಲಿ, ಧಾರವಾಡ ನಗರಸಭೆ 1856ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಮುಂದೆ 1962ರಲ್ಲಿ ಹುಬ್ಬಳ್ಳಿ-ಧಾರವಾಡ ಸೇರಿ ಮಹಾನಗರ ಪಾಲಿಕೆಯನ್ನಾಗಿ ಮಾಡಲಾಯಿತು. ಪಾಲಿಕೆ ಅಸ್ತಿತ್ವಕ್ಕೆ ಬಂದು ಸರಿಸುಮಾರು 59 ವರ್ಷಗಳಾಗಿವೆ. ಜನಸಂಖ್ಯೆ ಹಾಗೂ ಪ್ರದೇಶ
ದೃಷ್ಟಿಯಿಂದ ರಾಜ್ಯದಲ್ಲಿಯೇ ಎರಡನೇ ದೊಡ್ಡ ಮಹಾನಗರವಾಗಿದೆ. ಜನಸಂಖ್ಯೆ ಬೆಳವಣಿಗೆ ದರ ಶೇ.23ಕ್ಕಿಂತ ಹೆಚ್ಚಿದೆ. ದೇಶದ ಬೆಳವಣಿಗೆಯ ಹಾಟ್‌ಸ್ಪಾಟ್‌ 49 ನಗರಗಳಲ್ಲಿ ಹುಬ್ಬಳ್ಳಿ-ಧಾರವಾಡ ರಾಜ್ಯದ ಎರಡನೇ ಹಾಗೂ ದೇಶದ 22ನೇ ಸ್ಥಾನ ಪಡೆದಿದೆ. ತೀವ್ರತರ
ಬೆಳವಣಿಗೆ ಹೊಂದುವ ಮಹಾನಗರಗಳಲ್ಲಿ ಬೆಂಗಳೂರು, ಮಂಗಳೂರು ನಂತರದ ಸ್ಥಾನದಲ್ಲಿ ಹು-ಧಾ ಇದೆ.

ಸಿಎಂ ಬೊಮ್ಮಾಯಿ ವಿಶೇಷ ಕಾಳಜಿ
ತೋರಿದರೆ ಅಸಾಧ್ಯವೇನಲ್ಲ!
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯವರು. ಅವರು ಬಿಜೆಪಿ ಸೇರುವವರೆಗೂ ಹು-ಧಾ ಮಹಾನಗರ ಪಾಲಿಕೆಯಲ್ಲಿ ಯಾವುದೇ ಪಕ್ಷ ಅಧಿಕಾರ ಹಿಡಿಯಬೇಕಾದರೂ ಅವರ ಒಲವು-ಬೆಂಬಲ ಇಲ್ಲದೆ ಅಧಿಕಾರ ಅಸಾಧ್ಯ ಎನ್ನುವಂತಿತ್ತು. ಪಾಲಿಕೆ ಬಗೆಗಿನ ಅವರ ಒಲವು ಹೆಚ್ಚಿನದಾಗಿದೆ. ಮುಖ್ಯಮಂತ್ರಿಯವರು ಮನಸ್ಸು ಮಾಡಿ ವಿಶೇಷ ಕಾಳಜಿ ತೋರಿದರೆ ನೂತನ ಸಭಾಭವನ ಕಟ್ಟಡ ಕಷ್ಟಸಾಧ್ಯವೇನಲ್ಲ. ಮಾಜಿ ಸಿಎಂ ಜಗದೀಶ ಶೆಟ್ಟರ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಮುಖ್ಯಮಂತ್ರಿ ಮೇಲೆ ಒಂದಿಷ್ಟು ಒತ್ತಡ ಹಾಕಿದರೂ ಇದು ಸುಲಭವಾಗಲಿದೆ.

ಪಾಲಿಕೆ ಸಭಾಭವನ ನೂತನ ಕಟ್ಟಡ ಕುರಿತು 2015ರಲ್ಲಿ 14 ಕೋಟಿ ರೂ. ಅಂದಾಜು ವೆಚ್ಚದ ಪ್ರಸ್ತಾವನೆ ಸಲ್ಲಿಸಿರುವುದು, ನೂತನವಾಗಿ 82
ಸದಸ್ಯರಿಗೆ ಸಾಮಾನ್ಯ ಸಭೆ ನಡೆಸಲು ತಾತ್ಕಾಲಿಕ ವ್ಯವಸ್ಥೆ ಕುರಿತಾಗಿ ಪಾಲಿಕೆ ಆಯುಕ್ತರ ಗಮನಕ್ಕೆ ತಂದಿದ್ದೇನೆ. ಸದ್ಯದ ಸ್ಥಿತಿಯಲ್ಲಿ ತಾತ್ಕಾಲಿಕ ವ್ಯವಸ್ಥೆಯೊಂದೇ ನಮಗಿರುವ ಪರಿಹಾರ. ಕಟ್ಟಡ ಕುರಿತಾಗಿ ಸರಕಾರ ಮಟ್ಟದಲ್ಲಿ ನಿರ್ಧಾರ ಆಗಬೇಕಾಗಿದೆ.
-ವಿಜಯಕುಮಾರ,ಪಾಲಿಕೆ ಅಧಿಕಾರಿ

-ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next