Advertisement

ಧ್ಯಾನಕೆ ಕುಳಿತಾಗ ಗಂಡನ ಮರೆತರೆ..?

12:28 PM May 16, 2018 | |

ತಪಸ್ಸು, ಅಧ್ಯಯನ, ಅಧ್ಯಾಪನಗಳನ್ನೇ ಜೀವನವ್ರತವೆಂದು ಪಾಲಿಸುತ್ತಿದ್ದ ಋಷಿ- ಮುನಿಗಳ ಜೀವನಕ್ರಮ ಮತ್ತೂಂದು ಸೋಜಿಗವೆನಿಸಿತು.
ಭೌತಿಕ ಜಗತ್ತಿನಿಂದ ದೂರ ಇದ್ದು, ತಮ್ಮದೇ ಪಾರಮಾರ್ಥಿಕ ಜಗತ್ತನ್ನು ಕಟ್ಟಿಕೊಂಡು ಆನಂದದಿಂದ ಇರುವ  ಇವರನ್ನು ಇಲ್ಲಿ ಹಿಡಿದಿಟ್ಟ ಆ ಶಕ್ತಿಯಾದರೂ ಯಾವುದು? ಭೌತಿಕ ಸುಖಕ್ಕೆ ವಿರುದ್ಧವಾದ ಆ ಪಾರಮಾರ್ಥಿಕ ಸುಖದ ಸ್ವರೂಪವೇನು? ಅಧ್ಯಾತ್ಮಕ್ಕೆ ಅಷ್ಟು ಶಕ್ತಿಯಿಲ್ಲದೇ ಹೋಗಿದ್ದರೆ, ಕಗ್ಗಾಡಿನಲ್ಲಿ ಇವರನ್ನು ಕಟ್ಟಿಹಾಕಲು ಸಾಧ್ಯವಿತ್ತೇ?

Advertisement

ಅವರಿಗೆ ಮಾನವ ಸಹಜವಾದ ಬೇಸರ, ಮನೆ- ಮಡದಿ ಸಂಸಾರ ಮೋಹ ಯಾವುದೂ ಇಲ್ಲವೇ? ಇದ್ದರೆ ಅದನ್ನು ಯಾವ ಸ್ತರದಲ್ಲಿ ಇರಿಸಿಕೊಂಡಿದ್ದಾರೆ? ಅವರು ಜೀವನ ಪೂರ್ತಿ ಕಾಡಿನಲ್ಲಿ ಇರಲು ಹೇಗೆ ಸಾಧ್ಯ? ಇಲ್ಲಿ ತಪಸ್ವಿಗಳು ಮಾತ್ರವಲ್ಲ ತಾಪಸಿಯರು,  ತಾಪಸ ಕನ್ಯೆಯರೂ ಇರುತ್ತಾರಲ್ಲವೆ? ಸಂಸಾರದಲ್ಲಿದ್ದೂ ಅದನ್ನು ಮೀರಿ ನಿಂತ ಧೀರರಲ್ಲವೇ ಅವರು?  ವೇದಾಂತ ಹೇಳುವುದು ಸುಲಭ, ಅನುಷ್ಠಾನ ಕಷ್ಟವೆಂದು ಅಪ್ಪ ಹೇಳುತ್ತಿದ್ದ  ಮಾತು ನೆನಪಾಯಿತು.

ಹೌದಲ್ವಾ! ಅರಿವು- ಸಂಸ್ಕೃತಿ ಈ ಎರಡೂ  ಹುಟ್ಟಿದ್ದೇ ಕಾಡಿನಲ್ಲಿ. ಅದಕ್ಕೆ ಕಾರಣರು ಋಷಿಗಳು. ಹಾಗಾಗಿ ಋಷಿಸಂಸ್ಕೃತಿಯೇ ಮೂಲಸಂಸ್ಕೃತಿ. ಅದೇ ಜನಸಂಸ್ಕೃತಿ. ಕ್ರಮೇಣ ಇದು ರೂಪಾಂತರಗಳಲ್ಲಿ ವಿವಿಧ ಬಣ್ಣಪಡೆದು ಎಲ್ಲೆಡೆ ವ್ಯಾಪಿಸಿರಬೇಕು. ಅವರು, ಗುರುಕುಲ ಪದ್ಧತಿಯಂತಹ ಶ್ರೇಷ್ಠ ಶಿಕ್ಷಣ ಪದ್ಧತಿಯಡಿ ಸ್ವಾಧ್ಯಾಯ- ಪ್ರವಚನ ಪರಂಪರೆಯ ಹರಿಕಾರರಾದರು. ಆತ್ಮ ಕಲ್ಯಾಣದಲ್ಲಿ ಲೋಕ ಕಲ್ಯಾಣ, ಲೋಕ ಕಲ್ಯಾಣದಲ್ಲಿ ಆತ್ಮಕಲ್ಯಾಣ! ಚಿತ್ರಕೂಟದಲ್ಲಿ ಅಯೋಧ್ಯೆಯ ನೆನಪುಗಳು ಹೆಚ್ಚು ಕಾಡತೊಡಗಿದ್ದರಿಂದ ಅಲ್ಲಿಂದ  ದಂಡಕಾರಣ್ಯಕ್ಕೆ ಪ್ರವೇಶಿಸಿದೆವು.

ಮುಂದೆ ಹತ್ತು ವರ್ಷ ದಂಡಕಾರಣ್ಯದಲ್ಲಿ. ತದನಂತರ ಮಹರ್ಷಿ ಅಗಸ್ತರ ಸೂಚನೆಯಂತೆ ಪಂಚವಟಿಗೆ ತೆರಳಿದ್ದು. 10 ವರ್ಷಗಳ ದಂಡಕಾರಣ್ಯ ವಾಸ- ಜ್ಞಾನ ಸಂಪಾದನೆಗೂ, ಪಕೃತಿಯ ರಹಸ್ಯವರಿಯುವುದಕ್ಕೂ, ವಿಶೇಷ  ವನಸ್ಪತಿಗಳ ಪರಿಚಯ ಪಡೆಯುವುದಕ್ಕೂ ನನಗೆ ಅವಕಾಶ ಕಲ್ಪಿಸಿತು. ಯಾವುದೇ ಹೊಸ, ಗಿಡ, ಬಳ್ಳಿ, ಹಣ್ಣು- ಹಂಪಲು, ಪಕ್ಷಿ, ಪ್ರಾಣಿ  ಕಂಡರೆ ಅದರ ಬಗ್ಗೆ ರಾಮನಲ್ಲಿ ಕೇಳುತ್ತಿದ್ದೆ. ಅವನಿಗೆ ಗೊತ್ತಿಲ್ಲದ್ದನ್ನು ಲಕ್ಷ್ಮಣನ ಮೂಲಕ ಇಲ್ಲವೇ ಋಷಿಮುನಿಗಳ ಮೂಲಕ ತಿಳಿಯುತ್ತಿದ್ದೆ.

ಋಷ್ಯಾಶ್ರಮಗಳ ಪ್ರಶಾಂತ ವಾತಾವರಣ, ಕ್ರೂರಮೃಗಗಳು ವೈರಭಾವವಿಲ್ಲದೆ ಋಷಿಮುನಿಗಳೊಂದಿಗೆ ಸಹಜೀವನ ನಡೆಸುತ್ತಿದ್ದುದನ್ನು ಕಂಡರೆ ಅಚ್ಚರಿಯಾಗುತ್ತಿತ್ತು. ಇಲ್ಲಿ ಮನುಷ್ಯನಿಗೆ ಕಲಿಯಲು ಪ್ರಕೃತಿಯೇ ಒದಗಿಸಿದ ಎಷ್ಟೊಂದು ಪಾಠೊಪಕರಣಗಳಿವೆಯಲ್ಲವೇ! ಎನ್ನಿಸುತ್ತಿತ್ತು. ಪ್ರತಿದಿನ ಬ್ರಾಹ್ಮಿà ಮುಹೂರ್ತದಲ್ಲಿ ಏಳುತ್ತಿದ್ದೆ. ಯೋಗ, ಧ್ಯಾನ, ಜಪ ಬಿಡುತ್ತಿರಲಿಲ್ಲ. “ಧ್ಯಾನಕ್ಕೆ ಕುಳಿತರೆ ಪ್ರಪಂಚವನ್ನೇ ಮರೆತುಬಿಡುತ್ತೀಯಾ, ಮದುವೆ ಮಾಡಿಕೊಂಡು ಹೋದ ಮೇಲೆ ಗಂಡನನ್ನೂ ಹೀಗೆ ಮರೆತುಬಿಟ್ಟಿಯಾ?’

Advertisement

ಅಂತ ಅಮ್ಮ ಮದುವೆಗೆ ಮೊದಲು ತಮಾಷೆಯಾಗಿ ಎಚ್ಚರಿಸುತ್ತಿದ್ದುದನ್ನು ಒಮ್ಮೊಮ್ಮೆ ನೆನಪಿಸಿಕೊಂಡು ಒಳಗೇ ನಗುತ್ತೇನೆ. ಅಪ್ಪನಿಂದ ಸಿಕ್ಕಿದ ಈ ಅಂತರಂಗಸಂಸ್ಕಾರ ಕೊನೆಯ ಕಾಲದವರೆಗೂ ಗುಪ್ತಗಾಮಿನಿಯಾಗಿ ನನ್ನನ್ನು ಕಾಪಾಡಿತು. ಈ ಎಲ್ಲ ಮೆಲುಕುಗಳ ಸಹಿತ ಮುಂದೆ ಪಂಚವಟಿಗೆ ಬಂದಿಳಿದರೆ ಹೊಸಲೋಕಕ್ಕೆ ಬಂದ ಅನುಭವ. ಜೀವಮಾನ ಪೂರ್ತಿ ಉಳಿಯುವ ನೆನಪುಗಳನ್ನು ಉಡಿಯಲ್ಲಿ ತುಂಬಿ ಕೊಟ್ಟ ರಮ್ಯ ತಾಣವಿದು. ಉಷಃಕಾಲದಲ್ಲಿ ಗೋದೆಯಲ್ಲಿ ಮಿಂದು ಮುಡಿಯುಟ್ಟು ಪ್ರತಿದಿನ ಮಾಡುತ್ತಿದ್ದ ಸೂರ್ಯನಮನ.

ಲಕ್ಷ್ಮಣ ನಿರ್ಮಿಸಿದ್ದ ಕಲಾತ್ಮಕ ಪರ್ಣಶಾಲೆ. ಪ್ರಕೃತಿಮಾತೆ ತನ್ನ ವಿಶ್ರಾಂತಿಗೋಸ್ಕರ ನಿರ್ಮಿಸಿಕೊಂಡಿದೆಯೋ ಎಂಬಂತಿರುವ ಪಂಚವಟ ವೃಕ್ಷಗಳ ಚಪ್ಪರ. ದೂರದಲ್ಲಿ ಕಾಣುವ ಬೃಹತ್‌ ಕೋಡುಗಲ್ಲುಗುಡ್ಡ. ಅದರ ಪಕ್ಕದಲ್ಲಿಯೇ ಬೆಟ್ಟದ ಮೇಲೆ ಪ್ರಕೃತಿದೇವತೆ ನಿರ್ಮಿಸಿಟ್ಟ ಪುಟ್ಟ ಬಯಲು. ಬಹುಶಃ ಸ್ವರ್ಗವೂ ಬೇಸರವಾದಾಗ ದೇವತೆಗಳು ಬದಲಾವಣೆ ಬಯಸಿ ನೇರವಾಗಿ ಬಂದು ಉಳಿಯುವ ತಾಣವಿರಬೇಕು! ಕೋಗಿಲೆಗಳ ಕುಹೂ ಕುಹೂ. ಗಿಣಿಗಳ ಕೀಚ್‌ ಕೀಚ್‌. ನವಿಲುಗಳ ಕೇಕಾರವ.

ದುಂಬಿಗಳ ಜುಂಯ್‌, ಬಿತ್ತದೆ ಬೆಳೆದ ನವಣೆ, ಆರ್ಕ, ಭತ್ತ, ಗೋದಿ ಸಾಲುಬೆಳೆ. ಕಲ್ಲುಬಾಳೆ. ಎಲ್ಲೆಲ್ಲೂ ಹಸಿರು ಹೊದ್ದ ನೆಲ. ಬೆಳ್ಳಂಬೆಳಗ್ಗೆ ಹುಲ್ಲಿನ ಮೇಲೆ ಎರಕ ಹೊಯ್ದು ಪೋಣಿಸಿಟ್ಟ ನೀರಹನಿಗಳೆಂಬ ಮುತ್ತಿನ ಮಣಿಗಳು. ಮುಳ್ಳುಹಣ್ಣು, ನೇರಲೆ, ಪೇರಲೆ, ಪನಸ, ಕಾಡುಮಾನ  ಹಣ್ಣುಗಳು. ಹಿಪ್ಪಲಿಗಿಡಗಳ ಕಟು ವಾಸನೆ. ತಾವು ತಾವೇ ಮಾತಾಡಿಕೊಂಡು ಸ್ಥಳ ನಿಗದಿಮಾಡಿಕೊಂಡಿವೆಯೋ ಎಂಬಂತೆ ಹೂಬಿಟ್ಟ ವಿವಿಧ ಜಾತಿಯ ಗಿಡಗಳು. ಒಂದು ಹೂ ಕೀಳಲು ಹೋದರೆ ಮತ್ತೂಂದಕ್ಕೆ ಮುನಿಸು. ಅನತಿ ದೂರದಲ್ಲಿ  ಮರಿಗಳೊಂದಿಗೆ ಆಗಾಗ ಮಿಂಚಿ ಮಾಯವಾಗುವ ಚಿಗರೆ ಮರಿಗಳು.

ಪಂಚವಟಿಯ ಬೆಳಗು- ಬೈಗುಗಳ ಸೌಂದರ್ಯವಂತೂ ವರ್ಣಿಸಲಸದಳ. ಬಾಲಸೂರ್ಯ ದಿಗಂಗನೆಯರ ಮೊಗಗಳಿಗೆ ಗುಲಾಲು ಹಚ್ಚಿ ಓಕುಳಿಯಾಟ ಆಡುತ್ತಿರುವ ಚಂದ. ಉದಯವೂ ರಂಗು ಅಸ್ತಮಾನವೂ ರಂಗು. ಹಸಿರುಟ್ಟ ವನದೇವತೆ ಗೆಜ್ಜೆ ಕಟ್ಟಿ ಮೆಲ್ಲನೆ ಹೆಜ್ಜೆಹಾಕುತ್ತಾ, ನಂದನದ ಚೆಲುವನ್ನು ಚೆಲ್ಲುತ್ತಾ ನಾಟ್ಯವಾಡಲು ಬರುತ್ತಿರುವಂತೆ ಭಾಸವಾಗುತ್ತಿದ್ದ ಆ ದೃಶ್ಯ. ಇನ್ನು ಬೆಳದಿಂಗಳ ರಾತ್ರಿಯ ಸೊಬಗನ್ನು ನೀವೇ ಊಹಿಸಿಕೊಳ್ಳಿ. ನಾನು ಚಿಕ್ಕವಳಿದ್ದಾಗ ಅಮ್ಮ ಕೇಳಿದ ಒಂದು ಒಗಟು ನೆನಪಾಯಿತು.

“ಅಮ್ಮನ ಹಾಸಿಗೆ ಸುತ್ತಕ್ಕಾಗೋಲ್ಲ, ಅಪ್ಪನ ದುಡ್ಡು ಎಣಿಸೋಕೆ ಆಗಲ್ಲ… ಏನು ಹೇಳು ನೋಡೋಣ?’ ಎಂದರು. ಮಹಾಬುದ್ಧಿವಂತೆ ನಾನು… ಆಕಾಶ ನೋಡ್ತಾ “ಗೊತ್ತಾಗ್ಲಿಲ್ಲ’ ಅಂದೆ. “ಅಷ್ಟೂ ಗೊತ್ತಾಗ್ಲಿಲ್ವ ನೀನು ನೋಡ್ತಿದ್ದೀಯಲ್ಲಾ ಅದೇ’ ಅಂದ್ರು. ನಾನು ‘ಹೆಹೆಹೆ’ ಅಂದಿದ್ದೆ. ಇಂತಿರ್ಪ ಪಂಚವಟಿಯಲ್ಲಿ… ವನವಾಸದ ಪೂರ್ಣ ದಿನಗಳನ್ನು ಕಳೆಯುವ ಅದೃಷ್ಟ ನನಗಿರಲಿಲ್ಲ. ಇಲ್ಲೆಲ್ಲೋ ಅವಿತು ವಿಧಿ, ನನ್ನ ಮುಂದಿನ ಬದುಕಿನ ದುರಂತಕ್ಕೆ ಮುನ್ನುಡಿ ಬರೆಯಲು ಹೊಂಚು ಹಾಕುತ್ತಿದ್ದುದು ನನಗೆ ಹೇಗೆ ಗೊತ್ತಾಗಬೇಕು?

* ಸಿ.ಎ. ಭಾಸ್ಕರ ಭಟ್ಟ

Advertisement

Udayavani is now on Telegram. Click here to join our channel and stay updated with the latest news.

Next