Advertisement

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

06:02 PM Apr 19, 2023 | Team Udayavani |

ಒಂದು ಕಾಲದಲ್ಲಿ ಬಸವರಾಜ ಬೊಮ್ಮಾಯಿ ಜನತಾ ದಳ(ಯು)ದಲ್ಲಿದ್ದರು. 1998, 2004ರಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 2008ರಲ್ಲಿ ಬೊಮ್ಮಾಯಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಲಿಂಗಾಯತ ಮುಖಂಡರಾಗಿದ್ದ ಜಗದೀಶ್‌ ಶೆಟ್ಟರ್‌ ಮೂಲತಃ ಜನಸಂಘದ ಮುಖಂಡರಾಗಿದ್ದು, ಬಿಜೆಪಿ ಹುರಿಯಾಳಾಗಿದ್ದವರು. ಪ್ರಸ್ತುತ ಆಡಳಿತಾರೂಢ ಬಿಜೆಪಿಯಲ್ಲಿ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದರು. 2012ರಲ್ಲಿ ಮುಖ್ಯಮಂತ್ರಿಯಾಗಿದ್ದ ಶೆಟ್ಟರ್‌ 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಮರಳಿ ಅಧಿಕಾರದ ಗದ್ದುಗೆ ತರುವಲ್ಲಿ ವಿಫಲರಾಗಿದ್ದರು.

Advertisement

ಸಾಕಷ್ಟು ರಾಜಕೀಯ ವಿಪ್ಲವಗಳ ನಂತರ 2023ರ ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಈ ಸಂದರ್ಭದಲ್ಲಿ ಜಗದೀಶ್‌ ಶೆಟ್ಟರ್‌ ಗೆ ಬಿಜೆಪಿ ಟಿಕೆಟ್‌ ನಿರಾಕರಿಸಿದ ಪರಿಣಾಮ, ಕಮಲ ಪಾಳಯದಿಂದ ಜಿಗಿದು ಕಾಂಗ್ರೆಸ್‌ ತೆಕ್ಕೆಗೆ ಸೇರ್ಪಡೆಗೊಂಡಿದ್ದಾರೆ.

ಮೂಲ ಆರ್‌ ಎಸ್‌ ಎಸ್‌ ಹಾಗೂ ಜನಸಂಘದ ಮುಖಂಡರಾಗಿದ್ದ ಜಗದೀಶ್‌ ಶೆಟ್ಟರ್‌, ಕಟ್ಟಾ ಬಿಜೆಪಿಗರಾಗಿದ್ದರು. ಅವರ ತಂದೆ ಶಿವಪ್ಪ ಶೆಟ್ಟರ್‌ ಕೂಡಾ ಜನಸಂಘದ ಭಾಗವಾಗಿದ್ದರು. 1990ರ ಹುಬ್ಬಳ್ಳಿ ಈದ್ಗಾ ಮೈದಾನ ವಿವಾದದ ಸಂದರ್ಭದಲ್ಲಿ ಜಗದೀಶ್‌ ಶೆಟ್ಟರ್‌ ಮುಂಚೂಣಿಗೆ ಬಂದ ನಂತರ ರಾಜಕೀಯ ಕ್ಷೇತ್ರದಲ್ಲಿ ಜನಪ್ರಿಯ ಜನಪ್ರತಿನಿಧಿಯಾಗಿ ಹೊರಹೊಮ್ಮಿದ್ದು ಇತಿಹಾಸ.

ಈದ್ಗಾ, ಹಿಂದುತ್ವ ಮತ್ತು ಬಿಜೆಪಿ:

1992ರ ಸಂದರ್ಭದಲ್ಲಿ ಬಿಜೆಪಿ ಸೇರಿದಂತೆ ಬಲಪಂಥೀಯ ಸಂಘಟನೆಗಳು ಪ್ರಜಾಪ್ರಭುತ್ವ ದಿನಾಚರಣೆ ಸಂದರ್ಭದಲ್ಲಿ ರಾಷ್ಟ್ರ ಧ್ವಜ ಹಾರಿಸಲು ನಿರ್ಧರಿಸಿದ್ದವು. ಆದರೆ ಈ ಸಂದರ್ಭದಲ್ಲಿ ರಾಷ್ಟ್ರಧ್ವಜ ಹಾರಿಸಲು ಅಂಜುಮಾನ್‌ ಇ ಇಸ್ಲಾಮ್‌ ಅನುಮತಿ ನಿರಾಕರಿಸಿತ್ತು. ಏತನ್ಮಧ್ಯೆ ನಿಷೇಧಾಜ್ಞೆಯ ನಡುವೆಯೂ ರಾಷ್ಟ್ರಧ್ವಜ ಹಾರಿಸಲಾಗಿತ್ತು. ನಂತರ ಪೊಲೀಸರು ಅದನ್ನು ತೆರವುಗೊಳಿಸಿದ್ದರು. ನಂತರ ಸ್ವಾತಂತ್ರ್ಯ ದಿನಾಚರಣೆ ವೇಳೆ ರಾಷ್ಟ್ರಧ್ವಜ ಹಾರಿಸಲು ಯತ್ನಿಸಿದ ಉಮಾ ಭಾರತಿ ಹಾಗೂ ಇತರ ಮುಖಂಡರನ್ನು ಪೊಲೀಸರು ಬಂಧಿಸಿದ್ದರು. ಇದರ ಪರಿಣಾಮ ಗಲಭೆ ಹೊತ್ತಿಕೊಂಡಿತ್ತು.

Advertisement

ಕರ್ನಾಟಕದಲ್ಲಿ ಬಿಜೆಪಿ ಬೆಳವಣಿಗೆ ಕಾಣುವಲ್ಲಿ ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದ ಪ್ರಮುಖ ಘಟನೆಗಳಲ್ಲಿ ಒಂದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ತದನಂತರ ಕೆಲವು ಚುನಾವಣೆಗಳಲ್ಲಿ ಈದ್ಗಾ ವಿವಾದ ರಾಜಕಾರಣಿಗಳ ಪ್ರಮುಖ ಅಸ್ತ್ರವಾಗಿ ಪರಿಗಣಿಸಲ್ಪಟ್ಟಿತ್ತು.

ಚುನಾವಣಾ ಅಖಾಡಕ್ಕಿಳಿದ ಶೆಟ್ಟರ್:‌

ಈದ್ಗಾ ವಿವಾದದ ಕಿಚ್ಚು ಮುಂದುವರಿದ ಚಟುವಟಿಕೆಯ ನಡುವೆಯೇ 1994ರಲ್ಲಿ ಜಗದೀಶ್‌ ಶೆಟ್ಟರ್‌ ಅವರು ಹುಬ್ಬಳ್ಳಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಸ್ಪರ್ಧಿಸಿದ್ದರು. ಈ ಸಂದರ್ಭದಲ್ಲಿ ಇವರ ಪ್ರತಿಸ್ಪರ್ಧಿಯಾಗಿ ಅಖಾಡಕ್ಕಿಳಿದಿದ್ದು ಜನತಾ ದಳದ ಬಸವರಾಜ ಬೊಮ್ಮಾಯಿ. ಜಿದ್ದಾಜಿದ್ದಿನ ಕಣದಲ್ಲಿ ಜಗದೀಶ್‌ ಶೆಟ್ಟರ್‌ ಅವರು ಬೊಮ್ಮಾಯಿ ಅವರನ್ನು 16,000 ಮತಗಳ ಅಂತರದಿಂದ ಪರಾಜಯಗೊಳಿಸಿ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶಿಸಿದ್ದರು.

ಬಸವರಾಜ ಬೊಮ್ಮಾಯಿ ಕೂಡಾ ರಾಜಕೀಯ ಕುಟುಂಬದಲ್ಲಿ ಜನಿಸಿದವರು. ಅವರ ತಂದೆ ಎಸ್‌ ಆರ್‌ ಬೊಮ್ಮಾಯಿ 1980ರ ದಶಕದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. 2021ರ ಜುಲೈ 28ರಂದು ಬಿಎಸ್‌ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಆಗಿ ಆಯ್ಕೆ ಮಾಡಲಾಯ್ತು. ಅಧಿಕಾರ ಸ್ವೀಕರಿಸಿದ ನಂತರ ಬೊಮ್ಮಾಯಿ ಅವರು ಸಚಿವ ಸಂಪುಟ ವಿಸ್ತರಣೆಗೆ ಮುಂದಾದ ಸಂದರ್ಭದಲ್ಲಿ ಹಿರಿಯ ಬಿಜೆಪಿ ಮುಖಂಡ ಜಗದೀಶ್‌ ಶೆಟ್ಟರ್‌ ಸಚಿವ ಸಂಪುಟ ಸೇರುತ್ತಾರೆಂಬ ನಿರೀಕ್ಷೆ ಇತ್ತು. ಶೆಟ್ಟರ್‌ ಅವರು ಬಿ.ಎಸ್.ಯಡಿಯೂರಪ್ಪ ಅವರ ಸಂಪುಟದಲ್ಲಿ ಸಚಿವರಾಗಿದ್ದರು. ಆದರೆ ತಾನು ಮುಖ್ಯಮಂತ್ರಿಯಾಗಿದ್ದವ, ಹಾಗಾಗಿ ತನಗಿಂತ ಕಿರಿಯ ವ್ಯಕ್ತಿಯ (ಬೊಮ್ಮಾಯಿ) ಸಂಪುಟದಲ್ಲಿ ಸೇರ್ಪಡೆಗೊಳ್ಳಲಾರೆ ಎಂದು ಅಸಮಾಧಾನ ಹೊರಹಾಕಿದ್ದರು. ಇದರೊಂದಿಗೆ ಶೆಟ್ಟರ್‌ ಅವರು ತಾನು ಬೊಮ್ಮಾಯಿಗಿಂತ ಹಿರಿಯ ಮುಖಂಡ ಎಂಬ ಸಂದೇಶವನ್ನು ರವಾನಿಸಿದ್ದರು. ಈ ಮುಸುಕಿನ ಗುದ್ದಾಟದ ಬೆಳವಣಿಗೆಯ ಮುಂದುವರಿದ ಪರಿಣಾಮ ಶೆಟ್ಟರ್‌ ರಾಜಕೀಯ ಪಯಣದ ಹಾದಿ ಮತ್ತೊಂದು ಮಗ್ಗುಲಿಗೆ ಮರಳುವಂತೆ ಮಾಡಿರುವುದಾಗಿ ವಿಶ್ಲೇಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next