ಮರವಂತೆ (ಉಪ್ಪುಂದ): ದೇವರಿಗೆ ಆಭರಣಗಳನ್ನು ಶೃಂಗರಿಸಿದಾಗ ಶಕ್ತಿ ಹೆಚ್ಚುವುದಿಲ್ಲ. ಅದು ನಮಗಿರುವ ಅರ್ಪಣಾ ಮನೋಭಾವನೆಯನ್ನು ತೋರಿಸುತ್ತದೆ. ಯಾವುದೇ ವಸ್ತುಗಳಿಂದ ಏನನ್ನೂ ಮಾಡಲಾಗದು ಅಂದ ಮೇಲೆ ಆತನಿಗೆ ಪ್ರಭಾವಳಿ ಬೇಕಾಗಿರುವುದಿಲ್ಲ. ಶ್ರೀರಾಮನ ಶಕ್ತಿ ಅನಂತವಾದುದು. ಆತನ ನಾಮ ಸ್ಮರಣೆಯಿಂದ ಶ್ರದ್ಧಾ, ಭಕ್ತಿ ಇನ್ನಷ್ಟು ಪ್ರಕಾಶಿಸುತ್ತದೆ ಎಂದು ಶ್ರೀಸಂಸ್ಥಾನ ಗೋಕರ್ಣ ಶ್ರೀ ರಾಮಚಂದ್ರಾಪುರ ಮಠ ಹೊಸನಗರ ಶ್ರೀಮತ್ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಅವರು ನಾಗೂರು ಗಂಗೆಬೈಲು ಶ್ರೀ ರಾಮಭಜನಾ ಮಂದಿರದ 25ನೇ ವಾರ್ಷಿಕೋತ್ಸವ ಹಾಗೂ ಹೈಗಳಿ, ಶ್ರೀನಾಗದೇವರ ದ್ವಿತೀಯ ವರ್ಷದ ಪ್ರತಿಷ್ಠಾವರ್ಧಂತಿ ಉತ್ಸವದಲ್ಲಿ ಮಾ. 13ರಂದು ಸಂಜೆ ಆಶೀರ್ವಚನ ನೀಡಿ ಮಾತನಾಡಿದರು.
ದೇವರಿಗೆ ಆರತಿ ಮಾಡುವುದು ನಮ್ಮೊಳಗಿನ ಅಂಧಕಾರ ತೊಲಗಿಸಿ ಬೆಳಕು ಮೂಡಿಸುವ ಪ್ರತೀಕವಾಗಿದೆ. ಜೀವನದಲ್ಲಿ ಶ್ರೀರಾಮನ ತಣ್ತೀಗಳನ್ನು, ಉದಾರ ಮನೋಭಾವನೆಗಳನ್ನು ಅಳವಡಿಸಿಕೊಂಡಾಗ ಜೀವನ ಆರಾಮ ವಾಗಿರುತ್ತದೆ ಎಂದು ತಿಳಿಸಿದರು.
ಈ ಸಂದರ್ಭ ಶ್ರೀರಾಮ ದೇವರಿಗೆ ಗಂಗೆಬೈಲು ಗೌರಜ್ಜಿಮನೆ ಮುತ್ತು ಇವರು ನೀಡಿರುವ ರಜತ ಮುಖವಾಡ ಮತ್ತು ಪ್ರಭಾವಳಿ ಸಮರ್ಪಣೆಯನ್ನು ಶ್ರೀಸ್ವಾಮಿಗಳು ನೆರವೇರಿಸಿದರು.ಪುಣೆ ಉದ್ಯಮಿ ಗಂಗೆಬೈಲು ಗೋಪಾಲ ಖಾರ್ವಿ ಸ್ವಾಗತ ಗೋಪುರವನ್ನು ನೀಡಿದರು. ಮಂಜುನಾಥ ಖಾರ್ವಿ ಸ್ವಾಗತಿಸಿದರು. ಗೋವಿಂದ ಖಾರ್ವಿ ಕಾರ್ಯಕ್ರಮವನ್ನು ನಿರ್ವಹಿಸಿದರು.