ವಿಜಯಪುರ: “ಸಚಿವ ಸ್ಥಾನಕ್ಕಾಗಿ ನಾನಂತೂ ಲಾಬಿ ಮಾಡುವುದಿಲ್ಲ. ಆದರೆ, ಪಕ್ಷ ಕಟ್ಟುವಲ್ಲಿ ಹೆಚ್ಚಿನ ಶ್ರಮ ವಹಿಸಿರುವ ಶ್ರೀರಾಮುಲು ಅವರಿಗೆ ಉಪ ಮುಖ್ಯ ಮಂತ್ರಿ ಸ್ಥಾನ ನೀಡಿದಲ್ಲಿ ತಪ್ಪೇನಿಲ್ಲ. ನನ್ನನ್ನು ಡಿಸಿಎಂ ಮಾಡಿ ಎಂದು ಶ್ರೀರಾಮುಲು ಎಲ್ಲಿಯೂ ಹೇಳಿಲ್ಲ, ಬದಲಾಗಿ ಅವರ ಅಭಿ ಮಾನಿಗಳು ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ತಪ್ಪಿಲ್ಲ’ ಎಂದು ವಿಜಯಪುರನಗರ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಹೇಳಿದರು.
ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿ, ಉಪ ಮುಖ್ಯ ಮಂತ್ರಿ ಸ್ಥಾನಗಳು ಹೆಚ್ಚಿದಂತೆ ಅದರ ಗೌರವ ಕುಗ್ಗುತ್ತದೆ. ಆದರೆ, ಪಕ್ಷದ ನಿರ್ಧಾರಕ್ಕೆ ಎಲ್ಲರೂ ತಲೆ ಬಾಗಲೇಬೇಕು. ರಾಜ್ಯದಲ್ಲಿ ಪಕ್ಷದ ಸರ್ಕಾರ ಅಧಿಕಾರದಲ್ಲಿ ರುವುದು ಮುಖ್ಯವೇ ಹೊರತು ನಾನು ಸಚಿವನಾಗಲಿಲ್ಲ ಎಂಬುದಲ್ಲ. ವಾಜಪೇಯಿ ಯವರು ತಾವಾಗಿಯೇ ನನ್ನನ್ನು ಕರೆದು ಕೇಂದ್ರದಲ್ಲಿ ಸಚಿವ ಸ್ಥಾನ ನೀಡಿದ್ದರು. ಈಗಲೂ ಪಕ್ಷವೇ ನನ್ನ ಸೇವೆಯನ್ನು ಪರಿಗಣಿಸಿ ಸಚಿವ ಸ್ಥಾನ ನೀಡಬೇಕೇ ಹೊರತು ನಾನು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುವುದಿಲ್ಲ ಎಂದರು.
“ಯತ್ನಾಳ ಫಾರ್ ಮಿನಿಸ್ಟರ್’ ಎಂದು ನನ್ನ ಬೆಂಬಲಿಗರು ಅಭಿಯಾನ ಆರಂಭಿಸಿ ದ್ದು ಸರಿಯಲ್ಲ. ಅಧಿಕಾರಕ್ಕಾಗಿ ಹಿಂದೆ ಕುಳಿತು ಆಟ ಆಡುವ ರಾಜಕಾರಣಿ ನಾನಲ್ಲ. ಅಭಿಮಾನಿ, ಬೆಂಬಲಿಗರನ್ನು ಮುಂದೆ ಬಿಟ್ಟು ಒತ್ತಡ ಹಾಕುವ ಕೆಲಸ ಮಾಡುವುದಿಲ್ಲ. ನನಗೆ ಸಚಿವ ಸ್ಥಾನ ಬೇಕು ಎನ್ನುವುದಕ್ಕಿಂತ ಉತ್ತರ ಕರ್ನಾಟಕದ ಅಭಿವೃದ್ಧಿ ಮುಖ್ಯ. ನಾನು ಒಬ್ಬ ಮಂತ್ರಿ ಆದರೇ ಜಿಲ್ಲೆ ಉದ್ಧಾರವಾಗಲ್ಲ. ನನ್ನ ತವರು ಜಿಲ್ಲೆ ವಿಜಯಪುರಕ್ಕೆ ಸಚಿವ ಸ್ಥಾನಕ್ಕಿಂತ ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ಬೇಕಿದೆ. ಉತ್ತರ ಕರ್ನಾಟಕದಲ್ಲಿ ಅರ್ಧಕ್ಕೆ ನಿಂತಿರುವ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಈ ಭಾಗದ ಸಮಗ್ರ ಅಭಿವೃದ್ಧಿ ಆಗಬೇಕಿದೆ ಎಂದರು.
ಪೌರತ್ವ ಕಾಯ್ದೆ ಪರ 21ರಂದು ರ್ಯಾಲಿ: ಪೌರತ್ವ ಕಾಯ್ದೆ ವಿರೋಧಿಸುವವರು ಪಾಕಿಸ್ತಾನ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಜನರನ್ನು ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಈ ಕಾನೂನು ಪರವಾಗಿ ಡಿ.21ರಂದು ನಗರದಲ್ಲಿ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗುವುದು ಎಂದು ಬಸನಗೌಡ ಪಾಟೀಲ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿ, ರಾಹುಲ್ ಗಾಂಧಿಯವರ ಮೂಲ ಪಾಕಿಸ್ತಾನ ಆಗಿರುವ ಕಾರಣ ಅವರು ಪಾಕ್ ಮೇಲೆ ಹೆಚ್ಚಿನ ಮಮತೆ ತೋರುವ ಮೂಲಕ ದೇಶದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.