Advertisement

ನವಗ್ರಹಗಳಿಗೆಷ್ಟು ತಾಕತ್ತಿದೆ? ಭವಿಷ್ಯ ಎಷ್ಟು ನಂಬಬೇಕು?

06:00 AM Aug 28, 2018 | |

ಸಾತ್ವಿಕ ಮತ್ತು ದೈವಿಕವಾದ ಆಚರಣೆಗಳು ಮುಖ್ಯ. ದೈವಶಕ್ತಿಯ ಮುಂದೆ ಮಾಯ-ಮಾಟ, ವಶೀಕರಣ ಯಂತ್ರ, ದಿಗ್ಬಂಧನ, ವಾಮಾಚಾರ ಇವೆಲ್ಲವುಗಳಿಂದ ಶಕ್ತಿ ಪ್ರಯೋಗ ಮಾಡಲು ಸಾಧ್ಯವೇ ಇಲ್ಲ. ಎಲ್ಲಾ ಆಚರಣೆಗಳಲ್ಲೂ ನಂಬಿಕೆ ಇರಬೇಕು, ಆದರೆ ಯಾವುದು ನಮ್ಮ ಜೀವನಕ್ಕೆ ಸರಿ, ಯಾವುದು ತಪ್ಪು ಎಂಬುದನ್ನು ನಿರ್ಧರಿಸುವ ಸಾತ್ವಿಕ ಬುದ್ಧಿ ನಮ್ಮಲ್ಲಿರಬೇಕು. 

Advertisement

ನಮ್ಮೆಲ್ಲರಲ್ಲೂ ಇವತ್ತಿಗೂ ಕುತೂಹಲ ಮೂಡಿಸುವುದು ಶಾಸ್ತ್ರ ಕೇಳುವ ಪರಿಪಾಠ. ಮದುವೆ, ಉಪನಯನ, ಹೊಸ ಕಛೇರಿ, ಹೊಸ ವ್ಯಾಪಾರ, ಹೊಸ ಮನೆ, ಏನೇ ಹೊಸ ಕೆಲಸ ಪ್ರಾರಂಭಿಸುವುದಕ್ಕೆ ಮುಂಚೆ ನಮ್ಮ ಗ್ರಹಗತಿಗಳು ಸರಿಯಾಗಿ ಫ‌ಲ ಕೊಡುತ್ತವೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಮುಂದಾಗುತ್ತೇವೆ. ಇತ್ತೀಚೆಗಂತೂ ಇದು ದೊಡ್ಡ ವ್ಯಾಪಾರವಾಗಿದೆ. ಹೆಚ್ಚು ಜನ ಶಾಸ್ತ್ರ ಹೇಳುವವರು ಹುಟ್ಟಿಕೊಂಡಿದ್ದಾರೆ. ಶಾಸ್ತ್ರ ಹೇಳುವುದು ಒಂದು ಕಲೆ ಎಂದು ತಿಳಿದಿರುವ ಇವರು, ಮುಖ ನೊಡಿ, ಜಾತಕ ನೋಡಿ, ಸಂಖ್ಯೆಗಳನ್ನು ಕೂಡಿಸಿ ಭವಿಷ್ಯ ಹೇಳುತ್ತಾರೆ. ಅನಾದಿ ಕಾಲದಿಂದಲೂ ಅಸ್ತಿತ್ವದಲ್ಲಿ ಇರುವ ಭವಿಷ್ಯ ಹೇಳುವ ಕ್ರಿಯೆಗೆ ತನ್ನದೇ ಆದ ವಿಧಿ ವಿಧಾನಗಳಿವೆ. 

ಸತ್ಯವೇನೆಂದರೆ, ನಾವೆಲ್ಲ ಸಂಪೂರ್ಣವಾಗಿ ಶಾಸ್ತ್ರವನ್ನನುಸರಿಸದೇ ಎಲ್ಲಾ ಕಾರ್ಯಗಳನ್ನು ನಿರ್ವಹಿಸುತ್ತಿದ್ದೇವೆಂದರೆ ತಪ್ಪಾಗುತ್ತದೆ. ಕೆಲವರು ತಮಗೆ ಸುಲಭವಾದದ್ದನ್ನು ಅನುಸರಿಸಿ, ಮಿಕ್ಕಿದ್ದನ್ನು “ಓ ನಮಗೆ ಅದರಲ್ಲೆಲ್ಲ ನಂಬಿಕೆ ಇಲ್ಲ’ ಎನ್ನುತ್ತಾರೆ. ಆದರೂ ಮತ್ತೆ ಮತ್ತೆ ಹೋಗಿ ಶಾಸ್ತ್ರ ಕೇಳುತ್ತಾರೆ. ಎಲ್ಲಾ ಗ್ರಹಗಳಿಗೂ ತಮ್ಮದೇ ಆದ ದೈವಿಕ ಶಕ್ತಿ ಮತ್ತು ಬೇರೆ ಬೇರೆ ಗುಣಗಳಿವೆ. ಅವುಗಳ ನಂಟು ಸಜೀವ, ನಿರ್ಜೀವಗಳ ಜೊತೆಗಿದ್ದರೂ ಸಹ, ನವಗ್ರಹಗಳು ಪರಮಾತ್ಮನ ಅಧೀನದಲ್ಲಿವೆ. ಸಕಲ ಗ್ರಹ ಬಲಗಳ ಒಡೆಯ ಅವನೊಬ್ಬನೇ. ಅವನು ವಿಧಿಸಿದ ನಿಯಮಗಳನ್ನು ಪಾಲಿಸುತ್ತಾ ನವಗ್ರಹಗಳು ನಮ್ಮ ಜನ್ಮ ಕರ್ಮಕ್ಕೆ ಅನುಸಾರವಾಗಿ ನಮ್ಮ ಸುಖ ದುಃಖಗಳನ್ನು ವಿಂಗಡಿಸು ತ್ತವೆ. ಅದನ್ನು ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಸಕಲ ಗ್ರಹ ಬಲಗಳಿಗೂ ಒಡೆಯನಾದ ಪರಮಾತ್ಮನಲ್ಲಿ ಶರಣಾದರೆ, ನಮ್ಮ ಭಕ್ತಿಗನುಸಾರವಾಗಿ ದೊಡ್ಡ ದೊಣ್ಣೆಯಿಂದ ಹೊಡೆಯುವ ಏಟನ್ನು ತಪ್ಪಿಸಿ ಸಣ್ಣ ಕಡ್ಡಿಯಿಂದ ಹೊಡೆಯುತ್ತಾನೆ. ಆದರೆ ಏಟನ್ನೇ ತಪ್ಪಿಸುವ ಶಕ್ತಿ ನವಗ್ರಹಗಳಿಗೂ ಇಲ್ಲ, ಏಕೆಂದರೆ, ನಾವು ಕರ್ಮಾನುಸಾರ ಬದುಕಬೇಕು ಎನ್ನುವುದು ಸೃಷ್ಟಿಕರ್ತನ ನಿಯಮ. ನಾವು ಮಾಡಿದ ತಪ್ಪುಗಳಿಗೆ ಇವತ್ತಲ್ಲಾ ನಾಳೆ ಶಿಕ್ಷೆ ಅನುಭವಿಸಲೇಬೇಕು. ಅದರಿಂದ ತಪ್ಪಿಸಿಕೊಳ್ಳಲು ಯಾವ ಜೀವರಾಶಿಗೂ ಸಾಧ್ಯವಿಲ್ಲ.

ಶಾಸ್ತ್ರ ಹೇಳುವವರಲ್ಲಿ ಕೆಲವರು ನಿಮ್ಮ ಜಾತಕದಲ್ಲಿ ಆ ದೋಷ ಇದೆ, ಈ ದೋಷ ಇದೆ, ಜಾತಕಾನೇ ಸರಿಯಾಗಿಲ್ಲ ಎಂದು ಭಯ ಪಡಿಸುತ್ತಾರೆ. ಆದರೆ ನೀವು ಸಂಪೂರ್ಣವಾಗಿ ಪರಮಾತ್ಮನನ್ನು ನಂಬಿ, “ನಾವೆಲ್ಲ ಅವನ ಮಕ್ಕಳು, ನಮಗೆ ಕಷ್ಟದ ರುಚಿ ತೋರಿಸುವವನು, ಸುಖದ ರುಚಿಯನ್ನು ತೋರಿಸೇ ತೋರಿಸುತ್ತಾನೆ’ ಎಂದು ಭಾವಿಸಿದ ಮೇಲೆ ಭಯಪಡುವ ಅವಶ್ಯಕತೆಯಿಲ್ಲ. ಮತ್ತಷ್ಟು ಜನ ದೋಷ ಪರಿಹಾರಕ್ಕಾಗಿ ಹಣ ಕೇಳುತ್ತಾರೆ ಅಥವಾ ತಮ್ಮ ಬುದ್ಧಿಗನುಸಾರವಾಗಿ ತಮಗಿಷ್ಟ ಬಂದಂತೆ ಪರಿಹಾರಗಳನ್ನು ಹೇಳುತ್ತಾರೆ. ದೈವಿಕವಾದ, ದೇವರಿಗೆ ಮೊರೆ ಹೋಗುವ ಪರಿಹಾರಗಳು ಶಾಸ್ತ್ರ ಬದ್ಧವಾದದ್ದು. ನನ್ನ ಸ್ನೇಹಿತರೊಬ್ಬರು ಶಾಸ್ತ್ರ ಕೇಳಲು ಹೋದಾಗ ತನ್ನು ತಾನು ಶಾಸ್ತ್ರಜ್ಞನೆಂದು ಕರೆದುಕೊಳ್ಳುವ ವ್ಯಕ್ತಿ ವಿಚಿತ್ರವಾಗಿ ಹೆದರಿಸಿ ಎಂದೂ ಕೇಳರಿಯದ ಪರಿಹಾರ ಹೇಳಿದ್ದ. “ನಿನಗೆ ಅನೇಕ ದೋಷಗಳಿವೆ, ನೀನು 6 ತಿಂಗಳಿಗೆ ಆಸ್ಪತ್ರೆ ಸೇರುತ್ತೀಯಾ. ಅದಕ್ಕೆ ಸ್ಮಶಾನಕ್ಕೆ ಹೋಗಿ ಸತ್ತವರ ಸಂಸಾರಕ್ಕೆ ಸಿಹಿ ಹಂಚು ಮತ್ತು ಸಕ್ಕರೆಯನ್ನು ಹಿಂದಕ್ಕೆ ಎಸೆದು ಹಿಂತಿರುಗಿ ನೋಡದೆ ಮನೆಗೆ ನಡೆದು ಬಾ ಎಂದಿದ್ದ!’ ನೀವೇ ಯೋಚಿಸಿ, ಸತ್ತವರ ಕುಟುಂಬದವರಿಗೆ ಸ್ಮಶಾನದಲ್ಲಿ ಸಿಹಿ ಕೊಟ್ಟರೆ ಏನಾದೀತು? ದೇವಸ್ಥಾನಗಳಿಗೆ ಹೋಗಿ, ಶಾಂತಿ ಹೋಮ ಮಾಡಿಸಿ, ಜಪ ಮಾಡಿ, ನದಿಗಳಲ್ಲಿ ಸೂರ್ಯೋದಯ ಸಮಯಕ್ಕೆ ಸ್ನಾನ ಮಾಡಿ ಇವೆಲ್ಲ ಸಾತ್ವಿಕವಾದ ಮತ್ತು ದೈವಿಕವಾದ ಆಚರಣೆಗಳು.

ದೈವಶಕ್ತಿಯ ಮುಂದೆ ಮಾಯ-ಮಾಟ, ವಶೀಕರಣ ಯಂತ್ರ, ದಿಗ್ಬಂಧನ, ವಾಮಾಚಾರ ಇವೆಲ್ಲವುಗಳಿಂದ ಶಕ್ತಿ ಪ್ರಯೋಗ ಮಾಡಲು ಸಾಧ್ಯವೇ ಇಲ್ಲ. ಎಲ್ಲಾ ಆಚರಣೆಗಳಲ್ಲೂ ನಂಬಿಕೆ ಇರಬೇಕು, ಆದರೆ ಯಾವುದು ನಮ್ಮ ಜೀವನಕ್ಕೆ ಸರಿ, ಯಾವುದು ತಪ್ಪು ಎಂಬುದನ್ನು ನಿರ್ಧರಿಸುವ ಸಾತ್ವಿಕ ಬುದ್ಧಿ ನಮ್ಮಲ್ಲಿರಬೇಕು. ಗೊತ್ತಿಲ್ಲದಿದ್ದರೆ ಕೇಳಿ ತಿಳಿಯಬೇಕು. ಪರಮಾತ್ಮನಿಗೆ ಹತ್ತಿರವಾದ ವರಿಗೆ ಈ ಎಲ್ಲಾ ತಾತ್ಕಾಲಿಕ ಪರಿಹಾರಗಳ ಅವಶ್ಯಕತೆಯೇ ಇರುವುದಿಲ್ಲ. ಎಲ್ಲದಕ್ಕೂ ಪರಿಹಾರ ಸತ್ಯ-ಧರ್ಮ. 

Advertisement

ಹೇಗೆ ಜಗತ್ತಿನ ನಿಯಮಗಳು ತಮ್ಮ ಪಾಡಿಗೆ ತಾವು ಚಲಿಸುತ್ತವೋ ಹಾಗೆ ಗ್ರಹಗಳೂ ಕೂಡ ತಮ್ಮ ತಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ನಿರ್ವಹಿಸುತ್ತವೆ. ನಾವು ಸತ್ಯ-ಧರ್ಮದಿಂದಿದ್ದರೆ ನಮ್ಮ ಪಾಪ ಕರ್ಮಗಳು ತಾವಾಗೇ ಕಡಿಮೆಯಾಗುತ್ತವೆ. ಸುಳ್ಳು ಹೇಳಿಕೊಂಡು ಅಧರ್ಮ ಕಾರ್ಯಗಳನ್ನು ಮಾಡಿದರೆ ನಮ್ಮ ಪಾಪದ ಕೊಡ ತುಂಬುತ್ತಾ ಹೋಗುತ್ತದೆ. ನವಗ್ರಹಗಳಿಗೇನೂ ನಮ್ಮ ಮೇಲೆ ದ್ವೇಷ ಇಲ್ಲ, ಬೇಕು ಬೇಕು ಅಂತ ನಮ್ಮನ್ನೇ ಹುಡುಕಿ ಕಷ್ಟ ಕೊಡುವುದಕ್ಕೂ ಅವು ಬರುವುದಿಲ್ಲ. ನಮ್ಮ ಹಿಂದಿನ ಜನ್ಮಗಳ ಪಾಪ-ಪುಣ್ಯಗಳ ಖಾತೆ ಅವುಗಳ ಬಳಿ ಇರುತ್ತದೆ. ಅದರ ಪ್ರಕಾರ ನಮಗೆ ಸುಖ-ದುಃಖವನ್ನು ಹಂಚುತ್ತವೆ.

ಭಗವದ್ಗೀತೆಯಲ್ಲೂ ಸಹ ಕೃಷ್ಣ ಶಾಸ್ತ್ರದ ಬಗ್ಗೆ ವಿವರಿಸಿದ್ದಾನೆ. ಹದಿನೇಳನೇ ಅಧ್ಯಾಯದಲ್ಲಿ, “ವೇದ, ಯಜ್ಞ, ಶಾಸ್ತ್ರ ಈ ಮೂರು ವಿಧಿ ವಿಧಾನಗಳು ಪರಬ್ರಹ್ಮನ ವಾಚನದಿಂದಲೇ ಹೊರ ಬಂದಿದ್ದು, ಭೂತ ಭವಿಷ್ಯ ವರ್ತಮಾನ ಎಲ್ಲವೂ ನಾನೇ ಆಗಿರುವುದಿಂದ ಶಾಸ್ತ್ರವನ್ನು ಅನುಸರಿಸುವವನಿಗೂ ನನ್ನನ್ನು ಅರಿಯುವ ಯೋಗ್ಯತೆ ಇರಬೇಕು’ ಎಂದಿದ್ದಾನೆ.

ಶಾಸ್ತ್ರವನ್ನರಿಯದೆ, ಕ್ಷಣಿಕ ಸಂತೋಷಕ್ಕಾಗಿ ತಪ್ಪು ವಿಧಾನಗಳನ್ನು ಅನುಸರಿಸುವುದಕ್ಕಿಂತ ಸುಮ್ಮನಿರುವುದು ಲೇಸು. ಕೆಲವರು ವಾಸ್ತುವಿನ ಹುಚ್ಚು ಹಿಡಿಸಿಕೊಂಡಿದ್ದಾರೆ. ವಾಸ್ತುಶಾಸ್ತ್ರ ದೈವಿಕವಾದದ್ದು, ಆದರೆ ಅದನ್ನು ನಮಗೆ ತಿಳಿಸುತ್ತಿರುವವರಿಗೇ ಅದು ಸರಿಯಾಗಿ ತಿಳಿಯದಿದ್ದರೆ?! ನನಗೆ ತಿಳಿದಿರುವ ಎಷ್ಟೋ ಜನ ತಮ್ಮ ಮನೆಯ ಗೋಡೆಗಳನ್ನು 3-4 ಸಲ ಒಡೆಸಿ ಬದಲಾ ಯಿಸಿದ್ದಾರೆ. ಒಬ್ಬ ವಾಸ್ತು ಶಾಸ್ತ್ರಜ್ಞ ಒಂದು ಹೇಳಿದರೆ, ಮತ್ತೂಬ್ಬರು ಇನ್ನೊಂದನ್ನು ಹೇಳಿ ಹೆದರಿಸಿ, ಅಯ್ಯೋ ಅದು ಸರಿಯಾಗಿಲ್ಲ, ನಿಮಗೆ ಕೆಡುಕಾಗುತ್ತೆ ಎಂದು ಮತ್ತೆ ಬದಲಾಯಿಸುತ್ತಾರೆ. 

ಮನೆಯ ಗೋಡೆ ಬಣ್ಣಗಳನ್ನು ಪ್ರತಿ 3 ತಿಂಗಳಿಗೆ ಬದಲಾಯಿಸುವವರಿದ್ದಾರೆ. ಆದರೆ ಅ ಮನೆಯಲ್ಲಿರುವ ವ್ಯಕ್ತಿಯ ಮನಸ್ಥಿತಿ ಮಾತ್ರ ಬದಲಾಗುವುದಿಲ್ಲ. ಮುಂದಿನ ದಿನಗಳಲ್ಲಿ ಕಾರುಗಳಿಗೆ ವಾಸ್ತು ಪ್ರಕಾರ ಬಾಗಿಲು ಬದಲಾಯಿಸಬೇಕು ಎಂದು ಯಾರಾದರೂ ಹೇಳಿದರೆ ಏನು ಮಾಡುವುದು? ನಮ್ಮ ನಮ್ಮ ಗ್ರಹಚಾರಗಳ ಪ್ರಕಾರ ಕಾರಿನ ಬಾಗಿಲು ಕೆಳಗಡೆ ಇರಿಸಿ ಎಂದರೆ? ಅಥವಾ ಡಿಕ್ಕಿಯಿಂದ ಒಳಗೆ ಏರಿ ಎಂದರೆ?!
ಸದ್ಯ ಇವರೆಲ್ಲ  ಬರೀ ಬಟ್ಟೆಯ ಬಣ್ಣಗಳ ಬಗ್ಗೆ ಹೇಳಿದ್ದಾರೆ. ಸೋಮವಾರ ಈ ಬಣ್ಣ, ಮಂಗಳವಾರ ಆ ಬಣ್ಣ ಅಂತ. ವಾಸ್ತು ಪ್ರಕಾರ ಪ್ಯಾಂಟನ್ನು ತಲೆ ಮೇಲಿಂದ ಹಾಕಿಕೊಳ್ಳಬೇಕು ಅಂದಿಲ್ಲ!

ಎಲ್ಲಾ ದೈವಿಕ ವಿಧಿ ವಿಧಾನಗಳನ್ನು ಪರಮಾತ್ಮನೇ ಶಾಸ್ತ್ರದ ಮೂಲಕ ನಮಗೆ ತಿಳಿಸಿರುವುದು. ಅವುಗಳಲ್ಲಿ ಸರಿ ತಪ್ಪುಗಳನ್ನು ಅರಿತು ಅಳವಡಿಸಿಕೊಳ್ಳುವ ಬುದ್ಧಿಯನ್ನೂ ಅವನೇ ಕೊಟ್ಟಿದ್ದಾನೆ. ಇವೆಲ್ಲವನ್ನು ಅನುಸರಿಸದಿದ್ದರೂ ಪ್ರೀತಿಯಿಂದ ನನ್ನನ್ನು ನೆನೆದರೆ ನಾನೇ ನಿನ್ನ ಜೀವನವನ್ನು ಸಂತೋಷಮಯವನ್ನಾಗಿ ಮಾಡುತ್ತೇನೆ ಎಂದಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next