Advertisement

ಪ್ರಜಾಪತಿ ದಕ್ಷನಿಗೆ ಭಗವಾನ್ ಶಂಕರನ ಮೇಲೆ ಆಕ್ರೋಶ ಬರಲು ಕಾರಣವೇನು?

03:12 PM Nov 27, 2018 | |

ಬ್ರಹ್ಮದೇವರ ಪುತ್ರರಾದ ದಕ್ಷಪ್ರಜಾಪತಿಯು ಮನುಪುತ್ರಿಯಾದ ಪ್ರಸೂತಿಯನ್ನು ವಿವಾಹವಾಗಿ ಆಕೆಯಲ್ಲಿ ಸುಂದರವಾದ ಕಣ್ಣುಗಳುಳ್ಳ ಹದಿನಾರು ಮಂದಿ ಕನ್ಯೆಯರನ್ನು ಪಡೆದನು. ಪೂಜ್ಯನಾದ ದಕ್ಷಪ್ರಜಾಪತಿಯು ಅವರಲ್ಲಿ ಹದಿಮೂರು ಕನ್ಯೆಯರನ್ನು ಧರ್ಮನಿಗೂ, ಒಬ್ಬಳನ್ನು ಅಗ್ನಿಗೂ ಒಬ್ಬಳನ್ನು ಸಮಸ್ತ ಪಿತೃಗಣಗಳಿಗೂ, ಮತ್ತೊಬ್ಬಳನ್ನು (ಸತೀದೇವಿಯನ್ನು) ಬ್ರಹ್ಮ ದೇವರ ಆದೇಶದಂತೆ ಜಗತ್-ಸಂಹಾರಕನೂ, ಸಂಸಾರ ಬಂಧನವನ್ನು ನಾಶಪಡಿಸುವವನೂ ಆದ ಭಗವಾನ್ ಶ್ರೀ ಶಂಕರನಿಗೂ ವಿವಾಹಮಾಡಿ ಕೊಟ್ಟನು.

Advertisement

           ಹಿಂದೊಮ್ಮೆ ಪ್ರಜಾಪತಿಯು ಯಜ್ಞವನ್ನುಮಾಡಿದಾಗ ಆ ಯಜ್ಞದಲ್ಲಿ ಎಲ್ಲ ಮಹರ್ಷಿಗಳೂ, ಮುನಿಗಳೂ ಅಗ್ನಿಯಾದಿ ಸಮಸ್ತ ದೇವತೆಗಳೂ ತಮ್ಮ ಅನುಯಾಯಿಗಳೊಡನೆ ಬಂದು ಸೇರಿದ್ದರು. ಆಗ ದಕ್ಷಪ್ರಜಾಪತಿಯೂ ಆ ಸಭೆಯನ್ನು ಪ್ರವೇಶಿಸಿದನು. ಅವನು ತನ್ನ ತೇಜದಿಂದ ಸೂರ್ಯನಂತೆ ಪ್ರಕಾಶಿಸುತ್ತ ಆ ವಿಶಾಲ ಸಭಾಭವನದ ಅಂಧಕಾರವನ್ನು ದೂರಗೊಳಿಸುತ್ತಿದ್ದನ್ನು. ಅವನು ಬಂದಿರುವುದನ್ನು ನೋಡಿ, ಅವನ ತೇಜಸ್ಸಿಗೆ ಬೆರಗಾಗಿ ಬ್ರಹ್ಮದೇವರು ಮತ್ತು ಮಹಾದೇವನನ್ನು ಬಿಟ್ಟು ಇತರ ಅಗ್ನಿ ಸಮೇತರಾದ ಎಲ್ಲ ಸಭಾಸದರು ತಮ್ಮ-ತಮ್ಮ ಆಸನಗಳನ್ನು ಬಿಟ್ಟು ಎದ್ದುನಿಂತರು.

          ಹೀಗೆ ಎಲ್ಲ ಸಭಾಸದರಿಂದ ಸಮ್ಮಾನ ಪಡೆದು ತೇಜಸ್ವಿಯಾದ ದಕ್ಷಪ್ರಜಾಪತಿಯು ತಂದೆಯಾದ ಬ್ರಹ್ಮದೇವರಿಗೆ ವಂದಿಸಿ, ಅವರ ಅಪ್ಪಣೆಯಂತೆ ಆಸೀನನಾದನು. ಆದರೆ ಪರಮೇಶ್ವರನು ಮಾತ್ರ ಕುಳಿತೇ ಇದ್ದು ತನಗೆ ಗೌರವವನ್ನು ಸಲ್ಲಿಸದೆ ಇದ್ದುದನ್ನು ದಕ್ಷನು ಗಮನಿಸಿದನು. ಇದನ್ನು ಅವನು ಅನಾದರವೆಂದು ತಿಳಿದನು. ಆಗ ದಕ್ಷನು- ಶಿವನನ್ನು ತನ್ನ್ನ ಕ್ರೋಧಾಗ್ನಿಯಿಂದ ಸುಟ್ಟುಬಿಡುವನೋ ಎಂಬಂತೆ ಕಡೆಗಣ್ಣಿನಿಂದ ದುರ-ದುರನೇ ನೋಡುತ್ತಾ ಹೀಗೆ ಹೇಳತೊಡಗಿದನು. “ದೇವತೆಗಳಿಂದಲೂ ಅಗ್ನಿಗಳಿಂದಲೂ ಒಡಗೂಡಿರುವ ಎಲೈ ಬ್ರಹ್ಮರ್ಷಿಗಳೇ! ನನ್ನ ಮಾತು ಕೇಳಿರಿ. ನಾನು ಅಜ್ಞಾನದಿಂದಾಗಲೀ ಮಾತ್ಸರ್ಯದಿಂದಾಗಲೀ ಮಾತನಾಡುತ್ತಿಲ್ಲ. ಈ ನಾಚಿಕೆಗೆಟ್ಟವನು ಎಲ್ಲ ಲೋಕಪಾಲರ ಪವಿತ್ರಕೀರ್ತಿಯನ್ನು ಕೆಡಿಸುತ್ತಿದ್ದಾನೆ. ನೋಡಿದಿರಾ !ಈ ದುರಹಂಕಾರಿಯು ಸತ್ಪುರುಷರು ನಡೆದು ಬಂದಿರುವ ದಾರಿಯನ್ನೇ ಕಲುಷಿತಗೊಳಿಸುತಿದ್ದಾನೆ”.

            “ಕಪಿಯ ಕಣ್ಣಿನಂತಿರುವ ಇವನು, ಸಾಧುವಿನಂತಿದ್ದ, ಸಾವಿತ್ರಿ ಸದೃಶಳೂ, ಮೃಗನಯಾನಿಯು ಆದ ನನ್ನ ಪವಿತ್ರ ಕನ್ಯೆಯನ್ನು ಅಗ್ನಿ ಮತ್ತು ಬ್ರಾಹ್ಮಣರ ಸಮಕ್ಷಮದಲ್ಲಿ ಪಾಣಿಗ್ರಹಣಮಾಡಿದ್ದನು. ಇದರಿಂದ ಇವನು ಒಂದು ವಿಧದಲ್ಲಿ ನನಗೆ ಪುತ್ರನಿದ್ದಂತೆ, ಇವನೂ ಎದ್ದು ನನಗೆ  ಸ್ವಾಗತಿಸಿ, ನಮಸ್ಕರಿಸುತ್ತಿದ್ದರೆ ಉಚಿತವಾಗಿತ್ತು ಆದರೆ ಇವನು ಮಾತಿನಿಂದಲೂ ನನ್ನನ್ನು ಸತ್ಕರಿಸಲಿಲ್ಲ “.

Advertisement

ಅಯ್ಯೋ ! ಅಯೋಗ್ಯನಿಗೆ ವೇದ ಹೇಳಿಕೊಟ್ಟಂತೆ – ನನಗೆ ಇಷ್ಟವಿಲ್ಲದಿದ್ದರೂ ಈತನಿಗೆ ನನ್ನ ಪುತ್ರಿಯನ್ನು ಕೊಟ್ಟೆನಲ್ಲ ! ಈತನು ಸತ್ಕರ್ಮಗಳನ್ನು ಲೋಪಗೊಳಿಸಿರುವನೂ. ಅಶುಚಿಯೂ, ದುರಭಿಮಾನಿಯೂ, ಧರ್ಮದ ಮೇರೆಯನ್ನು ಮುರಿದು ಹಾಕಿದವನೂ ಆಗಿರುವನು.  ಇವನು ಪ್ರೇತಗಳಿಗೆ ನಿವಾಸಸ್ಥಾನವಾದ ಭಯಂಕರ ಸ್ಮಶಾನಗಳಲ್ಲಿ ಭೂತ-ಪ್ರೇತಗಳೊಡನೆ ಅಲೆಯುತ್ತ ಇರುತ್ತಾನೆ. ಹುಚ್ಚನಂತೆ ತಲೆಗೂದಲನ್ನು ಕೆದರಿಕೊಂಡು, ಬತ್ತಲೆಯಾಗಿ, ನಗುತ್ತಲೂ, ಅಳುತ್ತಲೂ ತಿರುಗಾಡುತುತ್ತಾನೆ. ಇವನು ಅಪವಿತ್ರವಾದ ಚಿತಾಭಸ್ಮವನ್ನು ಮೈಗೆಲ್ಲ ಬಳಿದುಕೊಂಡು, ಕೊರಳಲ್ಲಿ ಪ್ರೇತಗಳು ಧರಿಸಲು ಯೋಗ್ಯವಾದ ರುಂಡ ಮಾಲೆಯನ್ನೂ, ದೇಹದಲ್ಲೆಲ್ಲ ಮೂಳೆಗಳ ಒಡವೆಗಳನ್ನು ಹಾಕಿಕೊಂಡಿರುತ್ತಾನೆ. ಇವನು ಹೆಸರಿಗೆ ಮಾತ್ರ ಶಿವನಾಗಿದ್ದಾನೆ. ಆದರೆ ನಿಜವಾಗಿ ಅಶಿವ – ಅಮಂಗಳರೂಪಿಯಾಗಿದ್ದಾನೆ. ಮತ್ತೇರಿದವನಿಗೆ ಮತ್ತೇರಿದವರೇ ಪ್ರಿಯರಾಗಿರುವಂತೆ ಈತನಿಗೂ ಭೂತ-ಪ್ರೇತ-ಪಿಶಾಚಾದಿ ತಮೋಗುಣದ ಜೀವರೇ ಪ್ರಿಯರು. ಅವರಿಗೆಲ್ಲ ಈತನು ನಾಯಕನು. ಇಂತಹವನಿಗೆ ಸಾಧ್ವಿಯೂ ಸುಕುಮಾರಿಯೂ ಆದ ನನ್ನ ಕುವರಿಯನ್ನು ವಿವಾಹಮಾಡಿಕೊಟ್ಟೆನಲ್ಲ ಎಂದು ಅಹಂಕಾರದಿಂದ ಗೋಳಾಡಿದನು.

           ದಕ್ಷನು ತನ್ನನ್ನು ಹೀಗೆ ನಿಂದಿಸಿದರೂ ಭಗವಾನ್ ಮಹಾದೇವನು ಅದಕ್ಕೆ ಯಾವ ಪ್ರತಿಕ್ರಿಯೆಯನ್ನು ತೋರದೆ ಹಿಂದಿನಂತೆ ನಿಶ್ಚಲಭಾವದಿಂದಲೇ ಕುಳಿತಿದ್ದನು. ಇದರಿಂದ ದಕ್ಷನ ಕ್ರೋಧವು ಹೆಚ್ಚಾಗಿ ಅವನು ಕೈಯಲ್ಲಿ ನೀರನ್ನು ತೆಗೆದುಕೊಂಡು ಶಿವನನ್ನು ಶಪಿಸಲು ಸಿದ್ಧನಾದನು. ಸಭೆಯಲ್ಲಿ ನೆರೆದಿದ್ದ ಮುಖ್ಯ ಸದಸ್ಯರು ‘ಬೇಡ ! ಬೇಡ !’ ಎಂದು ತಡೆಯುತ್ತಿದ್ದರೂ ಆತನು ಯಾರಮಾತನ್ನೂ ಕೇಳದೆ  “ಈ ಮಹಾದೇವನು ದೇವತೆಗಳಲ್ಲಿ ಅಧಮನು. ಇಂದಿನಿಂದ ಈತನಿಗೆ ಇಂದ್ರ -ಉಪೇಂದ್ರ ಮುಂತಾದ ದೇವತೆಗಳೊಡನೆ ಯಜ್ಞದಲ್ಲಿ ಭಾಗವು ದೊರೆಯದಿರಲಿ” ಎಂದು ಉಚ್ಚರಿಸಿ ಶಾಪವನ್ನು ಕೊಟ್ಟು  ಕಡುಕೋಪದಿಂದ ಸಭಾತ್ಯಾಗಮಾಡಿ ಮನೆಗೆ ಹೊರಟುಹೋದನು.

            ಸ್ವಾಮಿ ಶಂಕರನ ಅನುಯಾಯಿಗಳಲ್ಲಿ ಅಗ್ರಗಣ್ಯನಾದ ನಂದಿಕೇಶ್ವರನಿಗೆ ಈ ಶಾಪದ ವಿಚಾರವು ತಿಳಿಯುತ್ತಲೇ ಕೋಪದಿಂದ ಕಿಡಿಕಿಡಿಯಾದನು.    ಮರಣಸ್ವಭಾವವುಳ್ಳ ದೇಹದಲ್ಲೇ ಅಭಿಮಾನವುಳ್ಳ ಈ ಮೂರ್ಖ ದಕ್ಷನು, ಯಾರಿಗೂ ದ್ರೋಹ ಮಾಡದಿರುವ ಭಗವಾನ್ ಶಂಕರನ ವಿಷಯದಲ್ಲಿ ದ್ವೇಷವನ್ನು ಮಾಡಿರುವುದರಿಂದ ಭೇದಬುದ್ಧಿಯಿಂದ ಕೂಡಿದ ಈತನು ತತ್ತ್ವಜ್ಞಾನ ವಿಮುಖನಾಗಲಿ ಹಾಗೂ ವಿವೇಕಭ್ರಷ್ಟನಾಗಿ ವಿಷಯಸುಖದ ಇಚ್ಛೆಯಿಂದ ಕಪಟಧರ್ಮಮಯವಾದ ಗೃಹಸ್ಥಾಶ್ರಮದಲ್ಲಿ ಆಸಕ್ತನಾಗಿದ್ದು, ಸಾಕ್ಷಾತ್ ಪಶುವಿನಂತೆ ಆಗಿರುವ ಈತನು ಹೋತದ ಮುಖವುಳ್ಳವನಾಗಲಿ ಎಂದು ಶಪಿಸಿದನು. ಶಂಕರನಿಗೆ ಅಪಮಾನ ಮಾಡಿರುವ ಈತನ ಬೆಂಬಲಿಗರೆಲ್ಲರೂ ಜನನ-ಮರಣ ರೂಪವಾದ ಸಂಸಾರ ಚಕ್ರದಲ್ಲಿ ಸುತ್ತುತ್ತಾ ಕರ್ಮಬಲೆಯಲ್ಲಿ ಸಿಕ್ಕಿಹಾಕಿಕೊಂಡಿರಲಿ ಅಲ್ಲದೇ ಈ ಬ್ರಾಹ್ಮಣರು ಧನ ದೇಹೇಂದ್ರಿಯ ಸುಖಗಳಿಗೆ ಗುಲಾಮರಾಗಿ ಲೋಕದಲ್ಲಿ ಭಿಕ್ಷೆಬೇಡುತ್ತಾ ಅಲೆದಾಡುತ್ತಿರಲಿ ಎಂದು ಶಾಪವನ್ನಿತ್ತನು.

         ನಂದಿಕೇಶ್ವರನು ಬ್ರಾಹ್ಮಣಕುಲವನ್ನು ಶಪಿಸಿದ್ದನ್ನು ಕೇಳಿ ಭೃಗುಮಹರ್ಷಿಗಳು ಕ್ರುದ್ಧರಾಗಿ ದುಸ್ತರವಾದ ಶಾಪರೂಪವಾದ ಬ್ರಹ್ಮದಂಡವನ್ನು ವಿಧಿಸಿದರು. “ ಯಾರು ಕಾಪಾಲಿಕರು ಶಿವಭಕ್ತರು ಹಾಗೂ ಅವರ ಅನುಯಾಯಿಗಳು ಇದ್ದಾರೋ, ಅವರು ಶಾಸ್ತ್ರಗಳಿಗೆ ವಿರುದ್ಧವಾದ ಆಚರಣೆ ಮಾಡುವ ಪಾಷಂಡಿಗಳಾಗಲಿ.ಆಚಾರವನ್ನು ಬಿಟ್ಟು ,ಮಂದ ಬುದ್ದಿಗಳಾಗಿ ಜಟೆ,ಬೂದಿ ,ಎಲುಬಿನ ಮಾಲೆಗಳನ್ನು ಧರಿಸಿ ಶೈವ ಸಂಪ್ರದಾಯದ ಅನುಯಾಯಿಗಳಾಗಲಿ. ಇವರಿಗೆ ಅದರಲ್ಲಿ ಸುರೆ ಹಾಗೂ ಆಸವಗಳೆಂಬ ಮದ್ಯಗಳೇ ದೇವತೆಗಳಂತೆ ಆದರಣೀಯವಾಗಿದೆ. ಧರ್ಮ, ಮರ್ಯಾದೆಯ ಸಂಸ್ಥಾಪಕರೂ, ವರ್ಣಾಶ್ರಮಗಳ ರಕ್ಷಕರೂ ಆದ ವೇದ ಹಾಗೂ ಬ್ರಾಹ್ಮಣರ ನಿಂದೆಯನ್ನು ಮಾಡುವ ನೀವು ಪಾಷಂಡ ಮತವನ್ನು ಆಶ್ರಯಿಸಿರುವಿರೆಂದು ಇದರಿಂದ ತಿಳಿಯುತ್ತದೆ.ಈ ವೇದಮಾರ್ಗವೇ ಜನರಿಗೆ ಶ್ರೇಯಸ್ಕರ ಹಾಗೂ ಸನಾತನ ಧರ್ಮವಾಗಿದೆ.ಅಂತಹ ವೇದಮಾರ್ಗವನ್ನು ನಿಂದಿಸುವ ನೀವು, ಭೂತಾಧಿಪತಿಯಾದ, ನಿಮ್ಮ ಇಷ್ಟದೇವನು ವಾಸಿಸುವ ಪಾಷಂಡ ಮಾರ್ಗಕ್ಕೆ ಹೊರಟು ಹೋಗಿರಿ ” ಎಂದು ಶಪಿಸಿದನು.  ಭೃಗು ಋಷಿಗಳು ಹೀಗೆ ಶಪಿಸಿದಾಗ ಶಂಕರನು ಸ್ವಲ್ಪ ಖೇದಗೊಂಡು ತನ್ನ ಸಹಚರರೊಂದಿಗೆ ಅಲ್ಲಿಂದ ಹೊರಟು ಹೋದನು.  ನಂತರ ಪ್ರಜಾಪತಿಗಳು ತಮ್ಮ ಯಾಗವನ್ನು ಪೂರೈಸಿ ಗಂಗಾ ಯಮುನಾ ಸಂಗಮ ಸ್ಥಳದಲ್ಲಿ ಅವಭೃತ ಸ್ನಾನವನ್ನು ಮಾಡಿ ಪ್ರಸನ್ನ ಮನಸ್ಸಿನಿಂದ ತಮ್ಮ ತಮ್ಮ ಸ್ಥಾನಗಳಿಗೆ ಹೊರಟು ಹೋದರು.

ಪಲ್ಲವಿ

Advertisement

Udayavani is now on Telegram. Click here to join our channel and stay updated with the latest news.

Next