Advertisement

ಎಲೆಕ್ಷನ್‌ ಎಫೆಕ್ಟ್ ಸ್ಯಾಂಡಲ್‌ವುಡ್‌ ಲೆಕ್ಕಾಚಾರವೇನು?

06:04 AM Mar 13, 2019 | Team Udayavani |

ಒಂದೆಡೆ ಲೋಕಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್‌ ಆಗಿದೆ. ಎಂದಿನಂತೆ ಈ ಬಾರಿಯೂ ಕೊಂಚ ಹೆಚ್ಚಾಗಿಯೇ ಎಲ್ಲರ ಚಿತ್ತ ಎಲೆಕ್ಷನ್‌ನತ್ತ ನೆಟ್ಟಿದೆ. ದಿಲ್ಲಿಯ ಗದ್ದುಗೆ ಯಾರು ಏರಲಿದ್ದಾರೆ ಎಂಬ ಲೆಕ್ಕಾಚಾರ ಕೂಡ ಜೋರಾಗಿಯೇ ನಡೆಯುತ್ತಿದೆ. ರಾಜಕೀಯ ಪಕ್ಷಗಳು, ಜನನಾಯಕರು ಮತ ಬೇಟೆಗೆ ಮೈಕೊಡವಿ ನಿಂತಿದ್ದಾರೆ. ಜನ ಸಾಮಾನ್ಯರ ನಿರೀಕ್ಷೆ, ಆಕ್ರೋಶ, ಆವೇಶ ಇವುಗಳ ನಡುವೆ ರಾಜಕೀಯ ಪಕ್ಷಗಳ ಆರೋಪ – ಪ್ರತ್ಯಾರೋಪ, ಸಾಧನೆ, ವೇದನೆ, ರೋಧನೆ, ಸಮಾವೇಶ ಎಲ್ಲಾ ಸೇರಿ ಬೇಸಿಗೆಯ ಕಾವನ್ನು ಇನ್ನಷ್ಟು ಹೆಚ್ಚಿಸಿರುವುದಂತೂ ಸುಳ್ಳಲ್ಲ.

Advertisement

ಇನ್ನು ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಈ ಸಾರ್ವತ್ರಿಕ ಚುನಾವಣೆ ಎಲ್ಲಾ ಕ್ಷೇತ್ರಗಳ ಮೇಲೂ ಒಂದಷ್ಟು ಪರಿಣಾಮ ಬೀರಿರುವುದರಿಂದ, ವಿವಿಧ ಕ್ಷೇತ್ರಗಳ ಗಣ್ಯರು ತಮ್ಮ ಒಲವಿರುವ ಪಕ್ಷಗಳು, ಅಭ್ಯಾರ್ಥಿಗಳ ಪರವಾಗಿ ನಿಧಾನವಾಗಿ ಬ್ಯಾಟಿಂಗ್‌ ಶುರು ಮಾಡಿದ್ದಾರೆ. ಹಾಗೆಯೇ ಚಿತ್ರರಂಗ ಕೂಡ ಈ ಎಲೆಕ್ಷನ್‌ “ಸೈಡ್‌ ಎಫೆಕ್ಟ್’ನಿಂದ ಹೊರತಾಗಿಲ್ಲ. ಕಳೆದ ಬಾರಿಗೆ ಹೋಲಿಸಿದರೆ, ಚಿತ್ರರಂಗದಲ್ಲಿ ಈ ಬಾರಿ “ಎಲೆಕ್ಷನ್‌ ಇಂಪ್ಯಾಕ್ಟ್’ ಜೋರಾಗಿಯೇ ಇದೆ.

ಒಂದೆಡೆ ಏಪ್ರಿಲ್‌-ಮೇ ತಿಂಗಳಿನಲ್ಲಿ ಚುನಾವಣಾ ಕಾವು, ಮತ್ತೊಂದೆಡೆ ಬಿಸಿಲ ಧಗೆ, ಸಾಲು ಸಾಲು ಪರೀಕ್ಷೆಗಳು, ರಿಲೀಸ್‌ಗೆ ರೆಡಿಯಾಗಿರುವ ಪರಭಾಷಾ ಚಿತ್ರಗಳು, ಸ್ಟಾರ್‌ಗಳ ಎಲೆಕ್ಷನ್‌ ಕ್ಯಾಂಪೇನ್‌, ಇವೆಲ್ಲದರ ನಡುವೆ ಮಾರ್ಚ್‌ ಕೊನೆಯಿಂದ ಮೇ ಕೊನೆಯೊಳಗೆ ಪ್ರೇಕ್ಷಕರ ಮುಂದೆ ಹೋಗಬೇಕು ಎಂದು ಕಾದು ಕುಳಿತ ಸಾಲು ಸಾಲು ಚಿತ್ರಗಳು. ಬಿಡುವಿಲ್ಲದೆ ಚಿತ್ರೀಕರಣದಲ್ಲಿ, ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ಬ್ಯುಸಿಯಾದ ಚಿತ್ರಗಳು, ತಾರೆಯರ ಪ್ರಮೋಷನ್‌ ಹೀಗೆ ಸ್ಯಾಂಡಲ್‌ವುಡ್‌ನ‌ಲ್ಲಿ ಸದ್ಯದ ಈ ಎರಡು ತಿಂಗಳ ಪರಿಸ್ಥಿತಿಯ ಕುರಿತಾದ ಒಂದು ಸಂಕ್ಷಿಪ್ತ ರೌಂಡಪ್‌ ಸಿನಿಪ್ರಿಯರ ಮುಂದೆ…

ಕನ್ನಡದ ಬಿಗ್‌ ಬಜೆಟ್‌ ಮತ್ತು ಬಿಗ್‌ ಸ್ಟಾರ್‌ ಚಿತ್ರಗಳಾದ ಪುನೀತ್‌ ರಾಜಕುಮಾರ್‌ ಅಭಿನಯದ “ನಟ ಸಾರ್ವಭೌಮ’, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ “ಯಜಮಾನ’ ಚಿತ್ರಗಳು ಬಿಡುಗಡೆಯಾಗಲಿ ಎಂದು ಕಾಯುತ್ತಿದ್ದ ಅನೇಕ ಹೊಸಬರ ಚಿತ್ರಗಳು ಈ ವಾರ, ಮುಂದಿನವಾರ ಎನ್ನುತ್ತ ತಮ್ಮ ಬಿಡುಗಡೆಯನ್ನು ಮುಂದೂಡುತ್ತಲೇ ಬರುತ್ತಿವೆ. ಕಳೆದ ಎರಡು ತಿಂಗಳಿನಿಂದ ಬರೋಬ್ಬರಿ ಮೂವತ್ತಕ್ಕೂ ಹೆಚ್ಚಿನ ಚಿತ್ರಗಳು ತಮ್ಮ ಬಿಡುಗಡೆಯನ್ನು ಮುಂದೂಡಿವೆ.

ಇನ್ನೆರಡು ತಿಂಗಳಿನಲ್ಲಿ ಈ ಚಿತ್ರಗಳ ಸಂಖ್ಯೆ ಅರ್ಧ ಶತಕ ದಾಟಿದರೂ ಅಚ್ಚರಿಯಿಲ್ಲ! ಹೀಗಾಗಿ ಮುಂದಿನ ಮಾರ್ಚ್‌ ಅಂತ್ಯದಿಂದ ಮೇ ಅಂತ್ಯದವರೆಗೆ ಬಹುತೇಕ ಈ ತೆರೆಗೆ ಬರಲು ತಯಾರಿ ನಡೆಸುತ್ತಿದ್ದು, ಈ ಎರಡು-ಮೂರು ತಿಂಗಳಲ್ಲಿ ಕನಿಷ್ಟ ವಾರಕ್ಕೆ ಏಳೆಂಟು ಚಿತ್ರಗಳು ಬಿಡುಗಡೆಯಾಗಬಹುದು ಎಂಬುದು ಗಾಂಧಿನಗರದ ಲೆಕ್ಕಾಚಾರ. ಹಾಗೇನಾದರೂ ಆದ್ರೆ ಕಳೆದ ವರ್ಷದಂತೆ ಈ ವರ್ಷ ಕೂಡ ಗಾಂಧಿನಗರದಲ್ಲಿ ಮತ್ತೂಮ್ಮೆ ಟ್ರಾಫಿಕ್‌ ಜಾಮ್‌ ಆಗಿ ಅನೇಕ ಚಿತ್ರಗಳು ಹೈರಾಣಾಗುವುದರಲ್ಲಿ ಅನುಮಾನವೇ ಇಲ್ಲ.

Advertisement

ನಿರ್ಮಾಪಕ ಜಯಣ್ಣ ಕೂಡಾ ತಮ್ಮ ನಿರ್ಮಾಣದಲ್ಲಿ ಮೂಡಿಬರುತ್ತಿರುವ, ಶಿವರಾಜಕುಮಾರ್‌ ಅಭಿನಯದ “ರುಸ್ತುಂ’, “ದಾರಿ ತಪ್ಪಿದ ಮಗ’ ಚಿತ್ರವನ್ನು ಜಯಣ್ಣ ಎಲೆಕ್ಷನ್‌ ಮುಗಿದ ಬಳಿಕ ಬಿಡುಗಡೆ ಮಾಡಲು ಪ್ಲಾನ್‌ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡುವ ಮತ್ತೂಬ್ಬ ಹಿರಿಯ ನಿರ್ಮಾಪಕ ಮತ್ತು ವಿತರಕ ಎಂ.ಎನ್‌ ಕುಮಾರ್‌, “ಎಲೆಕ್ಷನ್‌ ಇರಲಿ ಅಥವಾ ಬೇರ್ಯಾವುದೇ ಸಂದರ್ಭವಿರಲಿ, ಪ್ರತಿವಾರ ಐದಾರು ಸಿನಿಮಾಗಳು ರಿಲೀಸ್‌ ಆಗುತ್ತಿದ್ದರೆ, ಅದರಿಂದ ಯಾವ ನಿರ್ಮಾಪಕರಿಗೂ, ವಿತರಕರಿಗೂ ಲಾಭವಾಗುವುದಿಲ್ಲ.

ಇದರಿಂದ ಒಳ್ಳೆಯ ಸಿನಿಮಾಗಳು ಕೂಡ ಸೋಲುತ್ತವೆ. ಇದರ ಬಗ್ಗೆ ಚಿತ್ರೋದ್ಯಮವೇ ಒಂದು ಪರಿಹಾರ ಮಾರ್ಗವನ್ನು ಕಂಡುಕೊಳ್ಳಬೇಕು’ ಎಂಬ ಸಲಹೆಯನ್ನು ಮುಂದಿಡುತ್ತಾರೆ. ಇನ್ನು ಎಲೆಕ್ಷನ್‌, ಪರೀಕ್ಷೆಗಳು, ಐಪಿಎಲ್‌ ಎಲ್ಲವೂ ಒಟ್ಟಿಗೆ ಬಂದಿರುವುದರಿಂದ ನಿರ್ದೇಶಕ ರಿಷಭ್‌ ಶೆಟ್ಟಿ ತಮ್ಮ “ಕಥಾ ಸಂಗಮ’ ಚಿತ್ರದ ಬಿಡುಗಡೆಯನ್ನು ಸುಮಾರು ಎರಡು ತಿಂಗಳು ಪೋಸ್ಟ್‌ ಪೋನ್‌ ಮಾಡಿಕೊಂಡಿದ್ದಾರೆ. ಇವೆಲ್ಲದರ ನಡುವೆ ಯೋಗರಾಜ್‌ ಭಟ್‌ ನಿರ್ದೇಶನದ “ಪಂಚತಂತ್ರ’, ಶಿವರಾಜಕುಮಾರ್‌ ಅಭಿನಯದ “ಕವಚ’,

ರಕ್ಷಿತ್‌ ಶೆಟ್ಟಿ ಅಭಿನಯದ “ಅವನೇ ಶ್ರೀಮನ್ನಾರಾಯಣ’, ಪುನೀತ್‌ ರಾಜಕುಮಾರ್‌ ನಿರ್ಮಾಣದ “ಕವಲುದಾರಿ’, ಕಿಚ್ಚ ಸುದೀಪ್‌ ಅಭಿನಯದ “ಪೈಲ್ವಾನ್‌’, ಅಂಬರೀಶ್‌ ಪುತ್ರ ಅಭಿಷೇಕ್‌ ಅಭಿನಯದ “ಅಮರ್‌’, ಹೀಗೆ ಒಂದಷ್ಟು ನಿರೀಕ್ಷೆ ಮೂಡಿಸಿ ಸದ್ದು ಮಾಡುತ್ತಿರುವ ಚಿತ್ರಗಳು ಇದೇ ಸಮಯದಲ್ಲಿ ತೆರೆಗೆ ಬರಲು ಸಿದ್ಧತೆ ಮಾಡಿಕೊಳ್ಳುತ್ತಿವೆ. ಒಟ್ಟಾರೆ ಎಲೆಕ್ಷನ್‌ ಜೊತೆ ಜೊತೆಗೆ ಹಲವು ವಿಷಯಗಳು ಚಂದನವನದಲ್ಲಿ ತಾಪಮಾನ ಏರಿಕೆಗೆ ಕಾರಣವಾಗಿದ್ದು, ಈ ಬಿಸಿಯಲ್ಲಿ ಯಾರು ಬೇಯುತ್ತಾರೋ ಕಾದು ನೋಡಬೇಕು.

ಒಂದು ಸಿನಿಮಾವನ್ನ ಗೆಲ್ಲಿಸುವುದು ಅಥವಾ ಬೀಳಿಸುವುದು ಎರಡೂ ಮಧ್ಯಮ ವರ್ಗದ ಜನರ ಕೈಯಲ್ಲಿರುತ್ತದೆ. ಅದರಲ್ಲೂ ಪಾಲಿಟಿಕ್ಸ್‌ ಅನ್ನೋದು ಇಂದು ಮಧ್ಯಮ ವರ್ಗದ ಮನೆ ಮನೆಗಳಿಗೂ ತಲುಪುತ್ತಿರುವುದರಿಂದ, ಎಲೆಕ್ಷನ್‌ ಮುಗಿಯುವವರೆಗೂ ಅದರ ಹವಾ, ಅಬ್ಬರ ಇದ್ದೇ ಇರುತ್ತದೆ. ಸುಮಾರು ನಾಲ್ಕು ದಶಕಗಳಿಂದ ಕನ್ನಡ ಚಿತ್ರರಂಗವನ್ನು ನೋಡುತ್ತಿದ್ದೇನೆ. ಪ್ರತಿಬಾರಿಯೂ ಎಲೆಕ್ಷನ್‌ ಅಬ್ಬರ ಜೋರಾಗುತ್ತಲೇ ಇದೆ. ಅದ್ರಲ್ಲೂ ಸಾಮಾನ್ಯವಾಗಿ ಫೆಬ್ರವರಿಯಿಂದ ಏಪ್ರಿಲ್‌ವರೆಗೂ ಚಿತ್ರೋದ್ಯಮದ ವ್ಯವಹಾರ, ವಹಿವಾಟು ಎಲ್ಲವೂ ಕುಂಠಿತವಾಗಿರುತ್ತದೆ. ಮಕ್ಕಳ ಎಕ್ಸಾಂ, ಅಡ್ಮಿಷನ್ಸ್‌, ಬೇಸಿಗೆ, ಬರಗಾಲ ಹೀಗೆ ಮಧ್ಯಮ ವರ್ಗದ ಜನರ ಬೇರೆ ಬೇರೆ ವಿಷಯಗಳು ಚಿತ್ರರಂಗದ ಮೇಲೆ ಪರಿಣಾಮ ಬೀರುತ್ತಿರುತ್ತವೆ. ಅದ್ರಲ್ಲೂ ಈ ಸಮಯದಲ್ಲಿ ಎಲೆಕ್ಷನ್ಸ್‌ ಬಂದರಂತೂ ಹೇಳ್ಳೋದೆ ಬೇಡ. ಎಲೆಕ್ಷನ್ಸ್‌ ಮುಗಿದು ರಿಸೆಲ್ಟ್ ಬರುವವರೆಗೂ ಬಹುತೇಕರು ಅದೇ ಗುಂಗಿನಲ್ಲಿರುತ್ತಾರೆ. ಹಾಗಾಗಿ, ನಾನು ಕಂಡಂತೆ ಈ ವೇಳೆ ರಿಲೀಸ್‌ ಆದ ಸಿನಿಮಾಗಳು ಗೆದ್ದ, ಜನರನ್ನು ರೀಚ್‌ ಆದ ಉದಾಹರಣೆಗಳು ತುಂಬಾ ವಿರಳ.
-ಲಹರಿ ವೇಲು.  

ನಾನು ಗಮನಿಸಿದಂತೆ ಪ್ರತಿವರ್ಷ ಮಾರ್ಚ್‌ನಿಂದ ಜೂನ್‌ವರೆಗೂ ಸಿನಿಮಾ ರಿಲೀಸ್‌ಗೆ ರಾಂಗ್‌ ಟೈಮ್‌. ಅದ್ರಲ್ಲೂ ಈ ವರ್ಷ ಅದೇ ಟೈಮ್‌ನಲ್ಲಿ ಎಲೆಕ್ಷನ್ಸ್‌, ಎಕ್ಸಾಂಸ್‌, ಕ್ರಿಕೆಟ್‌ ಹೀಗೆ ಬೇರೆ ಬೇರೆ ಇರೋದ್ರಿಂದ್ರ ಸಿನಿಮಾಗಳ ರಿಲೀಸ್‌, ಪ್ರೊಡಕ್ಷನ್ಸ್‌, ಪ್ರಮೋಷನ್ಸ್‌ ಎಲ್ಲದರ ಮೇಲೂ ಎಫೆಕ್ಟ್ ಆಗುತ್ತದೆ. ಸಿನಿಮಾಗಳು ಪ್ರತಿವಾರ ರಿಲೀಸ್‌ ಆಗುತ್ತಿರುತ್ತವೆ. ಆದ್ರೆ ಈ ಥರ ಎಲೆಕ್ಷನ್‌ ಐದು ವರ್ಷಕ್ಕೊಮ್ಮೆ ಬರೋದ್ರಿಂದ ಸಹಜವಾಗಿಯೇ ಜನರ ಗಮನ ಆ ಕಡೆಗೆ ಜಾಸ್ತಿ ಇರುತ್ತೆ.
-ರಿಷಭ್‌ ಶೆಟ್ಟಿ

ಎಲೆಕ್ಷನ್‌ ಅಂದ ಮೇಲೆ ಸಿನಿಮಾಗಳ ಮೇಲೂ ಒಂದು ತಿಂಗಳು ಅದರ ಎಫೆಕ್ಟ್ ಇದ್ದೇ ಇರುತ್ತೆ. ನಾನು ಕಂಡಂತೆ, ಸಾಮಾನ್ಯವಾಗಿ ಈ ಟೈಮ್‌ನಲ್ಲಿ ಸಿನಿಮಾಗಳು ರಿಲೀಸ್‌ ಆಗೋದು ಕಡಿಮೆ. ಆದ್ರೆ ಕೆಲವೊಮ್ಮೆ ಸಿನಿಮಾಗಳು ಜಾಸ್ತಿ ಸಂಖ್ಯೆಯಲ್ಲಿದ್ದಾಗ, ಏನೂ ಮಾಡೋದಕ್ಕಾಗಲ್ಲ. ನಿರ್ಮಾಪಕರು, ವಿತರಕರು ಥಿಯೇಟರ್‌ಗಳು ಸಿಗುವ ಸಮಯ ನೋಡಿಕೊಂಡು ಬಿಡುಗಡೆ ಮಾಡಬೇಕಾಗುತ್ತದೆ. ಅದರಲ್ಲೂ ಹೊಸಬರ ಸಿನಿಮಾಗಳು ಒಂದೇ ಸಮಯಕ್ಕೆ ಥಿಯೇಟರ್‌ಗೆ ಬರೋದ್ರಿಂದ ಒಂದಷ್ಟು ಕ್ರೌಡ್‌ ಆದ್ರೂ ಆಗಬಹುದು.
-ಜಯಣ್ಣ, ನಿರ್ಮಾಪಕ, ವಿತರಕ

Advertisement

Udayavani is now on Telegram. Click here to join our channel and stay updated with the latest news.

Next