Advertisement

ಏತ ನೀರಾವರಿ ಕಾಮಗಾರಿ ಚುರುಕು

03:14 PM Jul 19, 2018 | |

ಹಾಸನ: ಜಿಲ್ಲೆಯಲ್ಲಿ ವಿವಾದಾತ್ಮಕ ಯೋಜನೆಯೆಂದೇ ಗುರುತಿಸುವ ಕಾಚೇನಹಳ್ಳಿ ಏತ ನೀರಾವರಿ ಯೋಜನೆಯ 2 ನೇ ಹಂತ ಕೊನೆಗೂ ಪೂರ್ಣಗೊಳ್ಳು ವ ಹಂತ ತಲುಪಿದೆ. ಈಗ ಸಾಕಾರಗೊಳ್ಳುತ್ತಿರುವುದು ಚನ್ನರಾಯಪಟ್ಟಣ ತಾಲೂಕು ದಂಡಿಗನಹಳ್ಳಿ ಹೋಬಳಿಯ ರೈತರಲ್ಲಿ ಸಮಾಧಾನ ತಂದಿದೆ.

Advertisement

ಚನ್ನರಾಯಪಟ್ಟಣ ತಾಲೂಕು ದಂಡಿಗನಹಳ್ಳಿ ಹಾಗೂ ಹೊಳೆನರಸೀಪುರ ತಾಲೂಕಿನ ಹಳೆಕೋಟೆ ಹೋಬಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಕಾಚೇನಹಳ್ಳಿ ಏತ ನೀರಾವರಿ ಯೋಜನೆಯ ಮೊದಲ ಹಂತ 2015 ರ ಏಪ್ರಿಲ್‌ನಲ್ಲಿ ಉದ್ಘಾಟನೆಯಾಗಿತ್ತು. ಯೋಜನೆಯನ್ನು ಉದ್ಘಾ ಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2ನೇ ಹಂತದ ಯೋಜನೆ ಯನ್ನು ಇನ್ನು 3 ತಿಂಗಳೊಳಗೆ ಪೂರ್ಣ ಗೊಳಿಸುವುದಾಗಿ ಪ್ರಕಟಿಸಿದ್ದರು. ಆದರೆ ಅದು ಆಗಿರಲಿಲ್ಲ. ಒಂದು ತಿಂಗಳಿಂದೀಚೆಗೆ ಯೋಜನೆಯ ಕಾಮಗಾರಿ ತ್ವರಿತವಾಗಿ ನಡೆಯುತ್ತಿದೆ. 2ನೇ ಹಂತದ ಯೋಜನೆಯು ಇನ್ನು ಎರಡು- ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, 6,610 ಎಕರೆ ನೀರಾವರಿಗೆ ಒಳಪಡಲಿದೆ.

ಅರಸೀಕೆರೆ ತಾಲೂಕು ಗಂಡಸಿ ಹೋಬಳಿಯ ಭೂ ಭಾಗಕ್ಕೆ ನೀರಾವರಿ ಕಲ್ಪಿಸುವ ಕಾಚೇನಹಳ್ಳಿ ಏತ ನೀರಾವರಿ 3 ನೇ ಹಂತದ ಪರಿಷ್ಕೃತ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧವಾಗಿದ್ದು, ಸುಮಾರು 110 ಕೋಟಿ ರೂ. ಅಗತ್ಯದ ಅಂದಾಜು ಮಾಡಲಾಗಿದೆ. ಈ ಯೋಜನೆಗೆ ಅನುಮೋದನೆ ಪಡೆಯುವ ಪ್ರಯತ್ನ ನಡೆದಿದೆ.

ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಶಂಕುಸ್ಥಾಪನೆ ಮಾಡಿದ ಯೋಜನೆ ನೆನೆಗುದಿಗೆ ಬಿದ್ದು, 2007 ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಚ್‌.ಡಿ.ರೇವಣ್ಣ ಈ ಯೋಜನೆ ಪೂರ್ಣಗೊಳಿಸಲು ಮುಂದಾಗಿದ್ದರು. ಅಂದಾಜು 165 ಕೋಟಿ ರೂ.ಗೆ ಅನುಮೋದನೆ ಪಡೆದುಕೊಂಡರು. ಆದರೆ 2008 ರಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡ ಬಳಿಕ ಯೋಜನೆ ಮತ್ತೆ ಮೂಲೆ ಸೇರಿತು. ರೇವಣ್ಣನವರ ಒತ್ತಡದ ಫ‌ಲವಾಗಿ ಮೊದಲ ಹಂತ 2015 ರಲ್ಲಿ ಪೂರ್ಣಗೊಂಡಿತು. 2 ನೇ ಹಂತದ ಯೋಜನೆಯೂ ಚುರುಕುಗೊಂಡಿತು. ಆದರೆ ಭೂ ಸಾಧೀನದ ಸಮಸ್ಯೆ ಎದುರಾಗಿ ಮುಗಿದಿರಲಿಲ್ಲ. ಈಗ ರೇವಣ್ಣನವರಿಂದಲೇ ಯೋಜನೆ ಚುರುಕುಗೊಂಡಿದೆ. 2 ನೇ ಹಂತದ ಯೋಜನೆಯಿಂದ ಈಗ 1790 ಎಕರೆಗೆ ನೀರು ಹರಿಯುತ್ತಿದ್ದು, ಅಕ್ಟೋಬರ್‌ ವೇಳೆಗೆ ಎಲ್ಲಾ ಕಾಮಗಾರಿ ಪೂರ್ಣಗೊಂಡು ನಿಗದಿತ 6,610 ಎಕರೆಗೆ ನೀರು ಹರಿಯಲಿದೆ ಎಂದು ಇಂಜಿನಿಯರು ಗಳು ಮಾಹಿತಿ ನೀಡಿದ್ದಾರೆ.

ಯಾವ ಹಂತದಲ್ಲಿ ಎಷ್ಟೆಷ್ಟು ನೀರಾವರಿ? : ಮೊದಲ ಹಂತದಲ್ಲಿ ಯೋಜನೆಯಿಂದ ಈಗಾಗಲೇ 1390 ಎಕರೆ ನೀರಾವರಿಯಾಗುತ್ತಿದೆ. 2015 ರ ಏಪ್ರಿಲ್‌ನಿಂದ ಈ ಯೋಜನೆಯ 4 ವಿತರಣಾ ನಾಲೆಗಳಿಂದ ನೀರು ಹರಿಯುತ್ತಿದ್ದು, ಹೊಳೆನರಸೀಪುರ ತಾಲೂಕು ಹಳೆಕೋಟೆ ಹೋಬಳಿಯ ಅತ್ತಿಚೌಡೇನಹಳ್ಳಿ ಮತ್ತು ಒಂಟಿಗುಡ್ಡ ಕಾವಲಿನ ಕೆರೆಗಳಿಗೂ ನೀರು ತುಂಬಿಸಲಾಗುತ್ತಿದೆ. ಚನ್ನರಾಯಪಟ್ಟಣ ತಾಲೂಕು ದಂಡಿಗನಹಳ್ಳಿ ಹೋಬಳಿಯ ಸಜ್ಜೆಕೊಪ್ಪಲು, ನಾರಾಯಣಪುರ, ಸಣ್ಣೇನಹಳ್ಳಿ, ಶೆಟ್ಟಿಗಾನಹಳ್ಳಿ ಸಮುದ್ರವಳ್ಳಿ, ಸಣ್ಣೇನಹಳ್ಳಿ, ಅತ್ತಿಚೌಡೇನಹಳ್ಳಿ, ಸಾಗತವಳ್ಳಿ ಕೆರೆಗೆ ನೀರು ತುಂಬಿಸಲಾಗುತ್ತಿದೆ.

Advertisement

2 ನೇ ಹಂತದಲ್ಲಿ 9 ವಿತರಣಾ ನಾಲೆಗಳಿಂದ ದಂಡಿಗನಹಳ್ಳಿ ಹೋಬಳಿಯ 5385 ಎಕರೆ ಬಿಜುಮಾರನಹಳ್ಳಿಯ 5 ವಿತರಣಾ ನಾಲೆಗಳಿಂದ 1225 ಎಕರೆಗೆ ನೀರಾವರಿಯಾಗುತ್ತಿದ್ದು, ಈ ಹಂತದ 6,610 ಎಕರೆಯ ಪೈಕಿ ಈಗ 1790 ಎಕರೆ ನೀರಾವರಿಯಾಗುತ್ತಿದೆ. ದಂಡಿಗನಹಳ್ಳಿ ಮುಖ್ಯ ನಾಲೆಯ ಒಟ್ಟು 22.5 ಕಿ.ಮೀ.ನಾಲೆಯ ಪೈಕಿ 21 ಕಿ.ಮೀ. ನಾಲೆ ನಿರ್ಮಾಣ ಪೂರ್ಣಗೊಂಡಿದೆ. 1.3 ಕಿ. ಮೀ. ನಾಲೆ ನಿರ್ಮಾಣಕ್ಕೆ ಭೂ ಸ್ವಾಧೀನದ ಸಮಸ್ಯೆ ಎದುರಾಗಿದ್ದು, ಆ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ನಡೆದಿದೆ. ಇನ್ನು ಬಿಜುಮಾರವನಹಳ್ಳಿ ಭಾಗದ ನಾಲೆಯ 8.7 ಕಿ.ಮೀ. ನಾಲೆ ನಿರ್ಮಾಣ ಪೂರ್ಣಗೊಂಡಿದೆ ಎಂದು ಇಂಜಿನಿಯರ್‌ ಮಾಹಿತಿ ನೀಡಿದ್ದಾರೆ.

ಒಟ್ಟು 3 ಹಂತಗಳಿಗೂ ಒಟ್ಟು 0.73 ಟಿಎಂಸಿ ನೀರು ಬಳಸಿಕೊಳ್ಳಲು ಜಲಸಂಪನ್ಮೂಲ ಇಲಾಖೆ ಅನುಮೋದನೆ ನೀಡಿದ್ದು, ಮೊದಲ ಹಂತಕ್ಕೆ 11.88 ಕ್ಯೂಸೆಕ್‌, 2 ನೇ ಹಂತಕ್ಕೆ 56.87 ಕ್ಯೂಸೆಕ್‌, 3 ನೇ ಹಂತಕ್ಕೆ 40.55 ಕ್ಯೂಸೆಕ್‌ ನಿಗದಿಯಾಗಿದೆ.  

ಯಾವ ಯಾವ ಕೆರೆಗಳಿಗೆ ನೀರು? 
ಬಿಜುಮಾರನಹಳ್ಳಿ ನಾಲೆಯ ವ್ಯಾಪ್ತಿಯಲ್ಲಿ  ಮನಾಥನಹಳ್ಳಿ ಕೆರೆ ಮತ್ತು ಶೆಟ್ಟಿಗೌಡನಹಳ್ಳಿ ಕೆರೆ,  ಕತ್ತರಿಘಟ್ಟ, ಬಳದರೆ, ಮುದ್ದನಹಳ್ಳಿ, ಬಿ,ಹೊಸಹಳ್ಳಿ‌,ಬಿಜುಮಾರನಹಳ್ಳಿ, ಶಿವಪುರ, ಬನಕುಪ್ಪೆ, ಶೆಟ್ಟಿಗೌಡನಹಳ್ಳಿ, ಬಿ.ಸಮುದ್ರವಳ್ಳಿ, ಡಿ.ಸಮುದ್ರವಳ್ಳಿ,ಕಟ್ಟೆ, ಒಗ್ಗರಹಳ್ಳಿ, ಕೆ.ಹಿರಿಹಳ್ಳಿ, ಶಾಂತಿಗ್ರಾಮ ಬಿಜುಮಾರನಹಳ್ಳಿ, ಹೊಸಹಳ್ಳಿ ಸೇರಿದಂತೆ ಹಲವು ಕೆರೆಗಳಿಗೆ ನೀರು ಬರಲಿದೆ. 

ದಂಡಿಗನಹಳ್ಳಿ ಹೋಬಳಿಯ ನಾಲೆಯ ವ್ಯಾಪ್ತಿಯಲ್ಲಿ ಡಿ.ಸಮುದ್ರವಳ್ಳಿ, ನಾರಾಯಣಪುರ, ಸಣ್ಣೇನಹಳ್ಳಿ, ಶೆಟ್ಟಿಗೌಡನಹಳ್ಳಿ, ಸೋಮನಾಥನಹಳ್ಳಿ, ಕೋಡಿಹಳ್ಳಿ, ಊಪಿನಹಳ್ಳಿ, ಚೌಡನೇಹಳ್ಳಿ, ಮುದ್ದನಹಳ್ಳಿ, ಬಳದರೆ, ಒಗ್ಗರಹಳ್ಳಿ, ರೇಹಳ್ಳಿ, ತೆಂಕನಹಳ್ಳಿ, ದಂಡಿಗನಹಳ್ಳಿ, ಮುರಾರನಹಳ್ಳಿ, ಧೂತನೂರ ಕಾವಲು, ಅಣ್ಣೇನಹಳ್ಳಿ ಅಪ್ಪೇನಹಳ್ಳಿ ಕೆರೆಗಳು ಹಾಗೂ ತಮ್ಮಲಾಪುರ ಕೆರೆಗೂ ನೀರು ಹರಿಯಲಿದೆ. 

ಕಾಚೇನಹಳ್ಳಿ ಏತ ನೀರಾವರಿ ಯೋಜನೆ 20 ವರ್ಷದಿಂದ ನೆನಗುದಿಗೆ ಬಿದ್ದಿತ್ತು. ಚುನಾವಣೆ ಸಂದರ್ಭದಲ್ಲಿ ಎಚ್‌.ಡಿ.ರೇವಣ್ಣ ಅವರು ಅಧಿಕಾರಕ್ಕೆ ಬಂದ 3 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಹೇಳಿದ್ದರು.

ಅದರಂತೆ ಅವರು ನಡೆದುಕೊಂಡು ಯೋಜನೆ ಪೂರ್ಣಗೊಳಿಸಿ ನೀರು ಹರಿಸಿದರೆ ದಂಡಿಗನಹಳ್ಳಿ ಹೋಬಳಿ ರೈತರು ಎಚ್‌.ಡಿ.ರೇವಣ್ಣ ಅವರನ್ನು ಸದಾಕಾಲ ಸ್ಮರಿಸಿಕೊಳ್ಳುವರು.
 ಸಿ.ಜಿ.ರವಿ, ಅಧ್ಯಕ್ಷ ಚನ್ನರಾಯಪಟ್ಟಣ ತಾಲೂಕು ರೈತ ಸಂಘ

ದಂಡಿಗನಹಳ್ಳಿ ಹೋಬಳಿಯಲ್ಲಿ ಅಂತರ್ಜಲದ ಮಟ್ಟ 1500 ಅಡಿಗೆ ಕುಸಿದಿದೆ. ಕುಡಿಯುವ ನೀರಿಗೂ ಪರದಾಡುತ್ತಿದ್ದೇವೆ. ತೆಂಗಿನ ಮರಗಳಂತೂ ನಾಶವಾಗಿವೆ. ಏತನೀರಾವರಿ ಯೋಜನೆಯಿಂದ ಕೆರೆಗಳನ್ನು ತುಂಬಿಸಿದರೆ ರೈತರು ನೆಮ್ಮದಿ ಕಂಡುಕೊಳ್ಳಲಿದ್ದಾರೆ. 
 ಅಣ್ಣೇನಹಳ್ಳಿ ನಾಗಣ್ಣ, ರೈತ

ಚುನಾವಣೆ ವೇಳೆ ಎಚ್‌.ಡಿ.ರೇವಣ್ಣ 6 ತಿಂಗಳೊಳಗೆ ಕಾಚೇನಹಳ್ಳಿ ಏತ ನೀರಾವರಿ ಯೋಜನೆಯ 2 ನೇ ಹಂತವನ್ನು 6 ತಿಂಗಳೊಳಗೆ ಪೂರ್ಣಗೊಳಿಸದಿದ್ದರೆ ರಾಜಕೀಯ ಸನ್ಯಾಸ ತೆಗೆದುಕೊಳ್ಳುವುದಾಗಿ ಹೇಳಿದ್ದರು.
  ಗುರುಪ್ರಸಾದ್‌, ಯಲಿಯೂರು, ಏತ ನೀರಾವರಿ ಹೋರಾಟ ಸಮಿತಿ ಮುಖಂಡ. 

Advertisement

Udayavani is now on Telegram. Click here to join our channel and stay updated with the latest news.

Next