Advertisement

ಯಾವ ಅಂಶವನ್ನು ಗಮನದಲ್ಲಿಟ್ಟುಕೊಂಡು ಮತ ಚಲಾಯಿಸುತ್ತೀರಿ?

11:27 AM Apr 12, 2019 | Team Udayavani |
ನಮ್ಮ ಕ್ಷೇತ್ರದ ಅಭಿವೃದ್ಧಿ ಹಾಗೂ ಇಲ್ಲಿನ ಜನರೊಂದಿಗೆ ಆ ಅಭ್ಯರ್ಥಿ ಹೊಂದಿರುವ ಒಡನಾಟವನ್ನು ಗಮನದಲ್ಲಿಟ್ಟು
ಕೊಂಡು ಮತ ಹಾಕುವೆ.
 ● ಮುನಿ, ಆರ್‌.ಟಿ.ನಗರ ನಿವಾಸಿ
ಭಾರತಕ್ಕೆ ವಿಶ್ವ ಮಟ್ಟದಲ್ಲಿ ಸ್ಥಾನ ದೊರಕಿಸುವವರಿಗೆ ನನ್ನ ಮತ. ದೇಶವನ್ನು ಉಗ್ರಗಾಮಿಗಳಿಂದ ರಕ್ಷಿಸುವ ಸಂಕಲ್ಪ ಹೊಂದಿದವರು ನನ್ನ ಆಯ್ಕೆ.
 ● ಪವನ್‌.ಎ.ಎಸ್‌, ವಿದ್ಯಾರ್ಥಿ
ಪಕ್ಷ ಮತ್ತು ಸಿದ್ಧಾಂತವನ್ನು ಗಮನದಲ್ಲಿರಿಸಿಕೊಂಡು ಮತ ಚಲಾವಣೆ ಮಾಡುತ್ತೇನೆ. ಯುವ ಪೀಳಿಗೆಗೆ ಆದ್ಯತೆ ನೀಡಿ, ಅವರಿಗೂ ಮಹತ್ತರ ಜವಾಬ್ದಾರಿ ನೀಡಿದ ಪಕ್ಷಕ್ಕೆ ಓಟ್‌ ಹಾಕಲು ನಿರ್ಧರಿಸಿದ್ದೇನೆ.
 ● ಸಾಗರ್‌, ಐಟಿಐ ವಿದ್ಯಾರ್ಥಿ
ದೇಶದ ಆಡಳಿತ ಸಮ್ಮಿಶ್ರ ಸರ್ಕಾರದ ಕೈಯಲ್ಲಿದ್ದರೆ ಎತ್ತು ಎರಿಗೆ ಎಳೆದರೆ ಕೋಣ ನೀರಿಗೆ ಎಳೆದಂತೆ ಆಗಲಿದೆ. ಪೂರ್ಣ ಬಹುಮತವಿರುವ ಪಕ್ಷ ಆಡಳಿತಕ್ಕೆ ಬರಬೇಕು. ಹೀಗಾಗಿ ಪಕ್ಷ ನೋಡಿ ಓಟ್‌ ಮಾಡುವೆ.
 ● ಅರ್ಜುನ್‌, ರೇಷ್ಮೆ ಸೀರೆ ವ್ಯಾಪಾರಿ
ಕಾವೇರಿ, ಗಡಿ ವಿವಾದ ಹಾಗೂ ಕನ್ನಡ ಭಾಷೆ ವಿಷಯದ ಬಗ್ಗೆ ಪಕ್ಷಗಳ ನಿಲುವು ಗಮನಿಸಿ ಮತ ಚಲಾವಣೆ ಮಾಡಲಾಗುವುದು. ಕೇಂದ್ರದಲ್ಲಿ ರಾಜ್ಯದ ಪರವಾಗಿ ಮಾತನಾಡುವವರಿಗೆ ನನ್ನ ಮತ.
 ● ದಕ್ಷಿಣಾಮೂರ್ತಿ, ಕಲಾವಿದ
ಇದು ದೇಶದ ಸಮರ್ಥ ನಾಯಕ ನನ್ನು ಆಯ್ಕೆ ಮಾಡುವ ಸಮಯ. ಹಾಗಾಗಿ ರಾಷ್ಟ್ರೀಯ ವಿಷಯಗಳಲ್ಲಿ ನಾಯಕರು ನಡೆದುಕೊಂಡ ರೀತಿಯನ್ನು ಗಮನಿಸಿ ಮತ ಚಲಾವಣೆ ಮಾಡಲಾಗುವುದು.
 ● ಶಿವಾನಂದ ಕೆ. ಬಡಿಗೇರ್‌, ಶಿಕ್ಷಕ
ರಾಷ್ಟ್ರೀಯ ವಿಚಾರಗಳಲ್ಲಿ ಕೇಂದ್ರ ಸರ್ಕಾರ ಕೈಕೊಂಡ ನಿರ್ಧಾರ ಹಾಗೂ ಈ ಬಗ್ಗೆ ವಿರೋಧ ಪಕ್ಷಗಳು ಚರ್ಚಿಸಿದ ರೀತಿ ಗಮನಿಸಿ ಓಟ್‌ ಮಾಡಿದರೆ ದೇಶಕ್ಕೆ ಉತ್ತಮ ನಾಯಕರು ದೊರೆಯುತ್ತಾರೆ.
 ● ಲಾವಣ್ಯ, ಖಾಸಗಿ ಕಂಪನಿ ಉದ್ಯೋಗಿ
ಅಭ್ಯರ್ಥಿಗಳು ಸ್ಥಳೀಯ ಮಟ್ಟದಲ್ಲಿ ಯಾವ ರೀತಿ ಕೆಲಸ ಮಾಡಿದ್ದಾರೆ, ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ಯಾವೆಲ್ಲಾ ಯೋಜನೆ ರೂಪಿಸಿ ಅನುಷ್ಠಾನಗೊಳಿಸಿದ್ದಾರೆ ಎಂಬು ದನ್ನು ನೋಡಿ ಓಟ್‌ ಮಾಡುವೆ.
 ● ಲಕ್ಷ್ಮೀ, ಹೊರಗುತ್ತಿಗೆ ಸಿಬ್ಬಂದಿ
ಮೊದಲು ನನ್ನ ಕ್ಷೇತ್ರದ ಅಭ್ಯರ್ಥಿ, ನಂತರ ರಾಜ್ಯ ಮತ್ತು ರಾಷ್ಟ್ರ. ಸಂಸ ದರು ತಾವು ಪ್ರತಿನಿಧಿಸಿದ ಕ್ಷೇತ್ರದ ಅಭಿವೃದ್ಧಿಯನ್ನು ಯಾವ ರೀತಿ ಮಾಡಿದ್ದಾರೆ ಎಂದು ಗಮನಿಸಿ ಅಭ್ಯರ್ಥಿಗೆ ಮತ ಹಾಕಲಾಗುವುದು.
 ● ಆಯಿಷಾ, ಹೊರಗುತ್ತಿಗೆ ಸಿಬ್ಬಂದಿ
ಕಳಂಕರಹಿತ, ಭ್ರಷ್ಟಚಾರ ರಹಿತ ಶುದ್ಧ ವ್ಯಕ್ತಿಗೆ ಮತ ಈ ಬಾರಿ ನನ್ನ ಮತ ಮೀಸಲಿರಲಿದೆ. ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಗೌರವ ಸಿಗುವಂತೆ ಮಾಡುವವರಿಗೆ ಓಟ್‌ ಮಾಡಲಾಗುವುದು.
 ● ವಿಭಾ, ಖಾಸಗಿ ಸಂಸ್ಥೆ ಉದ್ಯೋಗಿ
Advertisement

Udayavani is now on Telegram. Click here to join our channel and stay updated with the latest news.

Next