Advertisement

ರೈತರ ಸಮಸ್ಯೆ ಪರಿಹಾರ ಆಗಿಲ್ಲ ಏಕೆ? 

10:31 AM Jun 17, 2017 | Sharanya Alva |

ನಮ್ಮ ದೇಶದ ರೈತರು ಕಳೆದ ಕೆಲವು ದಿನಗಳಿಂದ ತಮ್ಮ ಪರಿಸ್ಥಿತಿಯತ್ತ ಜನನಾಯಕರ ಗಮನ ಸೆಳೆಯಲು ಎಲ್ಲಾ
ರೀತಿಯ ಪ್ರಯತ್ನ ಮಾಡಿದ್ದಾರೆ. ತಮಿಳುನಾಡಿನ ರೈತರ ಕಥೆಯನ್ನೇ ನೋಡಿ. ಅವರು ತಮ್ಮ ರಾಜ್ಯದಿಂದ ರಾಜ್ಯಧಾನಿ
ದಿಲ್ಲಿಗೆ ಬಂದು ಎಷ್ಟೋ ದಿನಗಳವರೆಗೆ ಜಂತರ್‌ಮಂತರ್‌ನಲ್ಲಿ ತರಹೇವಾರಿ ರೀತಿಯಲ್ಲಿ ಪ್ರತಿಭಟನೆ ಮಾಡಿದರು. ದೇಶದ ದೊಡ್ಡ ದೊಡ್ಡ ರಾಜಕಾರಣಿಗಳೆಲ್ಲ ಅವರನ್ನು ಮಾತನಾಡಿಸಲು ಜಂತರ್‌ಮಂತರ್‌ಗೆ ದೌಡಾಯಿಸಿದರು. ಹೀಗೆ ಹೋದವರಲ್ಲಿ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಕೂಡ ಇದ್ದರು. ಆದರೆ ಪ್ರಧಾನಮಂತ್ರಿಯನ್ನು ಭೇಟಿ ಮಾಡಲು ಮಾತ್ರ ಈ ರೈತರಿಗೆ ಆಗಲಿಲ್ಲ. ಕೊನೆಗೂ ತಮಿಳುನಾಡಿನ ಕೆಲವು ರಾಜಕಾರಣಿಗಳು ಈ ರೈತರ ಬಳಿ ತೆರಳಿ ಕೆಲವು ಆಶ್ವಾಸನೆಗಳನ್ನು ಕೊಟ್ಟ ನಂತರವೇ ಅವರೆಲ್ಲ ಪ್ರತಿಭಟನೆ ನಿಲ್ಲಿಸಿ ತಮ್ಮ ರಾಜ್ಯಕ್ಕೆ ಹಿಂದಿರುಗಿದರು. ನಂತರದ ಸರದಿ ಮಹಾರಾಷ್ಟ್ರದ ರೈತರದ್ದು. ತಮಗೆ ಸಾಲಮನ್ನಾ ಮಾಡಬೇಕೆಂದು ಆಗ್ರಹಿಸಿ ಆ ರಾಜ್ಯದ ಸಾವಿರಾರು ರೈತರು ಬೃಹತ್‌ ಜಾಥಾ ಮೂಲಕ ಮುಂಬೈಗೆ ತಲುಪಿದರು. ಈ ಘಟನೆ ನಡೆಯುವ ಹೊತ್ತಿನಲ್ಲೇ ಅತ್ತ ಮಧ್ಯಪ್ರದೇಶದ ರೈತರ ಕುರಿತ ಸುದ್ದಿ ಬಿತ್ತರವಾಗತೊಡಗಿತು. ಮಧ್ಯಪ್ರದೇಶದಲ್ಲಿ ರೈತಾಂದೋಲನ ಎಷ್ಟು ಹಿಂಸಾ ರೂಪ  ಪಡೆಯಿತೆಂದರೆ, ಪೊಲೀಸರ ಗುಂಡಿಗೆ ಆರು ರೈತರು ಜೀವ ಕಳೆದುಕೊಂಡರು. ಈ ಘಟನೆ ನಡೆಯುತ್ತಿದ್ದಂತೆ ವಿಪಕ್ಷಗಳ ನಾಯಕರೆಲ್ಲ ರೈತರ ಹೆಸರಿನಲ್ಲಿ ಮೊಸಳೆ ಕಣ್ಣೀರು ಸುರಿಸುತ್ತಾ ತಮ್ಮ ಬೇಳೆ ಬೇಯಿಸಿಕೊಂಡರು.

Advertisement

ಮಧ್ಯಪ್ರದೇಶದ ರೈತರ ಆಕ್ರೋಶದ ಬಗ್ಗೆ ಮಾತನಾಡುವ ವೇಳೆಯಲ್ಲೇ ಒಂದು ವಿಷಯ ನೆನಪಿಟ್ಟುಕೊಳ್ಳಬೇಕು. ಆ
ರಾಜ್ಯದ ರೈತರಿಗೆ ಶಿವರಾಜ್‌ ಸಿಂಗ್‌ ಚೌಹಾಣ್‌ ಸರ್ಕಾರ ಕೊಟ್ಟಷ್ಟು ಅನುದಾನ ಬೇರಾವ ಸರ್ಕಾರವೂ ಇದುವರೆಗೂ
ದಯಪಾಲಿಸಿಲ್ಲ. ಹಾಗಿದ್ದರೆ, ಮಧ್ಯಪ್ರದೇಶದ ಪ್ರಸಕ್ತ ಸರ್ಕಾರ ರೈತರಿಗಾಗಿ ಅಷ್ಟೊಂದು ಕೊಡುಗೆ ನೀಡಿದರೂ ಇಂಥ ಘಟನೆ ನಡೆದಿದ್ದೇಕೆ? ಇಂಥ ಘಟನೆಗಳು ನಡೆಯುತ್ತಲೇ ಇರುವುದೇಕೆ? ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ. ನಾವು ಸಮಸ್ಯೆಗೆ ಬೇರೆ ಆಯಾಮದಲ್ಲಿ ಉತ್ತರ ಹುಡುಕಲು ಪ್ರಯತ್ನಿಸಬೇಕು. ಅಂದರೆ ಬೇರೆ ಪ್ರಶ್ನೆಯನ್ನೇ ನಾವು ಕೇಳಿಕೊಳ್ಳಬೇಕಾಗುತ್ತದೆ.

ಗ್ರಾಮೀಣ ಭಾರತೀಯರ ಸಮಸ್ಯೆಗಳು ಪರಿಹಾರವಾಗುತ್ತಿಲ್ಲವೆಂದರೆ, ಆ ಸಮಸ್ಯೆಗಳ ಬಗ್ಗೆ ನಾವು ವಿಶ್ಲೇಷಣೆ ಮಾಡುತ್ತಿರುವ ರೀತಿಯೇ ಸರಿಯಿಲ್ಲವೇ? ಎನ್ನುವುದು ಆ ಪ್ರಶ್ನೆಯಾಗಬೇಕು. ನನಗಂತೂ ಅನ್ನಿಸುವುದು ಹೀಗೆಯೇ! ಹಾಗೆಂದು ಕೃಷಿ ಕ್ಷೇತ್ರಗಳ ಸಮಸ್ಯೆಗಳ ಬಗ್ಗೆ ನನಗೆ ವಿಶೇಷ ಜ್ಞಾನವಿದೆ ಎಂದೇನೂ ನಾನು ಹೇಳುತ್ತಿಲ್ಲ. ನಾನು ಕೃಷಿ ತಜ್ಞೆಯೂ ಅಲ್ಲ. ಆದರೆ ನನ್ನ ಸಹೋದರನೂ ಕೃಷಿಕನಾಗಿರುವುದರಿಂದ, ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನಾನೂ ಅಷ್ಟಿಷ್ಟು ತಿಳಿದುಕೊಂಡಿದ್ದೇನೆ.

ಮಧ್ಯಪ್ರದೇಶದಲ್ಲಿ ಆದ ಹಿಂಸಾಚಾರದ ಬಗ್ಗೆ ಸಹೋದರನೊಂದಿಗೆ ಮಾತನಾಡಿದೆ. ಅದೇಕೆ ರೈತರ ಸಮಸ್ಯೆಗಳು ಬಗೆಹರಿಯುತ್ತಿಲ್ಲ, ಈ ರೀತಿಯ ಘಟನೆಗಳು ಪದೇ ಪದೆ ಆಗುತ್ತಿರುವುದೇಕೆ ಎಂದು ಪ್ರಶ್ನಿಸಿದೆ. ಅದಕ್ಕೆ ಆತ ಹೇಳಿದ ಎಲ್ಲಿಯವರೆಗೂ ರಾಜಧಾನಿ ದಿಲ್ಲಿಯಲ್ಲಿ ಕುಳಿತಿರುವ ಕೃಷಿ ಪಂಡಿತರು ಬದಲಾಗುವುದಿಲ್ಲವೋ, ಅಲ್ಲಿಯವರೆಗೂ
ದೇಶದಲ್ಲಿ ರೈತರ ಸಮಸ್ಯೆ ಬಗೆಹರಿಯುವುದಿಲ್ಲ. ಅಂದರೆ, ಇಂದು ದೇಶದಲ್ಲಿ ರೈತರ ಬಳಿ ಹೆಚ್ಚು ಜಮೀನು ಉಳಿದೇ ಇಲ್ಲ, ಇರುವ ಅಲ್ಪಸ್ವಲ್ಪ ಜಮೀನಿನಿಂದ ಬರುವ ಆದಾಯ ತೀರಾ ಕಡಿಮೆ ಎನ್ನುವುದನ್ನು ಈ ಕೃಷಿ ತಜ್ಞರು ಅರ್ಥಮಾಡಿಕೊಳ್ಳಬೇಕು.

ಇಂದು ಬಹುತೇಕ ರೈತರ ಆದಾಯ ಮಹಾನಗರಗಳಲ್ಲಿನ ಮನೆಗೆಲಸದವರಿಗಿಂತಲೂ ಕಡಿಮೆಯಿದೆ. ಒಂದು ಎಕರೆ ಜಮೀನಿರುವ ರೈತ ವರ್ಷಕ್ಕೆ 40,000 ರೂಪಾಯಿ ದುಡಿಯುತ್ತಾನೆಂದರೆ, ಆತನ ಬದುಕು ಹೇಗೆ ನಡೆಯಬೇಕು?
ತನ್ನ ಕುಟುಂಬವನ್ನು ಆತ ಹೇಗೆ ಸಲಹಬೇಕು? ನಿಜ, ರೈತರ ಬದುಕು ಬಹಳ ಕಷ್ಟದಲ್ಲಿದೆ. ಈ ಮಾತು 
ರಾಜಕಾರಣಿಗಳಿಗೂ ತುಂಬಾ ಚೆನ್ನಾಗಿಯೇ ತಿಳಿದಿದೆ! 

Advertisement

ಆದರೆ ಅವರು ರೈತರ ಸಮಸ್ಯೆಯ ಪರಿಹಾರಕ್ಕೆ ಮಾತ್ರ ಅವೇ ಹಳೆಯ ಮಾರ್ಗಗಳನ್ನು ಆಯ್ದುಕೊಳ್ಳುತ್ತಿದ್ದಾರೆ. ವಿದ್ಯುತ್‌ ಫ್ರೀಯಾಗಿ ಕೊಟ್ಟುಬಿಡಿ, ನೀರು ಉಚಿತವಾಗಿ ಬಿಟ್ಟುಬಿಡಿ, ಅವರ ಸಾಲ ಮನ್ನಾ ಮಾಡಿಬಿಡಿ ಎನ್ನುವುದೇ ರಾಜಕಾರಣಿಗಳ ಮಂಡೆಯಲ್ಲಿರುವ ಪರಿಹಾರೋಪಾಯಗಳು. ಆದರೆ ವಾಸ್ತವವೇನೆಂದರೆ, ರೈತರಿಗೆ ಇಂದು ಬೇಕಿರುವುದು ಈ ಪುಕ್ಕಟೆ ಕೊಡುಗೆಗಳಲ್ಲ, ಬದಲಾಗಿ ಅವರಿಗೆ ರಸ್ತೆ ಬೇಕು, ನೀರಾವರಿ ವ್ಯವಸ್ಥೆ ಬೇಕು, ಕೋಲ್ಡ್‌ ಸ್ಟೋರೇಜ್‌ ವ್ಯವಸ್ಥೆ ಬೇಕು. ಇವುಗಳ ಅಭಾವದಿಂದಾಗಿಯೇ ಇಂದು ದೇಶದಲ್ಲಿ ಉತ್ಪಾದನೆಯಾಗುವ ಅರ್ಧಕ್ಕರ್ಧ ತರಕಾರಿ ಮತ್ತು ಹಣ್ಣುಗಳು ಮಾರುಕಟ್ಟೆಗೆ ತಲುಪುವ ಮುನ್ನವೇ ಕೆಟ್ಟು ಹೋಗುತ್ತಿವೆ. ಒಂದು ಅಂದಾಜಿನ ಪ್ರಕಾರ ಬ್ರಿಟನ್‌ನ ಜನರು ವರ್ಷಕ್ಕೆ ಎಷ್ಟು ಪ್ರಮಾಣದಲ್ಲಿ ಆಹಾರ ಸೇವಿಸುತ್ತಾರೋ, ಅಷ್ಟು ಪ್ರಮಾಣದ ಆಹಾರ ನಮ್ಮ ಹೊಲಗಳಲ್ಲೇ ಕೊಳೆತುಹೋಗುತ್ತಿದೆ.

ಈಗ ನಾವು ಈ ಪ್ರಶ್ನೆಯನ್ನು ಕೇಳಲೇಬೇಕಿದೆ. ಅದೇಕೆ ಗ್ರಾಮೀಣ ರಸ್ತೆಗಳನ್ನು ಉತ್ತಮಪಡಿಸಲು, ಕೋಲ್ಡ್‌
ಸ್ಟೋರೇಜ್‌ಗಳನ್ನು ಅಭಿವೃದ್ಧಿಪಡಿಸಲು, ಗ್ರಾಮೀಣ ಕೃಷಿ ಉದ್ಯೋಗಗಳನ್ನು ಹೆಚ್ಚಿಸಲು ಸರ್ಕಾರಗಳು ಮುಂದಾಗುತ್ತಿಲ್ಲ? ಏಕೆ ಈ ಸೌಕರ್ಯಗಳಿಗೆ ಅಗತ್ಯವಿರುವಷ್ಟು ಹಣ ಬಿಡುಗಡೆಯಾಗುತ್ತಿಲ್ಲ?  ಈ ಪ್ರಶ್ನೆ ಎದುರಾದ ತಕ್ಷಣ ಹಾಗಿದ್ದರೆ ಸಾಲಮನ್ನಾಕ್ಕೆ ಬೇಡಿಕೆ ಇಡುವ ಬದಲು ರೈತರೆಲ್ಲ ಇವುಗಳಿಗಾಗಿ ಪ್ರತಿಭಟನೆ ಏಕೆ ಮಾಡುತ್ತಿಲ್ಲ? ಎಂದು ಕೆಲವರು ವಾದಿಸಬಹುದು. ಏಕೆ ಅಂದರೆ ನಮ್ಮ ಬಹುತೇಕ ರೈತರು ಅನಕ್ಷರಸ್ಥರು. ರಾಜಕಾರಣಿಗಳೆಲ್ಲ ತಮ್ಮ ಹಿತಾಸಕ್ತಿಗಾಗಿ ಅನ್ನದಾತನ ಹಾದಿ ತಪ್ಪಿಸುತ್ತಿದ್ದಾರೆ. ಸತ್ಯವೇನೆಂದರೆ ಎಲ್ಲಿಯವರೆಗೂ ಭಾರತ ಕೃಷಿ ಪ್ರಧಾನ
ರಾಷ್ಟ್ರವಾಗಿರುತ್ತದೋ, ಅಲ್ಲಿಯವರೆಗೂ ರಾಜಕಾರಣಿಗಳು ರೈತರಿಗೆ ಸಾಲಮನ್ನಾದ ಆಮಿಷವೊಡ್ಡಿ, ಉಚಿತ ಕೊಡುಗೆಗಳನ್ನು ಎದುರಿಟ್ಟು ಓಟ್‌ ಬ್ಯಾಂಕ್‌ ರೂಪದಲ್ಲಿ ಲಾಭಮಾಡಿಕೊಳ್ಳುತ್ತಲೇ ಇರುತ್ತಾರೆ.

ಜಗತ್ತಿನ ದೊಡ್ಡಣ್ಣನೆಂದು ಕರೆಸಿಕೊಳ್ಳುವ ಅಮೆರಿಕದ ವಿಷಯಕ್ಕೇ ಬರುವುದಾದರೆ, ಆ ಸಂಯುಕ್ತ ರಾಷ್ಟ್ರದಲ್ಲಿ
ಕೇವಲ ಎರಡು ಪ್ರತಿಶತ ಜನ ಮಾತ್ರ ಇಂದು ಕೃಷಿಯನ್ನು ಅವಲಂಬಿಸಿದ್ದಾರೆ. ನಮ್ಮ ನೆರೆ ರಾಷ್ಟ್ರ ಚೀನಾದತ್ತ ಗಮನ
ಹರಿಸಿದರೆ, ಈಗ ಆ ಜನಬಾಹುಳ್ಯದ ದೇಶದಲ್ಲಿ ಕೇವಲ 30 ಕೋಟಿ ಮಂದಿ ಮಾತ್ರ ಕೃಷಿ ಕೆಲಸಗಳಿಂದ ಹೊಟ್ಟೆ
ತುಂಬಿಕೊಳ್ಳುತ್ತಿದ್ದಾರೆ. ಇನ್ನು, ಕೃಷಿ ಜವಾಬ್ದಾರಿ ಆಯಾ ರಾಜ್ಯ ಸರ್ಕಾರಗಳಿಗೆ ಸಂಬಂಧಪಟ್ಟ ವಿಷಯ ಎನ್ನುವುದನ್ನು ಒಪ್ಪಿಕೊಳ್ಳೋಣ. ಆದರೆ ಕೇಂದ್ರ ಸರ್ಕಾರದಲ್ಲಿ ಕೃಷಿ ಸಚಿವಾಲಯವೂ ಇದೆಯಲ್ಲ? ಅದು ಅಸ್ತಿತ್ವದಲ್ಲಿರುವುದೇಕೆ? ಏಕೆಂದರೆ ದೇಶದ ಕೃಷಿ ವಲಯದಲ್ಲಿ ನಿಜವಾದ ಪರಿವರ್ತನೆಯ ಅಗತ್ಯ ಎದುರಾದರೆ, ಕೇಂದ್ರ ಕೃಷಿ ಮಂತ್ರಿಗಳು ಅದರಲ್ಲಿ ಪ್ರಮುಖ ಪಾತ್ರ ನಿರ್ವಹಿಸಬೇಕು ಎನ್ನುವ ಕಾರಣಕ್ಕಾಗಿಯೇ. ಆಗಲೇ ಹೇಳಿದಂತೆ ರೈತರ ಸಮಸ್ಯೆ ಇಂದಿಗೂ ಮುಂದುವರಿದಿರುವುದಕ್ಕೆ ಪ್ರಮುಖ ಕಾರಣವೆಂದರೆ, ದಶಕಗಳಿಂದಲೂ ನಮ್ಮ ದೇಶದ ಕೃಷಿ ನೀತಿ ಬಹಳ ಕೆಟ್ಟದಾಗಿದೆ ಎನ್ನುವುದೇ ಆಗಿದೆ.

ತಮ್ಮ ತಪ್ಪು ನೀತಿಗಳೇ ರೈತರ ಸಮಸ್ಯೆಗಳ ಮೂಲ ಎನ್ನುವ ಕಠೊರ ಸತ್ಯವನ್ನು ಈಗಲಾದರೂ ನಮ್ಮ ರಾಜಕಾರಣಿಗಳು ಅರ್ಥಮಾಡಿಕೊಳ್ಳಲಿ. ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಕೃಷಿ ಕ್ಷೇತ್ರದಲ್ಲಿ ಕಣ್ಣಿಗೆ ಗೋಚರಿಸುವಂಥ  ಬದಲಾವಣೆಗಳೇನೂ ಆಗಿಲ್ಲ. ಒಂದು ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನಿಜಕ್ಕೂ ಕೃಷಿ ವಲಯದಲ್ಲಿ ಪರಿವರ್ತನೆ ಮತ್ತು ವಿಕಾಸ ತರಲು ಪ್ರಯತ್ನಿಸುತ್ತಿದ್ದಾರೆ ಎಂದಾದರೆ ಅವರು ತಮ್ಮ ಮುಖ್ಯಮಂತ್ರಿಗಳಿಗೆ ಕೂಡಲೇ ಆದೇಶ ಕಳುಹಿಸಬೇಕು. ಇನ್ಮುಂದೆ ಸಾಲ ಮನ್ನಾ ಮಾಡುವ ಬದಲು, ಅದೇ ಹಣವನ್ನು ಕೃಷಿ ಕ್ಷೇತ್ರ ಅನುಭವಿಸುತ್ತಿರುವ ಅಭಾವವನ್ನು ತೊಡೆದುಹಾಕಲು ಬಳಸಿ ಎಂದು ಮೋದಿ ತಮ್ಮ ಮುಖ್ಯಮಂತ್ರಿಗಳಿಗೆಲ್ಲ ಹೇಳಬೇಕು.

ಸರ್ಕಾರಗಳು ರೈತರ ವಿಷಯದಲ್ಲಿ ಈ ರೀತಿಯಾಗಿ ಹಣ ವಿನಿಯೋಗಿಸಲು ಮುಂದಾಗಬೇಕು. ಆಗ ಮಾತ್ರ ಬದಲಾವಣೆ ಸಾಧ್ಯ. ಇಲ್ಲದಿದ್ದರೆ ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದರೂ ನಮ್ಮ ರೈತರು ಮಾತ್ರ ಬಡತನದಲ್ಲೇ ಬದುಕು ಕಳೆಯುತ್ತಾರೆ; ದಶಕಗಳಿಂದ ಕಳೆಯುತ್ತಾ ಬಂದಂತೆಯೇ!

ತವ್ಲೀನ್‌ ಸಿಂಗ್‌(ಲೇಖಕರು ಹಿರಿಯ ಪತ್ರಕರ್ತರು)

Advertisement

Udayavani is now on Telegram. Click here to join our channel and stay updated with the latest news.

Next