Advertisement

ಜಂಗಮಹಲ್‌ ಜಿಲ್ಲೆಗಳ ಮೇಲೆಯೇ ಎಲ್ಲರ ಕಣ್ಣು

02:53 PM Mar 20, 2021 | Team Udayavani |

ಪಶ್ಚಿಮ ಬಂಗಾಲದ ಅರಣ್ಯ ಪ್ರದೇಶದಲ್ಲಿ ಸೋಮ ವಾರ ಎರಡು ಹುಲಿಗಳ ಹೋರಾಟ. ಆ ಪೈಕಿ ಒಂದು ಗಾಯಾಳು ಹುಲಿ.
ಈ ಬಾರಿಯ ಚುನಾವಣೆಯಲ್ಲಿ ಹೆಚ್ಚು ಸುದ್ದಿಯಾ ಗುತ್ತಿರುವುದೇ ಈ ಅರಣ್ಯ ಪ್ರದೇಶಗಳಿಂದ. ಯಾಕೆಂದರೆ, ತೃಣ ಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿಗೆ 2019ರ ಕನಸು ಎಲ್ಲಿ ಮರುಕಳಿಸುತ್ತದೋ ಎಂಬ ಆತಂಕ. ಅದೇ ಬಿಜೆಪಿಗೆ 2019ರ ಲೋಕಸಭೆ ಚುನಾವಣೆಯಲ್ಲಿ ಬಿಡಿದ ಚಿತ್ರಕ್ಕೆ ಮತ್ತಷ್ಟು ಬಣ್ಣ ತುಂಬುವ ಆಸೆ.

Advertisement

ಅದಕ್ಕೇ ಆಸ್ಪತ್ರೆಯಲ್ಲಿದ್ದ ಮಮತಾ ಸಹ ಗಾಲಿ ಕುರ್ಚಿ ಮೇಲೆ ಕುಳಿತು ಪುರುಲಿಯಾದಲ್ಲಿ ಕೇಂದ್ರದ ವಿರುದ್ಧ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಬ್ಬರಿಸುತ್ತಿದ್ದರೆ, ಅಲ್ಲೇ ಹತ್ತಿರದ ಮತ್ತೂಂದು ಜಿಲ್ಲೆ ಬಂಕುರಾದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಮತಾ ವಿರುದ್ಧ ಗುಡುಗುತ್ತಿದ್ದರು. ಇಬ್ಬರ ಲೆಕ್ಕಾಚಾರ ಜೋರಾಗಿ ನಡೆಯುತ್ತಿರುವುದು ಇಲ್ಲಿಯೇ. ಆಗಲೇ ವ್ಯಾಖ್ಯಾನಿಸಿದಂತೆ, ಒಬ್ಬರಿಗೆ ಮನೆಯಿಂದ ಹೊರಗೆ ಹೋದವರನ್ನು ವಾಪಸು ತರುವ “ಘರ್‌ ವಾಪಸಿ’ಸವಾಲು. ಮತ್ತೂಬ್ಬರಿಗೆ ತಮ್ಮ ವಿರೋಧಿಯ ತಂತ್ರಕ್ಕೆ ತಡೆಯೊಡ್ಡಿ, ಬುಡಕಟ್ಟು ವರ್ಗದ ಮತ ಬ್ಯಾಂಕಿನ ಮೇಲೆ ತಮ್ಮ ಪ್ರಭಾ ವಲಯವನ್ನು ಮತ್ತಷ್ಟು ವಿಸ್ತರಿಸುವ ಆಸೆ. ಇಬ್ಬರದ್ದೂ ಗೆಲ್ಲುವ ತಂತ್ರಗಳೇ.

ಹಾಗಾದರೆ ಈ ಬುಡಕಟ್ಟು ಜಿಲ್ಲೆಗಳೇಕೆ ಇಬ್ಬರ ನಿದ್ದೆಯನ್ನೂ ಕೆಡಿಸಿವೆ? ಅದರಲ್ಲೂ ಮಮತಾ ಅವರ ನಿದ್ದೆಯನ್ನು ಎಂಬುದು ಕುತೂಹಲದ ಸಂಗತಿಯೇ. ಅದಕ್ಕೇ ಆಸ್ಪತ್ರೆಯಲ್ಲಿದ್ದ ಮಮತಾ ಅವರೂ ಗಾಲಿ ಕುರ್ಚಿಯಲ್ಲಾದರೂ ಪರವಾಗಿಲ್ಲ ಎಂದು ಚುನಾವಣ ಪ್ರಚಾರಕ್ಕೆ ಇಳಿದದ್ದು. ಇಂದು (ಮಾ. 15) ಅಮಿತ್‌ ಶಾರ ಬೇಟೆ ನಡೆಯುತ್ತಿರುವುದು ಬಂಕುರಾ ಮತ್ತಿತರ ಪ್ರದೇಶದಲ್ಲಿ. ಒಂದುವೇಳೆ ಶಾ ಏನಾದರೂ ವಶೀಕರಣ ತಂತ್ರ ಬಳಸಿಬಿಟ್ಟರೆ ಆಮೇಲೆ ಏನೂ ಮಾಡುವಂತಿಲ್ಲ ಎಂಬುದು ಮಮತಾರ ಲೆಕ್ಕಾಚಾರ.

ದಕ್ಷಿಣ ಬಂಗಾಲದ ವ್ಯಾಪ್ತಿಯ ಜಂಗಮಹಲ್‌ ಜಿಲ್ಲೆಗಳೆಂದು ಕರೆಯಲಾಗುವ ಪುರುಲಿಯಾ, ಬಂಕುರಾ, ಪಶ್ಚಿಮ ಮಿಡ್ನಾಪುರ ಹಾಗೂ ಜಾರ್‌ಗ್ರಾಮ್‌, ಇದರೊಂದಿಗೆ ಉತ್ತರ ಬಂಗಾಲದ ಜಲಪಾಯ್‌ಗಾರಿ, ಅಲಿ ಪು ರ್‌ ದ್ವಾ ರ್‌, ಕೂಚ್‌ ಬೆಹಾರ್‌ ಜಿಲ್ಲೆಗಳೂ ಈ ಚುನಾವಣೆಯಲ್ಲಿ ಎರಡೂ ಪ್ರಮುಖ ಪಕ್ಷಗಳ ಗಮನವನ್ನು ಸೆಳೆದಿವೆ. ವಿಶೇಷವಾಗಿ ಜಂಗಮಹಲ್‌ ನ ಮೊದಲ ನಾಲ್ಕು ಜಿಲ್ಲೆಗಳಲ್ಲಿ 2019 ರ ಲೋಕಸಭಾ ಚುನಾವಣೆಯಲ್ಲಿ ತೃಣ ಮೂಲ ಕಾಂಗ್ರೆಸ್‌ಗೆ ಭೂಕಂಪನವೇ ಆಗಿತ್ತು. ಬುಡಕಟ್ಟು ಜನಾಂಗದ ಬಹುತೇಕ ಮತಗಳು ಬಿಜೆಪಿ ಪಾಲಾಗಿದ್ದವು. ಈ ಮತ ಬ್ಯಾಂಕ್‌ ತೃಣಮೂಲಕ್ಕಿಂತ ಮೊದಲು ಎಡರಂಗ ಹಾಗೂ ಕಾಂಗ್ರೆಸ್‌ನದ್ದಾಗಿತ್ತು. ಅದೀಗ ಸಂಪೂರ್ಣ ವಲಸೆ ಹೋಗಿವೆ. ದಕ್ಷಿಣ ಬಂಗಾಲದ ಬುಡಕಟ್ಟು ಜಿಲ್ಲೆಗಳಲ್ಲಿ 30ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಿವೆ.

2019ರ ಕನಸು
2019ರ ಲೋಕಸಭೆ ಚುನಾವಣೆಯಲ್ಲಿ ಆದ ಬಹಳ ದೊಡ್ಡ ಬೆಳವಣಿಗೆಯೆಂದರೆ, ಒಂದನೆಯದು- ಎಡರಂಗದ ಕಡೆಗಿದ್ದ ಬುಡಕಟ್ಟು ಜನಾಂಗದವರ ಮತಗಳು ಬಹುತೇಕ ಬಿಜೆಪಿಗೆ ವರ್ಗಾವಣೆಯಾದದ್ದು. ಎರಡನೆಯದು-ಎಡರಂಗ ಹಾಗೂ ಕಾಂಗ್ರೆಸ್‌ ಲೆಕ್ಕಕ್ಕೇ ಇಲ್ಲದಂತಾಗಿದ್ದು. ತೃಣಮೂಲ ಕಾಂಗ್ರೆಸ್‌ ಹಾಗೂ ಬಿಜೆಪಿಯ ಈಗಿನ ಸ್ಪರ್ಧೆಗೆ (ಈ ವಿಧಾನಸಭೆ ಚುನಾವಣೆ) ವೇದಿಕೆ ಸಿದ್ಧಪಡಿಸಿದ್ದು.

Advertisement

ಆ ಚುನಾವಣೆಯಲ್ಲಿ ಬಿಜೆಪಿಯು ತೃಣಮೂಲ ಕೈಯಲ್ಲಿದ್ದ 12, ಸಿಪಿಐನಲ್ಲಿದ್ದ 2 ಹಾಗೂ ಯುಪಿಎ ಮೈತ್ರಿಕೂಟದ (ಕಾಂಗ್ರೆಸ್‌, ಎಡರಂಗ ಒಳಗೊಂಡಂತೆ) ನ 2 ಸೀಟುಗಳನ್ನು ಸೆಳೆದುಕೊಂಡಿದ್ದು. 2014ರಲ್ಲಿ ತೃಣಮೂಲ ಕಾಂಗ್ರೆಸ್‌ 34 ಲೋಕಸಭಾ ಕ್ಷೇತ್ರ ಗೆದ್ದಿದ್ದರೆ, ಸಿಪಿಐ 2 ಗೆದ್ದಿತ್ತು. ಯುಪಿಎ 4 ಗೆದ್ದಿತ್ತು. ಆಗ ಬಿಜೆಪಿ 2 ಸ್ಥಾನಗಳನ್ನಷ್ಟೇ ಗೆದ್ದಿತ್ತು. ಆದರೆ 2019 ರಲ್ಲಿ ತೃಣಮೂಲಕ್ಕೂ ಮತ ಹಂಚಿಕೆಯಲ್ಲಿ ಶೇ. 3.46ರಷ್ಟು ಲಾಭವಾಗಿತ್ತು. ಅದಕ್ಕಿಂತ ಹೆಚ್ಚಾಗಿ ಬಿಜೆಪಿಗೆ ಶೇ. 22.76ರಷ್ಟು ಹೆಚ್ಚುವರಿ ಮತಗಳು ಲಭಿಸಿದ್ದವು. ಒಟ್ಟು ಗಳಿಸಿದ ಮತ ಪ್ರಮಾಣ ಶೇ. 40.71. ಇದೇ 2009ರಲ್ಲಿ ಬಿಜೆಪಿ ಸ್ಪರ್ಧೆಯಲ್ಲೇ ಇರಲಿಲ್ಲ.

ಈ ಕೆಟ್ಟ ಕನಸೇ ಮಮತಾರನ್ನು ಕಾಡುತ್ತಿರುವುದು. ಇದೇ ಸಂದರ್ಭದಲ್ಲಿ 2019ರಲ್ಲಿ ಸಿಕ್ಕ ಮತದಾರರ ಬೆಂಬಲ ಆ ಬಳಿಕ ಕೆಲವು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ ಸಿಕ್ಕಿದೆ. ಹೀಗಾಗಿಯೇ ಬಿಜೆಪಿ ಸಹ ಪಶ್ಚಿಮ ಬಂಗಾಲದಲ್ಲಿ ಅಧಿಕಾರ ಹಿಡಿಯುವ ದಿನಗಳು ಹತ್ತಿರವಾಗಿವೆ ಎನ್ನುತ್ತಿರುವುದು.

– ಅಶ್ವಘೋಷ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next