Advertisement

ಅಧಿಕಾರಿಗೆ ಸಡ್ಡು; ನಂದಿಗ್ರಾಮ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧೆ: ಮಮತಾ ಬ್ಯಾನರ್ಜಿ ಸವಾಲು

03:18 PM Jan 18, 2021 | Team Udayavani |

ಕೋಲ್ಕೊತಾ: ಪಶ್ಚಿಮಬಂಗಾಳದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರದಿಂದಲೇ ಅಖಾಡಕ್ಕಿಯುವುದಾಗಿ ಪಶ್ಚಿಮಬಂಗಾಳ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಸೋಮವಾರ(ಜನವರಿ 18, 2021) ಘೋಷಿಸಿದ್ದಾರೆ. ನಂದಿಗ್ರಾಮ ಟಿಎಂಸಿ ತೊರೆದು ಬಿಜೆಪಿ ಸೇರ್ಪಡೆಗೊಂಡಿರುವ ಸುವೇಂದು ಅಧಿಕಾರಿಯ ಭದ್ರಕೋಟೆಯಾಗಿದೆ.

Advertisement

“ಕೆಲವರು ಪಕ್ಷವನ್ನು ತೊರೆದಿರುವುದು ಒಳ್ಳೆಯದು” ಎಂದು ಸುವೇಂದು ಅಧಿಕಾರಿ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದರು. ಕೆಲವರು ಇಲ್ಲಿಂದ(ಟಿಎಂಸಿ) ಅಲ್ಲಿಗೆ(ಬಿಜೆಪಿ) ವಲಸೆ ಹೋಗಿದ್ದಾರೆ. ಅವರು ನಮ್ಮ ಸ್ಥಳೀಯ ನಾಯಕರ ವಿರುದ್ಧವೇ ಸ್ಪರ್ಧಿಸಬೇಕಾಗಿದೆ. ಈ ಬಗ್ಗೆ ಚಿಂತಿಸಬೇಕಾಗಿಲ್ಲ ಯಾಕೆಂದರೆ ತೃಣಮೂಲ ಕಾಂಗ್ರೆಸ್ ಸ್ಥಾಪನೆಯಾಗುವಾಗ ಈ ವ್ಯಕ್ತಿಗಳು ಇರಲಿಲ್ಲವಾಗಿತ್ತು. ಇದರಿಂದಾಗಿ ಕೆಲವರು ಪಕ್ಷ ತೊರೆದದ್ದು ಒಳ್ಳೆಯದಾಗಿದೆ ಎಂದು ಹೇಳಿದರು.

ರೈತರ ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, ಬಿಜೆಪಿ ರೈತರನ್ನು ವಂಚಿಸುತ್ತಿದೆ. ನಂದಿಗ್ರಾಮ ಅದಕ್ಕೆ ಸುಗಮ ಹಾದಿ ಮಾಡಿಕೊಟ್ಟಿದ್ದು, ಇಂದು ಪಂಜಾಬ್ ರೈತರು ಕೂಡಾ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ನಾವು ರೈತರ ಜತೆಗಿದ್ದೇವೆ. ಬಿಜೆಪಿ ಮೂರು ಕಾಯ್ದೆಗಳನ್ನು ರದ್ದುಪಡಿಸಲೇಬೇಕು ಎಂದು ತಿಳಿಸಿದರು.

2020ರ ಡಿಸೆಂಬರ್ ನಲ್ಲಿ ಟಿಎಂಸಿ ಪ್ರಭಾವಿ ಮುಖಂಡ, ಸಚಿವ ಸುವೇಂದು ಅಧಿಕಾರಿ ರಾಜೀನಾಮೆ ನೀಡಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಸುವೇಂದು ಅಧಿಕಾರಿ ಪುರ್ಬಾ ಮೇದಿನಿಪುರ್ ಜಿಲ್ಲೆಯ ನಂದಿಗ್ರಾಮ ಕ್ಷೇತ್ರದ ಶಾಸಕರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next