Advertisement

ಸಲ್ಲದು, ಕಟ್ಟಗಳ ಅವಗಣನೆ

08:06 AM Jul 20, 2017 | Team Udayavani |

ನಮ್ಮ ಹಿರಿಯರ ಜ್ಞಾನಕ್ಕೆ ಕಟ್ಟಗಳು ಸಾಕ್ಷಿ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಟ್ಟದ ನೀರು ಅಂತರ್ಜಲ
ಸಂರಕ್ಷಣೆಯಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸುತ್ತದೆ. ಕಟ್ಟಗಳ ಸುದ್ದಿ ಮಾತನಾಡುತ್ತಿದ್ದಂತೆ, ಮತ್ತೂಂದೆಡೆ ಸರಕಾರ ಪ್ರಣೀತ ಕಿಂಡಿ ಅಣೆಕಟ್ಟುಗಳ ನಿರ್ಮಾಣ, ನಿರ್ವಹಣೆ, ಜನರ ಗೊಣಗಾಟ ಕೇಳಿಸುತ್ತಿದೆ.

Advertisement

ಜುಲೈ ಮೊದಲ ವಾರ. ಮಂಗಳೂರಿನ ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್‌ ಕಚೇರಿಯಲ್ಲಿ ನೀರಿನ ಮಾತುಕತೆ. ಮುಖ್ಯ
ಕಾರ್ಯನಿರ್ವಾಹಣಾಧಿಕಾರಿ ಡಾ| ರವಿ ಅಧ್ಯಕ್ಷತೆ. ಇಲಾಖೆಯ ಜವಾಬ್ದಾರಿ ಸ್ಥಾನದಲ್ಲಿರುವ ಅಧಿಕಾರಿಗಳ ಉಪಸ್ಥಿತಿ. ಪಾರಂಪರಿಕ ಜಲಸಂರಕ್ಷಣಾ ವಿಧಾನಗಳನ್ನು ಅನುಸರಿಸಿದ, ಮುಖ್ಯವಾಗಿ ಕಟ್ಟಗಳ ಕುರಿತು ವಿಶೇಷ ಜ್ಞಾನ ಹೊಂದಿರುವ ಕೃಷಿಕರ ಅನುಭವಕ್ಕೆ ಅಂದು ಅಧಿಕಾರಿಗಳು ಕಿವಿಯಾಗಿದ್ದರು. ಎಲ್ಲ ಸರಕಾರಿ ಸಭೆಗಳಿಗೆ ಅಂಟುವ ಚಾಳಿಯಂತೆ ಕಾಲಮಿತಿಯು ಅಂದೂ ಬಾಧಿಸಿತು!

“”ಕಟ್ಟದ ವಿವಿಧ ವಿನ್ಯಾಸಗಳು ಗೊತ್ತಿರಲಿಲ್ಲ. ಅದನ್ನು ಉಳಿಸುವ ಯತ್ನ ಮಾಡಬೇಕು. ಇದಕ್ಕಿರುವ ಸರಕಾರಿ ಮಾರ್ಗದರ್ಶಕ ಸೂತ್ರಗಳನ್ನು ತಿದ್ದುಪಡಿ ಮಾಡಬೇಕು” ಎನ್ನುವ ಆಶಯ ಡಾ| ರವಿಯವರದ್ದು. ಜಲಸಂರಕ್ಷಣೆಯ ಶಾಶ್ವತ ರಚನೆಗಳಿಗೆ ಮಾತ್ರ ಸರಕಾರದ ಅನುದಾನ. ಮಳೆಗಾಲ ಮುಗಿದ ತತ್‌ಕ್ಷಣ ಕಟ್ಟಗಳ ಕೆಲಸಗಳು ನಡೆಯುತ್ತವೆ. ಮಳೆಗಾಲ ಅರಂಭವಾಗುವಾಗ ಕಟ್ಟಿದ ಕಟ್ಟಗಳನ್ನು ಬಿಚ್ಚಬೇಕಾದುದು ಅನಿವಾರ್ಯ. ಈ ಹಿನ್ನೆಲೆಯಲ್ಲಿ ಸರಕಾರ ಹೇಳುವ ಶಾಶ್ವತ ರಚನೆಗಳು ಎನ್ನುವ ಪದಪುಂಜಗಳು ಕಟ್ಟಗಳಿಗೆ ಅನ್ವಯಿಸುವುದಿಲ್ಲ. ಹಾಗಾಗಿಯೇ ಇರಬೇಕು, ಇಲಾಖೆಯ ಕಡತದೊಳಗೆ ಕಟ್ಟದ ಮಾಹಿತಿಗಳ ಕಟ್ಟುಗಳಿಲ್ಲದಿರುವುದು! 

ಮಳೆಗಾಲದ ಕೊನೆಗೆ ಕರಾವಳಿ, ಮಲೆನಾಡುಗಳಲ್ಲಿ ಹರಿಯುವ ತೋಡು, ಹಳ್ಳ ಮತ್ತು ಕಿರು ನದಿಗಳಿಗೆ ಅಡ್ಡವಾಗಿ ಕಟ್ಟವನ್ನು ಕಟ್ಟುವುದು ಪಾರಂಪರಿಕ ವಿಧಾನ. ಇದು ಕೃಷಿಕ ಜ್ಞಾನ. ಹಳ್ಳಿಗೆ ಗೌರವ. ಹೆಚ್ಚು ತನುಶ್ರಮವನ್ನು ಬೇಡುವ ಕಟ್ಟಗಳ ನಿರ್ಮಾಣದಲ್ಲಿ ಎಲ್ಲೂ ಗೊಣಗಾಟವಿಲ್ಲ. ಅದೊಂದು ಹಳ್ಳಿಯ ಕರ್ತವ್ಯ. ವೈಯಕ್ತಿಕ ಬದ್ಧತೆ. ಕಟ್ಟದಲ್ಲಿ ಏರಿ ನಿಂತ ನೂರಾರು ಎಕ್ರೆ ಕೃಷಿ ಭೂಮಿಗೆ ಆಸರೆ. ಕುಡಿಯುವ ನೀರಿನ ಮೂಲಗಳಿಗೆ ಒಸರು. ಶತಮಾನ ಇತಿಹಾಸದ ಕಟ್ಟಗಳ ಪರಂಪರೆ ಈಗಲೂ ಸಕ್ರಿಯ. ಎಲ್ಲ ಕಟ್ಟಗಳ ಹಿಂದೆ ಸರಕಾರದ ಒಂದು ಪೈಸೆಯೂ ಇಲ್ಲದಿರುವುದು ಗಮನಿಸಬೇಕಾದ ಅಂಶ. ಹಾಗಾಗಿ ಕಟ್ಟಗಳ ಪರಂಪರೆ ಉಳಿದುಕೊಂಡಿದೆ. 

ಮಹಾರಾಷ್ಟ್ರದ ವನರಾಯ್‌ ಟ್ರಸ್ಟ್‌ ಕಳೆದೆರಡು ದಶಕಗಳಲ್ಲಿ ಇಪ್ಪತ್ತು ಲಕ್ಷ ಮರಳ ಚೀಲದ ಕಟ್ಟಗಳನ್ನು ನಿರ್ಮಿಸಿದೆ! ಟ್ರಸ್ಟ್‌
ನೇತೃತ್ವದಲ್ಲಿ ನಿರ್ಮಾಣವಾಗುವ ಕಾರಣ ಕಟ್ಟ (ಬಂಧಾರ)ಗಳಿಗೆ ವನರಾಯ್‌ ಬಂಧಾರ ಎಂದೇ ಹೆಸರು. ಮಳೆಗಾಲದ ಅನಂತರ ಚಿಕ್ಕ ನದಿ, ನಾಲಾಗಳಲ್ಲಿ ಹರಿಯುವ ನೀರನ್ನು ತಡೆಯಲು ತುಂಬಾ ಸರಳ ವಿಧಾನ. ಟ್ರಸ್ಟ್‌ ಈ ಕಟ್ಟಗಳ ಕುರಿತು ವ್ಯಾಪಕವಾಗಿ ಪ್ರಚಾರ ಮಾಡುತ್ತಿದೆ. ಶಾಲಾ, ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುತ್ತಿದೆ. ಸತತ ಯತ್ನದ ಫ‌ಲವಾಗಿ ಸರಕಾರವು ಈ ರಚನೆಯನ್ನು ಅಂಗೀಕರಿಸಿದೆ. ಟ್ರಸ್ಟಿನ ಅಧ್ಯಕ್ಷ ದಿ| ಮೋಹನ್‌ ಧಾರಿಯಾ ಬಂಧಾರಗಳ ಕುರಿತು ಸರಕಾರ ಗಮನ ಸೆಳೆದಿದ್ದರು.

Advertisement

ನೆರೆಯ ಕಾಸರಗೋಡು ಜಿಲ್ಲೆಯ ಏತಡ್ಕ ಹಳ್ಳಿಯು ವಿವಿಧ ವಿನ್ಯಾಸದ ಕಟ್ಟಗಳ ಊರು. ಇಲ್ಲಿನ ಕಟ್ಟಗಳಿಗೆ ಏನಿಲ್ಲವೆಂದರೂ ಮುಕ್ಕಾಲು ಶತಮಾನದ ಇತಿಹಾಸವಿದೆ. ಹತ್ತು ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಒಂದೇ ನದಿ ಮತ್ತು ಅದರ ಕವಲುಗಳಿಗೆ ಇಪ್ಪತ್ತೆçದಕ್ಕೂ ಮಿಕ್ಕಿ ಸಣ್ಣ, ದೊಡ್ಡ ಕಟ್ಟಗಳನ್ನು ಕಟ್ಟುತ್ತಾರೆ. 1993ರಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಬರ ಬಂದಿದ್ದರೂ ಕಟ್ಟಗಳು ಬದುಕನ್ನು ತಂಪಾಗಿಸಿವೆ. “”ಕಲ್ಲು, ಮಣ್ಣುಗಳಿಂದ ರಚಿತವಾದ ಕಟ್ಟಗಳು ಒಂದು ರಚನೆಯಲ್ಲ. ಅದೊಂದು ಬದುಕು. ಅದಕ್ಕೆ ಸಾಮಾಜಿಕ ಮೌಲ್ಯವಿದೆ. ಒಂದೊಂದು ಕಲ್ಲುಗಳಲ್ಲೂ ಮನಸ್ಸಿದೆ, ಭಾವವಿದೆ. ಕಟ್ಟಗಳು ಸಮುದಾಯದ ಮಾನ” ಎನ್ನುತ್ತಾರೆ ಚಂದ್ರಶೇಖರ ಏತಡ್ಕ.

ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮಕ್ಕೆ ಬನ್ನಿ. ಇಲ್ಲಿನ ಮುಖ್ಯ ಕೃಷಿ ಭತ್ತ. ಹರಿಯುವ ತೋಡು, ತೊರೆಗಳಿಗೆ ಕಟ್ಟಹಾಕಿ ನೀರನ್ನು ಸಂಗ್ರಹಿಸಿ ಕೃಷಿ ಮಾಡಲಾಗುತ್ತದೆ. ಇಲ್ಲಿ ಹಳ್ಳಗಳಿಗೆ ವಿವಿಧ ಕಡೆಗಳಲ್ಲಿ ಒಡ್ಡುಗಳನ್ನು ನಿರ್ಮಿಸಿ ಕಾಲುವೆ, ತೋಡುಗಳ ಮೂಲಕ ನೀರಾವರಿ ಮಾಡುತ್ತಿದ್ದಾರೆ. ಹದಿಮೂರು ಹಳ್ಳಗಳು ಹರಿಯುತ್ತಿದ್ದು ಸುಮಾರು ಎಪ್ಪತ್ತೈದಕ್ಕೂ ಮಿಕ್ಕಿ ಕಟ್ಟಗಳು ಭತ್ತದ ಕೃಷಿಯನ್ನು ಜೀವಂತವಿಟ್ಟಿದೆ. “”ಸ್ವಾರ್ಥಪರ ಯೋಚನೆಗಳಿಂದ ಕಟ್ಟ ಸಂಸ್ಕೃತಿಗೆ ಇಳಿಲೆಕ್ಕ ಆರಂಭವಾಗಿದೆ. ಜನರಲ್ಲಿ ಉದಾಸೀನ ಪ್ರವೃತ್ತಿ ಹೆಚ್ಚಾಗಿದೆ. ಅಭಿವೃದ್ಧಿಯ ಕುರಿತು ತಪ್ಪು ಕಲ್ಪನೆಗಳಿವೆ. ಹೀಗಾಗಿ ಕೆಲವೊಂದು ಕಟ್ಟಗಳಿಂದ ಸ್ಥಳೀಯರು ವಿಮುಖರಾಗುತ್ತಿದ್ದಾರೆ” ತಮ್ಮೂರಿನ  ಕಟ್ಟಗಳಿಗೆ ಬಿ.ಕೆ. ಪರಮೇಶ್ವರ ರಾವ್‌ ದನಿಯಾಗುತ್ತಾರೆ.

ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ ಕಟ್ಟಗಳನ್ನು ರಚಿಸಲಾಗುತ್ತದೆ. ಕೃಷಿಯಲ್ಲಿ ಸಹಾಯಕರ ಅಲಭ್ಯದಿಂದಾಗಿ ಸಕಾಲಕ್ಕೆ ಕಟ್ಟವನ್ನು ನಿರ್ಮಿಸುವುದೂ ಸವಾಲಿನ ಕೆಲಸ. ಈ ಹಿನ್ನೆಲೆಯಲ್ಲಿ ಅಡ್ಯನಡ್ಕದ ಡಾ| ವಾರಣಾಶಿ ಕೃಷ್ಣಮೂರ್ತಿಯವರ ಕಲ್ಪನೆಯ ಮರಳ ಚೀಲದ
ಕಟ್ಟ ಯಶ ಪಡೆದಿದೆ. ಮಣ್ಣಿನ ಬದಲಿಗೆ ಮರಳಿನ ಚೀಲದ ಬಳಕೆ. ಜತೆಗೆ ಸಿಲ್ಪಾಲಿನ್‌ ಪ್ಲಾಸ್ಟಿಕ್‌ ಹಾಳೆಯ ಬಳಕೆ. ತಮಗಾಗಿ ಮಾಡಿ ಕೊಂಡಿದ್ದ ಈ ರಚನೆಗಳು “ವಾರಣಾಸಿ ಮರಳ ಚೀಲದ ಕಟ್ಟ’ ಎಂದೇ ಪ್ರಸಿದ್ಧ. ಇದೇ ಮಾದರಿಯ ಕಟ್ಟಗಳು ಕರಾವಳಿಯಲ್ಲಿ ಹಬ್ಬಿವೆ. 

ವಿಟ್ಲದ ಒಕ್ಕೆತ್ತೂರು ಹೊಳೆಗೆ ಅಡ್ಡವಾಗಿ ಕಟ್ಟಿದ ಮರಳಿನ ಕಟ್ಟ ಒಂದು ವಿಶೇಷ ಮಾದರಿ. ಸುತ್ತಲಿನ ಹದಿಮೂರು ಅಡಿಕೆ ಕೃಷಿ
ಕುಟುಂಬಗಳ ಅರುವತ್ತು ಎಕ್ರೆ ತೋಟದ ಜೀವನಾಡಿ. ಕಟ್ಟದ ವ್ಯಾಪ್ತಿಯಲ್ಲಿರುವ ಸುಮಾರು ನೂರೈವತ್ತು ಬಾವಿಗಳಲ್ಲಿ ಕುಡಿಯುವ ನೀರಿದೆ. ಉಪತೋಡುಗಳಲ್ಲಿ ಹರಿವಿದೆ. ಸುತ್ತುಮುತ್ತಲಿನ ಬಹುತೇಕ ಕೊಳವೆಬಾವಿಗಳಿಗೆ ನೀರುಣಿಸುವ ನೀರಪಾತ್ರೆ ಇದೇ ಕಟ್ಟ. ಹೊಯಿಗೆ ಮತ್ತು ಪ್ಲಾಸ್ಟಿಕ್‌ ಹಾಸು ಇವೆರಡೇ ಮುಖ್ಯ ಸಂಪನ್ಮೂಲ. ಕಟ್ಟದ ನಿರ್ಮಾಣಕ್ಕೆ ಯಂತ್ರಗಳ ಅವಲಂಬನೆ.
ನಮ್ಮ ಹಿರಿಯರ ಜ್ಞಾನಕ್ಕೆ ಕಟ್ಟಗಳು ಸಾಕ್ಷಿ. ದಕ್ಷಿಣಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆಗಳಲ್ಲಿ ಕಟ್ಟದ ನೀರು ಅಂತರ್ಜಲ ಸಂರಕ್ಷಣೆಯಲ್ಲಿ ದೊಡ್ಡ ಪಾತ್ರ ವಹಿಸುತ್ತದೆ. ಕಟ್ಟಗಳ ಸುದ್ದಿ ಮಾತನಾಡುತ್ತಿದ್ದಂತೆ, ಮತ್ತೂಂದೆಡೆ ಸರಕಾರ ಪ್ರಣೀತ ಕಿಂಡಿ ಅಣೆಕಟ್ಟುಗಳ ನಿರ್ಮಾಣ, ನಿರ್ವಹಣೆ, ಜನರ ಗೊಣಗಾಟ ಕೇಳಿಸುತ್ತಿದೆ. ವಿಫ‌ಲ ಅಣೆಕಟ್ಟುಗಳ ಮುಂದೆ ಸಾಂಪ್ರದಾಯಿಕ ಕಟ್ಟಗಳನ್ನು ಕಟ್ಟಿದ ದೃಷ್ಟಾಂತಗಳಿವೆ. ಯಾಕೆ ಕಿಂಡಿ ಅಣೆಕಟ್ಟುಗಳ ಮೇಲೆ ಜನರಿಗೆ ಅಸಮಾಧಾನ? ಈ ವಿಚಾರದ ಪೋಸ್ಟ್‌ಮಾರ್ಟಂ ಮಾಡಲು ಹೋದರೆ ನಿರಾಶೆಯ ಉತ್ತರ ಸಿಗುತ್ತದೆ, ಬಿಡಿ. 

ಈ ಮಧ್ಯೆ ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್‌ 2017-18ರಲ್ಲಿ ಕನಿಷ್ಠ ಒಂದು ಸಾವಿರ ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ ಸಂಕಲ್ಪ ಮಾಡಿದೆ. ಪ್ರತಿ ಪಂಚಾಯತ್‌ ವ್ಯಾಪ್ತಿಯಲ್ಲಿ ಕನಿಷ್ಠ ಐದು ಕಿಂಡಿಗಳ ನಿರ್ಮಾಣ. ಪ್ರತಿ ಅಣೆಕಟ್ಟಿಗೆ ರೂ.2.32ರಿಂದ ರೂ. 5 ಲಕ್ಷದ ಅನುದಾನ ಬಳಸಿಕೊಳ್ಳಲು ಅವಕಾಶ. ಇದಕ್ಕೆ ಸುಮಾರು 43 ಕೋಟಿ ರೂ. ನರೇಗಾ ಅನುದಾನವನ್ನು ಬಳಸುವ ಗುರಿ. ಇಪ್ಪತ್ತು ಸಾವಿರ ಅರ್ಹರಿಗೆ ಉದ್ಯೋಗ ಸೃಷ್ಟಿ. ಇದಕ್ಕೆ ಜಲಧಾರ ಯೋಜನೆ ಎಂದು ಹೆಸರಿಟ್ಟಿದ್ದಾರೆ. ಮಾರ್ಚ್‌ 2018ರೊಳಗೆ ಯೋಜನೆಗಳನ್ನು  ಪೂರ್ಣಗೊಳಿಸುವ ಗುರಿ. 

“”ಕಟ್ಟಗಳು ಕೂಡ ಸರಕಾರದ ಮಾರ್ಗದರ್ಶಿ ಸೂಚಿಗೆ ಸೇರಬೇಕು. ಶಾಶ್ವತ ರಚನೆಗಳಲ್ಲ ಎನ್ನುವ ಕಾರಣಕ್ಕೆ ನೀರಿನ ಸುಸ್ಥಿರತೆಯನ್ನು ಕಾಪಾಡುವ ಕಟ್ಟಗಳನ್ನು ಆಡಳಿತ ಕಡೆಗಣಿಸುವುದು ಸರಿಯಲ್ಲ” ಎಂದು ಜಲತಜ್ಞ ಶ್ರೀಪಡ್ರೆಯವರಿಂದ ಒತ್ತಾಯ. “”ಕಿಂಡಿ ಅಣೆಕಟ್ಟುಗಳಿಗೆ ವ್ಯಯಿಸುವ ಹಣದ ಹತ್ತನೇ ಒಂದು ಪಾಲನ್ನು ನಮಗೆ ಬಿಸಾಕಿ, ನಾವು ಕಟ್ಟ ಕಟ್ಟಿಕೊಳ್ಳುತ್ತೇವೆ” ಎಂದ ಡಾ| ವಾರಣಾಶಿ ಕೃಷ್ಣಮೂರ್ತಿಯವರ ಹಾಸ್ಯಮಿಶ್ರಿತ ಖಾರದ ಮಾತುಗಳು ವರಿಷ್ಠರಿಗೆ ಚುಚ್ಚಿತೋ ಇಲ್ಲವೋ ಗೊತ್ತಾಗಲಿಲ್ಲ! ಅಧಿಕಾರಿಗಳು ಮತ್ತು ಕೃಷಿಕರು ಮುಖಾಮುಖೀಯಾದುದು ಉತ್ತಮ ಬೆಳವಣಿಗೆ. ಆದರೆ ಈ ಮುಖಾಮುಖೀಯ ಫಾಲೋಅಪ್‌ ಆಗಬೇಕು. ಕಟ್ಟದ ಕುರಿತಾದ ಸರಕಾರದ ಮಾರ್ಗಸೂಚಿಯ ಬದಲಾವಣೆಗೆ ಒತ್ತಡ ತರಬೇಕು. ಈ ವಿಚಾರವನ್ನು ಸರಕಾರಕ್ಕೆ ಬರೆದರೆ ನೋಡುವ, ಓದುವ, ಮನನಿಸುವ ಮನಃಸ್ಥಿತಿ ಮೇಲಿನವರಿಗಿದೆಯೇ ನೋಡಬೇಕು.

“”ಸ್ಥಳ ಆಯ್ಕೆ, ನಿರ್ಮಾಣ, ನಿರ್ವಹಣೆಯ ಹಂತದಲ್ಲಿ ರೈತ ವಿಶ್ವಾಸ ಪಡೆಯುವ ಯತ್ನವೇ ಮಾಡದ ಈ ಸರಕಾರಿ ಒಡ್ಡುಗಳು ಕಾಂಕ್ರೀಟ್‌ ಸ್ಮಾರಕಗಳಾಗಿವೆ. ಕರಾವಳಿ, ಘಟ್ಟದ ಹೊಳೆ ಹಳ್ಳಗಳಲ್ಲಿ ಕೋಟ್ಯಂತರ ರೂಪಾಯಿ ಕಾಮಗಾರಿಗಳು ನಿರುಪಯುಕ್ತವಾಗಿ ನಿಂತಿವೆ. ನಾವು ನಿರ್ಮಿಸಿದ್ದನ್ನು ರೈತರು ಬಳಸುತ್ತಿಲ್ಲ ಎಂಬುದು ಇಲಾಖೆಗಳ ದೂರು. ಮಣ್ಣಿನ ಕಟ್ಟದಲ್ಲಿ ನಿಲ್ಲುವಷ್ಟು ನೀರು ಸಿಮೆಂಟ್‌ ಬಂದಾರಗಳಲ್ಲಿ ಸಂಗ್ರಹವಾಗುವುದಿಲ್ಲ ಎಂಬ ವ್ಯಸನ ಹಳ್ಳಿಗರದು” – ಮಂಗಳೂರಿನ ಸಭೆಯಿಂದ ಮರಳುವಾಗ ಶಿರಶಿಯ ಪತ್ರಕರ್ತ ಶಿವಾನಂದ ಕಳವೆಯವರ ಮಾತು ಮನದೊಳಗೆ ಗುಂಯ್‌ಗಾಟ್ಟುತ್ತಿತ್ತು.  

ನಾ. ಕಾರಂತ ಪೆರಾಜೆ

Advertisement

Udayavani is now on Telegram. Click here to join our channel and stay updated with the latest news.

Next