Advertisement

ಶೀಘ್ರವೇ ಸೇನೆಗೆ ಶಸ್ತ್ರಾಸ್ತ್ರ: ಆಗಸ್ಟ್‌ನಲ್ಲಿ ಪೂರೈಕೆ

06:30 AM Jul 23, 2017 | |

ನವದೆಹಲಿ: ಚೀನಾ ಹಾಗೂ ಪಾಕಿಸ್ತಾನವು ಗಡಿಯಲ್ಲಿ ಕ್ಯಾತೆ ತೆಗೆಯುತ್ತಿರುವ ನಡುವೆಯೇ, ಕೇವಲ 10 ದಿನಗಳಿಗೆ ಸಾಕಾಗುವಷ್ಟು ಮಾತ್ರ ಶಸ್ತ್ರಾಸ್ತ್ರಗಳು ಸೇನೆಯ ಬತ್ತಳಿಕೆಯಲ್ಲಿವೆ ಎಂದು ಹೇಳಿ ಬೆಚ್ಚಿಬೀಳಿಸಿದ್ದ ಮಹಾಲೆಕ್ಕ ಪರಿಶೋಧಕರ ವರದಿ ಬೆನ್ನಲ್ಲೇ, ಇನ್ನು ಕೆಲವೇ ವಾರಗಳಲ್ಲಿ ಸೇನೆಗೆ ಬಹು ಅತ್ಯಗತ್ಯವಾದ ಶಸ್ತ್ರಾಸ್ತ್ರಗಳು ಪೂರೈಕೆಯಾಗಲಿವೆ ಎಂಬ ಮಾಹಿತಿ ಹೊರಬಿದ್ದಿದೆ.

Advertisement

ಯುದ್ಧ ಟ್ಯಾಂಕ್‌ಗಳು, ಆರ್ಟಿಲರಿ ಗನ್‌ಗಳಿಗೆ ಬೇಕಾದ ಮದ್ದುಗುಂಡುಗಳು ಮುಂದಿನ ತಿಂಗಳ ಆರಂಭದಲ್ಲಿ ಪೂರೈಕೆಯಾಗಲಿದೆ. ಮುಂದಿನ ವರ್ಷಾಂತ್ಯದ ವೇಳೆಗೆ ಸೇನೆ ಬಳಿ ಸುಮಾರು 40 ದಿನದ ಯುದ್ಧಕ್ಕಾಗುವಷ್ಟು ಸರಕುಗಳು ಶೇಖರಣೆಯಾಗಲಿವೆ ಎಂದು ಹೇಳಲಾಗಿದೆ. ನಿರಂತರ, ಭಾರೀ ಪ್ರಮಾಣದ ಯುದ್ಧವೇನಾದರೂ ಸಂಭವಿಸಿದರೆ, 40 ದಿನಗಳಿಗಾಗುವಷ್ಟು ಶಸ್ತ್ರಾಸ್ತ್ರಗಳು ಸಾಮಾನ್ಯವಾಗಿ ಬೇಕಾಗುತ್ತವೆ ಎಂದು ರಕ್ಷಣಾ ತಜ್ಞರು ಅಂದಾಜಿಸುತ್ತಾರೆ.

ಎನ್‌ಡಿಟಿವಿ ವರದಿ ಪ್ರಕಾರ ಸೇನೆ ಹಲವು ಶಸ್ತ್ರಾಸ್ತ್ರಗಳ ಕೊರತೆ ಎದುರಿಸುತ್ತಿದ್ದರೂ, ಇದೀಗ ವಿದೇಶದಿಂದ ಅವುಗಳ ಪೂರೈಕೆಯ ಕೊನೆ ಹಂತದ ಪರಿಶೀಲನೆ ನಡೆಯುತ್ತಿದೆ.ಇದರೊಂದಿಗೆ ಲೆಕ್ಕಪರಿಶೋಧಕರ ವರದಿಗೆ ಕೆಲವೇ ದಿನಗಳ ಮೊದಲು ಸರ್ಕಾರ ಸೇನೆಗೆ 46 ವಿಧದ ಶಸ್ತ್ರಾಸ್ತ್ರಗಳ ನೇರ ಖರೀದಿಗೆ ಅವಕಾಶ ಮಾಡಿಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಶಸ್ತ್ರಾಸ್ತ್ರ ಕೊರತೆಯನ್ನು ತುಂಬುವ ಯತ್ನವಾಗಿದೆ. ಇದರೊಂದಿಗೆ ಕಳೆದ ವರ್ಷ ಉರಿ ದಾಳಿ ಬಳಿಕ ಸೇನೆಗೆ 20 ಸಾವಿರ ಕೋಟಿ ರೂ. ಮೊತ್ತದ ಶಸ್ತ್ರಾಸ್ತ್ರಗಳ ನೇರ ಖರೀದಿಗೆ ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು ಎಂದು ಮೂಲಗಳು ಹೇಳಿವೆ.

ಕೇವಲ 10 ದಿನಕ್ಕಾಗುವಷ್ಟು ಶಸ್ತ್ರಾಸ್ತ್ರ!
ಡೋಕ್ಲಾಂನಲ್ಲಿ ಚೀನಾ ಗುಟುರು ಹಾಕುತ್ತಿರುವಂತೆಯೇ, ಸೇನೆಯ ಬಳಿ ಕೇವಲ 10 ದಿನದ ಯುದ್ಧಕ್ಕಾಗುವಷ್ಟು ಶಸ್ತ್ರಾಸ್ತ್ರಗಳು ಮಾತ್ರ ಇವೆ ಎಂದು ಮಹಾಲೆಕ್ಕಪರಿಶೋಧಕರ ವರದಿ ಹೇಳಿದೆ. ಶೇ.40ರಷ್ಟು ಶಸ್ತ್ರಾಸ್ತ್ರಗಳ ಕೊರತೆಯನ್ನು ಸೇನೆ ಎದುರಿಸುತ್ತಿದ್ದು, ಯುದ್ಧವೇನಾದರೂ ಸಂಭವಿಸಿದಲ್ಲಿ ಸಮಸ್ಯೆ ವಿಪರೀತಕ್ಕೆ ಹೋಗಬಹುದು ಎಂಬುದನ್ನು ವರದಿ ಬಿಡಿಸಿಟ್ಟಿದೆ. ವರದಿ ಪ್ರಕಾರ ಸೇನೆಗೆ ಬೇಕಾದ “ಅಗತ್ಯ’ ಶಸ್ತ್ರಾಸ್ತ್ರಗಳ ಕೊರತೆಯೇ ಇದರಲ್ಲಿ ಹೆಚ್ಚಿದೆ. 

2013ರ ಮಾರ್ಚ್‌ನ ಅಂಕಿ ಅಂಶಗಳ ಪ್ರಕಾರ ಶೇ.50ರಷ್ಟು ಶಸ್ತ್ರಾಸ್ತ್ರಗಳ ಕೊರತೆ ಇತ್ತು (170 ವಿಧದ ಶಸ್ತ್ರಾಸ್ತ್ರಗಳಲ್ಲಿ 80 ವಿಧದವುಗಳಿಗೆ ಕೊರತೆ) ಹಾಗೆಯೇ 2016ರಲ್ಲಿ ಶೇ.40ರಷ್ಟು (156 ವಿಧದ ಅಗತ್ಯ ಶಸ್ತ್ರಾಸ್ತ್ರಗಳ ಕೊರತೆ) ಇದೆ ಎಂದು ವರದಿ ಬೊಟ್ಟು ಮಾಡಿದೆ. ವರದಿ ಹೇಳುವಂತೆ ಶೇ.83ರಷ್ಟು ಆರ್ಟಿಲರಿ ಶಸ್ತ್ರಗಳ ಫ್ಯೂಸ್‌ಗಳ ಕೊರತೆ ಇದೆ. ಫಿರಂಗಿಗಳನ್ನು ಬಳಸುವ ಮೊದಲು ಗುಂಡುಗಳನ್ನು ತುಂಬಿಸಿದ ಬಳಿಕ ಇದನ್ನು ಬಳಕೆ ಮಾಡುತ್ತಾರೆ. ಇವುಗಳು ಇಲ್ಲದಿದ್ದಲ್ಲಿ, ಫಿರಂಗಿಗಳ ಬಳಕೆ ಸಾಧ್ಯವಿಲ್ಲ. ಈಗಾಗಲೇ ಸುಮಾರು 40 ದಿನಕ್ಕಾಗುವಷ್ಟು ಶಸ್ತ್ರಾಸ್ತ್ರ ಸಂಗ್ರಹಣೆಗೆ ಸೇನೆ ಬೇಡಿಕೆ ಇಡುತ್ತಲೇ ಬಂದಿದೆ. ಆದರೆ ಸಿಎಜಿ ವರದಿ ಕುರಿತಂತೆ ಸೇನೆಯ ಮೂಲಗಳೂ ಪ್ರತಿಕ್ರಿಯಿಸಿದ್ದು, ಶಸ್ತ್ರಾಸ್ತ್ರ ಕೊರತೆ ಬಗ್ಗೆ ಹೇಳಿದೆಯಾದರೂ, ಮುಂಚೂಣಿ ಪಡೆಗಳು ಮತ್ತು ಎರಡನೇ ಹಂತದ ಪಡೆಗಳ ಶಸ್ತ್ರಾಸ್ತ್ರ ಕೋಠಿಯ ಸಂಗ್ರಹದ ಲೆಕ್ಕವನ್ನು ಹೊರತುಪಡಿಸಿ ಇತರ ಶಸ್ತ್ರಾಸ್ತ್ರ ಸಂಗ್ರಹಾಗಾರದಲ್ಲಿನ ಪರಿಸ್ಥಿತಿ ಆಧರಿಸಿ ವರದಿ ನೀಡಿದೆ ಸಿಎಜಿ ವರದಿ ಮಾಡಿದ್ದಾರೆ ಎಂದು ಹೇಳಿವೆ.

Advertisement

ಮುಕ್ತ ಸಂವಾದ ನಡೆಸಿ; ನಾವೂ ಬೆಂಬಲಿಸುತ್ತೇವೆ
ಗಡಿ ವಿಚಾರವಾಗಿ ಭಾರತ, ಚೀನಾಕ್ಕೆ ಅಮೆರಿಕ ಸಲಹೆ
ವಾಷಿಂಗ್ಟನ್‌:
ಡೋಕ್ಲಾಂನಲ್ಲಿ ಭಾರತ -ಚೀನಾ ನಡುವಿನ ಗಡಿ ವಿವಾದಕ್ಕೆ ಸಂಬಂಧಿಸಿ ಇದೀಗ “ಪೆಂಟಗನ್‌’ ಪ್ರತಿಕ್ರಿಯಿಸಿದ್ದು, “ಉಭಯ ರಾಷ್ಟ್ರಗಳು ದಬ್ಟಾಳಿಕೆಯ ಬದಲು ಮುಕ್ತವಾಗಿ ಸಂವಾದ ಮೂಲಕ ವಿವಾದ ಬಗೆಹರಿಸಿಕೊಳ್ಳಬೇಕಾದ ಅಗತ್ಯವಿದೆ’ ಎಂದಿದೆ. ಪೆಂಟಗನ್‌, ಅಮೆರಿಕದ ರಕ್ಷಣಾ ಕಾರ್ಯಾಚರಣೆಯ ಕೇಂದ್ರ ಸ್ಥಾನವಾಗಿದೆ. ಅಮೆರಿಕ ರಕ್ಷಣಾ ಇಲಾಖೆ ವಕ್ತಾರ ಗ್ಯಾರಿ ರಾಸ್‌, “ಗಡಿ ವಿಚಾರವಾಗಿ ಭಾರತ ಚೀನಾ ನಡುವಿನ ಸಂಘರ್ಷ ಒಳ್ಳೆಯದಲ್ಲ. ಎರಡೂ ದೇಶಗಳು ಮುಕ್ತ, ಆರೋಗ್ಯಕರ ಸಂವಾದದಲ್ಲಿ ಮುಖಾಮುಖೀ ಆಗುವ ಮೂಲಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ. ನಾವೂ  ಇದನ್ನೇ ಬೆಂಬಲಿಸುತ್ತೇವೆ. ಈ ವಿಚಾರದಲ್ಲಿ ಎರಡು ದೇಶಗಳ ಸರ್ಕಾರಕ್ಕೆ ನಮ್ಮ ಸಲಹೆ ಇದು. ಈ ಪ್ರಕರಣದಲ್ಲಿ ನಾವು ಮೂಗು ತೂರಿಸಲು ಬಯಸುವುದಿಲ್ಲ’ ಎಂದಿದ್ದಾರೆ.

ದೋವಲ್‌ ಚೀನಾ ಭೇಟಿ ಸಿಕ್ಕಿಂ ಪ್ರಕ್ಷುಬ್ದತೆ ಶಮನಕ್ಕೆ ದಾರಿ:
ರಾಷ್ಟ್ರೀಯ ಭಧ್ರತಾ ಸಲಹೆಗಾರ ಅಜಿಲ್‌ ದೋವಲ್‌ ಅವರು ಮುಂದಿನ ವಾರ ಬೀಜಿಂಗ್‌ಗೆ ಆಗಮಿಸಲಿದ್ದು, ಇದು ಸಿಕ್ಕಿಂ ಪ್ರಕ್ಷುಬ್ಧತೆ ಶಮನಕ್ಕೆ ದಾರಿ ಮಾಡಿಕೊಡಲಿದೆ ಎಂದು ಚೀನಾದ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಅಜಿತ್‌ ದೋವಲ್‌ ಅವರು 27-28ರಂದು ಚೀನಾದಲ್ಲಿ ಬ್ರಿಕ್ಸ್‌ ರಾಷ್ಟ್ರಗಳಾದ ಬ್ರೆಜಿಲ್‌, ರಷ್ಯಾ, ಚೀನಾ ಹಾಗೂ ದಕ್ಷಿಣ ಆಫ್ರಿಕಾದ ಪ್ರತಿನಿಧಿಗಳ ಜತೆ ಚರ್ಚಿಸಲಿದ್ದಾರೆ.

ಒಡಿಶಾ ವ್ಯಾಪಾರಸ್ಥರಿಂದ ಚೀನಾ ಉತ್ಪಾದನೆ ಮಾರಾಟಕ್ಕೇ ಬ್ರೇಕ್‌
ಚೀನಾ ಸಿಕ್ಕಿಂ ಗಡಿಯಲ್ಲಿ ಕ್ಯಾತೆ ತೆಗೆದ ಹಿನ್ನೆಲೆಯಲ್ಲಿ ಇದೀಗ ಚೀನಾ ಉತ್ಪಾದನೆಗಳನ್ನು ಬಹಿಷ್ಕರಿಸುವ ಅಭಿಯಾನ ದೇಶಾದ್ಯಂತ ಹೆಚ್ಚುತ್ತಿದೆ. ಒಡಿಶಾ ವ್ಯಾಪಾರಸ್ಥರ ಸಂಘಗಳ ಒಕ್ಕೂಟ (ಎಫ್ಎಒಟಿಎ) ಶನಿವಾರ ಈ ಬಗ್ಗೆ ಚರ್ಚಿಸಿ, “ಯಾರೂ ಚೀನಾ ಉತ್ಪನ್ನಗಳನ್ನೇ ಖರೀದಿಸಬಾರದು’ ಎನ್ನುವ ನಿರ್ಧಾರಕ್ಕೆ ಬಂದಿದೆ. ಈ ಮೂಲಕ ಜನತೆಗೂ ಚೀನಾ ಉತ್ಪನ್ನಗಳನ್ನು ಖರೀದಿಸದಿರುವಂತೆ ಜಾಗೃತಿ  ಮೂಡಿಸಲು ಮುಂದಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಫೆಡರೇಷನ್‌ ಕಾರ್ಯದರ್ಶಿ ಬಿ.ಕೆ.ಮೊಹಾಂತಿ, “ಸಿಕ್ಕಿಂ ಗಡಿಯಲ್ಲಿ ಚೀನಾ ಅನಗತ್ಯವಾಗಿ ಕಿರಿಕಿರಿ ಮಾಡುತ್ತಿದೆ. ಆದರೆ ಭಾರತದ ಮಾರುಕಟ್ಟೆಯಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡಿ ಲಾಭ ಗಳಿಸುತ್ತಿದೆ. ನಾವೇ ಚೀನಾ ಉತ್ಪಾದನೆಗಳ ಮಾರಾಟಕ್ಕೆ ಬ್ರೇಕ್‌ ಹಾಕಿದರೆ, ಒಂದು ದಿನ ಚೀನಾಕ್ಕೆ ಸರಿಯಾದ ಪಾಠ ಕಲಿಸಲು ಸಾಧ್ಯ ಅದೇ ಉದ್ದೇಶದಿಂದ ಈ ನಿರ್ಧಾರಕ್ಕೆ ಬಂದಿದ್ದೇವೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next