Advertisement

ಮಾರಿಷಸ್ ಅನ್ನು ಉನ್ನತ ಸ್ಥಾನದಲ್ಲಿ ಕಾಣ ಬಯಸುತ್ತೇವೆ: ಶ್ರೀ ರವಿಶಂಕರ್ ಗುರೂಜಿ

12:05 AM Sep 06, 2024 | Shreeram Nayak |

ಬೆಂಗಳೂರು: ಜಾಗತಿಕ ಮಾನವತಾವಾದಿ ಹಾಗೂ ಆಧ್ಯಾತ್ಮಿಕ ನಾಯಕರಾದ ಗುರುದೇವ್ ಶ್ರೀ ಶ್ರೀ ರವಿಶಂಕರರು ಈಗ ಮಾರಿಷಸ್ ಗೆ ನಾಲ್ಕು ದಿವಸಗಳ ಪ್ರವಾಸವನ್ನು ಕೈಗೊಂಡಿದ್ದಾರೆ.

Advertisement

ಮಾರಿಷಸ್ ದೇಶದ ಗೌರವಾನ್ವಿತ ಅಧ್ಯಕ್ಷರಾದ ಶ್ರೀ ಪೃಥ್ವಿರಾಜ್ ಸಿಂಗ್ ರೂಪುನ್ ಮತ್ತು ಪ್ರಧಾನಮಂತ್ರಿಗಳಾದ ಶ್ರೀ ಪ್ರವೀಣ್ ಕುಮಾರ್ ಜಗನ್ನಾಥ್ ರವರು ಗುರುದೇವರನ್ನು ಆದರದಿಂದ ಸ್ವಾಗತಿಸಿದರು.

ಪ್ರಧಾನಮಂತ್ರಿಗಳೊಡನೆ ನಡೆದ ಸಭೆಯಲ್ಲಿ ಗುರುದೇವರು, ಮಾರಿಷಸ್ ನ ಸಂಸ್ಕೃತಿಯ ಸಂರಕ್ಷಣೆಯ ಬಗ್ಗೆ, ಮಾದಕವಸ್ತು ಮುಕ್ತ ಮಾರಿಷಸ್ ಗುರಿಯನ್ನು ತಲುಪುವುದರ ಬಗ್ಗೆ ಚರ್ಚಿಸಿದರು.

ಅಧ್ಯಕ್ಷರನ್ನು ಭೇಟಿ ಮಾಡಿದ ಗುರುದೇವರು, ಅವರೊಡನೆ ಯುವ ಸಬಲೀಕರಣದ ಮಹತ್ವದ ಬಗ್ಗೆ, ಒತ್ತಡ ನಿವಾರಣಾ ಕಾರ್ಯಕ್ರಮಗಳ ಮೂಲಕ ಸಾಮರಸ್ಯವನ್ನು ಉತ್ಥಾಪಿಸುವ ಕುರಿತು, ಮಾರಿಷಸ್ ಗೆ ಆಯುರ್ವೇದದ ಪರಿಚಯ ಹಾಗೂ ವ್ಯಾಪಕ ರೀತಿಯಲ್ಲಿ ಪ್ರಭಾವವನ್ನು ಬೀರುವ ಕೈದಿಗಳ ಪುನಶ್ಚೇತನ ಕಾರ್ಯಕ್ರಮದ ಬಗ್ಗೆಯೂ ಚರ್ಚಿಸಿದರು.

ಕೈದಿಗಳ ಪುನಶ್ಚೇತನ ಕಾರ್ಯಕ್ರಮವು ಬಹಳ ಪರಿಣಾಮಕಾರಿಯಾಗಿರುವುದರಿಂದ ಆರ್ಟ್ ಆಫ್ ಲಿವಿಂಗ್ ನ, ಕೈದಿಗಳ ಪುನಶ್ಚೇತನ ಕಾರ್ಯಕ್ರಮವನ್ನು ಮುಂದುವರಿಸುವ ಸಲುವಾಗಿ ಪರಸ್ಪರ ಒಡಂಬಡಿಕೆಗೆ ಸಹಿ ಹಾಕಲಿದ್ದಾರೆ.

Advertisement

ಈ ಪುನಶ್ಚೇತನ ಕಾರ್ಯಕ್ರಮಗಳು ಕೈದಿಗಳ ಭಾವನಾತ್ಮಕ ಒತ್ತಡವನ್ನು ನಿವಾರಿಸಿ, ಹಿಂಸಾಪ್ರವೃತ್ತಿಯಿಂದ ಹೊರಬಂದು ಕೈದಿಗಳು ಮತ್ತೆ ಸಮಾಜದ ಮುಖ್ಯವಾಹಿನಿಗೆ ಸೇರುವಂತೆ ಮಾಡುತ್ತದೆ. ಗುರುದೇವರು ಇದರ ಬಗ್ಗೆ ಮಾತನಾಡುತ್ತಾ, “ಅವರಲ್ಲಿರುವ ನಿಕೃಷ್ಟವಾದ ಗುಣಗಳಿಂದಾಗಿ ಅವರು ಕಾರಾಗೃಹಕ್ಕೆ ಬಂದರು, ಆದರೆ ಆಧ್ಯಾತ್ಮಿಕತೆಯು ಅವರಲ್ಲಿರುವ ಅತ್ಯುತ್ತಮ ಗುಣಗಳನ್ನು ಹೊರತರುತ್ತದೆ. ಅವರು ಒಳ್ಳೆಯ ನಾಗರಿಕರಾಗಿ, ಸಮಾಜಕ್ಕೆ ಸಕಾರಾತ್ಮಕವಾದ ರೀತಿಯಲ್ಲಿ ಕಾಣಿಕೆಯನ್ನು ನೀಡುತ್ತಾರೆ” ಎಂದು ಹೇಳಿದರು.


ಗುರುದೇವರ ಪ್ರಥಮ ದಿನದ ಭೇಟಿಯಂದು ನಡೆದ ಸಾರ್ವಜನಿಕ ಸಂಜೆಯಲ್ಲಿ ಜ್ಞಾನ, ಸತ್ಸಂಗ ಹಾಗೂ ಧ್ಯಾನ ನಡೆಯಿತು. ಈ ಸಭೆಯಲ್ಲಿ ಮಾರಿಷಸ್ ನ ಸಾವಿರಾರು ಜನರು ಭಾಗವಹಿಸಿದ್ದಲ್ಲದೆ, ಸನ್ಮಾನ್ಯ ಅಧ್ಯಕ್ಷರು, ವಿಪಕ್ಷದ ನಾಯಕರು, ಹಾಗೂ ಪ್ರಮುಖ ಸರ್ಕಾರಿ ಅಧಿಕಾರಿಗಳೂ ಭಾಗವಹಿಸಿದ್ದರು. ಸಭೆಗೆ ಆಗಮಿಸಿದ್ದ ಇತರ ಗಣ್ಯರೆಂದರೆ ಶ್ರೀ ಅಡ್ರೇನ್ ದುವಲ್, ರಾಷ್ಟ್ರೀಯ ಅಸೆಂಬ್ಲಿಯ ಸ್ಪೀಕರ್, ಭಾರತದ ದೂತಾವಾಸದ ಕಮಿಷನರ್ ಆದ ಶ್ರೀಮತಿ ನಂದಿನಿ ಸಿಂಗ್ಲಾ, ಮಾರಿಷಸ್ ನ ಮಾಜಿ ಅಧ್ಯಕ್ಷರ ಪತ್ನಿಯಾದ ಶ್ರೀಮತಿ ಸರೋಜಿನಿ ಜಗನ್ನಾಥ್, ವಿಪಕ್ಷ ನಾಯಕರಾದ ಅರವಿಂದ್ ಬೂಲೆಲೀ, ಶ್ರೀ ಅಲನ್ ಗಣೂ, ವಿದೇಶಾಂಗ ಸಚಿವರು, ಸಾರ್ವಜನಿಕ ಸೌಲಭ್ಯಗಳ ಸಚಿವರಾದ ಶ್ರೀ ಬಾಬ್ಬಿ ಹುರೀರಾಮ್, ನಾಗರಿಕ ಸೇವಗಳ ಸಚಿವರಾದ ಶ್ರೀ ಅಂಜೀವ್ ರಾಮ್ಧಾನ್, ಸಹಕಾರ ಸಚಿವರಾದ ನವೀನ್ ರಾಮಯ್ಯೆಡ್ ಮತ್ತು ಆರೋಗ್ಯ ಹಾಗೂ ವೆಲ್ನೆಸ್ ನ ಸಚಿವರಾದ ಶ್ರೀ ಕೈಲಾಶ್ ಜಗತ್ಪಾಲ್.

ತಮ್ಮ ನಾಲ್ಕು ದಿವಸಗಳ ಭೇಟಿಯಲ್ಲಿ ಗುರುದೇವರು ಅನೇಕ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಜ್ಞಾನ, ಸಂಗೀತ ಹಾಗೂ ಸತ್ಸಂಗದ ಕಾರ್ಯಕ್ರಮಗಳು ಪೈಲ್ಲಿಸ್, ಗೂಡ್ಲ್ಯಾಂಡ್ಸ್ ಮತ್ತು ವೂಟಾನ್ ನಲ್ಲೂ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next