Advertisement

ಭದ್ರತೆಗೆ ನಾವಿದ್ದೇವೆ, ಹೊಸ ವರ್ಷಾಚರಿಸಿ: ಜನತೆಗೆ ಪೊಲೀಸರ ಅಭಯ

10:24 AM Dec 31, 2019 | Lakshmi GovindaRaj |

ಬೆಂಗಳೂರು: ಹೊಸವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುವ ನಗರ ಪೊಲೀಸರು, ಪ್ರಮುಖವಾಗಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ನಗರದ 133 ಕಡೆ “ಸೇಫ್ಟಿ ಐಲ್ಯಾಂಡ್‌’ ತೆರೆಯಲಿದ್ದಾರೆ. ಭದ್ರತೆ ಕುರಿತು ಸೋಮವಾರ ನಗರದ 8 ವಿಭಾಗಗಳ ಡಿಸಿಪಿ, ಎಸಿಪಿ ಹಾಗೂ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌, “ಸೇಫ್ಟಿ ಐಲ್ಯಾಂಡ್‌’ ಸ್ಥಾಪನೆ ಮೂಲಕ ಮಹಿಳೆಯರು, ವೃದ್ಧರು, ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು.

Advertisement

ಸುರಕ್ಷಾ ಆ್ಯಪ್‌, ನಮ್ಮ-100 ಬಳಕೆ ಕುರಿತು ಜಾಗೃತಿ ಮೂಡಿಸಬೇಕೆಂದು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಡಿ.31ರ ತಡರಾತ್ರಿ ಹೊಸ ವರ್ಷ ಸ್ವಾಗತಿಸಲು ನಗರದೆಲ್ಲೆಡೆ ವಿವಿಧ ಕಾರ್ಯಕ್ರಮ ನಡೆಯಲಿವೆ. ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ಕೋರಮಂಗಲ, ಇಂದಿರಾನಗರ ಸೇರಿ ವಿವಿಧ ಕಡೆ ಸಂಭ್ರಮಾಚರಣೆ ಜೋರಾಗಿಯೇ ಇರಲಿದೆ.  ಈ ಮಧ್ಯೆ ಹೊಸ ವರ್ಷದಲ್ಲಿ ಮಾದಕ ವಸ್ತು ಮಾರಾಟ ದಂಧೆ ಜೋರಾಗಿಯೇ ಇರಲಿದೆ. ಹೀಗಾಗಿ ಅವುಗಳ ಮೇಲೆ ಹೆಚ್ಚು ನಿಗಾವಹಿಸಬೇಕು. ಹೋಟೆಲ್‌, ಪಾರ್ಟಿ ಹಾಲ್‌ಗ‌ಳಲ್ಲಿ ಮಫ್ತಿಯಲ್ಲಿ ಕಾರ್ಯ ನಿರ್ವಹಿಸಬೇಕು. ಸಕ್ರಿಯವಾಗಿರುವ ರೌಡಿಶೀಟರ್‌ಗಳ ಬಗ್ಗೆ ಮಾಹಿತಿ ತಿಳಿದುಕೊಂಡಿರಬೇಕು ಎಂದು ಆಯುಕ್ತರು ಸಭೆಯಲ್ಲಿ ಕಿರಿಯ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಠಾಣೆ ಸ್ವಚ್ಛ, ಆರೋಗ್ಯಕ್ಕೆ ಆದ್ಯತೆ: ಪ್ರತಿ ಪೊಲೀಸ್‌ ಸಿಬ್ಬಂದಿ ಅಥವಾ ಅಧಿಕಾರಿ ಠಾಣೆ ಒಳಾಂಗಣ-ಹೊರಾಂಗಣ ಸ್ವಚ್ಛವಾಗಿಟ್ಟುಕೊಳ್ಳಬೇಕು. ಸಾರ್ವಜನಿಕರ ಜತೆ ಉತ್ತಮ ನಡವಳಿಕೆ ಹೊಂದಬೇಕು. ಹಾಗೆಯೇ ಕೆಲಸದೊತ್ತಡದ ನಡುವೆ ನಿತ್ಯ ವ್ಯಾಯಾಮ, ಯೋಗ ಮಾಡುವ ಮೂಲಕ ಆರೋಗ್ಯ ಸುಸ್ಥಿರವಾಗಿ ಕಾಪಾಡಿಕೊಳ್ಳಬೇಕು ಎಂದು ಆಯುಕ್ತರು ಸಿಬ್ಬಂದಿಗೆ ಸಲಹೆ ನೀಡಿದ್ದಾರೆ.

“ನೆರೆಹೊರೆ ಕಾವಲು ಸಮಿತಿ’: ಈಗಾಗಲೇ ಪೊಲೀಸ್‌ ಇಲಾಖೆಯಲ್ಲಿ ಜಾರಿಯಲ್ಲಿರುವ “ನೆರೆಹೊರೆ ಕಾವಲು ಸಮಿತಿ’ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಆಯಾ ಪ್ರದೇಶದ ಬೀಟ್‌ ಸಿಬ್ಬಂದಿ, ಆ ವ್ಯಾಪ್ತಿಯ ವೃದ್ಧರು, ನೌಕರರು, ಟೆಕ್ಕಿ ಹೀಗೆ ವಿವಿಧ ಹುದ್ದೆಯಲ್ಲಿರುವವರ ಜತೆ ಸಭೆ ನಡೆಸಿ ವಿಶ್ವಾಸಕ್ಕೆ ಪಡೆದು ಅಪರಾಧ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಆಯುಕ್ತರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

ನೋಟಿಸ್‌ ಜಾರಿ: ಒಂದೆಡೆ ನೂರು ಮಂದಿ ಸೇರುವ ಅಥವಾ 500ಕ್ಕೂ ಅಧಿಕ ಸಾರ್ವಜನಿಕರು ಓಡಾಡುವ ಸ್ಥಳಗಳಲ್ಲಿ ಆಯಾ ಮಾಲ್‌, ವಾಣಿಜ್ಯ ಕಟ್ಟಡಗಳ ಮಾಲಿಕರು ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ಈಗಾಗಲೇ ಸೂಚಿಸಲಾಗಿದೆ. ಆದರೂ ಕೆಲ ಕಟ್ಟಡ ಮಾಲಿಕರು ನಿರ್ಲಕ್ಷಿಸಿದ್ದಾರೆ. ಹೀಗಾಗಿ ಅಂತಹ ಕಟ್ಟಡ ಮಾಲಿಕರ ವಿರುದ್ಧ ನೋಟಿಸ್‌ ಜಾರಿ ಮಾಡಿ ಕ್ರಮಕೈಗೊಳ್ಳಬೇಕು ಎಂದು ಪೊಲೀಸ್‌ ಆಯುಕ್ತರು ಡಿಸಿಪಿ ಮತ್ತು ಎಸಿಪಿಗಳಿಗೆ ಸೂಚಿಸಿದ್ದಾರೆ.

Advertisement

ಏನಿದು ಪೊಲೀಸರ ಸೇಫ್ಟಿಲ್ಯಾಂಡ್‌?: ವೃದ್ಧರು, ಮಹಿಳೆಯರು, ಯುವತಿಯರು ಮತ್ತು ಮಕ್ಕಳಿಗೆ ತೊಂದರೆ ಉಂಟಾದಲ್ಲಿ ಕೂಡಲೇ ಸ್ಪಂದಿಸಲು ಕೇಂದ್ರ ವಿಭಾಗ(ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ಕಬ್ಬನ್‌ ಪಾರ್ಕ್‌ ಸಮೀಪ ಒಟ್ಟು -12, ಪೂರ್ವ-18, ಪಶ್ಚಿಮ-8, ಉತ್ತರ-8, ದಕ್ಷಿಣ-25, ಆಗ್ನೇಯ 13, ವೈಟ್‌ಫೀಲ್ಡ್‌-19, ಈಶಾನ್ಯ ವಿಭಾಗ 10 ಕಡೆ ಪ್ರಮುಖ ಜಂಕ್ಷನ್‌ ಹಾಗೂ ಆಯ್ದ ಸ್ಥಳಗಳಲ್ಲಿ “ಸೆಫ್ಟಿ ಐಲ್ಯಾಂಡ್‌’ ತೆರೆಯಲಾಗುತ್ತದೆ. ರಸ್ತೆ ಬದಿ ಹಾಕಲಾಗುವ ಟೆಂಟ್‌ಹೌಸ್‌ನಲ್ಲಿ ಮಹಿಳಾ ಸಿಬ್ಬಂದಿ 3-4 ಮಂದಿ ಕೆಲಸ ಮಾಡಲಿದ್ದಾರೆ.

ಅವರ ಬಳಿ ಆ್ಯಂಬುಲೆನ್ಸ್‌, ಕ್ಯಾಬ್‌ಗಳ ಮಾಹಿತಿ ಲಭ್ಯವಿರುತ್ತದೆ. ಜತೆಗೆ ಈ ಸ್ಥಳದಲ್ಲಿ ಕುಡಿಯಲು ನೀರು, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಫ್ಯಾನ್‌, ಕುಳಿತುಕೊಳ್ಳಲು ಚೇರ್‌ ಇರಲಿದ್ದು, ಕೆಲ ಹೊತ್ತು ವಿಶ್ರಾಂತಿ ಪಡೆಯಬಹುದು. ಒಂದು ವೇಳೆ ಯಾರಿಗಾದರೂ ಯಾವುದೇ ರೀತಿಯ ಸಹಾಯ ಬೇಕಿದ್ದಲ್ಲಿ ಕೂಡಲೇ ಈ ಸ್ಥಳಕ್ಕೆ ಹೋಗಿ ನೆರವು ಪಡೆಯಬಹುದು. ಒಂಟಿಯಾಗಿ ಓಡಾಡುವ ಮಹಿಳೆಯರನ್ನು ವಿಚಾರಿಸಿ ಅಗತ್ಯಬಿದ್ದಲ್ಲಿ, ಮಹಿಳಾ ಸಿಬ್ಬಂದಿ ಜತೆ ಪೊಲೀಸ್‌ ವಾಹನದಲ್ಲೇ ಅವರನ್ನು ಮನೆಗೆ ತಲುಪಿಸಬೇಕು ಎಂದು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉತ್ತಮವಾಗಿ ಕಾರ್ಯ ಮುಂದುವರಿಸಿ: ಕಳೆದ ವರ್ಷ(2019)ದಲ್ಲಿ ಪ್ರತಿಯೊಬ್ಬ ಪೊಲೀಸ್‌ ಅಧಿಕಾರಿ/ಸಿಬ್ಬಂದಿ ಉತ್ತಮ ಕಾರ್ಯ ನಿರ್ವಹಿಸಿದ್ದಕ್ಕೆ ಧನ್ಯವಾದಗಳು. ಅದೇ ರೀತಿ 2020ರಲ್ಲಿಯೂ ಕೆಲಸ ಮಾಡಬೇಕು. ಜನಸ್ನೇಹಿ ಪೊಲೀಸ್‌ ವ್ಯವಸ್ಥೆ ಜತೆಗೆ ಸುರಕ್ಷಾ ಆ್ಯಪ್‌, ನಮ್ಮ-100 ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕು ಎಂದು ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌ ಸೂಚಿಸಿದ್ದಾರೆ.

ಇಂದು ರಾತ್ರಿ 2 ಗಂಟೆವರೆಗೂ “ನೈಟ್‌ಲೈಫ್’: ಹೊಸವರ್ಷಾಚರಣೆಯಲ್ಲಿ ಯಾವುದೇ ತೊಡಕು ಉಂಟಾಗದಂತೆ ಎಚ್ಚರಿಕೆ ವಹಿಸಿರುವ ನಗರ ಪೊಲೀಸರು, ಮಹಾತ್ಮಗಾಂಧಿ ರಸ್ತೆ, ಬ್ರಿಗೇಡ್‌ ಸೇರಿ ಎಲ್ಲೆಡೆ ಬಿಗಿ ಪೊಲೀಸ್‌ ಬಂದೋಬಸ್ತ್ ಕೈಗೊಂಡಿದ್ದಾರೆ. ಈ ನಡುವೆ ನೈಟ್‌ಲೆಫ್ ಅವಧಿಯನ್ನು ತಡರಾತ್ರಿ ಒಂದು ಗಂಟೆಯಿಂದ 2 ಗಂಟೆವರೆಗೂ ವಿಸ್ತರಿಸಲಾಗಿದ್ದು, ಸಂಚಾರ ನಿರ್ವಹಣೆಗೂ ಕೆಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

ಇಬ್ಬರು ಹೆಚ್ಚುವರಿ ಪೊಲೀಸ್‌ ಆಯುಕ್ತರು, ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತರ ನೇತೃತ್ವದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತರ ನೇತೃತ್ವದಲ್ಲಿ ಸಂಚಾರ ನಿರ್ವಹಣೆ ನಡೆಯಲಿದೆ. 11 ಮಂದಿ ಡಿಸಿಪಿ, 41 ಎಸಿಪಿ, 215 ಇನ್ಸ್‌ಪೆಕ್ಟರ್‌, 591 ಪಿಎಸ್‌ಐ, 941 ಎಎಸ್‌ಐ, ಕಾನ್‌ಸ್ಟೆಬಲ್‌, ಹೆಡ್‌ಕಾನ್‌ಸ್ಟೆಬಲ್‌ ಸೇರಿ 7,500, ಗೃಹ ರಕ್ಷಕ ದಳ ಸಿಬ್ಬಂದಿ 1,500, 94 ಕೆಎಸ್‌ಆರ್‌ಪಿ, ಸಿಎಆರ್‌ ತುಕಡಿ, ಆ್ಯಂಬುಲೆನ್ಸ್‌ ಹಾಗೂ ಕ್ಯೂಆರ್‌ಟಿ, ವಾಟರ್‌ ಜೆಟ್‌ ಸೇರಿ ಸುಮಾರು 10 ಸಾವಿರ ಮಂದಿ ಪೊಲೀಸರು ಭದ್ರತೆಗೆ ನಿಯೋಜನೆಗೊಂಡಿದ್ದಾರೆ.

ಹೈವೆಗಳಲ್ಲೂ ಪೊಲೀಸರು ಗಸ್ತು ತಿರುಗಲಿದ್ದಾರೆ. ಇದರೊಂದಿಗೆ ನಗರಾದ್ಯಂತ ಒಂದೂವರೆ ಸಾವಿರ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಜತೆಗೆ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆಯಲ್ಲಿ ವಾಚ್‌ ಟವರ್‌ ಅಳವಡಿಸಲಾಗಿದ್ದು, ಹೊಯ್ಸಳ, ಪಿಂಕ್‌ ಹೊಯ್ಸಳ ವಾಹನ ನಿರಂತರವಾಗಿ ಗಸ್ತು ತಿರುಗಲಿವೆ. ತೊಂದರೆ ಉಂಟಾದರೆ ಮಹಿಳೆಯರು ಅಥವಾ ಸಾರ್ವಜನಿಕರು 100ಕ್ಕೆ ಕರೆ ಮಾಡಿ ನೆರವು ಪಡೆಯಬಹುದು ಎಂದು ಪೊಲೀಸರು ಹೇಳಿದರು. ಸಂಚಾರ ನಿರ್ವಹಣೆಗಾಗಿ ನಗರದ 44 ಮೇಲು ಸೇತುವೆಗಳ ಮೇಲೆ ಸಂಚಾರ ನಿರ್ಬಂಧಿಸಲಾಗಿದೆ. ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆಯಲ್ಲಿ ಸಂಭ್ರಮಾಚರಣೆಗೆ ಆಗಮಿಸುವ ಸಾರ್ವಜನಿಕರ ವಾಹನಗಳಿಗೆ ಪ್ರತ್ಯೇಕ ವಾಹನ ನಿಲುಗಡೆ ಪ್ರದೇಶ ಗುರುತಿಸಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು.

ಬಿಎಂಟಿಸಿ ಪ್ರಹರಿ ನಿಯೋಜನೆ
ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಪಾಲಿಕೆ ವತಿಯಿಂದ ಪ್ರಹರಿಗಳ ನಿಯೋಜನೆ ಮಾಡಲಾಗಿದೆ. ಅಲ್ಲದೆ, ಪಾಲಿಕೆ ವತಿಯಿಂದ ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಹೋಟೆಲ್‌, ಪಬ್‌ ಸೇರಿದಂತೆ ನಗರದ ವಾಣಿಜ್ಯ ಉದ್ದಿಮೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ರಸ್ತೆಗಳ ಮೇಲೆ ಎಸೆದರೆ, ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಹೊಸವರ್ಷ ಆಚರಣೆ ಮಾಡಲು ಬರುವ ಸಾರ್ವಜನಿಕರಿಗೆ ತುರ್ತು ಪರಿಸ್ಥಿತಿಯಲ್ಲಿ ಬಿಬಿಎಂಪಿ (080- 22660000), ಪೊಲೀಸ್‌(100) ಆ್ಯಂಬುಲೆನ್ಸ್‌ (108) ನಿಯಂತ್ರಣ ಕೊಠಡಿಗಳಿಗೆ ಕರೆ ಮಾಡ ಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತಡರಾತ್ರಿ ಸೇವೆ ವಿಸ್ತರಿಸಿದ ಬಿಎಂಟಿಸಿ
ಬೆಂಗಳೂರು: ಹೊಸ ವರ್ಷಾಚರಣೆ ಪ್ರಯುಕ್ತ ಬಿಎಂಟಿಸಿ ತಡರಾತ್ರಿವರೆಗೂ ಕಾರ್ಯ ನಿರ್ವಹಿಸಲಿದ್ದು, ಹೆಚ್ಚು ಜನಸಂದಣಿಯಿರುವ ಮೆಜೆಸ್ಟಿಕ್‌, ಎಂಜಿ ರಸ್ತೆ, ಬ್ರಿಗೇಡ್‌ ರಸ್ತೆಯಂತಹ ಪ್ರದೇಶಗಳಲ್ಲಿ ಹೆಚ್ಚಿನ ಬಸ್‌ಗಳು ಕಾರ್ಯ ನಿರ್ವಹಿಸಲು ಸಿದ್ಧತೆ ನಡೆಸಿರುವುದಾಗಿ ಪ್ರಕಟಣೆ ತಿಳಿಸಿದೆ. ಮೆಟ್ರೋ ಸ್ಟೇಷನ್‌, ರೈಲ್ವೇ ನಿಲ್ದಾಣ ಹಾಗೂ ಪ್ರಮುಖ ಬಸ್‌ ನಿಲ್ದಾಣಗಳಿಂದ ಬಸ್‌ಗಳು ತಡರಾತ್ರಿಯಲ್ಲಿ ಕಾರ್ಯ ನಿರ್ವಹಿಸಲಿವೆ.

31ರ ರಾತ್ರಿ ಕಾರ್ಯಾಚರಣೆ ನಡೆಸಲಿರುವ ಹೆಚ್ಚುವರಿ ಬಸ್‌ಗಳ ವಿವರ
* 11, 11.30, 12.20ಕ್ಕೆ ವಿಜಯನಗರ ಮೆಟ್ರೋ ನಿಲ್ದಾಣದಿಂದ ಮೈಸೂರು ರಸ್ತೆ, ಪಿಇಎಸ್‌ ಕಾಲೇಜು, ಕಾಮಕ್ಯ ಮಾರ್ಗವಾಗಿ ಬನಶಂಕರಿ ಮೆಟ್ರೋ ನಿಲ್ದಾಣ

* 11, 11.30, 12.25ಕ್ಕೆ ವಿಜಯನಗರ ಮೆಟ್ರೋ ನಿಲ್ದಾಣದಿಂದ ಮೂಡಲಪಾಳ್ಯ, ಡಾ.ಅಂಬೇಡ್ಕರ್‌ ಕಾಲೇಜು, ಯೂನಿವರ್ಸಿಟಿ ಕ್ಯಾಟ್ರಸ್‌, ವಿದ್ಯಾನಿಕೇತನ ಪಬ್ಲಿಕ್‌ ಶಾಲೆ ಮಾರ್ಗವಾಗಿ ಉಲ್ಲಾಳ ಉಪನಗರ.

* 11.20, 11.40, 12.30ಕ್ಕೆ ಮೈಸೂರು ರಸ್ತೆ ಬಸ್‌ ನಿಲ್ದಾಣದಿಂದ ರಾಜರಾಜೇಶ್ವರಿ ನಗರ ಗೇಟ್‌, ಆರ್‌.ವಿ.ಕಾಲೇಜು ಮಾರ್ಗವಾಗಿ ಕೆಂಗೇರಿ.

* 11.15, 12.25ಕ್ಕೆ ಮೈಸೂರು ರಸ್ತೆ ಬಸ್‌ ನಿಲ್ದಾಣದಿಂದ ರಾಜರಾಜೇಶ್ವರಿ ನಗರ ಗೇಟ್‌, ಬೆಮಲ್‌ ಕಾಂಪ್ಲೆಕ್ಸ್‌ ಮಾರ್ಗವಾಗಿ ಬೆಮಲ್‌ 5ನೇ ಹಂತ.

* 10, 10.40, 11, 11.20, 11.40, 12.20ಕ್ಕೆ ಬನಶಂಕರಿ ಮೆಟ್ರೋ ನಿಲ್ದಾಣದಿಂದ ಯಲಚೇನಹಳ್ಳಿ ಮೆಟ್ರೋ ನಿಲ್ದಾಣ, ಕೋಣನಕುಂಟೆ ಕ್ರಾಸ್‌, ತಲಘಟ್ಟಪುರ ಸಿಲ್ಕ್ ಫಾರ್ಮ್ ಮಾರ್ಗವಾಗಿ ಕಗ್ಗಲೀಪುರ.

* 10.10, 11ಕ್ಕೆ ಜಯನಗರ ಮೆಟ್ರೋ ನಿಲ್ದಾಣದಿಂದ ಪುಟ್ಟೇನಹಳ್ಳಿ, ಕೊತ್ತನೂರು, ಜಂಬೂ ಸವಾರಿ ದಿನ್ನೆ ಮಾರ್ಗವಾಗಿ ವಡ್ಡರಹಳ್ಳಿ.

* 11.10, 11.20, 11.40, 12.35ಕ್ಕೆ ಜಯನಗರ ಮೆಟ್ರೋ ನಿಲ್ದಾಣದಿಂದ ಜಯನಗರ 5ನೇ ಹಂತ, ಪುಟ್ಟೇನಹಳ್ಳಿ, ಕೊತ್ತನೂರು ಮಾರ್ಗವಾಗಿ ಜಂಬೂ ಸವಾರಿ ದಿನ್ನೆ.

* 10.35, 12.35ಕ್ಕೆ ಗೊರಗುಂಟೇಪಾಳ್ಯ ಮೆಟ್ರೋ ನಿಲ್ದಾಣದಿಂದ ಬೆಮಲ್‌ ಸರ್ಕಲ್‌, ಬಾಳಿಗ ಸರ್ಕಲ್‌ ಮಾರ್ಗವಾಗಿ ವಿದ್ಯಾರಣ್ಯಪುರ.

* 10.15, 10.35, 11.40, 12, 12.30ಕ್ಕೆ ಜಾಲಹಳ್ಳಿ ಮೆಟ್ರೋ ನಿಲ್ದಾಣದಿಂದ ಗಂಗಮ್ಮ ಸರ್ಕಲ್‌, ಜಾಲಹಳ್ಳಿ ಪೂರ್ವ ಮಾರ್ಗವಾಗಿ ವಿದ್ಯಾರಣ್ಯಪುರ.

* 10.15, 10.25, 11.20, 11.35, 12.35ಕ್ಕೆ ನಾಗಸಂದ್ರ ಮೆಟ್ರೋ ನಿಲ್ದಾಣದಿಂದ ದಾಸರಹಳ್ಳಿ, ಬಗಲಗುಂಟೆ, ಜನಪ್ರಿಯಾ ಮಾರ್ಗವಾಗಿ ಚಿಕ್ಕಬಾಣವಾರ.

* 10.40, 11.10, 12.35ಕ್ಕೆ ವಿವೇಕಾನಂದ ಮೆಟ್ರೋ ನಿಲ್ದಾಣದಿಂದ ಬೈಯಪ್ಪನಹಳ್ಳಿ ಮೆಟ್ರೋ ಸ್ಟೇಶನ್‌, ಟಿನ್‌ ಫ್ಯಾಕ್ಟರಿ, ಕೆ.ಆರ್‌.ಪುರಂ ರೈಲ್ವೇ ನಿಲ್ದಾಣ, ಹೂಡಿ ಮಾರ್ಗವಾಗಿ ವೈಟ್‌ ಫೀಲ್ಡ್‌.

* 11.10, 11.40, 12.35ಕ್ಕೆ ವಿವೇಕಾನಂದ ಮೆಟ್ರೋ ನಿಲ್ದಾಣದಿಂದ ಬೈಯಪ್ಪನಹಳ್ಳಿ, ಟಿನ್‌ ಫ್ಯಾಕ್ಟರಿ ಮಾರ್ಗವಾಗಿ ಕೆ.ಆರ್‌.ಪುರಂ.

* 10.45, 12, 12.30ಕ್ಕೆ ವಿವೇಕಾನಂದ ಮೆಟ್ರೋ ನಿಲ್ದಾಣದಿಂದ ದೂಪನಹಳ್ಳಿ, ಕೋರಮಂಗಲ, ಮಡಿವಾಳ ಮಾರ್ಗವಾಗಿ ಸಿಲ್ಕ್ ಬೋರ್ಡ್‌.

Advertisement

Udayavani is now on Telegram. Click here to join our channel and stay updated with the latest news.

Next