Advertisement

ಸರಕಾರದ ಜತೆ ನಾವಿದ್ದೇವೆ, ಮೋದಿ ಸತ್ಯ ಹೇಳಲಿ: ಖರ್ಗೆ

09:43 PM Jun 22, 2020 | Sriram |

ಬೆಂಗಳೂರು: ಚೀನ ಗಡಿ ಭಾಗದಲ್ಲಿ ನಡೆದಿರುವುದೇ ಒಂದು, ಪ್ರಧಾನಿ ನರೇಂದ್ರ ಮೋದಿ ಹೇಳಿರುವುದು ಮತ್ತೊಂದು, ಹೀಗಾಗಿ ಪ್ರಧಾನಿ ಸತ್ಯ ಬಹಿರಂಗ ಪಡಿಸಬೇಕು ಎಂದು ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚೀನ ವಿಚಾರದಲ್ಲಿ ಪ್ರತಿಪಕ್ಷ ಕಾಂಗ್ರೆಸ್‌ ಸರಕಾರಕ್ಕೆ ಸಂಪೂರ್ಣ ಸಾಥ್‌ ನೀಡಲಿದೆ. ಚೀನ ದಾಳಿ ಹಾಗೂ ಭಾರತೀಯ ಯೋಧರ ಹತ್ಯೆ ವಿಚಾರದಲ್ಲಿ ಕೇಂದ್ರ ಸರಕಾರ ಯಾವುದನ್ನೂ ಮರೆಮಾಚದೇ ವಾಸ್ತವವನ್ನು ಸ್ಪಷ್ಟಪಡಿಸಬೇಕು ಎಂದರು.

ಗಲ್ವಾನ್‌ನಲ್ಲಿ ಮೋಸದಿಂದ ನಮ್ಮ ಸೈನಿಕರ ಮೇಲೆ ಮುಗಿಬಿದ್ದಿದ್ದಾರೆ. ಈ ಘಟನೆಯನ್ನು ಕಾಂಗ್ರೆಸ್‌ ಖಂಡಿಸುತ್ತದೆ. ಪಕ್ಷ, ಸರಕಾರ ಯಾವುದೇ ಇರಬಹುದು. ಆದರೆ ದೇಶದ ಹಿತಕ್ಕೆ ನಾವೆಲ್ಲರೂ ಆದ್ಯತೆ ನೀಡಬೇಕು. ಚೀನದ ನರಿ ಬುದ್ಧಿಯನ್ನು ಖಂಡಿಸಬೇಕು. ಇಷ್ಟು ದೊಡ್ಡ ಘಟನೆ ನಡೆದರೂ ಸತ್ಯ ಹೊರಬಿದ್ದಿಲ್ಲ. ಏನೂ ಆಗಿಲ್ಲವೆಂದರೆ 20 ಸೈನಿಕರು ಹುತಾತ್ಮರಾಗಿದ್ದು ಹೇಗೆ? ನಮ್ಮ ಸೈನಿಕರನ್ನು ಕೊಂದವರು ಯಾರು? ಈ ಬಗ್ಗೆ ಪ್ರಧಾನಿ ಸತ್ಯವನ್ನು ಬಹಿರಂಗ ಪಡಿಸಬೇಕು ಎಂದು ಖರ್ಗೆ ಒತ್ತಾಯಿಸಿದರು.

ಚೀನ ಹಿಂದಿನಿಂದಲೂ ಮೊದಲು ಪ್ರೀತಿ ತೋರಿಸಿ ಹಿಂದೆ ಬೆನ್ನಿಗೆ ಚೂರಿ ಹಾಕುವ ಬುದ್ಧಿಯನ್ನೇ ಮಾಡುತ್ತ ಬಂದಿದೆ. ಗಡಿಯಲ್ಲಿ ಪಾಟ್ರೋಲಿಂಗ್‌ ವೇಳೆ ಯಾವುದೇ ಆಯುಧ ಇಟ್ಟುಕೊಳ್ಳುವಂತಿಲ್ಲ ಎಂಬ ಒಪ್ಪಂದವೇ ಇದೆ. ಆದರೆ ಆ ನಿಯಮಗಳನ್ನು ಚೀನ ಉಲ್ಲಂಘಿಸಿದೆ. ನಮ್ಮ ಮೇಲೆ ಅವರು ದಾಳಿ ಮಾಡಿದಾಗ ಸುಮ್ಮನಿರಲು ಸಾಧ್ಯವಿಲ್ಲ. ದೇಶದ ಸೈನಿಕರು ಹಾಗೂ ಕೇಂದ್ರ ಸರಕಾರದ ಜತೆಗೆ ನಾವೆಲ್ಲ ನಿಲ್ಲುತ್ತೇವೆ ಎಂದು ಖರ್ಗೆ ಹೇಳಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next