Advertisement

ಹೆತ್ತವರ ಕನಸಿಗೆ ನೀರೆರೆದ; ತನ್ನ ಆಸೆಯನ್ನೂ ಪೂರೈಸಿಕೊಂಡ

12:55 AM Feb 07, 2019 | Harsha Rao |

ಬೆಳ್ತಂಗಡಿ: ಓರ್ವ ಮಗನಾದರೂ ದೇಶಸೇವೆ ಮಾಡಬೇಕೆಂಬ ಹೆತ್ತವರ ಹಂಬಲ, ಪೂರಕವಾಗಿ ಬಾಲ್ಯ ದಲ್ಲೇ ಮಿಲಿಟರಿ ಸಮವಸ್ತ್ರ ಧರಿಸಿದ ಯೋಧರ ಚಿತ್ರಗಳನ್ನು ನೋಡಿ ಮೈಮರೆಯುತ್ತಿದ್ದ ಬಾಲಕ ಈಗ ಕನಸು ನನಸಾಗಿಸಿಕೊಂಡು ಭಾರತೀಯ ಭೂ ಸೇನೆಯಲ್ಲಿ ಯೋಧನಾಗಿದ್ದಾನೆ.

Advertisement

ಕೃಷಿ ಹಿನ್ನೆಲೆ ಇರುವ ಕುಟುಂಬದ ಯುವಕನ ತಂದೆ-ತಾಯಿಗೂ ತಮ್ಮ ಮೂವರು ಪುತ್ರರಲ್ಲಿ ಓರ್ವನಾದರೂ ದೇಶಸೇವೆ ಮಾಡಬೇಕು ಎಂಬ ಹಂಬಲ ವಿತ್ತು. ಅವರ ಆಸೆಯಂತೆ ಪುತ್ರ ಹರೀಶ್‌ ಸೇನೆಯಲ್ಲಿ 17 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದಾನೆ. ಇದು ಬೆಳ್ತಂಗಡಿ ತಾಲೂಕು ಪುತ್ತಿಲ ಗ್ರಾಮದ ಚೀಮುಳ್ಳು ನಿವಾಸಿ ನೋಣಯ್ಯ ಪೂಜಾರಿ ಮತ್ತು ಸುಂದರಿ ದಂಪತಿಯ ಪುತ್ರ ಹರೀಶ್‌ ಕುಮಾರ್‌ ಅವರ ಕಥೆ.

ತಂದೆ-ತಾಯಿಗೆ ಐವರು ಮಕ್ಕಳು. ಭತ್ತದ ಬೇಸಾಯ, ಓಲೆ ಬೆಲ್ಲ ತಯಾರು ಮಾಡಿ ಮಕ್ಕಳನ್ನು ಓದಿಸಿದ್ದರು. ಮಕ್ಕಳೆಲ್ಲರೂ ಪ್ರಸ್ತುತ ಉತ್ತಮ ಸ್ಥಾನ ದಲ್ಲಿದ್ದು, ಹರೀಶ್‌ ಕುಮಾರ್‌ ಭಾರತೀಯ ಸೇನೆಯ ಚಂಡೀಗಢ ಹೆಡ್‌ಕಾÌರ್ಟರ್‌ ವೆಸ್ಟರ್ನ್ ಕಮಾಂಡೊದಲ್ಲಿ ನಾಯಕ್‌ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ನಿ ಸ್ವಾತಿ ಮತ್ತು ಪುತ್ರಿ ಹರ್ಷಾಲಿಯೂ ಇವರ ದೇಶಸೇವೆ “ಸಲಾಂ’ ಎನ್ನುತ್ತಿದ್ದಾರೆ.

ದಾರಿ ತೋರಿದ ಪತ್ರಿಕೆ
ಸೇನೆಗೆ ಸೇರಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದರೂ ಹೇಗೆ ಸೇರುವುದೆಂದು ಸ್ಪಷ್ಟ ಮಾಹಿತಿ ಇರಲಿಲ್ಲ. ಹೀಗಿರುವಾಗ ಒಂದು ದಿನ ಪತ್ರಿಕೆಯಲ್ಲಿ ಪ್ರಕಟವಾದ ಸೇನೆಗೆ ನೇಮಕಾತಿಗೆ ರ್ಯಾಲಿ ಎಂಬ ಸುದ್ದಿ ಜೀವನದ ದಿಕ್ಕನ್ನೇ ಬದಲಿಸಿತು ಎನ್ನುತ್ತಾರೆ ಹರೀಶ್‌.

Advertisement

ನಾನು ಹಾಸ್ಟೆಲ್‌ನಲ್ಲಿದ್ದುಕೊಂಡು ವಾಮ ದಪದವು ಸರಕಾರಿ ಕಾಲೇಜಿನಲ್ಲಿ ಪಿಯುಸಿ ವಿಜ್ಞಾನ ಓದುತ್ತಿದ್ದೆ. ಎಂದಿನಂತೆ ಪತ್ರಿಕೆ ಓದುತ್ತಿದ್ದಾಗ “ನಾಳೆ ಮಂಗಳೂರಿನಲ್ಲಿ ಸೇನಾ ನೇಮಕಾತಿ ರ್ಯಾಲಿ’ ಎಂಬ ಸುದ್ದಿ ಕಣ್ಣಿಗೆ ಬಿತ್ತು. ಸ್ನೇಹಿತರೊಂದಿಗೆ ಮಾಹಿತಿ ಹಂಚಿಕೊಂಡೆ. ಒಂದು ಪ್ರಯತ್ನ ಮಾಡುವ ಎಂದು ಆರು ಮಂದಿ ಸ್ನೇಹಿತರು ಒಟ್ಟಾಗಿ ನಿರ್ಧರಿಸಿ ಮರುದಿನ ಮಂಗಳೂರಿಗೆ ಹೊರ
ಟೆವು. ಆದರೆ ಇತರ 5 ಮಂದಿಯ ಅದೃಷ್ಟ ಖುಲಾಯಿಸಲಿಲ್ಲ. ನನ್ನ ಕನಸು ಮಾತ್ರ ನನ ಸಾಯಿತು ಎಂದು ಸೇನೆಗೆ ಆಯ್ಕೆಯಾದ ರೀತಿಯನ್ನು ಹರೀಶ್‌ ವಿವರಿಸುತ್ತಾರೆ.

ವಿದ್ಯಾರ್ಜನೆಯನ್ನೂ ಬಿಡಲಿಲ್ಲ
ಉನ್ನತ ವಿದ್ಯಾಭ್ಯಾಸದ ಗುರಿ ಹೊಂದಿದ್ದ ಹರೀಶ್‌ ಸೇನೆ ಸೇರಿದ ಬಳಿಕವೂ ತನ್ನ ವ್ಯಾಸಂಗ ಮುಂದುವರಿಸಿದರು. ಅನಂತರ ಬಿಎ ಪದವಿ, ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಚಂಡೀಗಢದಲ್ಲಿ ಗ್ರಂಥಾಲಯ ವಿಜ್ಞಾನದಲ್ಲಿ ಪದವಿ ಪಡೆದರು. ಆರಂಭದಲ್ಲಿ 3ಇಎಂಇ ಸೆಂಟರ್‌ ಭೋಪಾಲ, ಬಳಿಕ ರಾಜಸ್ಥಾನ್‌ನ 624 ಇಎಂಇ ಬೆಟಾಲಿಯನ್‌, ಕಾಶ್ಮೀರದಲ್ಲಿ ರಾ. ರೈಫಲ್ಸ್‌, ಹರಿಯಾಣ 633 ಇಎಂಇ ಬೆಟಾಲಿ ಯನ್‌, ಪ. ಬಂಗಾಲ 40 ಅರಂಡೊ ಫ್ಲೆಟ್‌, ಮಿಸೈಲ್‌ ವರ್ಕ್‌ಶಾಪ್‌ ಉತ್ತರ ಖಂಡದಲ್ಲಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಚಂಡೀಗಢದಲ್ಲಿ ಕರ್ತವ್ಯದಲ್ಲಿದ್ದಾರೆ.

ಉಗ್ರರ ಹತ್ಯೆ: ಮರೆಯಲಾಗುತ್ತಿಲ್ಲ
ಜಮ್ಮು-ಕಾಶ್ಮೀರದ ಕುಡ್ವಾಲ್‌ನಲ್ಲಿ ರಾಷ್ಟ್ರೀಯ ರೈಫಲ್ಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ದೀಪಾವಳಿ ಹಬ್ಬದ ಸಂದರ್ಭ ಉಗ್ರರ ದಾಳಿಯಾಗಿತ್ತು. ಹಿರಿಯ ಅಧಿಕಾರಿಗಳಿಂದ ಮಾಹಿತಿ ಬಂದ ಕೆಲವೇ ಕ್ಷಣಗಳಲ್ಲಿ ನಾವು ಅತ್ತ ಧಾವಿಸಿದ್ದೆವು. ನಮಗಿಂತ ಕೇವಲ 50 ಮೀ. ದೂರದಲ್ಲೇ ನಮ್ಮ ಯೋಧರು ನಾಲ್ವರು ಉಗ್ರರನ್ನೂ ಹೊಡೆದು ರುಳಿಸಿದ್ದರು. ಅಂದಿನ ಮಿಂಚಿನ ಕಾರ್ಯಾಚರಣೆ ಮತ್ತು ಸನ್ನಿವೇಶವನ್ನು ಎಂದಿಗೂ ಮರೆಯಲಾಗದು ಎನ್ನುತ್ತಾರೆ ಹರೀಶ್‌.

ನಮ್ಮ ಕುಟುಂಬದ ಹೆಮ್ಮೆ
ತನ್ನ ಪುತ್ರ ಸೈನ್ಯದಲ್ಲಿರುವುದೇ ನಾವು ಹೆತ್ತವರು ಅಭಿಮಾನಪಡಬೇಕಾದ ವಿಚಾರ. ಉಳಿದವರು 
ಬೇರೆ ಕೆಲಸಕ್ಕೆ ಹೋಗು ಎಂದರೂ ಮಗ ನಮ್ಮ ಮಾತಿಗೆ ಮಾತಿಗೆ ಬೆಲೆ ಕೊಟ್ಟು  ಸೇನೆಗೆ ಸೇರಿರುವುದು ತೃಪ್ತಿ ತಂದಿದೆ. ಇದಕ್ಕಿಂತ ಪುಣ್ಯದ ಕೆಲಸ ಬೇರೊಂದಿಲ್ಲ ಎಂಬ ಕಾರಣಕ್ಕೆ ತಾಯಿ ಭಾರತಿಯ ಸೇವೆ ಮಾಡುವುದಕ್ಕೆ ಮಗನನ್ನು ಸೈನ್ಯಕ್ಕೆ ಕಳುಹಿಸಿದ್ದೇವೆ. ಆತನ ಆತಂಕಗಳನ್ನು ನಿವಾರಿಸಿ ಧೈರ್ಯತುಂಬಿ ಕಳುಹಿಸಿದ್ದನ್ನು ಮಗ ಸಾರ್ಥಕ ಮಾಡಿ ತೋರಿಸಿದ್ದಾನೆ. ಪುತ್ತಿಲ ಗ್ರಾಮದ ಏಕೈಕ ಯೋಧ ಎಂಬ ಹೆಮ್ಮೆ ನಮ್ಮ ಕುಟುಂಬಕ್ಕೆ ಗೌರವ ತಂದಿದೆ. ತನ್ನ ಜೀವದ ಹಂಗನ್ನು ತೊರೆದು ಕಾರ್ಯನಿರ್ವಹಿಸುವ ಸೈನಿಕರಿಗೆ ಸರಕಾರ ಸೂಕ್ತ ಸೌಲಭ್ಯಗಳನ್ನು ಒದಗಿಸಬೇಕು ಎಂಬುದು ನನ್ನ ಆಶಯ.
– ನೋಣಯ್ಯ ಪೂಜಾರಿ (ಅಣ್ಣಿ), ಯೋಧ ಹರೀಶ್‌ ಅವರ ತಂದೆ

ಕುಟುಂಬದ ಪ್ರೇರಣೆ
ಬಾಲ್ಯದ ದಿನಗಳಲ್ಲಿ  ನನ್ನ ತಂದೆಯ ಧಾರ್ಮಿಕ, ಸಾಮಾಜಿಕ ಕಾರ್ಯಗಳು ನಮ್ಮನ್ನೂ ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿಸುವಂತೆ ಪ್ರೇರೇಪಿಸುತ್ತಿದ್ದವು. ನನ್ನ ಆಶಯಗಳಿಗೆ ಪೂರಕವಾಗಿ ಹೆತ್ತವರು, ಒಡಹುಟ್ಟಿದವರು ಕೂಡ ಸೇನೆ ಸೇರಲು ಪ್ರೇರಣೆ ನೀಡಿದರು. ಪ್ರಸ್ತುತ ಪತ್ನಿಯೂ ಬೆಂಬಲ ನೀಡುತ್ತಿದ್ದಾಳೆ. ಯುವ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿ  ಸೇನೆಗೆ ಬರಬೇಕು ಎನ್ನುವುದು ನನ್ನ ಆಶಯ.
– ಹರೀಶ್‌ ಕುಮಾರ್‌, ಭಾರತೀಯ ಸೇನೆಯ ಯೋಧ

Advertisement

Udayavani is now on Telegram. Click here to join our channel and stay updated with the latest news.

Next