Advertisement

ನೀರಿನ ಸಮಸ್ಯೆ: ಪ.ಪೂ. ತರಗತಿ ಪ್ರಾರಂಭ ಮುಂದೂಡಿಕೆ

03:03 AM May 21, 2019 | sudhir |

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಕೆಲವು ಖಾಸಗಿ ಕಾಲೇಜುಗಳು ತರಗತಿ ಆರಂಭದ ದಿನಾಂಕವನ್ನೇ ಮುಂದೂಡಿವೆ. ಆದರೆ ಸರಕಾರಿ ಪಪೂ ಕಾಲೇಜುಗಳ ತರಗತಿಗಳು ನಿಗದಿತ ದಿನವಾದ ಸೋಮವಾರದಂದೇ ಆರಂಭಗೊಂಡಿದೆ.

Advertisement

ದ.ಕ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಈಗಾಗಲೇ ಜಿಲ್ಲಾಡಳಿತವು ನಾಲ್ಕು ದಿನ ನೀರು ಪೂರೈಕೆ, ನಾಲ್ಕು ದಿನ ಸ್ಥಗಿತ ಮಾಡುವುದಾಗಿ ಪ್ರಕಟಿಸಿದೆ. ಈ ಸಂದರ್ಭದಲ್ಲಿ ಪಿಯು ತರಗತಿಗಳನ್ನು ಆರಂಭಿಸಿದರೆ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಬಹುದು ಎಂದು ಮುನ್ನೆಚ್ಚರಿಕೆಯಾಗಿ ಕೆಲವು ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ಪ್ರಮುಖರು ತರಗತಿ ಆರಂಭವನ್ನು ಮುಂದೂಡುವ ನಿರ್ಧಾರ ಕೈಗೊಂಡಿದ್ದಾರೆ. ಈ ಕಾಲೇಜುಗಳಲ್ಲಿ ಮೇ 27, 28 ದ್ವಿತೀಯ ಪಿಯುಸಿ ಮತ್ತು 29ರಂದು ಪ್ರಥಮ ಪಿಯುಸಿ ತರಗತಿಗಳು ಆರಂಭಗೊಳ್ಳಲಿವೆ. ಇನ್ನು ಕೆಲವು ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ತರಗತಿಗಳು ಜೂನ್‌ ತಿಂಗಳಲ್ಲಿ ಆರಂಭಗೊಳ್ಳಲಿವೆ ಎಂಬುದಾಗಿ ಕಾಲೇಜು ಸಿಬಂದಿ ಮಾಹಿತಿ ನೀಡಿದ್ದಾರೆ.

ತೀವ್ರ ನೀರಿನ ಸಮಸ್ಯೆ ಇದಿರಿಸುತ್ತಿರುವ ಉಡುಪಿ ನಗರದ ಒಂದೆರಡು ಕಾಲೇಜುಗಳು ಸೋಮವಾರ ತರಗತಿಗಳನ್ನು ಆರಂಭಿಸಲಿಲ್ಲ. ಒಂದು ಸಂಸ್ಥೆಯಲ್ಲಿ ಮೇ 27ರಂದು, ಇನ್ನೊಂದರಲ್ಲಿ ಜೂ.1ರಂದು ವಿದ್ಯಾರ್ಥಿಗಳನ್ನು ಬರಲು ತಿಳಿಸಿದ್ದಾರೆ.

“ನೀರಿನ ಸಮಸ್ಯೆ ಇರುವುದು ಹೌದು. ಕೆಲವು ಸಂಸ್ಥೆಗಳನ್ನು ಹೊರತುಪಡಿಸಿ ಉಳಿದೆಲ್ಲ ಕಡೆ ತರಗತಿ ಗಳು ಆರಂಭಗೊಂಡಿವೆ. ಇಲ್ಲಿ ಬ್ರಿಡ್ಜ್ ಕೋರ್ಸ್‌ನ್ನು ಮೂರ್‍ನಾಲ್ಕು ದಿನಗಳ ಕಾಲ ನಡೆಸುತ್ತಾರೆ’ ಎಂದು ಡಿಡಿಪಿಯು ತಿಳಿಸಿದ್ದಾರೆ.

ಹಾಸ್ಟೆಲ್‌ಗ‌ಳಲ್ಲಿ ನೀರಿನ ಸಮಸ್ಯೆ
ವಿದ್ಯಾರ್ಥಿ ನಿಲಯಗಳಲ್ಲಿ ನೀರು ಹೆಚ್ಚು ಬೇಕಾಗುತ್ತದೆ. ಆದರೆ ನೀರಿನ ಸಮಸ್ಯೆ ಇರುವಾಗ ನಿಗದಿತ ದಿನಾಂಕದಂದು ತರಗತಿ ಆರಂಭಿಸಿದರೆ ವಿದ್ಯಾರ್ಥಿಗಳ ಬಳಕೆಗೆ ನೀರಿಲ್ಲದಾಗುತ್ತದೆ. ಈ ಹಿನ್ನೆಲೆಯಲ್ಲಿ ತರಗತಿ ಆರಂಭ ಮುಂದೂಡಲಾಗಿದೆ ಎಂದು ನಗರದ ಕಾಲೇಜೊಂದರ ಉಪ ಪ್ರಾಂಶುಪಾಲರು “ಉದಯವಾಣಿ’ಗೆ ತಿಳಿಸಿದ್ದಾರೆ. ಆದರೆ ಸರಕಾರಿ ಕಾಲೇಜುಗಳಲ್ಲದೆ, ಬೆರಳೆಣಿಕೆಯಷ್ಟು ಖಾಸಗಿ ಕಾಲೇಜುಗಳಲ್ಲಿ ನಿಗದಿತ ದಿನಾಂಕದಂದೇ ತರಗತಿಗಳು ಆರಂಭವಾಗಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next