Advertisement

ಸಂಕಲಕರಿಯ: ಶಾಂಭವಿ ನದಿಯಲ್ಲಿ ಬತ್ತಿದ ಜೀವಜಲ 

03:51 AM Mar 17, 2019 | |

ಬೆಳ್ಮಣ್‌: ಮುಂಡ್ಕೂರು, ಸಂಕಲಕರಿಯ, ಸಚ್ಚೇರಿಪೇಟೆ, ಕಡಂದಲೆ ಭಾಗದ ಕೃಷಿಕರ ಜಲಮೂಲ ಎನಿಸಿರುವ ಶಾಂಭವಿ ನದಿ ಬತ್ತಿ ಹೋಗಿದ್ದು ಈ ಭಾಗದ ಜನತೆ ಕೃಷಿ ಚಟುವಟಿಕೆಗಳಿಗೆ ನೀರಿನ ಬರ ಎದುರಿಸುತ್ತಿದ್ದಾರೆ. 
ಬಿಸಿಲಿನ ಪ್ರಮಾಣ ಮಿತಿ ಮೀರಿದ್ದು  ನದಿ ನೀರಿನ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಬಾವಿಗಳಲ್ಲಿಯೂ ನೀರಿನ ಒರತೆ ಕಮ್ಮಿಯಾಗಿ ಆತಂಕ ಸೃಷ್ಟಿಯಾಗಿದೆ. ಇದರಿಂದಾಗಿ  ತಾಲೂಕಿನ ಜೀವನದಿ ಶಾಂಭವಿ ತಟದಲ್ಲಿ  ಹಾಹಾಕಾರ ಎದ್ದಿದೆ.

Advertisement

ಪಂಪ್‌ ಮಾಲಕರಿಗೆ ಸೂಚನೆ
ನದಿ ಬದಿಯ ಬಿಲ್‌ ರಹಿತ ಕೃಷಿ ಪಂಪ್‌ ಸೆಟ್‌ಗಳು ದಿನವಿಡೀ ಚಾಲೂ ಸ್ಥಿತಿಯಲ್ಲಿದ್ದು ಅಗತ್ಯಕ್ಕಿಂತ ಹೆಚ್ಚು ನೀರು ವಿನಿಯೋಗವಾಗುತ್ತಿದೆ ಎಂದು ಕೆಲ ಕೃಷಿಕರು  ಆರೋಪಿಸುತ್ತಿದ್ದಾರೆ.  ಹೀಗಾಗಿ  ಪಂಪ್‌ ಸೆಟ್‌ ಮಾಲಕರು ನೀರಿನ ಬವಣೆಯನ್ನು ಅರಿತು ಒಂದಿಷ್ಟು ಯೋಚಿಸಿ ನೀರನ್ನು ಬಳಸುವಂತೆಯೂ ನೀರಿನ ಸಮಸ್ಯೆ ಎದುರಿಸುತ್ತಿರುವ ಜನರು ವಿನಂತಿಸಿದ್ದಾರೆ.

ಸಾಣೂರು, ನಿಟ್ಟೆ ಪರಪ್ಪಾಡಿ, ಬೋಳ, ಸಚ್ಚೇರಿಪೇಟೆ, ಸಂಕಲಕರಿಯ, ಮುಂಡ್ಕೂರು, ಪಲಿಮಾರು ಭಾಗದಲ್ಲಿ ಹರಿದು ಅರಬ್ಬೀ  ಸಮುದ್ರ ಸೇರುವ  ಶಾಂಭವಿ ನದಿ ಈ ಬಾರಿ ಬಹುಬೇಗನೇ  ಬತ್ತಿ ಹೋಗಿರುವುದೇ  ನೀರಿನ ಕೊರತೆ ಉಂಟಾಗುವುದಕ್ಕೆ ಮುಖ್ಯ ಕಾರಣವಾಗಿದೆ.

ಅಣೆಕಟ್ಟುಗಳಲ್ಲಿಯೂ ನೀರಿಲ್ಲ
ಈಗಾಗಲೇ ಶಾಂಭವಿ ನದಿಗೆ ಬೋಳ , ಪಾಲಿಂಗೇರಿ, ಸಚ್ಚೇರಿಪೇಟೆ, ಸಂಕಲಕರಿಯದಲ್ಲಿ ಅಲ್ಲಲ್ಲಿ ಕಿಂಡಿ ಆಣೆಕಟ್ಟುಗಳನ್ನು ರಚಿಸಲಾಗಿದ್ದು ಕೆಲವೊಂದು ಅಣೆಕಟ್ಟುಗಳು ನಿರ್ವಹಣೆಯ ಕೊರತೆಯಿಂದ ನೇಪಥ್ಯಕ್ಕೆ ಸರಿದಿವೆ. ಇನ್ನು  ನಿರ್ವಹಣೆ ಕಂಡ ಅಣೆಕಟ್ಟುಗಳಲ್ಲಿಯೂ ನೀರಿನ ಪ್ರಮಾಣ ಕಡಿಮೆಯಾಗಿದೆ. ಸಚ್ಚೇರಿಪೇಟೆಯ ನಲ್ಲೆಗುತ್ತಿ ಪರಿಸರದಲ್ಲಿರುವ ಅಣೆಕಟ್ಟು ನಿರ್ಮಾಣ ಹಂತದಲ್ಲಿದ್ದು ಇದರ ಕಾಮಗಾರಿಯೂ ಅರ್ಧಕ್ಕೆ ಮೊಟಕುಗೊಂಡಿದೆ. ಸದ್ಯದ ಪರಿಸ್ಥಿತಿಯಲ್ಲಿ  ಹಳೆಯ ಅಣೆಕಟ್ಟಿನಲ್ಲಿ ನೀರು ಶೇಖರಣೆ ಮಾಡಲಾಗಿದ್ದು  ನೀರಿನ ಪ್ರಮಾಣ ಸಂಪೂರ್ಣ ನೆಲಮಟ್ಟವನ್ನು ಕಂಡಿದೆ.

ಸಂಕಲಕರಿಯ ಯುವಕನ ಏಕಾಂಗಿ ಹೋರಾಟ
ಸಂಕಲಕರಿಯದಲ್ಲಿ ಸಾಮಾಜಿಕ ಕಳಕಳಿಯ ಯುವಕ ಸುಧಾಕರ ಸಾಲ್ಯಾನ್‌ ಎಂಬವರು ಏಕಾಂಗಿಯಾಗಿ ಹೋರಾಟ ನಡೆಸಿ ಊರಿನ ಅಕ್ಕಪಕ್ಕದ ಕೃಷಿಕರು ಹಾಗೂ ನೀರಾವರಿ ಇಲಾಖೆಯ ನೆರವಿನಿಂದ ಅಣೆಕಟ್ಟು ನಿರ್ವಹಣೆ ನಡೆಸಿ ಸುಮಾರು 20 ಕಿ.ಮೀ.ವ್ಯಾಪ್ತಿಯವರೆಗೂ ನದಿ ನೀರು ನಿಲ್ಲುವಂತೆ ಮಾಡಿ ಕೃಷಿಕರಿಗೆ ಆಸರೆಯಾಗಿದ್ದರು. ಆದರೆ ಈಗ  ಸಂಕಲಕರಿಯದಲ್ಲೂ ನೀರಿನ ಮಟ್ಟ ಸಂಪೂರ್ಣ ಕುಸಿದಿದೆ.  ಕೆಲವೊಂದು ಕಡೆಗಳಲ್ಲಿ ಶಾಂಭವಿ ಸಂಪೂರ್ಣ ಬತ್ತಿ ಹೋಗಿದೆ.

Advertisement

ಜಲ ಕ್ಷಾಮದ ಸೂಚನೆ
ಕೃಷಿ ಪ್ರಧಾನವಾದ ಬೋಳ, ಪೊಸ್ರಾಲು, ಸಂಕಲಕರಿಯ ಗ್ರಾಮಗಳಿಗೆ ಶಾಂಭವಿ ನದಿ ನೀರು ಹೆಚ್ಚು ಅನಿವಾರ್ಯವಾಗಿದ್ದು ನೀರು ಬತ್ತಿದ್ದರಿಂದ  ಕೃಷಿಕರು ಕಂಗಾಲಾಗಿದ್ದಾರೆ. ಅಲ್ಲದೆ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದೆ. 

ಹೀಗಾಗಿ ನೀರಿನ  ಬಳಕೆ ಹಾಗೂ ನೀರಿನ ಬಗ್ಗೆ ಗ್ರಾಮಸ್ಥರು ಜಾಗಗೊಳ್ಳಬೇಕಾಗಿದ್ದು, ಜಲಕ್ಷಾಮ ತಲೆದೋರುವ ಮುನ್ನವೇ ಪರ್ಯಾಯ ಕ್ರಮಗಳನ್ನು ಕೈಗೊಂಡರೆ ಒಳಿತು. ಕಿಂಡಿ ಅಣೆಕಟ್ಟುಗಳ ನಿರ್ವಹಣೆ ಯ ಕುರಿತು ಸಂಬಂಧಿಸಿದ ಅಧಿಕಾರಿಗಳು ಲಕ್ಷ್ಯ ವಹಿಸಿದರೆ ಸಮಸ್ಯೆ ಕೊಂಚ ಮಟ್ಟಿಗೆ ಸರಿಹೋಗಬಹುದು ಎನ್ನುವುದು ಬಹುತೇಕ ಕೃಷಿಕರ ಅಭಿಪ್ರಾಯ.

ಮಿತ ಬಳಕೆ ಮಾಡಬೇಕು
ಶಾಂಭವಿ ನದಿಯ ಎಲ್ಲಾ ಕಿಂಡಿ ಅಣೆಕಟ್ಟು ಸಹಿತ ದೊಡ್ಡ ಅಣೆಕಟ್ಟುಗಳ  ನಿರ್ವಹಣೆಗಾಗಿ ಜಪ್ರತಿನಿಧಿಗಳು, ಇಲಾಖೆ ಹಾಗೂ ಗ್ರಾಮಸ್ಥರು ಸಹಕರಿಸಬೇಕು. ಈ ಮೂಲಕ ನೀರಿನ ಸಂಗ್ರಹಣೆ ಸಾಧ್ಯ, ನೀರನ ಮಿತ ಬಳಕೆಯ ಬಗ್ಗೆಯೂ ಯೋಚಿಸಬೇಕಾಗಿದೆ. ಇಲ್ಲದಿದ್ದಲ್ಲಿ ಮಳೆಯೇ ಆಧಾರ.
ಸುಧಾಕರ ಸಾಲ್ಯಾನ್‌ ಸಂಕಲಕರಿಯ,  ಕೃಷಿಕ

Advertisement

Udayavani is now on Telegram. Click here to join our channel and stay updated with the latest news.

Next