Advertisement

ಬೆಂಗಳೂರಿಗೆ ಸಮುದ್ರ ತೀರದಿಂದ ನೀರು:  ಜಾರ್ಜ್‌

10:41 AM Aug 31, 2017 | Team Udayavani |

ಬೆಂಗಳೂರು: ಮಂಗಳೂರು ಬಳಿ ಸಮುದ್ರ ಸೇರುವ ನದಿಗಳ ಸಿಹಿನೀರನ್ನು ಸಮುದ್ರದ ತಟದಲ್ಲಿ ಸಂಗ್ರಹಿಸಿ ಅದನ್ನು ಬೆಂಗಳೂರಿಗೆ ಹರಿಸುವ ಯೋಜನೆ ಕುರಿತಂತೆ ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು, ಮೀನುಗಾರರ ಸಂಘಟನೆಗಳು, ನಾಗರಿಕ ಸಂಘಟನೆಗಳೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಹೇಳಿದ್ದಾರೆ.

Advertisement

ಪತ್ರಕರ್ತರ ಜತೆ ಮಾತನಾಡಿದ ಅವರು, ಮಂಗಳೂರಿನಲ್ಲಿ ನದಿಗಳು ಸಮುದ್ರ ಸೇರುವ ಕಡೆ ತಡೆಗೋಡೆ ನಿರ್ಮಿಸಿ ಅಲ್ಲಿಂದ ನೀರನ್ನು ಬೆಂಗಳೂರಿಗೆ ತರುವ ಬಗ್ಗೆ ಜಲಮಂಡಳಿ ಈಗಾಗಲೇ ಕಾರ್ಯಸಾಧ್ಯತೆ ವರದಿ ಸಿದ್ಧಪಡಿಸಿದೆ. ಅದನ್ನು ಆಧರಿಸಿ ಈ ಚರ್ಚೆ ನಡೆಸಲಾಗುವುದು ಎಂದರು. ಈ ಹಿಂದೆ ಎತ್ತಿನಹೊಳೆ ಯೋಜನೆ ಜಾರಿಗೆ ಕರಾವಳಿ ಭಾಗದಲ್ಲಿ ತೀವ್ರ ವಿರೋಧ ವ್ಯಕ್ತ ವಾಗಿತ್ತು. ಅದೇ ರೀತಿ ಇದಕ್ಕೂ ವಿರೋಧ ವ್ಯಕ್ತ ವಾಗಬಾರದು ಎಂಬ ಕಾರಣಕ್ಕೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು, ಮೀನುಗಾರರ ಸಂಘಟನೆ, ನಾಗರಿಕ ಸಂಘಟನೆಗಳ ಪ್ರತಿನಿಧಿಗಳಿಗೆ ಪ್ರಾತ್ಯಕ್ಷಿಕೆ ಮೂಲಕ ಯೋಜನೆಯ ಬಗ್ಗೆ ವಿವರಿಸುವಂತೆ ಸೀತಾರಾಮ್‌ ಅವರನ್ನು ಕೋರಲಾಗಿದ್ದು, ಅವರೂ ಸಮ್ಮತಿಸಿದ್ದಾರೆ. ಸ್ಥಳೀಯರ ಒಪ್ಪಿಗೆ ಪಡೆದು ಯೋಜನೆ ಅನುಷ್ಠಾನ ಮಾಡುವುದು ಸರಕಾರದ ಉದ್ದೇಶ ಎಂದು ತಿಳಿಸಿದರು.

ಕೊರಿಯಾ, ಸಿಂಗಾಪುರ, ಹಾಂಕಾಂಗ್‌, ನೆದರ್‌ಲ್ಯಾಂಡ್‌ ದೇಶಗಳಲ್ಲಿ ಸಿಹಿನೀರು ಸಂಗ್ರಹಿಸಿ ಪೂರೈಸುವ ಯೋಜನೆ ಯಶಸ್ವಿ ಯಾಗಿ ಅನುಷ್ಠಾನವಾಗಿದೆ. ಗುಜರಾತ್‌ ನಲ್ಲೂ ಇಂತಹ ಪ್ರಯತ್ನ ನಡೆಯುತ್ತಿದ್ದು, ಅದೇ ಮಾದರಿಯಲ್ಲಿ ಜಲ ಮಂಡಳಿ ಮೂಲಕ ರಾಜ್ಯ ಸರಕಾರವೂ ಈ ಪ್ರಯತ್ನಕ್ಕೆ ಮುಂದಾಗಿದೆ ಎಂದರು.  

ಪ್ರೊ| ಟಿ.ಜಿ. ಸೀತಾರಾಮ್‌ ಅವರಿಂದ ವರದಿ: ಭಾರತೀಯ ವಿಜ್ಞಾನ ಸಂಸ್ಥೆಯ  ಪ್ರೊ| ಟಿ.ಜಿ. ಸೀತಾರಾಮ್‌ ಅವರು ಈ ಕುರಿತಂತೆ ವರದಿ ಸಿದ್ಧಪಡಿಸಿದ್ದರು. ನೂರು ವರ್ಷಗಳ ಸರಾಸರಿ ಅಂದಾಜಿನಂತೆ ಪಶ್ಚಿಮಘಟ್ಟದಲ್ಲಿ ಹುಟ್ಟುವ ನೇತ್ರಾವತಿ ನದಿಯಿಂದ ಪ್ರತಿವರ್ಷ 350 ಟಿಎಂಸಿ ನೀರು ಸಮುದ್ರ ಸೇರುತ್ತಿದೆ. ಸಮುದ್ರ ಸೇರುವ ಜಾಗದಲ್ಲಿ ಈ ಸಿಹಿ ನೀರನ್ನು ಸಂಗ್ರಹಿಸಿ, ವಾರ್ಷಿಕ ಸುಮಾರು 22 ಟಿಎಂಸಿ ನೀರನ್ನು ಪಂಪ್‌ ಮಾಡಿ, ಪೈಪ್‌ಲೈನ್‌ ಮೂಲಕ ಬೆಂಗಳೂರಿಗೆ ತರಲು ಸಾಧ್ಯವಿದೆ ಎಂದು ಅವರು ವರದಿಯಲ್ಲಿ ತಿಳಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next