Advertisement

ನೀರಿನ ಕರ ದುಪ್ಪಟ್ಟು: ನಾಗರಿಕರ ಆಕ್ರೋಶ

07:36 AM Feb 26, 2019 | Team Udayavani |

ಮಂಡ್ಯ: ನಗರದ ಜನರಿಗೆ ನೀರಿನ ಕರ ಏರಿಕೆ ಬಿಸಿ ಏಪ್ರಿಲ್‌ 1 ರಿಂದ ತಟ್ಟಲಿದೆ. ಮಾಸಿಕ 120 ರೂ. ಇದ್ದ ನೀರಿನ ದರವನ್ನು ಏಕಾಏಕಿ 282 ರೂ.ಗೆ ಏರಿಕೆ ಮಾಡಿದೆ. ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸದೆ, ಕುಡಿಯುವ ನೀರಿನ ವ್ಯವಸ್ಥೆಯಲ್ಲಿರುವ ಲೋಪಗಳನ್ನು ಸರಿಪಡಿಸದೆ ಏಕಾಏಕಿ ದರ ಏರಿಕೆ ಮಾಡಿರುವ ಜಲಮಂಡಳಿಯ ನಿರ್ಧಾರಕ್ಕೆ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

Advertisement

ಪ್ರಸ್ತುತ ವಾರಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಸರಬರಾಜು ಮಾಡುವ ನೀರು ಸರಿಯಾದ ರೀತಿಯಲ್ಲಿ ಶುದ್ಧೀಕರಣಗೊಂಡಿರುವುದಿಲ್ಲ. ಪಾತ್ರೆಯ ತಳದಲ್ಲಿ ಮಣ್ಣು ಶೇಖರಣೆಯಾಗಿರುತ್ತದೆ. ಹಲವಾರು ಕಡೆ ಕುಡಿಯುವ ನೀರಿನ ಪೈಪ್‌ ಒಡೆದು ನೀರು ಮೋರಿ ಸೇರುತ್ತಿದೆ. ನಿಗದಿತ ಸಮಯಕ್ಕೂ ನೀರನ್ನು ಪೂರೈಸುತ್ತಿಲ್ಲ. ಇಷ್ಟೆಲ್ಲಾ ಅವ್ಯವಸ್ಥೆಗಳಿದ್ದರೂ ನೀರಿನ ದರವನ್ನು ಏರಿಕೆ ಮಾಡಿರುವ ಅಧಿಕಾರಿಗಳ ನಿಲುವಿಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

8 ವರ್ಷದಿಂದ ದರ ಪರಿಷ್ಕರಿಸಿಲ್ಲ: 2011ರಿಂದ ನೀರಿನ ದರ ಪರಿಷ್ಕರಣೆ ಮಾಡಿಲ್ಲ. ಮೂರು ವರ್ಷಗಳಿಗೊಮ್ಮೆ ದರ ಪರಿಷ್ಕರಣೆ ಮಾಡಬೇಕೆಂಬ ನಿಯಮವಿದೆ. 2014ರಲ್ಲಿ ಬರಗಾಲವಿದ್ದ ಕಾರಣ ದರ ಏರಿಕೆ ಮಾಡಿರಲಿಲ್ಲ. 2017ರಲ್ಲೂ ಹಲವು ಕಾರಣಗಳಿಂದ ನೀರಿನ ಕರ ಏರಿಸದೆ ಸುಮ್ಮನಿದ್ದೆವು. 2016ರಲ್ಲಿ ರಾಮನಗರ ಹಾಗೂ ಚನ್ನಪಟ್ಟಣ ಜನರಿಗೆ ಪೂರೈಸುವ ನೀರಿನ ದರ ಪರಿಷ್ಕರಿಸಿ 218 ರೂ.ಗೆ ನಿಗದಿಪಡಿಸಿದೆ.

ಅದರಂತೆ ಎಂಟು ವರ್ಷಗಳಿಂದ ದರ ಏರಿಕೆ ಮಾಡದಿರುವುದರಿಂದ ಆಗಿರುವ ನಷ್ಟವನ್ನು ಗಮನದಲ್ಲಿಟ್ಟುಕೊಂಡು ಏಪ್ರಿಲ್‌ನಿಂದ 282 ರೂ. ದರ ನಿಗದಿಪಡಿಸಿರುವುದಾಗಿ ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. ನಗರಸಭೆ ಕೌನ್ಸಿಲ್‌ ಮುಂದಿಟ್ಟು ದರ ಏರಿಕೆಗೆ ಒಪ್ಪಿಗೆ ಪಡೆಯಬೇಕಿರುವುದು ನಿಜವಾದರೂ ಜಿಲ್ಲಾಧಿಕಾರಿಯವರು ಆಡಳಿತಾಧಿಕಾರಿಯಾಗಿರುವುದರಿಂದ ಅವರೇ ನೀರಿನ ಪರಿಷ್ಕೃತ ದರದ ನಿರ್ಣಯ ಕೈಗೊಂಡು ನಗರಸಭೆ ಪೌರಾಯುಕ್ತರಿಂದ ದರ ಏರಿಕೆಗೆ ಅನುಮತಿ ಪಡೆದುಕೊಂಡಿದ್ದಾರೆ.

ಹಾಲಿ ವಾರಕ್ಕೊಮ್ಮೆ ಅಥವಾ ನಾಲ್ಕೈದು ದಿನಕ್ಕೊಮ್ಮೆ ನೀರು ಹರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮೂರು ದಿನಕ್ಕೊಮ್ಮೆ ನೀರು ಹರಿಸಲಾಗುವುದು. ಈಗ ಒಂದು ಗಂಟೆ ಕಾಲ ನೀರು ಹರಿಸುವ ಅವಧಿಯನ್ನು ಒಂದೂವರೆ ಗಂಟೆಗೆ ಹೆಚ್ಚಿಸುವ ತೀರ್ಮಾನ ಮಾಡಲಾಗುವುದು ಎಂಬುದು ಅಧಿಕಾರಿಗಳು ಹೇಳುವ ಮಾತು.

Advertisement

ಚರಂಡಿ ಪಾಲು: ಕುಡಿಯುವ ನೀರಿನ ಪೂರೈಕೆ ಸಮರ್ಪಕವಾಗಿಲ್ಲದ ಕಾರಣ ಜನರ ಬಳಕೆಗೆ ಸಿಗದೆ ಸಾಕಷ್ಟು ನೀರು ಚರಂಡಿಗೆ ಹರಿದು ಪೋಲಾಗುತ್ತಿದೆ. ವಾಟರ್‌ ಟ್ಯಾಂಕ್‌ಗಳಿಗೆ ಗುಣಮಟ್ಟದ ಗೇಜ್‌ ಅಳವಡಿಸಿ ನೀರು ಪೋಲಾಗುವುದನ್ನು ತಡೆಯುತ್ತಿಲ್ಲ. ಹಲವೆಡೆ ಕುಡಿಯುವ ನೀರಿನ ಪೈಪ್‌ಗ್ಳು ಒಡೆದುಹೋಗಿವೆ. ಚರಂಡಿಯೊಳಗೆ ಹಾದುಹೋಗಿರುವ ಪೈಪ್‌ಗ್ಳನ್ನು ಸ್ಥಳಾಂತರಿಸುವ ಪ್ರಯತ್ನಗಳೂ ನಡೆದಿಲ್ಲ. 

ನಗರಕ್ಕೆ 24*7 ನೀರು ಪೂರೈಸುವ ಅಮೃತ್‌ ಯೋಜನೆಯೂ ಕುಂಟುತ್ತಾ ತೆವಳುತ್ತಾ ಸಾಗಿದೆ. ಆ ಹಿನ್ನೆಲೆಯಲ್ಲಿ ಅಮೃತ್‌ ಯೋಜನೆ ಪೂರ್ಣಗೊಂಡು ಎಲ್ಲಾ ಕೊಳಾಯಿ ಸಂಪರ್ಕಗಳಿಗೆ ಮೀಟರ್‌ ಅಳವಡಿಸಿದ ನಂತರ ನೀರಿನ ದರ ವಿಧಿಸುವಂತೆ ನಗರದ ನಾಗರಿಕರು ಒತ್ತಾಯಿಸಿದ್ದಾರೆ.

ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿಲ್ಲ: ಸಾರ್ವಜನಿಕರ ಗಮನಕ್ಕೆ ತರದೆ ನೀರಿನ ಕರ ಏರಿಕೆ ಮಾಡಿರುವ ಅಧಿಕಾರಿಗಳ ತೀರ್ಮಾನದ ವಿರುದ್ಧ ಜನಸಾಮಾನ್ಯರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನೀರಿನ ದರ ಏರಿಕೆಗೂ ಮುನ್ನ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಬೇಕಿತ್ತು. ಕುಡಿಯುವ ನೀರು ಸರಬರಾಜಿನಲ್ಲಿರುವ ದೋಷಗಳೇನು,

ನಿಗದಿತ ಸಮಯದಲ್ಲಿ ನೀರು ಪೂರೈಕೆಯಾಗುತ್ತಿದೆಯೇ, ಎಷ್ಟು ಪ್ರಮಾಣದಲ್ಲಿ ಗೃಹ ಬಳಕೆಗೆ ನೀರು ದೊರಕುತ್ತಿದೆ. ವಾರಕ್ಕೊಮ್ಮೆ ಬಿಡುವ ನೀರಿನಲ್ಲಿ ಒಂದು ಗಂಟೆ ನೀರು ಪೂರೈಸಿದರೆ ಸಾಕೇ, ನೀರಿನ ಶುದ್ಧೀಕರಣದಲ್ಲಿ ಆಗುತ್ತಿರುವ ಲೋಪಗಳು, ನೀರಿನ ಶುದ್ಧೀಕರಣ ಕೇಂದ್ರದ ವ್ಯವಸ್ಥೆ ಹೇಗಿದೆ ಎನ್ನುವುದನ್ನು ಪರಿಶೀಲನೆ ನಡೆಸದೆ, ಸಾರ್ವಜನಿಕರಿಂದ ಅಭಿಪ್ರಾಯಗಳನ್ನೂ ಪಡೆಯದೆ ಏಕಾಏಕಿ ನೀರಿನ ದರ ಏರಿಸಿರುವುದು ಸರಿಯೇ ಎಂದೆಲ್ಲಾ ಪ್ರಶ್ನಿಸುತ್ತಿದ್ದಾರೆ.

ಕೆಲವೊಂದು ಬಡಾವಣೆಗಳಿಗೆ ಕಾವೇರಿ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಪ್ರಭಾವಿಗಳು ಕೊಳಾಯಿಗಳಿಗೇ ಮೋಟಾರ್‌ ಪಂಪ್‌ ಅಳವಡಿಸಿಕೊಂಡಿದ್ದಾರೆ. ಇದರಿಂದ ಮುಂದಕ್ಕೆ ನೀರಿನ ಹರಿವಿನ ಒತ್ತಡ ಕಡಿಮೆಯಾಗಿ ಆ ಭಾಗದ ಜನರಿಗೆ ಸರಿಯಾಗಿ ನೀರು ಸಿಗದಂತಾಗಿದೆ. ಈ ಅಂಶಗಳನ್ನೆಲ್ಲಾ ಪರಿಗಣಿಸದೆ ದಿಢೀರನೆ ದರ ಏರಿಕೆ ಮಾಡಿರುವುದು ಅವೈಜ್ಞಾನಿಕ ಎಂದು ದೂರಿದ್ದಾರೆ.

ಕುಡಿಯುವ ನೀರಿನ ದರ ಏರಿಕೆ ಮಾಡುವುದಕ್ಕೂ ಮುನ್ನಾ ಈ ಎಲ್ಲಾ ಅವ್ಯವಸ್ಥೆಗಳನ್ನು ಸರಿಪಡಿಸಿ ಪರಿಷ್ಕೃತ ದರ ಜಾರಿಗೊಳಿಸಿದ್ದರೆ ಅದಕ್ಕೊಂದು ವೈಜ್ಞಾನಿಕ ಅರ್ಥ ಬರುತ್ತಿತ್ತು. ಏಳೆಂಟು ವರ್ಷಗಳಿಂದ ದರ ಪರಿಷ್ಕರಣೆ ಮಾಡಿಲ್ಲವೆಂಬ ನೆಪವನ್ನು ಮುಂದಿಟ್ಟುಕೊಂಡು ಏಕಾಏಕಿ 160 ರೂ. ದರ ಏರಿಕೆ ಮಾಡಿರುವುದು ಸರ್ವಾಧಿಕಾರಿ ಧೋರಣೆಯಾಗಿದೆ ಎಂದು ದೂರಿದ್ದಾರೆ.

* ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next