Advertisement

Hosapete: ಮತ್ತೆ ಹಸಿರು ಬಣ್ಣಕ್ಕೆ ಡ್ಯಾಂ ನೀರು: ನದಿಪಾತ್ರದ ಗ್ರಾಮಸ್ಥರಲ್ಲಿ ಆತಂಕ

11:38 AM Aug 14, 2023 | Team Udayavani |

ಹೊಸಪೇಟೆ: ಕಲ್ಯಾಣ ಕರ್ನಾಟಕದ ರೈತರ ಜೀವನಾಡಿ, ತುಂಗಭದ್ರಾ ಜಲಾಶಯದ ನೀರು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಹಸಿರು ಬಣ್ಣಕ್ಕೆ ತಿರುಗಿದ್ದು, ನದಿಪಾತ್ರದ ಗ್ರಾಮಸ್ಥರಲ್ಲಿ ಆಂತಕ ಮನೆಮಾಡಿದೆ.

Advertisement

ಒಳಹರಿವು ಹೆಚ್ಚಾಗುತ್ತಿದ್ದಂತೆ ಇತ್ತ ಜಲಾಶಯದ ನೀರು ಹಸಿರು ಬಣ್ಣಕ್ಕೆ ಬದಲಾಗಿರುವುದು ನದಿಪಾತ್ರದ ಜನರ ಆತಂಕಕ್ಕೆ ಕಾರಣವಾಗಿದೆ. ಪ್ರತಿವರ್ಷವೂ ಬದಲಾಗುವ ಈ ಕ್ರಿಯೆ ಈ ಭಾಗದ ಜನರಿಗೆ ತಲೆನೋವಾಗಿ ಪರಿಣಿಸಿದೆ.

ತ್ಯಾಜ್ಯ ಸೇರುವ ಶಂಕೆ:

ನಗರ, ಪಟ್ಟಣಗಳು ಸೇರಿದಂತೆ ಕಾರ್ಖಾನೆಗಳ ತಾಜ್ಯ ಹರಿದು ಜಲಾಶಯ ಸೇರುವ ಸಾಧ್ಯತೆ ಇರುವುದರಿಂದ ಈ ನೀರು ಹಸಿರು ಬಣ್ಣಕ್ಕೆ ತಿರುಗುವ ಸಂಭವವಿದೆ. ಅದರಲ್ಲಿಯೂ ಕೃಷಿಭೂಮಿಗಳಲ್ಲಿ ಬಳಕೆ ಮಾಡುವ ಅತಿಯಾದ ಕ್ರಿಮಿನಾಶಕ, ರಸಾಯನಿಕ ಬಳಕೆಯ ಪರಿಣಾಮ ನೀರು ಹಸಿರಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಜೀವ ಸಂಕುಲಕ್ಕೆ ಕುತ್ತು:

Advertisement

ಜಲಾಶಯದ ನೀರನ್ನು ಕೃಷಿ, ಕೈಗಾರಿಕೆ ಜೊತೆಗೆ ಜನ- ಜಾನುವಾರು ಕುಡಿಯಲು ಬಳಸಲಾಗುತ್ತಿದೆ. ನೀರು ನಾಯಿ, ಮೀನು, ಏಡಿ, ಆಮೆ ಸೇರಿ ಹಲವು ಜಲಚರ ಪ್ರಾಣಿ, ಪಕ್ಷಿಗಳಿಗೂ ಜಲಾಶಯದ ನೀರೇ ಆಧಾರವಾಗಿದೆ. ಕಳೆದ 2008, 2009ರಲ್ಲಿ ಜಲಾಶಯದ ನೀರು ಹಸಿರು ಬಣ್ಣಕ್ಕೆ ತಿರುಗಿದಾಗ ಹಿನ್ನೀರು ಪ್ರದೇಶದಲ್ಲಿ ಅಪಾರ ಮೀನುಗಳು ಸತ್ತು ಬಿದ್ದಿದ್ದನ್ನು ಸ್ಮರಿಸಬಹುದು.

ತಜ್ಞರು ಭೇಟಿ:

ಹಿಂದೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ತಜ್ಞರ ತಂಡವೊಂದು ಜಲಾಶಯಕ್ಕೆ ಭೇಟಿ ನೀಡಿ ನೀರನ್ನು ಪರಿಶೀಲಿಸಿತ್ತು. ನೀರು ಹಸಿರಾಗಲು ಬ್ಲೂ ಗ್ರೀನ್ ಅಲ್ಗೆ ಕಾರಣ ಎಂಬ ಅಂಶವನ್ನು ವರದಿಯಲ್ಲಿ ಉಲ್ಲೇಖಿಸಿತ್ತು.

ತಜ್ಞರ ಅಭಿಪ್ರಾಯ:

ತ್ಯಾಜ್ಯಯುಕ್ತ ನೀರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾರಜನಕ, ರಂಜಕ, ಪೋಟ್ಯಾಷ್, ನೈಟ್ರೇಟ್, ಪಾಸ್ಟೇಟ್ ಮತ್ತು ಸಿಟ್ ಅಂಶಗಳಿರುತ್ತವೆ. ಸತತ ಮೋಡ ಕವಿದ ವಾತವರಣದಲ್ಲಿ ಏಕಾಏಕಿ ಸೂರ್ಯನ ಕಿರಣಗಳು ನೀರಿನ ಮೇಲೆ ಬೀಳುವುದರಿಂದ ಸೈನೋ ಬ್ಯಾಕ್ಟಿರಿಯಾ (ಬ್ಲೂ ಗ್ರೀನ್ ಅಲ್ಗೆ) ಹುಟ್ಟಿಕೊಳ್ಳುತ್ತವೆ. ಇದರಿಂದ ನೀರು ಹಸಿರು ಬಣ್ಣಕ್ಕೆ ತಿರುಗುವ ಸಾಧ್ಯತೆ ಇದೆ ಎಂಬುದು ತಜ್ಞರ ಅಭಿಪ್ರಾಯ.

ಒತ್ತಾಯ:

ಪ್ರತಿ ವರ್ಷ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜಲಾಶಯದ ನೀರಿನ ಮಾದರಿ ಪರೀಕ್ಷೆ ಮಾಡುತ್ತದೆ. ಅಷ್ಟರೊಳಗೆ ನೀರು ಸಹಜ ಸ್ಥಿತಿಗೆ ಮರಳುತ್ತದೆ. ಅಲ್ಲಿಗೆ ಈ ವಿಷಯ ಗೌಣವಾಗುವುದು. ಮತ್ತೆ ಮಳೆಗಾಲದಲ್ಲಿ ಈ ವಿಷಯಕ್ಕೆ ಮುನ್ನೆಲೆಗೆ ಬರುತ್ತದೆ. ಜಲಾಶಯದ ವಾರ್ಷಿಕ ಬದಲಾವಣೆಯನ್ನು ಟಿ.ಬಿ.ಬೋರ್ಡ್ ಮಂಡಳಿ ಗಂಭೀರವಾಗಿ ಪರಿಗಣಿಸಿ, ಆತಂಕ ನಿವಾರಣೆ ಮಾಡಬೇಕು ಎಂಬುದು ಜಿಲ್ಲೆಯ ಜನರ ಒತ್ತಾಸೆ.

ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿಗಳೊಂದಿಗೆ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲಿಸಿ, ನೀರಿನ ಮಾದರಿ ಸಂಗ್ರಹಿಸಿ, ಪರೀಕ್ಷೆ ನಡೆಸಲಾಗುವುದು. ವರದಿ ಆಧಾರಿಸಿ, ನೀರಿನ ಬದಲಾವಣೆಗೆ ನಿಖರ ಕಾರಣ ತಿಳಿದು ಬರಲಿದೆ. –ಎಸ್.ಸಿ.ಸುರಶ್, ಪರಿಸರ ಅಧಿಕಾರಿ, ಕರ್ನಾಟಕ ರಾಜ್ಯ ಮಾಲೀನ್ಯ ನಿಯಂತ್ರಣ ಮಂಡಳಿ, ವಿಜಯನಗರ

ಕ್ರಿಮಿನಾಶಕ, ರಸಗೊಬ್ಬರ ಬಳಕೆ, ಕೈಗಾರಿಕೆ, ನಗರ, ಪಟ್ಟಣಗಳಿಂದ ಹರಿದು ಬರುವ ತ್ಯಾಜ್ಯ ನದಿಗೆ ಸೇರುವುದರಿಂದ ಜಲಾಶಯದ ನೀರು ಹಸಿರಾಗುವ ಸಾಧ್ಯತೆ ಇದೆ. ಸಾರ್ವಜನಿಕರು ನೀರನ್ನು ಶುದ್ದೀಕರಸಿ ಕುಡಿಯುವುದು ಸೂಕ್ತ. –ಸಮದ್ ಕೊಟ್ಟೂರು, ವನ್ಯಜೀವಿ ತಜ್ಷರು, ಹೊಸಪೇಟೆ

ವರದಿ: ಪಿ.ಸತ್ಯನಾರಾಯಣ, ಹೊಸಪೇಟೆ

Advertisement

Udayavani is now on Telegram. Click here to join our channel and stay updated with the latest news.

Next