Advertisement

ಹಾಲಿನ ಪಾತ್ರೆಗೆ ಕೊಳಚೆ ನೀರು: ದೂರು

03:17 PM Jul 20, 2019 | Team Udayavani |

ಉಡುಪಿ: ರೈಲಿನಲ್ಲಿ ಚಹಾ ಮಾರಾಟ ಮಾಡಿಕೊಂಡು ಬಂದಿದ್ದ ರೈಲ್ವೇ ಕ್ಯಾಟರಿಂಗ್‌ನ ಯುವಕನ ಬಳಿ ಇದ್ದ ಹಾಲಿನ ಪಾತ್ರೆಗೆ (ಕಿಟಲಿ) ಕೊಳಚೆ ನೀರು ಸೇರಿದ ಘಟನೆ ಬುಧವಾರ ಸಂಭವಿಸಿದ್ದು ಈ ಬಗ್ಗೆ ಪ್ರಯಾಣಿಕರೋರ್ವರು ರೈಲ್ವೇ ಇಲಾಖೆಗೆ ದೂರು ನೀಡಿದ್ದಾರೆ.

Advertisement

ಮುಂಬಯಿಯಂದ ಬಂದಿದ್ದ ಮತ್ಸಗಂಧಾ ರೈಲಿನಲ್ಲಿದ್ದ ಚಾಯ್‌ವಾಲಾ ಮಂಗಳೂರು-ಮಡ್ಗಾಂವ್‌ ಇಂಟರ್‌ಸಿಟಿ ರೈಲಿನಲ್ಲಿ ವಾಪಸ್‌ ಕುಮಟಾಕ್ಕೆ ತೆರಳುವುದಕ್ಕಾಗಿ ಮೂಲ್ಕಿ ರೈಲು ನಿಲ್ದಾಣದಲ್ಲಿ ಇಳಿದ. ಆಗ ಆತನ ಕೈಯಲ್ಲಿದ್ದ ಹಾಲಿನ ಪಾತ್ರೆ ಕೆಳಕ್ಕೆ ಬಿದ್ದು ಅದರಲ್ಲಿ ಕೊಳಚೆ ನೀರು ಸೇರಿಕೊಂಡಿತು. ಆತ ಅದನ್ನೇ ಹಿಡಿದುಕೊಂಡು ಇಂಟರ್‌ಸಿಟಿ ರೈಲು ಹತ್ತಿದ. ಇದನ್ನು ಗಮನಿಸಿದ ಪ್ರಯಾಣಿಕರೋರ್ವರು ಅದರ ಫೋಟೋ ತೆಗೆದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಚಾಯ್‌ವಾಲಾ ಗಲಾಟೆ ಮಾಡಲಾರಂಭಿಸಿ ಏರುದನಿಯಲ್ಲಿ ಪ್ರಯಾಣಿಕರನ್ನೇ ಗದರಿದ. ಪ್ರಯಾಣಿಕರು ರೈಲ್ವೇ ಇಲಾಖೆಗೆ ದೂರು ನೀಡಿದರು.

ಕಾರ್ಯಪ್ರವೃತ್ತರಾದ ರೈಲ್ವೇ ರಕ್ಷಣಾ ದಳದ ಪೊಲೀಸರು ರೈಲು ಉಡುಪಿಯಲ್ಲಿ ಇಳಿಯುತ್ತಿದ್ದಂತೆ ಚಾಯ್‌ವಾಲಾನನ್ನು ವಶಕ್ಕೆ ಪಡೆದು ರೈಲ್ವೇ ವಾಣಿಜ್ಯ ವಿಭಾಗದ ಅಧಿಕಾರಿಗಳಿಗೆ ಒಪ್ಪಿಸಿದರು. ಆತನಿಂದ ಮುಚ್ಚಳಿಕೆ ಬರೆಸಿ ದಂಡ ವಿಧಿಸಲಾಗಿದೆ.

ಮಾರಾಟಕ್ಕಲ್ಲ?
“ಈ ಚಾಯ್‌ವಾಲಾನದ್ದು ಕುಮಟಾ ಕೇಂದ್ರ. ಆತ ಅಲ್ಲಿಂದ ಮಂಗಳೂರು ಕಡೆಗೆ ಬರುವ ರೈಲಿನಲ್ಲಿ ಮಾತ್ರ ಚಹಾ ಮಾರಾಟ ಮಾಡಲು ಮಾನ್ಯತೆ ಹೊ0ದಿರುತ್ತಾನೆ. ವಾಪಸ್‌ ಹೋಗುವಾಗ ಆತ ಚಹಾ ಮಾರುವಂತಿಲ್ಲ. ಅದಕ್ಕೆ ಬೇರೆ ಚಾಯ್‌ವಾಲಾಗಳು ಇರುತ್ತಾರೆ. ಹಾಗಾಗಿ ಕೊಳಚೆ ನೀರಿನ ಚಹಾದ ಅಪಾಯ ಇರಲಿಲ್ಲ. ಈತ ಮೂಲ್ಕಿಯಲ್ಲಿ ಅವಸರದಿಂದ ಇಳಿಯುವಾಗ ಈ ಘಟನೆ ನಡೆದಿದೆ. ಆದರೆ ಆತ ಪ್ರಯಾಣಿಕರೊಂದಿಗೆ ಉದ್ಧಟತನದಿಂದ ವರ್ತಿಸಿದ್ದಾನೆ. ಆತನಿಗೆ ಎಚ್ಚರಿಕೆ ನೀಡಲಾಗಿದೆ’ ಎಂದು ರಕ್ಷಣಾ ದಳದ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next