Advertisement

ತ್ಯಾಜ್ಯವೇ ಸಂಪತ್ತು: ಬೆಂಗಳೂರು ವಿವಿ ಹೊಸ ಕೋರ್ಸ್‌

01:16 AM Aug 03, 2019 | Lakshmi GovindaRaj |

ಬೆಂಗಳೂರು: “ತ್ಯಾಜ್ಯವೇ ಸಂಪತ್ತು’ (ವೇಸ್ಟ್‌ ಈಸ್‌ ವೆಲ್ತ್‌) ಎಂಬ ಪರಿಕಲ್ಪನೆಯಡಿ ಬೆಂಗಳೂರು ವಿಶ್ವವಿದ್ಯಾಲಯವು ಪ್ರಸಕ್ತ ಸಾಲಿನಿಂದ ವಿದ್ಯಾರ್ಥಿಗಳಿಗೆ ಘನತ್ಯಾಜ್ಯ ನಿರ್ವಹಣೆಯನ್ನು ಪಠ್ಯದ ವಿಷಯವಾಗಿ ಬೋಧಿಸಲಿದೆ. ಬೆಂಗಳೂರು ಸಹಿತವಾಗಿ ರಾಜ್ಯದ ಮಹಾನಗರ, ನಗರ ಹಾಗೂ ಪಟ್ಟಣಗಳಲ್ಲಿ ತ್ಯಾಜ್ಯ ವಿಲೇವಾರಿಯೇ ದೊಡ್ಡ ಸವಾಲಾಗಿದೆ. ದಿನೇದಿನೇ ತ್ಯಾಜ್ಯದ ಉತ್ಪತ್ತಿ ಏರುತ್ತಲೇ ಇದೆ.

Advertisement

ವಿಲೇವಾರಿ ಸಮರ್ಪಕ ರೀತಿಯಲ್ಲಿ ನಡೆಯುತ್ತಿದ್ದರೂ, ಡಂಪಿಂಗ್‌ ಯಾರ್ಡ್‌ಗಳಲ್ಲಿ ಕಸದ ರಾಶಿ ದ್ವಿಗುಣಗೊಳ್ಳುತ್ತಲೇ ಇದೆ. ತ್ಯಾಜ್ಯ ನಿರ್ವಹಣೆಯ ಸಮರ್ಪಕ ಕಲ್ಪನೆಯನ್ನು ಯುವಜನರಿಗೆ ನೀಡುವ ಉದ್ದೇಶದಿಂದ ಬೆಂಗಳೂರು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗವು 2019-20ನೇ ಸಾಲಿನಿಂದ ಸ್ಥಳೀಯ ಸಂಸ್ಥೆಗಳ ಘನತ್ಯಾಜ್ಯ ನಿರ್ವಹಣೆಯ ಕುರಿತಾದ ಹೊಸ ಕೋರ್ಸ್‌ ಆರಂಭಿಸುತ್ತಿದೆ.

ಘನತ್ಯಾಜ್ಯ ನಿರ್ವಹಣೆಯ ಕೋರ್ಸ್‌ಗೆ ಬೇಕಾದ ಪಠ್ಯಕ್ರಮ, ಲ್ಯಾಬ್‌ ಸೌಲಭ್ಯ ಸೇರಿದಂತೆ ಎಲ್ಲ ರೀತಿಯ ಕ್ರಮವನ್ನು ಪರಿಸರ ವಿಜ್ಞಾನ ವಿಭಾಗದಿಂದ ತೆಗೆದುಕೊಳ್ಳಲಾಗಿದೆ. ಕೋರ್ಸ್‌ಗೆ ಬೇಕಾದ ಅನುಮತಿಯನ್ನು ವಿಶ್ವವಿದ್ಯಾಲಯ ಪಡೆದುಕೊಂಡಿದೆ ಎಂದು ವಿಭಾಗದ ಮುಖ್ಯಸ್ಥರು “ಉದಯವಾಣಿ’ಗೆ ಮಾಹಿತಿ ನೀಡಿದರು.

ಘನತ್ಯಾಜ್ಯ ವಿಲೇವಾರಿ ಸಂಬಂಧಿಸಿದ ಕೋರ್ಸ್‌ ಸಾಮಾನ್ಯ ಸ್ನಾತಕೋತ್ತರ ಕೋರ್ಸ್‌ಗಳಂತೆಯೇ ಇರುತ್ತದೆ. ಎರಡು ವರ್ಷದಲ್ಲಿ ನಾಲ್ಕು ಸೆಮಿಸ್ಟರ್‌ ಇದ್ದು, ವರ್ಷಕ್ಕೆ 30 ವಿದ್ಯಾರ್ಥಿಗಳನ್ನು ನೋಂದಾಯಿಸಿಕೊಳ್ಳಲು ಬೇಕಾದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪರಿಸರ ವಿಜ್ಞಾನ ವಿಭಾಗದಲ್ಲಿ ಇರುವ ಪ್ರಾಧ್ಯಾಪಕರು ಹಾಗೂ ಸಹ ಪ್ರಾಧ್ಯಾಪಕರು ಮತ್ತು ಉಪನ್ಯಾಸಕರೇ ಈ ವಿಷಯ ಬೋಧನೆ ಮಾಡಲಿದ್ದಾರೆ.

ಆಧುನಿಕ ಸೌಲಭ್ಯ ಹೊಂದಿರುವ ಲ್ಯಾಬ್‌ಗಳ ಸೌಲಭ್ಯವೂ ವಿದ್ಯಾರ್ಥಿಗಳಿಗೆ ದೊರೆಯಲಿದೆ ಎಂದು ವಿವರ ನೀಡಿದರು. ಕಸದಿಂದ ರಸ ಎಂಬ ಮಾತಿನಂತೆ ತ್ಯಾಜ್ಯವೇ ಸಂಪತ್ತು ಎಂಬುದರ ಪರಿಕಲ್ಪನೆಯಡಿಯಲ್ಲಿ ಈ ಕೋರ್ಸ್‌ ಆರಂಭಿಸುತ್ತಿದ್ದೇವೆ. ಮೊದಲ ಸಮಿಸ್ಟರ್‌ನಲ್ಲಿ ವಿದ್ಯಾರ್ಥಿಗಳಿಗೆ ತ್ಯಾಜ್ಯದ ಬಗೆ ಮತ್ತು ತ್ಯಾಜ್ಯ ಉತ್ಪತ್ತಿ ಹೇಗಾಗುತ್ತದೆ. ಅದರ ಮರು ಬಳಕೆ ಹೇಗೆ ಎಂಬಿತ್ಯಾದಿ ಮೂಲಭೂತ ಅಂಶಗಳನ್ನು ಪ್ರಯೋಗಿಕವಾಗಿ ತಿಳಿಸಿಕೊಡಲಿದ್ದೇವೆ.

Advertisement

ನಂತರ ಸೆಮಿಸ್ಟರ್‌ಗಳಲ್ಲಿ ತ್ಯಾಜ್ಯದ ಸಮಸ್ಯೆಗೆ ಕಾರಣವೇನು, ದಿನೇದಿನೇ ಉತ್ಪತ್ತಿಯಾಗುತ್ತಿರುವ ಟನ್‌ಗಳಷ್ಟು ತ್ಯಾಜ್ಯದ ಸಮರ್ಪಕ ವಿಲೇವಾರಿಗೆ ಏನು ಮಾಡಬೇಕು, ವೈಜ್ಞಾನಿಕ ಕ್ರಮಗಳು ಯಾವುದು, ಸಂಸ್ಕರಣ ಘಟಕಗಳು ಹೇಗೆ ಕಾರ್ಯನಿರ್ವಹಿಸಬೇಕು ಮತ್ತು ಆಧುನಿಕ ಜಗತ್ತಿನಲ್ಲಿ ಇ-ತ್ಯಾಜ್ಯ ಹೆಚ್ಚುತ್ತಿದ್ದು, ಅದರ ವಿಲೇವಾರಿ ಹೇಗೆ ಎಂಬುದನ್ನು ಪ್ರಾಯೋಗಿಕ ತರಗತಿಗ ಮೂಲಕ ಕಲಿಸಿಕೊಡಲಾಗುತ್ತದೆ.

ದಿನೇದಿನೇ ಹೆಚ್ಚುತ್ತಿರುವ ತ್ಯಾಜ್ಯದಿಂದ ಅಂತರ್ಜಲದ ಮೇಲಾಗುವ ದುಷ್ಪರಿಣಾಮ, ಕೆರೆ, ಬಾವಿ, ನದಿ ನೀರುಗಳು ಕಲುಷಿತವಾಗುವುದನ್ನು ತಡೆಗಟ್ಟುವ ವಿಧಾನ, ತ್ಯಾಜ್ಯಗಳಿಂದಾಗಿ ಪ್ರಾಕೃತಿ ಸಂಪತ್ತಿನ ರಕ್ಷಣೆ ಹೇಗೆ ಎಂಬಿತ್ಯಾದಿ ಹಲವು ಅಂಶಗಳನ್ನು ಕೂಲಂಕಷವಾಗಿ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಗುತ್ತದೆ. ಕಸ ವಿಲೇವಾರಿ ಘಟಕ, ಸಂಸ್ಕರಣ ಘಟಕಗಳಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಪ್ರಾಯೋಗಿಕವಾಗಿ ಬೋಧಿಸುವ ಕ್ರಮವೂ ಇದೆ ಎಂದು ವಿವರಿಸಿದರು.

ಉದ್ಯೋಗಾವಕಾಶ ಹೆಚ್ಚಿದೆ: ತ್ಯಾಜ್ಯವಿಲೇವಾರಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆಯ ಜತೆಗೆ ಹೊಸ ಆವಿಷ್ಕಾರಗಳ ಅಗತ್ಯವಿದೆ. ಅತ್ಯಂತ ಸರಳ ವಿಧಾನದಲ್ಲಿ ತ್ಯಾಜ್ಯ ವಿಲೇವಾರಿ ಹಾಗೂ ಸಂಸ್ಕರಣೆ ಮತ್ತು ಅದರ ಮರುಬಳಕೆಯನ್ನು ಜನ ಸಾಮಾನ್ಯರಿಗೆ ಸಮರ್ಪಕವಾಗಿ ತಿಳಿಸುವ ಅಗತ್ಯವಿದೆ. ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಹೆಚ್ಚಿದೆ. ಅದರೆ, ಕೌಶಲತೆಯ ಕೊರತೆ ಇದೆ.

ತ್ಯಾಜ್ಯ ಸಂಸ್ಕರಣೆಯ ಕೋರ್ಸ್‌ ಮೂಲಕ ಯುವ ಜನರಿಗೆ ಕೌಶಲ್ಯತೆ ತುಂಬುವುದರೊಂದಿಗೆ ಉದ್ಯೋಗಕ್ಕೂ ದಾರಿ ಮಾಡಿಕೊಡಲಿದ್ದೇವೆ. ವಿಶ್ವವಿದ್ಯಾಲಯದ ಅನುದಾನ ಆಯೋಗದಿಂದ ಕೋರ್ಸ್‌ಗೆ ಬೇಕಾದ ಎಲ್ಲ ರೀತಿಯ ಪರವಾನಿಗೆ ತೆಗೆದುಕೊಂಡಿದ್ದೇವೆ. ಹಾಗೆಯೇ ಪಠ್ಯಕ್ರಮವೂ ಸಿದ್ಧವಾಗಿದೆ ಎಂದು ಬೆಂವಿವಿ ಉನ್ನತ ಮೂಲ ಖಚಿತಪಡಿಸಿದೆ.

ಪರಿಸರ ಇಂದಿನ ಅಗತ್ಯವಾಗಿದೆ. ಪರಿಸರ ಉಳಿಸದೇ ಇದ್ದರೆ ನಾವ್ಯಾರೂ ಬದುಕಿರಲು ಸಾಧ್ಯವಿಲ್ಲ. ಘನತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯಬೇಕು ಮತ್ತು ಕಸದಿಂದ ರಸ ಮಾಡುವ ಕೌಶಲತೆ ಬೆಳೆಸಬೇಕು ಎಂಬ ಉದ್ದೇಶದಿಂದ ಈ ಕೋರ್ಸ್‌ ಆರಂಭಿಸುತ್ತಿದ್ದೇವೆ. ಇದರ ಸಂಪೂರ್ಣ ಮಾಹಿತಿಯನ್ನು ಬೆಂವಿವಿ ವೆಬ್‌ಸೈಟ್‌ನಲ್ಲಿ ಹಾಕಿದ್ದೇವೆ.
-ಪ್ರೊ.ಎನ್‌.ನಂದಿನಿ, ಮುಖ್ಯಸ್ಥೆ, ಪರಿಸರ ವಿಜ್ಞಾನ ವಿಭಾಗ, ಬೆಂವಿವಿ

Advertisement

Udayavani is now on Telegram. Click here to join our channel and stay updated with the latest news.

Next