Advertisement

ಎಲ್ಲೆಂದರಲ್ಲಿ ಮಲತ್ಯಾಜ್ಯ ವಿಲೇವರಿ

11:19 AM Mar 16, 2022 | Team Udayavani |

ಧಾರವಾಡ: ಬಸ್‌ನಲ್ಲಿ ಸಾಗುವವರು ಮೂಗು ಬಿಗಿಯಾಗಿ ಹಿಡಿದು ಸಾಗಬೇಕು. ಸುತ್ತಲಿನ ನಿವಾಸಿಗಳು ಕಿರಿ ಕಿರಿ ಅನುಭವಿಸಬೇಕು. ವಿದ್ಯಾಕಾಶಿಗೆ ಸ್ವಾಗತ ಎನ್ನುವ ಫಲಕಗಳ ಕೆಳಗೆ ಮಲ ವಿಸರ್ಜನೆ, ಶಾಲೆ-ಕಾಲೇಜು ಅಷ್ಟೇಯಲ್ಲ ವಿಶ್ವವಿದ್ಯಾಲಯಗಳ ಆವರಣವೂ ಸೇರಿ ಅಷ್ಟ ದಿಕ್ಕುಗಳಲ್ಲೂ ಸಾಗಿದೆ ಮಲತ್ಯಾಜ್ಯ ವಿಲೇವಾರಿ. ಈ ಬಗ್ಗೆ ಎಷ್ಟೇ ದೂರು ಸಲ್ಲಿಸಿದರೂ ಮಹಾನಗರ ಪಾಲಿಕೆಗೆ ಇಲ್ಲ ವರಿ.

Advertisement

ವಿದ್ಯಾಕಾಶಿ, ಸಾಂಸ್ಕೃತಿಕ ನಗರಿ, ಪೇಢಾ ನಗರಿ ಎಂದೆಲ್ಲ ಕರೆಯಿಸಿಕೊಳ್ಳುವ ನಗರಕ್ಕೆ ಇದೀಗ ತ್ಯಾಜ್ಯ ವಿಲೇವಾರಿ ಸಮಸ್ಯೆ ಎದುರಾಗಿದ್ದು ಒಂದೆಡೆಯಾದರೆ, ಹೊಸತೊಂದು ಮುಜುಗರವನ್ನುಂಟು ಮಾಡುವ ಸಮಸ್ಯೆ ಎದುರಾಗಿದೆ. ನಗರದ ಎಲ್ಲಾ ದಿಕ್ಕಿನ ರಸ್ತೆಗಳಲ್ಲಿಯೂ ಎಲ್ಲೆಂದರಲ್ಲಿ ಶೌಚಾಲಯಗಳಿಂದ ಹೊರಗೆ ತೆಗೆದ ಮಲತ್ಯಾಜ್ಯವನ್ನು ತಂದು ಸುರಿಯಲಾಗುತ್ತಿದ್ದು, ಇದು ಸುಸಂಸ್ಕೃತರು ತಲೆ ಎತ್ತಿ ಓಡಾಡದಂತಾಗಿದೆ.

ಧಾರವಾಡದಿಂದ ನವಲಗುಂದ (ಪೂರ್ವದಿಕ್ಕು), ಸವದತ್ತಿ (ಈಶಾನ್ಯ), ಬೆಳಗಾವಿ (ಉತ್ತರ), ಚಿಕ್ಕಮಲ್ಲಿಗವಾಡ (ವಾಯವ್ಯ), ಹಳಿಯಾಳ, ದಾಂಡೇಲಿ(ಪಶ್ಚಿಮ), ಹುಬ್ಬಳ್ಳಿ (ದಕ್ಷಿಣ) ರಸ್ತೆಗಳಲ್ಲಿ ಮಲತ್ಯಾಜ್ಯ ವಿಲೇವಾರಿ ರಾಜಾರೋಷವಾಗಿ ನಡೆಯುತ್ತಿದೆ. ಈ ಬಗ್ಗೆ ನಾಗರಿಕರು, ಸ್ಥಳೀಯ ನಿವಾಸಿಗಳು ಹೈರಾಣಾಗಿ ಹೋಗಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ನಗರ ಮತ್ತು ಹಳ್ಳಿಗಳಲ್ಲಿ ಶೇ.98 ಜನರು ಶೌಚಾಲಯಗಳನ್ನು ನಿರ್ಮಿಸಿ ಬಳಕೆ ಮಾಡುತ್ತಿದ್ದಾರೆ. ಸಹಜವಾಗಿಯೇ ಶೌಚಾಲಯಗಳ ಗುಂಡಿ ತುಂಬಿದ ಮೇಲೆ ಏನು? ಎಂಬ ಪ್ರಶ್ನೆ ಮೂಡುತ್ತದೆ. ಇದಕ್ಕೆ ಪರಿಹಾರ ರೂಪದಲ್ಲಿಯೇ ಎದ್ದು ನಿಂತಿದೆ ಖಾಸಗಿ ಸೆಫ್ಟಿಕ್‌ ಟ್ಯಾಂಕ್‌ ಮಾಫಿಯಾ.

ತ್ಯಾಜ್ಯಯಂತ್ರಕ್ಕೆ ಕರೆ: ಈ ಹಿಂದಿನ ವರ್ಷಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಬಯಲು ಶೌಚ ಪದ್ಧತಿ ಇತ್ತು. ಶೌಚಾಲಯಗಳು ನಿರ್ಮಾಣವಾದ ನಂತರ ಅವುಗಳಲ್ಲಿ ಶೇಖರಣೆಯಾದ ಮಲತ್ಯಾಜ್ಯವನ್ನು ಎರಡು ಮೂರು ವರ್ಷಗಳಿಗೆ ಒಮ್ಮೆ ಬಳಸಲೇಬೇಕಾದ ಅನಿವಾರ್ಯತೆ ಇದೆ. ಈ ಹಿಂದಿನ ವರ್ಷಗಳಲ್ಲಿ ಮಲತ್ಯಾಜ್ಯವನ್ನು ತಮ್ಮ ಹಿತ್ತಲುಗಳಲ್ಲಿಯೇ ಬಳೆಸಿ ಹಾಕಲು ತ್ಯಾಜ್ಯ ಬಳೆಯುವ ಕೂಲಿಗಳು ಬರುತ್ತಿದ್ದರು. ಆದರೆ ಭಂಗಿ ಪದ್ಧತಿ ನಿಷೇಧದ ನಂತರ ಯಂತ್ರಗಳ ಮೂಲಕವೇ ಎತ್ತಿಕೊಂಡು ಹೋಗುವ ವಿಧಾನ ಪ್ರಚಲಿತಕ್ಕೆ ಬಂದಿದೆ. ಕರೆ ಮಾಡಿದರೆ ಸಾಕು ಒಂದು ಶೌಚಾಲಯ ಮಲತ್ಯಾಜ್ಯ ಬಳೆದು ತುಂಬಿಕೊಂಡು ಹೋಗಲು 3800 ರೂ. ನಿಗದಿ ಪಡಿಸಿದ ಆಂಧ್ರ ಮೂಲದ ತ್ಯಾಜ್ಯ ವಿಲೇವಾರಿ ವಾಹನಗಳು ಬಂದು ತ್ಯಾಜ್ಯ ತುಂಬಿಕೊಂಡು ಹೋಗುತ್ತವೆ.

ಕೃಷಿಗೆ ಬಳಕೆ ಸಾಧ್ಯ: ಶೌಚಾಲಯ ತ್ಯಾಜ್ಯವನ್ನು ಕೃಷಿ ಭೂಮಿಗೆ ಬಳಕೆ ಮಾಡುವುದು ಅತ್ಯಂತ ಉತ್ತಮ ವಿಧಾನ ಎನ್ನುತ್ತಿದ್ದಾರೆ ಕೆಲವು ಕೃಷಿ ತಜ್ಞರು. ಅದೂ ಅಲ್ಲದೇ ಈ ಹಿಂದೆ ಗ್ರಾಮಗಳಲ್ಲಿ ಈ ಪದ್ಧತಿ ಇದ್ಧೇ ಇತ್ತು. ಮನೆಗೊಂದು ತಿಪ್ಪೆಗಳಿರುತ್ತಿದ್ದು, ಅಲ್ಲಿಯೇ ಬಯಲು ಶೌಚ ಮಾಡುವ ಪದ್ಧತಿ ಕೂಡ ಇತ್ತು. ತಿಪ್ಪೆಯಲ್ಲಿ ಗೊಬ್ಬರ ರೂಪ ಪಡೆದುಕೊಂಡ ಮಲವು ಹೊಲ ಸೇರುತ್ತಿತ್ತು. ಇದೀಗ ತಿಪ್ಪೆಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದು, ಶೌಚಾಲಯಗಳ ಬಳಕೆ ಅನಿವಾರ್ಯವಾಗಿದೆ. ಶೌಚಾಲಯಗಳು ತುಂಬಿದ ಬಳಿಕೆ ಅಲ್ಲಿನ ಮಲತ್ಯಾಜ್ಯವನ್ನು ಎತ್ತಿ ಹಾಕಲು ಜಾಗವಿಲ್ಲ. ಎಷ್ಟೋ ಗ್ರಾಮಗಳಲ್ಲಿ ಈ ಬಗ್ಗೆ ಅನೇಕ ತಂಟೆ ತಕರಾರುಗಳು ನಡೆದಿದ್ದು ಇದೆ. ಆದರೆ ಸಾವಯವ ಕೃಷಿಕರು ಮತ್ತು ನೈಸರ್ಗಿಕ ಕೃಷಿ ಮಾಡುವ ಜನರು ಕೋಳಿ, ಹಂದಿ ಮತ್ತು ಕುರಿ ಗೊಬ್ಬರಕ್ಕೆ ಹೆಚ್ಚಿನ ಒತ್ತು ನೀಡುತ್ತಲೇ ಬಂದಿದ್ದಾರೆ. ಇದರೊಂದಿಗೆ ಮನುಷ್ಯರ ಮಲತ್ಯಾಜ್ಯವೂ ಹೊಲಕ್ಕೆ ಸೂಕ್ತ ಎನ್ನುತ್ತಿದ್ದಾರೆ. ಹೀಗಾಗಿ ಗ್ರಾಮಗಳಲ್ಲಿನ ಮಲತ್ಯಾಜ್ಯ ಹೊಲಗಳನ್ನು ಸೇರಿದರೆ ಖಂಡಿತವಾಗಿಯೂ ಇದು ಪರಿಸರಕ್ಕೂ ಉತ್ತಮ ಮತ್ತು ಕಿರಿ ಕಿರಿಗೂ ಪರಿಹಾರ ಸಿಕ್ಕಂತಾಗುತ್ತದೆ.

Advertisement

ಮಲತ್ಯಾಜ್ಯ ಎಲ್ಲೆಲ್ಲಿ ಬೀಳುತ್ತಿದೆ?

ಸಂಗ್ರಹಿಸಿದ ಮಲತ್ಯಾಜ್ಯವನ್ನು ಹಳ್ಳಿ ಮತ್ತು ನಗರಗಳ ಮಧ್ಯೆ ರಸ್ತೆಗಳ ಇಕ್ಕೆಲಗಳಲ್ಲಿ ಚೆಲ್ಲಾಡಿ ಹೋಗುತ್ತಿದ್ದಾರೆ. ಈ ಹಿಂದಿನ ವರ್ಷಗಳಲ್ಲಿ ಮಲತ್ಯಾಜ್ಯ ತುಂಬಿಕೊಂಡು ಹೋಗುವ ವಾಹನ ಮಾಲೀಕರೇ ನಗರ ಮತ್ತು ಹಳ್ಳಿಗಳಿಂದ ದೂರವಿದ್ದ ಪ್ರದೇಶದಲ್ಲಿ ಜಾಗ ಖರೀದಿಸಿ ಅಲ್ಲಿ ಹೊಂಡ ತೋಡಿಸಿ ಅದರಲ್ಲಿ ತ್ಯಾಜ್ಯ ಬಿಡುತ್ತಿದ್ದರು. ಆದರೆ ಕಳೆದ ಒಂದು ವರ್ಷದಿಂದ ಅಂದರೆ ಕೊರೊನಾ ಲಾಕ್‌ಡೌನ್‌ ಅವಧಿಯಲ್ಲಿ ಎಲ್ಲೆಂದರಲ್ಲಿ ಎಸೆಯುವ ಪದ್ಧತಿ ಶುರುವಿಟ್ಟುಕೊಂಡ ತ್ಯಾಜ್ಯ ಸಂಗ್ರಹಣೆಗಾರರು, ಹು-ಧಾ ಬೈಪಾಸ್‌ ಅಕ್ಕಪಕ್ಕ, ಧಾರವಾಡದಿಂದ ಇತರ ನಗರಗಳಿಗೆ ಸಂಪರ್ಕಿಸುವ ಪ್ರಮುಖ ರಸ್ತೆಗಳ ಇಕ್ಕೆಲುಗಳಲ್ಲಿ, ಗ್ರಾಮಗಳ ಗೋಮಾಳ, ಕೆರೆ ಕುಂಟೆಗಳಲ್ಲಿ ಅಷ್ಟೇಯಲ್ಲ, ಕುಡಿಯುವ ನೀರಿನ ಕೆರೆಯಂಗಳದಲ್ಲಿಯೂ ಮಲತ್ಯಾಜ್ಯ ಬಿಸಾಕಿ ಹೋಗುತ್ತಿದ್ದಾರೆ. ಬೈಪಾಸ್‌ ರಸ್ತೆಯಲ್ಲಿ ಬಿದ್ದ ತ್ಯಾಜ್ಯವಂತೂ ಮಳೆಯಾದರೆ ನೇರವಾಗಿ ಅಕ್ಕಪಕ್ಕದ ಗ್ರಾಮಗಳ ಕೆರೆಯಂಗಳಕ್ಕೆ ಸೇರುತ್ತದೆ.

ಶಿಸ್ತುಬದ್ಧ ತ್ಯಾಜ್ಯ ವಿಲೇವಾರಿ ಕ್ರಮ ಅತ್ಯಗತ್ಯ

ಜಿಲ್ಲೆಯಲ್ಲಿ 1.76 ಲಕ್ಷ ಶೌಚಾಲಯಗಳು ಬಳಕೆಯಲ್ಲಿವೆ. ನಗರದಲ್ಲಿದ್ದಂತೆ ಗ್ರಾಮೀಣ ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ. ಈ ಪೈಕಿ ಅರ್ಧದಷ್ಟು ಶೌಚಾಲಯಗಳಿಗೆ ತಿಪ್ಪೆಗುಂಡಿ, ಗೋಬರ್‌ಗ್ಯಾಸ್‌ ಸಂಪರ್ಕವೂ ಉಂಟು. ಆದರೆ ಕಡಿಮೆ ಜಾಗ, ಹಿತ್ತಲುಗಳ ಕೊರತೆ ಇರುವಲ್ಲಿ ಮಾತ್ರ ಶೌಚಾಲಯ ತ್ಯಾಜ್ಯ ಹೊರಹಾಕಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ಮಲದಗುಂಡಿ ಯಂತ್ರಗಳ ಸಹಾಯದಿಂದಲೇ ಸ್ವತ್ಛವಾಗಬೇಕಿದೆ. ಬಯಲು ಶೌಚಾಲಯ ಪದ್ಧತಿ ನಿರ್ಮೂಲನೆಗೆ ಜಿಪಂ ಮತ್ತು ಮಹಾನಗರ ಪಾಲಿಕೆ ದಶಕಗಳ ಕಾಲ ಪ್ರಯತ್ನಿಸಿ ಯಶಸ್ವಿಯಾಗಿದೆ. ಇದೀಗ ಮಲತ್ಯಾಜ್ಯ ವಿಲೇವಾರಿಗೂ ಒತ್ತು ನೀಡಿ ಅದರ ಸದ್ಭಳಕೆ ಅಥವಾ ಅದನ್ನು ಇತರರಿಗೆ ಕಿರಿಕಿರಿಯಾಗದಂತೆ ವಿಲೇವಾರಿ ಮಾಡುವ ಶಿಸ್ತುಬದ್ಧ ಕ್ರಮ ರೂಪಿಸಬೇಕಿದೆ.

 

ಗ್ರಾಮಗಳ ರಸ್ತೆಗಳ ಅಕ್ಕಪಕ್ಕವೇ ರಾತ್ರೋರಾತ್ರಿ ಶೌಚಾಲಯದ ಮಲತ್ಯಾಜ್ಯ ಚೆಲ್ಲಿ ಹೋಗುತ್ತಿದ್ದಾರೆ. ಶಿಸ್ತುಬದ್ಧ ವಿಲೇವಾರಿಗೆ ಜಿಲ್ಲಾಡಳಿತ ವ್ಯವಸ್ಥೆ ಮಾಡಬೇಕು. ನಾಗರಿಕ ಸಮಾಜ ಬಯಲು ಶೌಚ ಪದ್ಧತಿ ನಿರ್ಮೂಲನೆ ಮಾಡಿದಂತೆ ಅಶಿಸ್ತಿನ ಮಲತ್ಯಾಜ್ಯ ವಿಲೇವಾರಿಯನ್ನು ಕೊನೆಗಾಣಿಸಬೇಕು.

ಪ್ರಕಾಶ ಪಾಟೀಲ, ಬಾಡ ನಿವಾಸಿ

 

ಮಲತ್ಯಾಜ್ಯ ಅತ್ಯುತ್ತಮ ಗೊಬ್ಬರವಾಗಿದ್ದು, ಇದನ್ನು ಕೃಷಿಗೆ ಬಳಕೆ ಮಾಡಕೊಳ್ಳಬಹುದು. ಬಯೋಗ್ಯಾಸ್‌ ಜೊತೆ ಶೌಚಾಲಯ ಸಂಪರ್ಕ, ಮಲಮೂತ್ರಗಳ ವಿಭಾಗೀಸುವ ಪದ್ಧತಿಯ ಆಯ್ಕೆ ಕುರಿತು ಹಳ್ಳಿಗರಲ್ಲಿ ಜಾಗೃತಿ ಮೂಡಬೇಕು. ಮನಸ್ಸಿನಲ್ಲಿನ ಜಾಡ್ಯ ಬಿಡಬೇಕು.

-ಡಾ| ಪ್ರಕಾಶ ಭಟ್‌, ಸುಸ್ಥಿರ ಅಭಿವೃದ್ಧಿ ಚಿಂತಕ

Advertisement

Udayavani is now on Telegram. Click here to join our channel and stay updated with the latest news.

Next