Advertisement

ರಸ್ತೆ ಬದಿಗಳಲ್ಲಿ ತ್ಯಾಜ್ಯ ಎಸೆತ: ಕಾಸರಗೋಡು ಮಾದರಿ ಕ್ರಮ ಅಗತ್ಯ

01:02 PM Oct 21, 2018 | |

ಸ್ವಚ್ಛತೆ ಕಾಪಾಡುವುದು ಎಲ್ಲರ ಕರ್ತವ್ಯ. ಆದರೂ ಕೂಡ ಇದು ಕಟ್ಟು ನಿಟ್ಟಾಗಿ ಪಾಲನೆಯಾಗುತ್ತಿಲ್ಲ. ಕಸ, ತ್ಯಾಜ್ಯಗಳನ್ನು ಎಸೆಯುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಜಾರಿಯಾದರೆ ಉತ್ತಮ. ಈ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಸಾಮಾಜಿಕ ಅಪರಾಧವಾಗಿ ಪರಿಗಣಿಸಿ ಇದರ ವಿರುದ್ಧ ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸುವ ಕ್ರಮ ನಗರದಲ್ಲೂ ಅನುಷ್ಠಾನವಾದರೆ ಸ್ವಚ್ಛ ನಗರಕ್ಕೆ ಮಂಗಳೂರು ಮಾದರಿಯಾಗಬಹುದು.

Advertisement

ರಸ್ತೆ ಬದಿಗಳಲ್ಲಿ, ಸಾರ್ವಜನಿಕ ಪ್ರದೇಶಗಳಲ್ಲಿ ತ್ಯಾಜ್ಯ ಎಸೆಯುವುದು ಸ್ವಚ್ಛ ನಗರ ಪರಿಕಲ್ಪನೆಗೆ ಪ್ರಸ್ತುತ ಒಂದು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಇದನ್ನು ನಿಯಂತ್ರಿಸುವಲ್ಲಿ ಪಾಲಿಕೆ ವತಿಯಿಂದ ಕ್ರಮಗಳಾಗುತ್ತಿದ್ದರೂ ಪೂರ್ಣ ಯಶಸ್ಸು ಸಾಧ್ಯವಾಗಿಲ್ಲ. ಈ ಹಿನ್ನಲೆಯಲ್ಲಿ ಇದನ್ನೊಂದು ಸಾಮಾಜಿಕ ಅಪರಾಧವಾಗಿ ಪರಿಗಣಿಸಿ ಇದರ ವಿರುದ್ಧ ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸಿ ಕಠಿನ ಕ್ರಮಗಳನ್ನು ಕೈಗೊಳ್ಳುವುದು ಆರೋಗ್ಯ, ನಗರ ಸೌಂದರ್ಯ ಕಾಪಾಡುವ ನಿಟ್ಟಿನಲ್ಲಿ ಅತಿ ಅವಶ್ಯವಾಗಿದೆ. ಕಾಸರಗೋಡಿನಲ್ಲಿ ಅಲ್ಲಿನ ಜಿಲ್ಲಾಧಿಕಾರಿಯವರು ಈ ರೀತಿಯ ಕ್ರಮಕ್ಕೆ ಮುಂದಾಗಿದ್ದಾರೆ.

ನಗರ ಸ್ವಾಸ್ಥ್ಯಕ್ಕೆ ಗಂಭೀರ ಸವಾಲು
ರಾತ್ರಿ ಹೊತ್ತಿನಲ್ಲಿ ವಾಹನಗಳಲ್ಲಿ ತರುವ ತ್ಯಾಜ್ಯಗಳನ್ನು ರಸ್ತೆ ಬದಿ, ಚರಂಡಿ, ತೋಡು, ಹಾಗೂ ಹೊಳೆಗಳಲ್ಲಿ ತಂದು ಹಾಕಲಾಗುತ್ತಿದೆ. ಕೆಲವು ಕಡೆ ಸಾರ್ವಜನಿಕ ಸ್ಥಳಗಳಲ್ಲಿ ತಂದು ಹಾಕಿ ಬೆಂಕಿ ಕೊಡಲಾಗುತ್ತಿದೆ. ಇದರಲ್ಲಿ ಕೆಲವು ಬಾರಿ ಆಪಾಯಕಾರಿ ವಸ್ತುಗಳು, ರಾಸಾಯನಿಕ ವಸ್ತುಗಳು, ಪ್ರಾಣಿಗಳ ತ್ಯಾಜ್ಯಗಳು, ಕಟ್ಟಡ ತ್ಯಾಜ್ಯಗಳು ಒಳಗೊಂಡಿರುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಹಾಕುವುದರಿಂದ ಗಬ್ಬು ನಾತ, ಸಾಂಕ್ರಾಮಿಕ ರೋಗ ಹರಡಲು ಕಾರಣವಾಗುತ್ತಿದೆ. ಅಸುಪಾಸಿನ ನಿವಾಸಿಗಳು, ರಸ್ತೆಗಳಲ್ಲಿ ಸಂಚರಿಸುವವರ ಆರೋಗ್ಯದ ಮೇಲೂ ಗಂಭೀರ ಪರಿಣಾಮಗಳಾಗುತ್ತಿವೆ.

ಕಾಸರಗೋಡು ಡಿಸಿ ಕ್ರಮ
ರಸ್ತೆಬದಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯಗಳನ್ನು ಹಾಕುವವರ ವಿರುದ್ದ ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸಿ ಕಠಿನ ಕ್ರಮಕೈಗೊಳ್ಳಲು ಕಾಸರಗೋಡು ಜಿಲ್ಲಾಡಳಿತ ಮುಂದಾಗಿದೆ. ಕಾಸರಗೋಡು ನಗರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆದರೆ ಅಂತವರ ವಿರುದ್ದ 5 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾದ ಪ್ರಕರಣಗಳನ್ನು ದಾಖಲಿಸಲಾಗುವುದು ಎಂದು ಅಲ್ಲಿನ ಜಿಲ್ಲಾಧಿಕಾರಿ ಡಿ.ಸಜಿತ್‌ ಬಾಬು ಎಚ್ಚರಿಕೆ ನೀಡಿದ್ದಾರೆ. ತಾಜ್ಯ ವಸ್ತುಗಳ ಸಾರ್ವಜನಿಕ ಸ್ಥಳಗಳಲ್ಲಿ ತಂದು ಹಾಕುವವರ ಹಾಗೂ ಘನ ತ್ಯಾಜ್ಯಗಳಿಗೆ ಬೆಂಕಿ ಕೊಟ್ಟು ಉರಿಸುವವರ ಪೋಟೋ ತೆಗೆದು ವ್ಯಾಟ್‌ ಆ್ಯಪ್‌ ಮೂಲಕ ಅಧಿಕಾರಿಗಳಿಗೆ ದೂರು ನೀಡುವಂತೆ ಪ್ರಕಟನೆ ಹೊರಡಿಸಿದ್ದಾರೆ. ಇದಕ್ಕೆ ನಿರ್ದಿಷ್ಟ ವ್ಯಾಟ್ಸ್‌ ಆ್ಯಪ್‌ ನಂಬರ್‌ ನೀಡಲಾಗಿದೆ.

ನಗರ ಸ್ವಚ್ಚತೆಗೆ ಸವಾಲು
ರಸ್ತೆಬದಿಗಳಲ್ಲಿ ತರಕಾರಿ,ಪ್ರಾಣಿತ್ಯಾಜ್ಯ, ಕಟ್ಟಡ ತ್ಯಾಜ್ಯಗಳನ್ನು ತಂದು ಸುರಿಯುತ್ತಿರುವುದು ನಗರ ಸ್ವಚ್ಚತೆಗೆ ಒಂದು ಗಂಭೀರ ಸವಾಲು ಆಗಿ ಪರಿಣಾಮಿಸಿದೆ. ಮಂಗಳೂರು ನಗರದಲ್ಲಿ ತ್ಯಾಜ್ಯ ನಿರ್ವಹಣೆ ವ್ಯವಸ್ಥಿತವಾಗಿ ಕಾರ್ಯಾಚರಿಸುತ್ತಿದೆ. ಮಹಾನಗರ ಪಾಲಿಕೆ ಮುಂಬಯಿ ಮೂಲದ ಆ್ಯಂಟನಿ ವೇಸ್ಟ್‌ ಸಂಸ್ಥೆಗೆ ತ್ಯಾಜ್ಯ ನಿರ್ವಹಣೆಯ ಗುತ್ತಿಗೆ ವಹಿಸಿಕೊಟ್ಟು ಕೋಟ್ಯಾಂತರ ರೂ. ವಿನಿಯೋಗಿಸುತ್ತಿದೆ. ಮನೆಮನೆ ಕಸ ಸಂಗ್ರಹ ನಡೆಯುತ್ತಿದೆ. ಆದರೆ ಹೊರಗಿನಂದ ಬರುವ ವಾಹನಗಳು ತ್ಯಾಜ್ಯಗಳನ್ನು ರಸ್ತೆ ಬದಿಗಳಲ್ಲಿ ಸುರಿದು ಹೋಗುವ ಘಟನೆಗಳು ನಡೆಯುತ್ತಿವೆ. ಬಹುತೇಕ ಇವುಗಳು ರಾತ್ರಿ ಹೊತ್ತು ನಡೆಯುತ್ತಿವೆ. ಇವುಗಳನ್ನು ನಿಯಂತ್ರಿಸಲು ಕೈಗೊಂಡಿರುವ ಕ್ರಮಗಳು ನಿರೀಕ್ಷಿತ ಪಡೆದಿಲ್ಲ. ಈ ಹಿಂದೆ ಜೆ.ಕೃಷ್ಣ ಪಾಲೆಮಾರ್‌ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ರಸ್ತೆಗಳಲ್ಲಿ ಕಸ ಹಾಕುವ ವಾಹನಗಳು, ವ್ಯಕ್ತಿಗಳ ಪೋಟೋ ತೆಗೆದು ಕಳುಹಿಸಿದರೆ ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದರು. 

Advertisement

ವ್ಯಾಟ್ಯಾಪ್‌ ಮೂಲಕ ಮಾಹಿತಿ ವ್ಯವಸ್ಥೆ
ರಸ್ತೆಗಳ ಬದಿಗಳಲ್ಲಿ ತ್ಯಾಜ್ಯಗಳನ್ನು ಹಾಕುವ ಪಿಡುಗು ನಿಯಂತ್ರಣಕ್ಕೆ ಸಂಘಟಿತ ಪ್ರಯತ್ನಗಳು ಅಗತ್ಯ. ಮಹಾನಗರ ಪಾಲಿಕೆ, ಪೊಲೀಸ್‌ ಇಲಾಖೆ, ಹೆದ್ದಾರಿ ಇಲಾಖೆ , ಜನಪ್ರತಿನಿಧಿಗಳು, ಸಾರ್ವಜನಿಕರು, ಸಂಘಟನೆಗಳು, ವಾಹನಗಳಲ್ಲಿ ಸಂಚರಿಸುವವರು ಸಹಭಾಗಿತ್ವ ಇದರಲ್ಲಿ ಅವಶ್ಯವಿದೆ. ಕಾಸರಗೋಡು ಜಿಲ್ಲಾಧಿಕಾರಿಯವರು ಕೈಗೊಂಡಿರುವ ಮಾದರಿಯಲ್ಲೇ ಪ್ರತ್ಯೇಕ ವ್ಯಾಟ್ಯಾಪ್‌ ನಂಬರ್‌ ರೂಪಿಸಿ ಇದನ್ನು ವ್ಯಾಪಕವಾಗಿ ಪ್ರಚುರ ಪಡಿಸುವ ಕಾರ್ಯ ಆಗಬೇಕು. ವ್ಯಾಟ್ಯಾಪ್‌ ನಂಬರನ್ನು ರಾಷ್ಟ್ರೀಯ ಹೆದ್ದಾರಿಗಳ ಬದಿಗಳಲ್ಲಿ, ಪ್ರಮುಖ ಸಾರ್ವಜನಿಕ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಗೋಚರಿಸುವಂತೆ ಪ್ರದರ್ಶಿಸಬೇಕು. 

ಕ್ರಮ ಕೈಗೊಳ್ಳಲಾಗುವುದು
ರಸ್ತೆ ಬದಿಯಲ್ಲಿ ತ್ಯಾಜ್ಯಗಳನ್ನು ತಂದು ಸುರಿಯುತ್ತಿರುವುದರ ವಿರುದ್ಧ ಮಹಾನಗರ ಪಾಲಿಕೆ ಕ್ರಮಗಳನ್ನು ಜರಗಿಸುತ್ತಿದೆ. ತ್ಯಾಜ್ಯಗಳನ್ನು ತಂದು ಹಾಕುವ ವಾಹನಗಳ ನಂಬರ್‌ಗಳನ್ನು ಹತ್ತಿರದ ಪೊಲೀಸ್‌ ಠಾಣೆಗೆ ನೀಡಿ ಪ್ರಕರಣ ದಾಖಲಿಸಲಾಗುತ್ತಿದೆ. ಕಟ್ಟಡ ತ್ಯಾಜ್ಯಗಳನ್ನು ಹಾಕಲು ಈಗಾಗಲೇ ಮರಕಡದಲ್ಲಿ ವ್ಯವಸ್ಥೆ ಮಾಡಲಾಗಿದ್ದು ಕಟ್ಟಡ ತಾಜ್ಯಗಳನ್ನು ಇಲ್ಲಿಗೆ ತಂದು ಹಾಕಬೇಕು. ರಸ್ತೆ ಬದಿಯಲ್ಲಿ ತ್ಯಾಜ್ಯಗಳನ್ನು ಹಾಕುವುದರ ವಿರುದ್ಧ ಇನ್ನಷ್ಟು ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗುವುದು.
 – ಭಾಸ್ಕರ್‌ ಕೆ., ಮೇಯರ್‌,
   ಮಂಗಳೂರು ಮಹಾನಗರ ಪಾಲಿಕೆ 

ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next