ಹಳೆಯಂಗಡಿ: ವಿಭಿನ್ನ ಪ್ರಯೋಗಗಳ ಮೂಲಕ ಗುರುತಿಸಿಕೊಂಡಿರುವ ಪಡು ಪಣಂಬೂರು ಗ್ರಾ.ಪಂ. ಈಗ ಮತ್ತೊಂದು ಮಹತ್ವ ಯೋಜನೆಯನ್ನು ಕಾರ್ಯ ರೂಪಕ್ಕೆ ತಂದಿದೆ. ಮನೆ ಮನೆಗೆ ತೆರಳಿ ತ್ಯಾಜ್ಯ ಸಂಗ್ರಹ ಮಾಡಲು ‘ಸ್ವಚ್ಛವಾಹಿನಿ’ ಯ ಯೋಜನೆಯನ್ನು ಗ್ರಾ.ಪಂ. ಜಾರಿಗೊಳಿಸಿದೆ.
ಪಡುಪಣಂಬೂರು ಗ್ರಾ.ಪಂ.ನ 15ನೇ ಹಣಕಾಸು ಯೋಜನೆ, ಸ್ವಚ್ಛ ಭಾರತ್ ಯೋಜನೆಯೊಂದಿಗೆ ಗ್ರಾ.ಪಂ.ನ ಆರ್ಥಿಕ ನಿಧಿಯಿಂದ ಒಟ್ಟು 9.58 ಲಕ್ಷ ರೂ. ವೆಚ್ಚದಲ್ಲಿ ಈ ಸ್ವಚ್ಛ ವಾಹನವನ್ನು ತಯಾರಿಸಲಾಗಿದ್ದು ಇದರಲ್ಲಿ ಪ್ರತೀ ಮನೆಗೆ ತೆರಳಿ ಸಂಗ್ರಹಿಸುವ ತ್ಯಾಜ್ಯವನ್ನು ಒಣ ಕಸವನ್ನು ಆರಂಭದ ದಿನದಲ್ಲಿ ಸಂಗ್ರಹಿಸುವ ಗುರಿಯನ್ನು ಹೊಂದಿದೆ.
ಪಂಚಾಯತ್ನ ಪಡುಪಣಂಬೂರು, ಬೆಳ್ಳಾಯರು, 10ನೇ ತೋಕೂರು ಗ್ರಾಮದ ಒಟ್ಟು 2,196 ಮನೆಗಳಿಂದ ತ್ಯಾಜ್ಯ ಸಂಗ್ರಹದ ಗುರಿಯನ್ನು ಹೊಂದಿದ್ದು, ವಾರದ ಮೊದಲು ಮೂರು ದಿನಗಳನ್ನು ಒಂದೊಂದು ಗ್ರಾಮಕ್ಕೆ ಮೀಸಲಿರಿಸಲಾಗಿದೆ. ಒಕ್ಕೂಟದೊಂದಿಗೆ ಒಡಂಬಡಿಕೆ ಗ್ರಾಮ ಪಂಚಾಯತ್ ಮಹಿಳೆಯರ ಸಶಕ್ತೀಕರಣಕ್ಕಾಗಿ ತ್ಯಾಜ್ಯ ಸಂಗ್ರಹ, ನಿರ್ವಹಣೆಯನ್ನು ನೇರವಾಗಿ ಸ್ವಸಹಾಯ ಸಂಘದ ಮೂಲಕ ಅನುಷ್ಠಾನಗೊಳಿಸಲು ಮುಂದಾಗಿದೆ.
ಇದಕ್ಕಾಗಿ ಗ್ರಾ.ಪಂ.ನ ಶ್ರೀ ಉಮಾಮಹೇಶ್ವರ ಸಂಜೀವಿನಿ ಗ್ರಾ.ಪಂ. ಮಟ್ಟದ ಒಕ್ಕೂಟವನ್ನು ಆಯ್ಕೆ ಮಾಡಿ ಒಂದು ವರ್ಷಕ್ಕೆ ಒಡಂಬಡಿಕೆಯನ್ನು ಮಾಡಿಕೊಂಡಿದೆ. ಇದರಲ್ಲಿ ತ್ಯಾಜ್ಯ ಸಂಗ್ರಹ, ಸಾಗಾಟ, ನಿರ್ವಹಣೆ, ವಿಂಗಡಣೆ, ಶುಲ್ಕ ಸಂಗ್ರಹವನ್ನು ನೈರ್ಮಲ್ಯ ಯೋಜನೆಯ ನಿಯಮದಂತೆ ವಿಶೇಷವಾಗಿ ಮಾಡಿಕೊಳ್ಳಲಾಗಿದೆ. ವಿಶೇಷವಾಗಿ ವಾಹನವನ್ನು ಚಲಾಯಿಸಲು ಇಬ್ಬರು ಮಹಿಳೆಯರಿಗೆ ಗ್ರಾಮ ಪಂಚಾಯತ್ ಉಚಿತ ವಾಹನ ತರಬೇತಿ ನೀಡಿ, ಸ್ವಚ್ಛ ವಾಹಿನಿಗೆ ಮಹಿಳಾ ಸಾರಥಿಗಳನ್ನು ಸನ್ನದ್ಧಗೊಳಿಸಲು ಮುಂದಾಗಿದ್ದು ಅವರು ಆರ್ಟಿಒದಿಂದ ಎಲ್ ಎಲ್ಆರ್ ಪಡೆದು ಇದೀಗ ಅನುಭವದ ಚಾಲನೆಯ ತರೆಬೇತಿ ನಡೆಸುತ್ತಿದ್ದಾರೆ.
ಒಕ್ಕೂಟದ ಅಧ್ಯಕ್ಷೆ ಸುಮತಿ ಹಾಗೂ ಸದಸ್ಯರಾದ ಸಂಪಾವತಿ, ಪುಷ್ಪಾವತಿ, ಸವಿತಾ ಶೆಟ್ಟಿ ಮತ್ತಿತರರು ನೇತೃತ್ವವನ್ನು ವಹಿಸಿದ್ದಾರೆ. ತಿಂಗಳಿಗೆ 60 ಸಾವಿರ ರೂ. ಮೊತ್ತವನ್ನು ಒಕ್ಕೂಟಕ್ಕೆ ಪಂಚಾಯತ್ ಪಾವತಿಸುತ್ತದೆ. ನಿರ್ಧಾರಿತ ಶುಲ್ಕವನ್ನು ಮನೆ ಮನೆಯಿಂದ ಒಕ್ಕೂಟವು ಸಂಗ್ರಹಿಸಿ ನೇರವಾಗಿ ಪಂಚಾಯತ್ಗೆ ಹಸ್ತಾಂತರಿಸುತ್ತದೆ.
ಗ್ರಾಮಸ್ಥರ ಸಹಕಾರ ಮುಖ್ಯ
ಪಂಚಾಯತ್ನ ಸದಸ್ಯರ ಸಹಕಾರದಿಂದ ಹಲವು ವರ್ಷಗಳ ಬೇಡಿಕೆ ಈಡೇರಿಸದಂತಾಗಿದೆ. ನಿರ್ವಹಣೆಯನ್ನು ಮಹಿಳೆಯರಿಂದಲೇ ಮಾಡುವ ಚಿಂತನೆಗೆ ಮಹಿಳೆಯರು ಧ್ವನಿಗೂಡಿಸಿದ್ದು, ಇದೊಂದು ಕ್ರಾಂತಿಕಾರಿ ಬದಲಾವಣೆ ಆಗುವುದು ನಿಶ್ಚಿತವಾಗಿದೆ. ಪಡುಪಣಂಬೂರು ಗ್ರಾ.ಪಂ.ನ ಮಾದರಿ ಕಾರ್ಯಕ್ರಮಕ್ಕೆ ಇದೊಂದು ಮುಕುಟವಿದ್ದಂತೆ
. -ಮಂಜುಳಾ, ಅಧ್ಯಕ್ಷರು, ಪಡುಪಣಂಬೂರು ಗ್ರಾ.ಪಂ.