Advertisement

ಕಂಟೇನ್ಮೆಂಟ್‌ ನಿವಾಸಿಗಳಿಗೆ ಎಚ್ಚರಿಕೆ

02:41 PM May 16, 2020 | Suhan S |

ಗದಗ: ಪ್ರತಿಬಂಧಿತ ಪ್ರದೇಶವಾಗಿದ್ದರೂ ಗಂಜೀಬಸವೇಶ್ವರ ವೃತ್ತ ಪ್ರದೇಶದಲ್ಲಿ ದ್ವಿತೀಯ ಸಂಪರ್ಕದಿಂದ ಸೋಂಕಿಗೆ ಒಳಗಾದ ಎರಡು ಪ್ರಕರಣಗಳು ಕೋವಿಡ್‌-19 ಸೋಂಕು ಸಕಾರಾತ್ಮಕ ಎಂದು ದೃಢಪಟ್ಟಿವೆ. ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಈ ಪ್ರದೇಶವನ್ನು ನಿರ್ಬಂಧಿಸಲಾಗಿದ್ದು, ಯಾರೂ ಮನೆಯಿಂದ ಹೊರ ಬರಬಾರದು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸಾರ್ವಜನಿಕರಿಗೆ ಎಚ್ಚರಿಸಿದರು.

Advertisement

ನಗರದ ಗಂಜೀಬಸವೇಶ್ವರ ವೃತ್ತ ಭಾಗಕ್ಕೆ ಭೇಟಿ ನೀಡಿ, ಕಂಟೇನ್ಮೆಂಟ್‌ ಪ್ರದೇಶಗಳನ್ನು ಪರಿಶೀಲಿಸಿದರು. ಇದೇ ವೇಳೆ ಮಾತನಾಡಿದ ಅವರು, ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈ ಪ್ರದೇಶವನ್ನು ಕಂಟೇನ್ಮೆಂಟ್‌ ಎಂದು ಘೋಷಿಸಿದ್ದರೂ, ದ್ವಿತೀಯ ಸಂಪರ್ಕದಲ್ಲಿದ್ದ ಇನ್ನಿಬ್ಬರಿಗೆ ಸೋಂಕು ಹರಡಿರುವುದು ಕಳವಳಕಾರಿ ಸಂಗತಿ ಎಂದು ಆತಂಕ ವ್ಯಕ್ತಪಡಿಸಿದರು. ಸರ್ಕಾರವು ಆರೋಗ್ಯ ವಿಪತ್ತಿನ ಕಾಯ್ದೆಯಡಿಜಾರಿಗೊಳಿಸಿದ ನಿರ್ಬಂಧಗಳನ್ನು ಸಾರ್ವಜನಿಕರು ಸರಿಯಾಗಿ ಪಾಲಿಸದಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಹೊರಗೆ ಕಾಲಿಟ್ಟರೆ ಸೋಂಕು ತಗುಲುವ ಸಾಧ್ಯತೆ ಹೆಚ್ಚಿರುವುದರಿಂದ ಜನರು ಮನೆ ಬಿಟ್ಟು ಹೊರಗೆ ಬರದಿರಲು ಪ್ರತಿಬಂಧಿಸಲಾಗಿದೆ. ಜನರು ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಗದಗ –ಬೆಟಗೇರಿ ನಗರಸಭೆ ಈ ಕುರಿತು ಸಾಕಷ್ಟು ಜಾಗೃತಿ ಮೂಡಿಸಿದೆ. ಆರೋಗ್ಯ ಇಲಾಖೆ ಆಶಾ ಕಾರ್ಯಕರ್ತೆಯರ ಮೂಲಕ ಮನೆ ಮನೆಗೆ ಹೋಗಿ ಎಚ್ಚರಿಸುತ್ತಿದ್ದಾರೆ. ದಯವಿಟ್ಟು ನಿಗದಿತ ಪ್ರತಿಬಂಧಕ ಅವಧಿಯಲ್ಲಿ ಮನೆ ಬಿಟ್ಟು ಹೊರಗೆ ಬರದೆ ಕೋವಿಡ್‌-19 ಸೋಂಕು ನಿಯಂತ್ರಣಕ್ಕಾಗಿ ಜಿಲ್ಲಾಡಳಿತದ ಜೊತೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಎಸ್‌ಪಿ ಯತೀಶ್‌ ಎನ್‌., ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಡಿವೈಎಸ್‌ಪಿ ಪ್ರಹ್ಲಾದರಾವ್‌, ಗದಗ -ಬೆಟಗೇರಿ ನಗರಸಭೆ ಪೌರಾಯುಕ್ತ ಮನ್ಸೂರ ಅಲಿ, ತಹಶೀಲ್ದಾರ್‌ ಶ್ರೀನಿವಾಸ ಮೂರ್ತಿ ಕುಲಕರ್ಣಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next