Advertisement

ಬಗೆ ಬಗೆ ಹಲಸು ಬೇಕಾ?, ಮೇಳಕ್ಕೆ ಬನ್ನಿ

09:14 PM Aug 02, 2019 | Lakshmi GovindaRaj |

ಮೈಸೂರು: ಹಲಸಿನ ಮಹತ್ವವನ್ನು ರೈತರು ಮತ್ತು ಗ್ರಾಹಕರಿಗೆ ತಿಳಿಸಿಕೊಡುವ ಉದ್ದೇಶದಿಂದ ಸಹಜ ಸಮೃದ್ಧ ಸಂಸ್ಥೆ ಮತ್ತು ರೋಟರಿ ಕ್ಲಬ್‌ ಮೈಸೂರು ಪಶ್ಚಿಮದ ಆಶ್ರಯದಲ್ಲಿ ಆಗಸ್ಟ್‌ 3 ಮತ್ತು 4ರಂದು ಮೈಸೂರಿನ ನಂಜರಾಜ ಬಹದ್ದೂರ್‌ ಛತ್ರದಲ್ಲಿ ‘ಹಲಸಿನ ಹಬ್ಬ’ ಏರ್ಪಡಿಸಲಾಗಿದೆ.

Advertisement

ಹಲಸಿನ ಮಹತ್ವ ಸಾರುವ ಮೇಳದಲ್ಲಿ, ಕೆಂಪು, ಹಳದಿ ಮತ್ತು ಬಿಳಿ ಹಲಸಿನ ತಳಿ ಹಣ್ಣುಗಳು ತಿನ್ನಲು ಸಿಗಲಿವೆ. ಹಲಸಿನ ಐಸ್‌ಕ್ರೀಂ, ಚಿಪ್ಸ್‌, ಚಾಕೋಲೇಟ್‌, ಹಪ್ಪಳ, ಹಲ್ವ, ಕಬಾಬ್‌, ಹೋಳಿಗೆ, ವಡೆ, ದೋಸೆ, ಪಲ್ಯ, ಬಿರಿಯಾನಿಯ ಮಳಿಗೆಗಳು ಬರಲಿವೆ. ಹಲಸಿನ ಬೀಜದ ಪೇಯ ‘ಜಾಫಿ’ ಕುಡಿಯಲು ಸಿಗಲಿದೆ. ಹದಿನಾಲ್ಕು ಜಾತಿಯ ತಳಿಗಳ, ವಿಶೇಷವಾಗಿ ಕೆಂಪು ಹಲಸಿನ ತಳಿಯ ಗಿಡಗಳು ಮಾರಾಟಕ್ಕೆ ಬರಲಿವೆ. ಹಲಸಿನ ಸಾಗುವಳಿ ಮತ್ತು ಮೌಲ್ಯವರ್ಧನೆ ಕುರಿತ ಪುಸ್ತಕಗಳು ಸಿಗಲಿವೆ. ಹಲಸು ಹಚ್ಚುವ ಯಂತ್ರವೂ ಸಿಗಲಿದೆ.

ಹಲಸು ಎಂದರೆ ಹಣ್ಣಷ್ಟೇ ತಿಂದು ಗೊತ್ತಿರುವ ಬಯಲು ಸೀಮೆಯ ಜನರಿಗೆ ಹಲಸಿನ ಪ್ರಪಂಚವನ್ನು ಈ ಹಬ್ಬ ತೆರೆದಿಡಲಿದೆ. “ಹಸಿದು ಹಲಸು ತಿನ್ನು’ ಎಂಬ ಮಾತಿದೆ. ಬರಗಾಲ ಎದುರಿಸಿ ನಿಲ್ಲುವ ಹಲಸು ರಾಸಾಯನಿಕ ಔಷಧಿ, ಗೊಬ್ಬರ ಕೇಳದ ಕಲ್ಪವೃಕ್ಷ; ರೈತರ ಜೇಬು ತುಂಬುವ ಆಪ್ತಮಿತ್ರ.

ಔಷಧೀಯ ಗುಣ: ಬಡವರ ಹಣ್ಣು ಎಂದೇ ಜನಪ್ರಿಯವಾಗಿರುವ ಹಲಸು ಔಷಧೀಯ ಗುಣಗಳಿಂದ ಮುನ್ನಲೆಗೆ ಬರುತ್ತಿದೆ. ಹಲಸಿನ ಕಾಯಿಯ ನಿರಂತರ ಸೇವನೆಯಿಂದ ಮಧುಮೇಹಿಗಳು ಇನ್ಸುಲಿನ್‌ ಬಳಕೆ ತಗ್ಗಿಸಬಹುದು. ಕ್ಯಾನ್ಸರ್‌, ಮಲಬದ್ದತೆಯನ್ನು ದೂರವಿಡಬಹುದು ಎನ್ನುತ್ತಾರೆ ಸಂಘಟಕರು.

ಹಲಸು ಖಾದ್ಯ: ಹಲಸಿನ ಮಹತ್ವ ಸಾರುವ ಮೇಳದಲ್ಲಿ, ಕೆಂಪು, ಹಳದಿ ಮತ್ತು ಬಿಳಿ ಹಲಸಿನ ತಳಿ ಹಣ್ಣುಗಳು ತಿನ್ನಲು ಸಿಗಲಿವೆ. ಹಲಸಿನ ಐಸ್‌ ಕ್ರೀಂ, ಚಿಪ್ಸ್‌, ಚಾಕೋಲೇಟ್‌, ಹಪ್ಪಳ, ಹಲ್ವ, ಕಬಾಬ್‌,ಹೋಳಿಗೆ, ವಡೆ, ದೋಸೆ, ಪಲ್ಯ , ಬಿರಿಯಾನಿಯ ಮಳಿಗೆಗಳು ಬರಲಿವೆ. ಹಲಸಿನ ಬೀಜದ ಪೇಯ ‘ಜಾಫಿ’ ಕುಡಿಯಲು ಸಿಗಲಿದೆ. ಹದಿನಾಲ್ಕು ಜಾತಿಯ ತಳಿಗಳ, ವಿಶೇಷವಾಗಿ ಕೆಂಪು ಹಲಸಿನ ತಳಿಯ ಗಿಡಗಳು ಮಾರಾಟಕ್ಕೆ ಬರಲಿವೆ. ಹಲಸಿನ ಸಾಗುವಳಿ ಮತ್ತು ಮೌಲ್ಯವರ್ಧನೆ ಕುರಿತ ಪುಸ್ತಕಗಳು ಸಿಗಲಿವೆ. ಹಲಸು ಹಚ್ಚುವ ಯಂತ್ರವೂ ಸಿಗಲಿದೆ.

Advertisement

ಕರ್ನಾಟಕದಲ್ಲಿ ಹಲಸು: ಕರ್ನಾಟಕದಲ್ಲಿ ಹಲಸಿನ ಅತಿ ಹೆಚ್ಚು ಉತ್ಪನ್ನ ತಯಾರಾಗುವುದೆಂದರೆ ಚಿಪ್ಸ್‌ ಮತ್ತು ಹಪ್ಪಳ. ಹಲಸಿನ ಹಪ್ಪಳದ ಬಹುತೇಕ ಉದ್ದಿಮೆಗಳು ಉಡುಪಿ ಜಿಲ್ಲೆಯಲ್ಲಿ ಕೇಂದ್ರೀಕೃತವಾಗಿವೆ. ಈ ಪೈಕಿ ಪೆರ್ಡೂರಿನ ವಸಂತ್‌ ನಾಯಕ್‌ ಅವರ “ಅರುಣೋದಯ ಹೋಮ್‌ ಇಂಡಸ್ಟ್ರೀಸ್‌’ ಅತಿ ದೊಡ್ಡದು. ಇವರು ಹಲಸಿನ ಋತುವಿನಲ್ಲಿ ಹೆಚ್ಚು ಕಮ್ಮಿ ಎರಡು-ಮೂರು ತಿಂಗಳಲ್ಲಿ ಪ್ರತಿದಿನ ಅಂದಾಜು 500- 600 ಹಲಸನ್ನು ಬಳಸುತ್ತಾರೆ.

ಹಪ್ಪಳ, ಚಿಪ್ಸ್‌: ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಪ್ಪಳ, ಚಿಪ್ಸ್‌ ತಯಾರಾಗುತ್ತಿದೆ. ದೊಡ್ಡ ಉದ್ದಿಮೆದಾರರಲ್ಲದೆ ಹಲವು ಕೃಷಿಕರು 5,000ದಿಂದ 20,000 ಹಪ್ಪಳ ಮಾಡುತ್ತಿದ್ದಾರೆ. ವಾರ್ಷಿಕ 30 ಲಕ್ಷ ಹಪ್ಪಳ ತಯಾರಾಗಬಹುದೆಂದು ಅಂದಾಜು. ಎರಡೂ ಉತ್ಪನ್ನಗಳು ಊರಿನಲ್ಲಿ ಹಲಸಿನ ಋತು ಕಳೆದು ಎರಡು ತಿಂಗಳಲ್ಲೇ ಖಾಲಿಯಾಗಿ ಬಿಡುತ್ತವೆ. ಗುಣಮಟ್ಟ ಕಾಯ್ದುಕೊಂಡು ಹಲಸಿನದೇ ಹಪ್ಪಳ ತಯಾರಿಸಿದರೆ ಈಗ ಮಾಡುವುದರ ಮೂರು-ನಾಲ್ಕು ಪಟ್ಟು ಹಪ್ಪಳಕ್ಕೆ ಬೇಡಿಕೆ ಕುದುರಬಹುದು.

ಆದರೆ, ಉತ್ಪಾದನಾ ರಂಗದ ದೊಡ್ಡ ಸಮಸ್ಯೆಯೆಂದರೆ ಇದರ ಯಾಂತ್ರೀಕರಣಕ್ಕೆ ಯಾರೂ ಅಂಥ ಗಂಭೀರ ಪ್ರಯತ್ನ ಮಾಡಿಲ್ಲ ಎನ್ನುತ್ತಾರೆ ಹಲಸನ್ನು ಮುಂಚೂಣಿಗೆ ತರುವ ಪ್ರಯತ್ನ ಮಾಡಿದ ಹಿರಿಯ ಪತ್ರಕರ್ತ ಶ್ರೀಪಡ್ರೆ. ವರ್ಷದ ಹಿಂದೆ ಕೊಪ್ಪದ ಬಳಿ ಇರುವ ಎಸ್‌ಆರ್‌ಎಸ್‌ ಹೋಮ್‌ ಇಂಡಸ್ಟ್ರೀಸ್‌ನ ಶಿವಶಂಕರ್‌ ಚಪಾತಿ ಯಂತ್ರ ಮತ್ತು ಹಪ್ಪಳದ ಹಿಟ್ಟಿನಲ್ಲಿ ವ್ಯತ್ಯಾಸ ಮಾಡಿಕೊಂಡು ಹಪ್ಪಳ ಮಾಡುವುದರಲ್ಲಿ ಸಫ‌ಲರಾಗಿದ್ದಾರೆ.

ಕುಂದಾಪುರದ ಬಳಿಯ ಕಿಶೋರ್‌ ಕೊಡ್ಗಿ ಒಡೆತನದ ‘ಗೋಕುಲ್‌ ಫ್ರುಟ್ಸ್‌’ ಹಲಸಿನ ಹಣ್ಣಿನ ವ್ಯಾಕ್ಯೂಮ್‌ ಫ್ರೆç ಚಿಪ್ಸ್‌ ತಯಾರಿಸತೊಡಗಿ ಒಂದು ದಶಕ ಸಂದಿದೆ. ಈಚೆಗೆ ಇವರು ಪ್ರಾಯೋಗಿಕವಾಗಿ ಉತ್ಪಾದಿಸಿದ ವ್ಯಾಕ್ಯೂಮ್‌ ಫ್ರೆç ಮಾಡಿದ ಹಲಸಿನ ಬೀಜಕ್ಕೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮಂಗಳೂರು ಮೂಲದ, ‘ನ್ಯಾಚುರಲ್‌ ಐಸ್‌ಕ್ರೀಮ್‌’ ಉದ್ದಿಮೆಯ ರೂವಾರಿ ಆರ್‌.ಎಸ್‌. ಕಾಮತ್‌ ಹಲಸಿನ ಹಣ್ಣಿನ ಐಸ್‌ಕ್ರೀಮ್‌ನ ಹರಿಕಾರರು.

ಇವರು ವಾರ್ಷಿಕ 25 ಟನ್‌ಗಳಷ್ಟು ಹಣ್ಣಿನ ಪಲ್ಪ್ ಮಾಡಿಟ್ಟುಕೊಳ್ಳುತ್ತಾರೆ. ಇದಕ್ಕಾಗಿ ಇವರು ಬೆಳೆಗಾರರಿಂದ ಹಣ್ಣನ್ನು ಕೊಂಡುಕೊಳ್ಳುತ್ತಾರೆ. ಶಿರಸಿಯ ಕದಂಬ ಸಹಕಾರಿ ಮಾರ್ಕೆಟಿಂಗ್‌ ಸಂಸ್ಥೆ ಹಲಸಿನ ಹಪ್ಪಳ ತಯಾರಿಯಲ್ಲಿ ತರಬೇತಿ ಕೊಟ್ಟಿದ್ದು, ಅವರು ಮಾಡಿದ ಹಪ್ಪಳವನ್ನೆಲ್ಲಾ ಖರೀದಿಸಿ ಗ್ರಾಹಕರಿಗೆ ಒದಗಿಸುತ್ತಿದೆ. ಹಲಸಿನ ಉತ್ಸವಗಳನ್ನು ಪ್ರತಿ ವರ್ಷ ಏರ್ಪಡಿಸುತ್ತಿರುವ ‘ಕದಂಬ’ಕ್ಕೆ ರೈತರ ಜತೆ ಒಳ್ಳೆ ಸಂಪರ್ಕ ಇದೆ.

ಚಿಪ್ಸ್‌-ಹಪ್ಪಳಗಳ ಚೌಕಟ್ಟಿನಿಂದ ಹೊರಬಂದು ಹಲಸಿನ ಉದ್ದಿಮೆ ಮಾಡಿದವರ ಪೈಕಿ ಸಖರಾಯಪಟ್ಟಣದ ‘ಪರಿವರ್ತನ್‌’ ಸಂಸ್ಥೆಯ ಶಿವಣ್ಣ, ಕೊಪ್ಪದ ಜಯಕುಮಾರ್‌, ಮುಳಿಯ ವೆಂಕಟಕೃಷ್ಣ ಶ‌ರ್ಮ, ಶಿರಸಿಯ ಶ್ರೀಪಾದ ಹೆಗಡೆ ಊರುತೋಟ ಪ್ರಮುಖರು. ಹಲಸಿನ ಬೀಜದ ಕಾಫಿ-“ಜಾಫಿ’ ಶಿವಣ್ಣ ಅವರ ಈಚೆಗಿನ ಉತ್ಪನ್ನ

ಹಲಸು ಉತ್ಸವ: ಕರ್ನಾಟಕದಲ್ಲೂ ಹಲಸು ಉತ್ಸವಗಳು ನಡೆಯುತ್ತಿವೆ. ಉಡುಪಿ, ಮಂಗಳೂರು ಕೃಷಿ ವಿಜ್ಞಾನ ಕೇಂದ್ರಗಳು, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ತೋಟಗಾರಿಕಾ ಇಲಾಖೆ, ದಕ್ಷಿಣ ಕನ್ನಡದ ಹಲಸು ಸ್ನೇಹಿ ಕೂಟಗಳು ಹಲಸಿನ ಹಬ್ಬ ನಡೆಸುತ್ತಾ ಬಂದಿವೆ. ಅನ್ನವೊಂದು ಹೊರತು ಉಳಿದೆಲ್ಲಾ ಹಲಸಿನ ಖಾದ್ಯಗಳೇ ತುಂಬಿದ ‘ಹಲಸಿನ ಊಟ’ಗಳೂ ಇಲ್ಲಿ ಭಾರೀ ಜನಪ್ರಿಯವಾಗಿವೆ. ಇಂಥ ಕಾರ್ಯಕ್ರಮಗಳಿಗೆ ಆಸಕ್ತರು ಮುಂಚಿತವಾಗಿ ಟಿಕೆಟ್‌ ಖರೀದಿಸಿ ಭಾಗವಹಿಸಿದ ಉದಾಹರಣೆಗಳಿವೆ ಎನ್ನುತ್ತಾರೆ ಹಲಸಿನ ಹಬ್ಬದ ಸಂಘಟಕರಾದ ಕೃಷ್ಣಪ್ರಸಾದ್‌.

25 ಮಳಿಗೆಯಲ್ಲಿ ಮಾರಾಟ, ಪ್ರದರ್ಶನ: ಹಲಸಿನ ಹಬ್ಬದಲ್ಲಿ ಸುಮಾರು 25 ಮಳಿಗೆಗಳನ್ನು ತೆರೆಯುತ್ತಿದ್ದು, ಪುತ್ತೂರಿನ ಮನೋರಮಾ ಅವರ ಒಂದು ಗುಂಪು ಹಾಗೂ ಶಿರಸಿಯ ವನ್ಯ ಮಹಿಳಾ ಸಂಘದವರು ಹಲಸಿನ ಹಪ್ಪಳ, ಬರ್ಫಿ, ಚಿಪ್ಸ್‌ ಮೊದಲಾದವನ್ನು ತಯಾರಿಸಿದರೆ, ಬಂಟ್ವಾಳದ ಬಿಂಗಾರ ತೋಟಗಾರಿಕಾ ಉತ್ಪಾದಕರ ಸಂಘದವರು ಹಲಸಿನ ಹಪ್ಪಳ, ಚಿಪ್ಸ್‌ ಜತೆಗೆ ಹಲಸಿನ ಒಣಹಣ್ಣುಗಳು ಸೇರಿದಂತೆ ಹಲಸಿನ 12 ಉಪ ಉತ್ಪನ್ನಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕಿಡುತ್ತಾರೆ. ಜೊತೆಗೆ ರೊಟ್ಟಿ ಮಾಡಲು ಹಲಸಿನ ಬೀಜದಿಂದಲೇ ಮಾಡಿದ ಹಿಟ್ಟು ಕೂಡ ಇಲ್ಲಿ ದೊರೆಯಲಿದೆ.

ಚಿಕ್ಕಮಗಳೂರಿನ ಹಲಸು ಬೆಳೆಗಾರರ ಗುಂಪು ಕಾಫಿ ಪುಡಿ ಮಾದರಿಯಲ್ಲಿ ಹಲಸಿನ ಬೀಜ ಹುರಿದು ಪುಡಿ ಮಾಡಿದ ಜಾಫಿ ಯನ್ನು ಪರಿಚಯಿಸಲಿದೆ. ಕೇರಳದ ಗುಂಪು ವಿಶೇಷವಾಗಿ ಹಲಸಿನ ಉಪ್ಪಿನ ಕಾಯಿಯನ್ನು ಪರಿಚಯಿಸಲಿದೆ. ಪುತ್ತೂರಿನ ಸುಹಾಸ್‌ ಎಂಬುವರ ಗುಂಪು ಹಲಸಿನ ಐಸ್‌ ಕ್ರೀಂ ಜೊತೆಗೆ ಹಲಸಿನ ಹಣ್ಣನ್ನು ಹಚ್ಚು ಯಂತ್ರವನ್ನು ಪರಿಚಯಿಸಲಿದೆ. ಬೆಂಗಳೂರಿನ ಮನೋಜ್‌ ಶೆಣೈ ಎಂಬುವರು ಹಲಸಿನ ಪಾಯಸ ಮಾಡಿದರೆ, ಬೆಳ್ತಂಗಡಿಯ ಒಂದು ಗುಂಪು ಹಲಸಿನ ಜೊತೆಗೆ ಬೇರೆ ಬೇರೆ ಹಣ್ಣುಗಳನ್ನು ಸೇರಿಸಿ ಐಸ್‌ಕ್ರೀಂ ತಯಾರಿಸಲಿದೆ.

ಮೈಸೂರು, ಮಂಡ್ಯ, ಚಾಮರಾಜ ನಗರ ಜಿಲ್ಲೆಗಳಲ್ಲಿ ಒಣಭೂಮಿ ತುಂಬಾ ಇದೆ. ಇಲ್ಲಿ ಹಲಸು ಬೆಳೆಯಲು ಅವಕಾಶವಿದ್ದು, ಈ ಬಗ್ಗೆ ರೈತರನ್ನು ಆಕರ್ಷಿಸುವುದು ಹಾಗೂ ಹಲಸಿನ ಹಣ್ಣು ಮತ್ತು ಉಪ ಉತ್ಪನ್ನಗಳಿಗೆ ಗ್ರಾಹಕರನ್ನು ಆಕರ್ಷಿಸುವುದು ಈ ಹಲಸಿನ ಹಬ್ಬದ ಉದ್ದೇಶವಾಗಿದೆ.
-ಕೃಷ್ಣಪ್ರಸಾದ್‌, ಸಂಘಟಕರು

Advertisement

Udayavani is now on Telegram. Click here to join our channel and stay updated with the latest news.

Next